Karnataka news paper

ರಾಜ್ಯ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವಂತೆ ಅನ್ನದಾತರ ಒಕ್ಕೊರಲ ಆಗ್ರಹ


  • ಎಸ್‌.ಕೆ.ಚಂದ್ರಶೇಖರ್‌ ಮೈಸೂರು

ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಸಿರೆಲೆ ಗೊಬ್ಬರ ಬಿತ್ತನೆ ಬೀಜ ಸಮರ್ಪಕ ವಿತರಣೆ, ಪ್ರತಿ ಗ್ರಾಮಕ್ಕೂ ಸಬ್ಸಿಡಿ ದರದಲ್ಲಿ ಒಕ್ಕಣೆ ಯಂತ್ರ ಹಾಗೂ ಎರೆಹುಳ ಗೊಬ್ಬರ ತಯಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಬಾರಿಯಾದರೂ ಮುಂಗಡ ಪತ್ರದಲ್ಲಿ ಅನುದಾನ ಬಿಡುಗಡೆಯಾಗಲಿ ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಹಸಿರೆಲೆ ಗೊಬ್ಬರ ಬಿತ್ತನೆ ಬೀಜಕ್ಕಾಗಿ ಆಂಧ್ರ ಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ, ಮತ್ತಿತರ ರಾಜ್ಯಗಳನ್ನು ಅವಲಂಬಿಸಬೇಕಿರುವುದರಿಂದ ಸಕಾಲದಲ್ಲಿ, ಸಮರ್ಪಕ ಹಾಗೂ ಕಡಿಮೆ ದರದಲ್ಲಿ ಬಿತ್ತನೆ ಬೀಜಗಳು ದೊರೆಯುತ್ತಿಲ್ಲ. ಅದೇ ರೀತಿ ಒಕ್ಕಣೆ ಸಮಯದಲ್ಲಿ ರೈತರು ಬೆಳೆಗಳನ್ನು ರಸ್ತೆಗಳಲ್ಲಿ ಹಾಕುವುದರಿಂದ ಅದರ ಗುಣಮಟ್ಟದ ಜತೆಗೆ ಪ್ರಮಾಣವೂ ಕುಂಠಿತಗೊಳ್ಳುತ್ತಿದೆ. ಹಾಗಾಗಿ ಪ್ರತಿ ಗ್ರಾಮಕ್ಕೂ ಸಬ್ಸಿಡಿ ದರದಲ್ಲಿ ಒಕ್ಕಣೆ ಯಂತ್ರ ವಿತರಿಸಿದರೆ ಕೃಷಿಕರಿಗೂ ಅನುಕೂಲ, ಸಾರ್ವಜನಿಕರ ಸಮಸ್ಯೆಯೂ ಪರಿಹಾರವಾಗುತ್ತದೆ. ಇದರೊಂದಿಗೆ ಎರೆಹುಳು ಗೊಬ್ಬರ ತಯಾರಿಕಾ ಘಟಕಕ್ಕೆ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಇನ್ನಷ್ಟು ಪ್ರೋತ್ಸಾಹದ ನಿರೀಕ್ಷೆಯಲ್ಲಿ ರೈತರು ಇದ್ದಾರೆ.

ಕರ್ನಾಟಕ ಬಜೆಟ್‌ಗೂ ಮುನ್ನ ರಾಜ್ಯದ ತೆರಿಗೆ ಸಂಗ್ರಹದಲ್ಲಿ ಭರ್ಜರಿ ಪ್ರಗತಿ
ಮಣ್ಣಿನ ಫಲವತ್ತತೆಗೆ ಹಸಿರೆಲೆ ಗೊಬ್ಬರ

ಎಲ್ಲೆಡೆ ರಾಸಾಯನಿಕ ಗೊಬ್ಬರ ಬಳಸಿ ಮಣ್ಣು ಬರಡಾಗುತ್ತಿದ್ದು, ರೈತರು ಕೂಡ ಇದರ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಈ ಗೊಬ್ಬರ ಪೆಟ್ರೋಲಿಯಂ ಉತ್ಪನ್ನಗಳಾಗಿರುವುದರಿಂದ ಮಣ್ಣಿನ ಗುಣಧರ್ಮ, ಫಲವತ್ತತೆ ಕ್ರಮೇಣ ಕ್ಷೀಣಿಸಿ ಇಳುವರಿ ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ. ಏಕೆಂದರೆ ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ, ಸೂಕ್ಷ್ಮಾಣು ಜೀವಿಗಳ ಪ್ರಮಾಣ, ಎರೆಹುಳುಗಳ ಸಂಖ್ಯೆ ಮತ್ತು ಪೋಷಕಾಂಶಗಳನ್ನು ಒದಗಿಸುವಂತಹ ಶಕ್ತಿ ಕಳೆದುಕೊಳ್ಳುತ್ತಿದೆ. ಹಾಗಾಗಿಯೇ ರಾಜ್ಯದಲ್ಲಿ ಶೇ. 70ರಷ್ಟು ಒಣ ಬೇಸಾಯದಲ್ಲಿ ಆಗಾಗ ಬೆಳೆ ವೈಫಲ್ಯಗಳು ಹೆಚ್ಚಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ.

