Karnataka news paper

ಚಿಕ್ಕಬಳ್ಳಾಪುರದಲ್ಲಿ ನೀರಿಗೆ ರಾಸಾಯನಿಕ ತ್ಯಾಜ್ಯ ಸೇರ್ಪಡೆ: ಹಲವು ಇಲಾಖೆಗಳಿಂದ ಜಂಟಿ ಸಮೀಕ್ಷೆ


ಹೈಲೈಟ್ಸ್‌:

  • ಕಿಡಿಗೇಡಿಗಳು ಟ್ಯಾಂಕರ್‌ನಲ್ಲಿ ವಿಷಯುಕ್ತ ರಾಸಾಯನಿಕ ತ್ಯಾಜ್ಯ ನೀರನ್ನು ವಿಲೇವಾರಿ ಮಾಡಿದ್ದಾರೆ
  • ಶ್ರೀನಿವಾಸ ಸಾಗರ ಜಲಾಶಯದ ನೀರಿಗೆ ವಿಷಯುಕ್ತ ನೀರುಸೇರುವಂತೆ ಮಾಡಿದ್ದಾರೆ
  • ದೂರು ಬಂದ ಹಿನ್ನೆಲೆಯಲ್ಲಿ ಬುಧವಾರ ಹಲವು ಇಲಾಖೆಗಳ ಅಧಿಕಾರಿಗಳ ತಂಡದಿಂದ ಪರಿಶೀಲನೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ಮಾರ್ಗ ಮಧ್ಯೆ ಇರುವ ಜಕ್ಕಲ ಮಡಗು ಕ್ರಾಸ್‌ನ ಸೇತುವೆ ಬಳಿ ಕಿಡಿಗೇಡಿಗಳು ಟ್ಯಾಂಕರ್‌ನಲ್ಲಿ ವಿಷಯುಕ್ತ ರಾಸಾಯನಿಕ ತ್ಯಾಜ್ಯ ನೀರನ್ನು ವಿಲೇವಾರಿ ಮಾಡುವ ಮೂಲಕ ಶ್ರೀನಿವಾಸ ಸಾಗರ ಜಲಾಶಯದ ನೀರಿಗೆ ಸೇರುವಂತೆ ಮಾಡಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಬುಧವಾರ ಪರಿಸರ, ಪೊಲೀಸ್‌, ಕಂದಾಯ ಮೀನುಗಾರಿಕೆ, ಸಣ್ಣ ನೀರಾವರಿ, ಅರಣ್ಯ, ಕೈಗಾರಿಕೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸುವ ಮೂಲಕ ಮಾಹಿತಿ ಕಲೆ ಹಾಕಿದರು.

chikkaballapura

ಜಿಲ್ಲಾ ಪರಿಸರ ಅಧಿಕಾರಿ ಸಿದ್ದೇಶ್ವರ ಬಾಬು ಮಾತನಾಡಿ, ಜಕ್ಕಲ ಮಡುಗು ಕ್ರಾಸ್‌ ಹಾಗೂ ಶ್ರೀನಿವಾಸ್‌ ಸಾಗರದ ಬಳಿ ವಿಸರ್ಜಿಸಲಾಗಿರುವ ರಾಸಾಯನಿಕ ತ್ಯಾಜ್ಯ ನೀರು (ಜನರಲ್‌ ಪ್ಯಾರಾಮೀಟರ್‌, ಆಯಿಲ್‌ ಅಂಡ್‌ ಗ್ರೀಸ್‌, ಹೆವಿ ಮೆಟಲ್‌ ಮತ್ತು ಸೈನೈಡ್‌) ಮತ್ತು ಮಣ್ಣಿನ ಮಾದರಿ ಸಂಗ್ರಹಿಸಲಾಗಿದೆ ಎಂದು ಹೇಳಿದರು.

