ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರತಿಭಟನೆ, ಗದ್ದಲಗಳ ವಿಚಾರ ಗುರುವಾರ ಸುಪ್ರೀಂಕೋರ್ಟ್ನಲ್ಲಿಯೂ ಪ್ರತಿಧ್ವನಿಸಿದೆ. ಈ ಗಲಾಟೆಯು ದೇಶಾದ್ಯಂತ ವ್ಯಾಪಿಸುತ್ತಿದೆ. ಹೀಗಾಗಿ ಸುಪ್ರೀಂಕೋರ್ಟ್ ಇದನ್ನು ಕೈಗೆತ್ತಿಕೊಳ್ಳಬೇಕು ಎಂದು ಹಿರಿಯ ವಕೀಲ ಹಾಗೂ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಮನವಿ ಮಾಡಿದರು. ಇದಕ್ಕೆ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ, “ನಾವು ನೋಡುತ್ತೇವೆ” ಎಂದು ಪ್ರತಿಕ್ರಿಯಿಸಿದರು.
ಹಿಜಾಬ್ ಮೇಲಿನ ನಿರ್ಬಂಧದ ಕಾರಣದಿಂದ ತನ್ನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಕರ್ನಾಟಕದ ಕಾಲೇಜು ವಿದ್ಯಾರ್ಥಿನಿ ಫಾತಿಮಾ ಬುಶ್ರಾ ಎಂಬಾಕೆ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿದ ಅರ್ಜಿಯನ್ನು ಸಿಬಲ್ ಪ್ರಸ್ತಾಪಿಸಿದರು.
“ಇದು ಕರ್ನಾಟಕದಲ್ಲಿ ಏನು ನಡೆಯುತ್ತಿದೆಯೋ ಅದಕ್ಕೆ ಸಂಬಂಧಿಸಿದ ಅರ್ಜಿಯಾಗಿದೆ. ಈಗ ಇದು ಇಡೀ ದೇಶಕ್ಕೆ ಹರಡುತ್ತಿದೆ” ಎಂದು ಸಿಬಲ್ ಹೇಳಿದರು.
“ಮೊದಲು ಹೈಕೋರ್ಟ್ ಈ ವಿಚಾರದ ವಿಚಾರಣೆಯನ್ನು ನಡೆಸಲಿ. ಅದು ಇಂದು ಮೂವರು ಸದಸ್ಯರ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿದೆ” ಎಂದು ಸಿಜೆಐ ಎನ್ವಿ ರಮಣ ತಿಳಿಸಿದರು. ಆದರೆ ಪರೀಕ್ಷೆಗಳು ನಡೆಯಲು ಕೇವಲ ಎರಡು ತಿಂಗಳು ಬಾಕಿ ಇದೆ ಎಂದು ತುರ್ತು ವಿಚಾರಣೆಯ ಅಗತ್ಯವನ್ನು ಸಿಬಲ್ ಪ್ರತಿಪಾದಿಸಿದರು.
“ಈ ಹಂತದಲ್ಲಿ ನಾವು ಪ್ರಕರಣವನ್ನು ಕೈಗೆತ್ತಿಕೊಳ್ಳುವುದು ತೀರಾ ಬೇಗ ಎನಿಸುತ್ತದೆ. ಹೈಕೋರ್ಟ್ ನೀಡುವ ಮಧ್ಯಂತರ ಪರಿಹಾರವನ್ನು ನೋಡೋಣ. ನಾವು ಪ್ರಕರಣದ ವಿಚಾರಣೆಯನ್ನು ನಿಗದಿಪಡಿಸಿದರೆ ಹೈಕೋರ್ಟ್ ಅದರ ವಿಚಾರಣೆ ನಡೆಸುವುದಿಲ್ಲ” ಎಂದು ಸಿಜೆಐ ಹೇಳಿದರು.