ಇದನ್ನು ತಪ್ಪಿಸಬೇಕಾದರೆ ಸಾವಯವ ಗೊಬ್ಬರವನ್ನು ರೈತರಿಗೆ ಹೆಚ್ಚು ವಿತರಿಸಬೇಕಾಗಿರುವುದು ಸರಕಾರದ ಮುಖ್ಯ ಧ್ಯೇಯವಾಗಬೇಕು. ಹಾಗಾಗಿ ಎಲ್ಲಾ ಪ್ರದೇಶಗಳಿಗೂ ಹೆಚ್ಚು ಸೂಕ್ತ ಪದ್ಧತಿ ಎಂದರೆ ಹಸಿರೆಲೆ ಗೊಬ್ಬರ. ಆದರೆ, ಇಲಾಖೆಯಿಂದಲೂ ನಿರೀಕ್ಷಿತ ಪ್ರಮಾಣದಲ್ಲಿ ವಿತರಣೆಯಾಗದಿರುವುದರಿಂದ ಖಾಸಗಿ ಮಾರಾಟಗಾರರು ಕೆ.ಜಿ.ಗೆ 80ರಿಂದ 100 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಒಂದು ಎಕರೆಗೆ 20 ಕೆ.ಜಿ. ಅವಶ್ಯಕತೆ ಇದ್ದು, ಅಷ್ಟೊಂದು ಹಣ ಖರ್ಚು ಮಾಡುವುದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹೊರೆಯಾಗಿದೆ. ಇದಕ್ಕಾಗಿ ಸರಕಾರ ವ್ಯವಸ್ಥಿತವಾಗಿ ಬಿತ್ತನೆ ಬೀಜಗಳನ್ನು ಉತ್ಪಾದನೆ ಮಾಡಬೇಕು. ರೈತರಿಗೆ ಅಕ್ಕಿ ನೀಡುವ ರೀತಿ ಹಸಿರೆಲೆ ಬಿತ್ತನೆ ಬೀಜವನ್ನು ಕಡಿಮೆ ದರದಲ್ಲಿ ವಿತರಿಸಬೇಕು.

ಪ್ರತಿ ಗ್ರಾಮಕ್ಕೂ ಒಕ್ಕಣೆ ಯಂತ್ರ ಕೊಡಿ

ರಾಗಿ, ಹುರುಳಿ, ಮುಸುಕಿನ ಜೋಳ, ಹೆಸರುಕಾಳು, ಉದ್ದು, ಕಡಲೆ ಸೇರಿದಂತೆ ಸಾಕಷ್ಟು ಬೆಳೆಗಳ ಒಕ್ಕಣೆಯನ್ನು ರಸ್ತೆಯಲ್ಲೇ ಮಾಡಲಾಗುತ್ತಿದೆ. ಇದರಿಂದ ಶೇ. 25ರಿಂದ 30ರಷ್ಟು ಪದಾರ್ಥ ಹಾನಿಯಾಗುವುದಲ್ಲದೆ ಶೇ. 15ರಷ್ಟು ಕಸ, ಕಡ್ಡಿ , ಮಣ್ಣಿನಲ್ಲಿ ಸೇರಿಕೊಂಡು ಬೆಳೆಗಾರರು ನಷ್ಟ ಹೊಂದುತ್ತಿದ್ದಾರೆ. ಜತೆಗೆ ಸಾಕಷ್ಟು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದು, ವಾಹನವೂ ಬೆಂಕಿಗೆ ಆಹುತಿಯಾಗಿದೆ. ಇದೆಲ್ಲವೂ ತಪ್ಪಬೇಕಾದರೆ ಆಯಾ ಗ್ರಾಮದಲ್ಲೇ ಯಂತ್ರದ ಮೂಲಕ ಒಕ್ಕಣೆಯಾಗಬೇಕು. ಅದಕ್ಕೆ ತಗುಲುವ 3 ರಿಂದ 3.5 ಲಕ್ಷ ರೂ. ಅನ್ನು ಸಬ್ಸಿಡಿ ಮೂಲಕ ಹಳ್ಳಿಗೊಂದರಂತೆ ನೀಡಿದರೆ ಈ ರೀತಿಯ ಅವಘಡ, ರೈತರ ಉತ್ಪನ್ನ ನಷ್ಟ ತಪ್ಪಿಸಬಹುದು.