ಎಚ್‌ಎನ್‌ ವ್ಯಾಲಿ ನೀರಿಗೆ ಬ್ರೇಕ್‌; ಕೋಡಿ ಬಿದ್ದ ನೀರನ್ನು ಹರಿಸುವುದೇ ಸವಾಲು!
ಶ್ರೀನಿವಾಸ ಸಾಗರ ಜಲಾಶಯದ ನೀರನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಬೆಂಗಳೂರಿನ ಕೇಂದ್ರ ಪರಿಸರ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ. ಕೇಂದ್ರ ಪರಿಸರ ಪ್ರಯೋಗಾಲಯದ ಅಧಿಕಾರಿಗಳಿಗೆ ಶೀಘ್ರದಲ್ಲೇ ವಿಶ್ಲೇಷಣಾ ವರದಿಯನ್ನು ನೀಡುವಂತೆ ಕೋರಲಾಗಿದೆ. ವಿಶ್ಲೇಷಣಾ ವರದಿ ಬಂದ ನಂತರ ವರದಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಮಂಡಳಿಯ ಕೇಂದ್ರ ಕಚೇರಿಗೆ ಸದರಿ ವಿಷಯದ ಬಗ್ಗೆ ವರದಿಯನ್ನು ಸಲ್ಲಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.

ಪೊಲೀಸ್‌ ಉಪಾಧೀಕ್ಷಕ ವಾಸುದೇವ್‌ ಮಾತನಾಡಿ, ವಿಷಯುಕ್ತ ರಾಸಾಯನಿಕ ತ್ಯಾಜ್ಯ ನೀರನ್ನು ವಿಲೇವಾರಿ ಮಾಡಿ ಹೋಗಿರುವ ಕಿಡಿಗೇಡಿಗಳ ಪತ್ತೆಗಾಗಿ ಈಗಾಗಲೇ ಪೊಲೀಸ್‌ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಈ ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಾಧುರಿ ಮಾತನಾಡಿ, ಸದ್ಯಕ್ಕೆ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮೀನು ಹಿಡಿಯದಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಜತೆಗೆ ಈ ಕೆರೆಯ ನೀರು ಮತ್ತು ಮೀನನ್ನು ಪರೀಕ್ಷೆಗಾಗಿ ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ಸಂಶೋಧನಾ ಕೇಂದ್ರದ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲು ಕ್ರಮ ವಹಿಸಲಾಗಿದೆ ಎಂದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದಾಖಲೆ ಮಳೆಗೆ ಹೆಚ್ಚಿದ ಅಂತರ್ಜಲ: ಮೈತುಂಬಿಕೊಂಡ ಸಾವಿರ ಕೆರೆಗಳು
ಪ್ರಯೋಗಾಲಯದ ವರದಿ ಬರುವವರೆಗೆ ಸುತ್ತಮುತ್ತಲ ಗ್ರಾಮಗಳ ಜನರು ತಮ್ಮ ಜಾನುವಾರುಗಳಿಗೂ ಸಹ ಈ ಕೆರೆಯ ನೀರನ್ನು ಕುಡಿಸದಂತೆ ಡಂಗುರ ಸಾರುವ ಮೂಲಕ ಜಾಗೃತಿ ಮೂಡಿಸುವಂತೆ ಪೋಶೆಟ್ಟಿ ಹಳ್ಳಿ ಗ್ರಾಮ ಪಂಚಾಯತಿಯ ಪಿಡಿಒ ಅವರಿಗೆ ಸೂಚಿಸಲಾಗಿದೆ. ಜನರು ಕೂಡ ಈ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸದಂತೆ ತಾಪಂ ಇಒ ಹರ್ಷವರ್ಧನ್‌ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಜಂಟಿ ಸಮೀಕ್ಷೆಯಲ್ಲಿ ಕೈಗಾರಿಕಾ ಇಲಾಖೆಯ ಉಪ ನಿರ್ದೇಶಕ ಶರೀಫ್‌, ತಹಸೀಲ್ದಾರ್‌ ಗಣಪತಿ ಶಾಸ್ತ್ರೀ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ (ಎಚ್‌. ಎನ್‌. ವ್ಯಾಲಿ ಯೋಜನೆ)ಯ ಸಹಾಯಕ ಕಾರ್ಯಪಾಲಕ ಅಭಿಯಂತರ ರವೀಂದ್ರ ನಾಥ್‌, ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಸೀಸ, ಯುರೇನಿಯಂ ಪತ್ತೆ ಆತಂಕ: ಬೆಂಗಳೂರು ಗ್ರಾಮಾಂತರ ಜೀವಜಲಕ್ಕೆ ಕುತ್ತು!



Read more