ಆದರೆ, ಸುಪ್ರೀಂಕೋರ್ಟ್ ಇದನ್ನು ಕೂಡಲೇ ವಿಚಾರಣೆಗೆ ಕೈಗೆತ್ತಿಕೊಳ್ಳುವುದು ತುರ್ತು ಅಗತ್ಯವಾಗಿದೆ ಎಂದು ಸಿಬಲ್ ವಾದಿಸಿದರು. “ಶಾಲೆ ಮತ್ತು ಕಾಲೇಜುಗಳನ್ನು ಮುಚ್ಚಲಾಗಿದೆ. ಹೆಣ್ಣುಮಕ್ಕಳ ಮೇಲೆ ನಿರ್ಬಂಧ ವಿಧಿಸಲಾಗುತ್ತಿದೆ. ಈ ಪ್ರಕರಣವನ್ನು ಪರಿಗಣಿಸಲೇಬೇಕು” ಎಂದು ತಿಳಿಸಿದರು.
ಇದನ್ನು ಹೈಕೋರ್ಟ್ ಮೊದಲು ವಿಚಾರಣೆ ನಡೆಸಲಿ ಎಂದು ಸಿಜೆಐ ರಮಣ ಪುನರುಚ್ಚರಿಸಿದರು. “ಈ ನ್ಯಾಯಾಲಯ ಅದನ್ನು ವಿಚಾರಣೆಗೆ ನಿಗದಿಪಡಿಸಲಿ ಎಂದು ನಾನು ಕೋರುತ್ತೇನೆ. ಹೈಕೋರ್ಟ್ ಆದೇಶಗಳನ್ನು ನೀಡದೆ ಹೋದರೆ, ಈ ನ್ಯಾಯಾಲಯ ಅದನ್ನು ತನ್ನಲ್ಲಿಗೆ ವರ್ಗಾಯಿಸಿಕೊಂಡು ವಿಚಾರಣೆ ನಡೆಸಬಹುದು” ಎಂದು ಸಿಬಲ್ ಹೇಳಿದರು. ಇದಕ್ಕೆ ಸಿಜೆಐ, “ಇದರ ಬಗ್ಗೆ ನೋಡುತ್ತೇವೆ” ಎಂದರು.
ಉಡುಪಿ ಜಿಲ್ಲೆಯ ಕುಂದಾಪುರದ ಪಿಯು ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಫಾತಿಮಾ ಬುಶ್ರಾ, ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. “ಭಾರತೀಯ ಸಂವಿಧಾನದ ಅಡಿಯಲ್ಲಿ ಮುಸ್ಲಿಂ ಯುವತಿಯ ರಕ್ಷಣೆಯ ಸಲುವಾಗಿ ಮತ್ತು ನಿರ್ಧಾರ ತೆಗೆದುಕೊಳ್ಳಲು ಸುಪ್ರೀಂಕೋರ್ಟ್ ಈ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳುವುದು ಬಹಳ ಮಹತ್ವದ್ದಾಗಿದೆ” ಎಂದು ಅರ್ಜಿಯಲ್ಲಿ ಹೇಳಿದ್ದಾರೆ.
“ಅರ್ಜಿದಾರರು ಹಿಜಾಬ್ ಅನ್ನು ಯಾವುದೇ ರಾಜಕೀಯ ಸಂಕೇತವಾಗಿ ಅಥವಾ ತನ್ನ ಸಹಪಾಠಿಗಳಿಗೆ ಅಥವಾ ಇತರೆ ಯಾವುದೇ ವ್ಯಕ್ತಿಗೆ ಬೆದರಿಕೆ ಒಡ್ಡಲು ಅಥವಾ ಅಡ್ಡಿಪಡಿಸಲು ಅಥವಾ ಕಡೆಗಣಿಸಲು ಧರಿಸುತ್ತಿಲ್ಲ. ಅರ್ಜಿದಾರರ ರಕ್ಷಣೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವ ಮತ್ತು ಹೆಣ್ಣುಮಕ್ಕಳು ತಮ್ಮ ಮೂಲಭೂತ ಹಕ್ಕನ್ನು ಪಾಲಿಸುವ ಸನ್ನಿವೇಶವನ್ನು ಉಂಟುಮಾಡುವ ಹೊಣೆಯಿಂದ ರಾಜ್ಯ ಆಡಳಿತ ನುಣುಚಿಕೊಂಡಿದೆ” ಎಂದು ಆರೋಪಿಸಿದ್ದಾರೆ.
Read more
[wpas_products keywords=”deal of the day sale today offer all”]