ಎರೆಹುಳು ಗೊಬ್ಬರ ತಯಾರಿಕಾ ಘಟಕಕ್ಕೆ ಬೇಕಿದೆ ಪ್ರೋತ್ಸಾಹ

ಜಮೀನಿನಲ್ಲಿ ಉತ್ಪತ್ತಿಯಾಗುವ ಕಬ್ಬು, ಹತ್ತಿ, ಮುಸುಕಿನ ಜೋಳ, ಬಾಳೆ ದಿಂಡು, ತೆಂಗಿನ ಗರಿ ಸೇರಿದಂತೆ ಶೇ. 60ರಿಂದ 70ರಷ್ಟು ಬೆಳೆ ತ್ಯಾಜ್ಯಗಳಿಗೆ ಬೆಂಕಿ ಇಟ್ಟು ವಾತಾವರಣ ಕಲುಷಿತ ಮಾಡಲಾಗುತ್ತಿದ್ದು, ಸಾವಯವ ವಸ್ತುಗಳು ನಷ್ಟವಾಗುತ್ತಿದೆ. ಜತೆಗೆ ಮಣ್ಣು ಕೂಡ ಬೆಂದು ಅದರ ಫಲವತ್ತತೆ ಕಡಿಮೆಯಾಗುತ್ತಿದೆ. ಆದ್ದರಿಂದ ಪ್ರತಿ ಗ್ರಾಮಗಳಿಗೆ ಕೃಷಿ ತ್ಯಾಜ್ಯಗಳನ್ನು ಪುಡಿ ಮಾಡುವ ಯಂತ್ರಗಳನ್ನು ಪ್ರತಿ ಗ್ರಾಮದಲ್ಲಿ ಒಬ್ಬ ಯುವ ರೈತನನ್ನು ಆಯ್ಕೆ ಮಾಡಿ ಶೇ. 90ರಷ್ಟು ಸಬ್ಸಿಡಿ ದರದಲ್ಲಿ ನೀಡಿದರೆ ಬೆಳೆ ತ್ಯಾಜ್ಯ ಸುಡುವುದನ್ನು ನಿಯಂತ್ರಿಸಬಹುದು. ಆ ಮೂಲಕ ಬೆಳೆ ತ್ಯಾಜ್ಯಗಳನ್ನು ಜಮೀನಿನಲ್ಲೇ ಉಳಿಸಿ ಮಣ್ಣಿಗೆ ಸೇರಿಸುವ ಮೂಲಕ ಫಲವತ್ತೆ ಹೆಚ್ಚು ಮಾಡಲು ಇದೊಂದು ವಿಪುಲ ಅವಕಾಶ.

ಹಸಿರೆಲೆ ಗೊಬ್ಬರ ಬಿತ್ತನೆ ಬೀಜಕ್ಕೆ ಸಾಕಷ್ಟು ಬೇಡಿಕೆ ಇದ್ದು, ಅವಶ್ಯಕತೆಗೆ ತಕ್ಕಂತೆ ದೊರೆಯುತ್ತಿಲ್ಲ. ಅದೇ ರೀತಿ ಕೃಷಿ ಯಾಂತ್ರೀಕರಣ, ರೈತರಿಗೆ ಹನಿ ನೀರಾವರಿ ಯೋಜನೆಯಡಿ ಹೆಚ್ಚು ಅನುದಾನದ ನಿರೀಕ್ಷೆಯಲ್ಲಿದ್ದೇವೆ.

ಮಹಾಂತೇಶಪ್ಪ, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಮೈಸೂರು

ರಾಗಿ ಖರೀದಿ ಇಷ್ಟೇ ಎಂದು ಸೀಮಿತ ಮಾಡಬಾರದು, ಬೆಳೆಗೆ ಬೆಲೆ ನಿಗದಿಯಾಗಬೇಕು. ತರಕಾರಿಗಳನ್ನು ರೈತರಿಂದ ಸರಕಾರವೇ ನೇರ ಖರೀದಿಸಿ ಹಾಸ್ಟೆಲ್‌, ಇಂದಿರಾ ಕ್ಯಾಂಟೀನ್‌ ಮತ್ತಿತರ ಕಡೆ ವಿತರಿಸಿದರೆ ರೈತರಿಗೂ ಅನುಕೂಲ, ಸಾರ್ವಜನಿಕರಿಗೂ ಉತ್ತಮ ಗುಣಮಟ್ಟದ ತರಕಾರಿ ನೀಡಿದಂತಾಗುತ್ತದೆ ಎನ್ನುತ್ತಾರೆ ಪ್ರಗತಿಪರ ರೈತ ಮಂಜು ಕಿರಣ್‌.



Read more

[wpas_products keywords=”deal of the day sale today offer all”]