Karnataka news paper

ಗ್ರಾಮ ಒನ್ ಕೇಂದ್ರಗಳಲ್ಲಿ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್‍ಗಳ ವಿತರಣೆ: ಸಿಎಂ ಬೊಮ್ಮಾಯಿ


Online Desk

ಬೆಂಗಳೂರು: ರಾಜ್ಯದಲ್ಲಿ ಸುಮಾರು 4 ಲಕ್ಷ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‍ಗಳಿಗೆ ಮಂಜೂರಾತಿ ನೀಡಲಾಗಿದ್ದು, ಇವುಗಳನ್ನು ಗ್ರಾಮ ಒನ್ ಕೇಂದ್ರಗಳ ಮೂಲಕ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಹೇಳಿದ್ದಾರೆ.

ಗ್ರಾಮ ಒನ್ ಯೋಜನೆಯ ಪ್ರಗತಿ ಕುರಿತು ಜಿಲ್ಲಾಡಳಿತ ಹಾಗೂ ಗ್ರಾಮ ಒನ್ ಕಂಪ್ಯೂಟರ್ ಆಪರೇಟರ್‍ಗಳೊಂದಿಗೆ ಇಂದು ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿ ಅವರು, ಗ್ರಾಮ ಒನ್ ಸೇವಾ ಕೇಂದ್ರದ ಮೂಲಕ ಸರ್ಕಾರ ತನ್ನ ಅಧಿಕಾರ ಮತ್ತು ಜವಾಬ್ದಾರಿ ಆಪರೇಟರ್ಸ್‍ಗಳಿಗೆ ವಹಿಸಲಾಗಿದೆ. ಜನರ ಬಳಿ ಸೌಜನ್ಯದಿಂದ ವರ್ತಿಸಿ, ಅವರ ಸಮಸ್ಯೆಗಳನ್ನು ಆಲಿಸಿ, ಪರಿಹಾರವನ್ನು ನೀಡಬೇಕೆಂದು ಮುಖ್ಯಮಂತ್ರಿಗಳು ಕಿವಿಮಾತು ಹೇಳಿದರು.

ಇದನ್ನು ಓದಿ: ಸ್ವ ಸಹಾಯ ಸಂಘಗಳ ಮಹಿಳಾ ಕಾರ್ಮಿಕರಿಗೆ ಸಿಹಿ ಸುದ್ದಿ: ಉತ್ಪನ್ನಗಳ ಮಾರಾಟ ಸಂಬಂಧ ಸರ್ಕಾರ- ಅಮೆಜಾನ್ ಮಹತ್ವದ ಒಪ್ಪಂದ

ಕಚೇರಿಗೆ ಜನರ ಅಲೆದಾಟವನ್ನು ತಪ್ಪಿಸಿ
ಜನರ ಎಲ್ಲ ಮಾಹಿತಿಗಳು ಕಾಗದರೂಪದಲ್ಲಿಯೇ ಪಡೆಯುವ ಅವಶ್ಯಕತೆಯಿಲ್ಲ. ‘ಕುಟುಂಬ’ ಜನಸೇವಕ  ಸಾಫ್ಟ್‍ವೇರ್‍ಗಲ್ಲಿಯೂ ಮಾಹಿತಿಗಳು ಲಭಿಸುತ್ತದೆ. ಜನರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ ತ್ವರಿತವಾಗಿ ಸರ್ಕಾರದ ಸೇವೆಯನ್ನು ಪೂರೈಸಬೇಕು. ಮಾಹಿತಿ ಕೊರತೆ ಇದ್ದರೆ ಸ್ಪಷ್ಟೀಕರಣ ನೀಡಬೇಕು. ಸೇವೆ ಪೂರೈಸಲು ಕಾನೂನಾತ್ಮಕವಾಗಿ ಸಾಧ್ಯವಾಗದಿದ್ದಲ್ಲಿ ಅರ್ಜಿಯ ತಿರಸ್ಕಾರಕ್ಕೆ ಸಕಾರಣವನ್ನು ನೀಡಬೇಕು. ತಿರಸ್ಕೃತ ಅರ್ಜಿಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಅವುಗಳನ್ನು ಬಗೆಹರಿಸಬೇಕು. ಪಂಚಾಯತ್ ಅಭಿವೃದ್ಧಿ ಅಧಿಕಾರಿ, ತಹಶೀಲ್ದಾರ್ ಸಿಬ್ಬಂದಿಗಳೊಂದಿಗೆ ಸೌಹಾರ್ದತೆಯಿಂದಿರಬೇಕು. ಗ್ರಾಮ ಪಂಚಾಯತಿ ವ್ಯಾಪ್ತಿಗೆ ಮೀರಿದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸೇವೆಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಮಾಡುವ ಅರಿವು ಇರಬೇಕು ಎಂದು ತಿಳಿಸಿದರು.

ಅರ್ಜಿಗಳು ಕಡಿಮೆ ಬಂದರೆ, ಅಲ್ಲಿ ಪ್ರಚಾರ ಹಾಗೂ ಸ್ಪಂದನೆಯ ಕೊರತೆಯನ್ನು ಬಿಂಬಿಸುತ್ತದೆ. ಹಿರಿಯ ನಾಗರಿಕರು, ಬಡವರು ಹಾಗೂ ಅಂಗವಿಕಲರಿಗಿರುವ ಕಾರ್ಯಕ್ರಮಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಿ ಸೇವೆ ಒದಗಿಸಬೇಕು. ಆಪರೇಟರ್‍ಗಳಿಗೆ ನೀಡಿರುವ ಸೌಲಭ್ಯಗಳ ಇತಿಮಿತಿಯೊಳಗೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದರು.

ಕಾರ್ಯಕ್ಷಮತೆ ಆಧರಿಸಿ ಬಹುಮಾನ
ಗ್ರಾಮ ಒನ್ ಕಂಪ್ಯೂಟರ್ ಆಪರೇಟರ್ಸ್‍ಗಳು ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ಪ್ರೋತ್ಸಾಹಿಸುವ ಉದ್ದೇಶದಿಂದ ಮುಂದಿನ 12 ತಿಂಗಳ ಅವಧಿಯಲ್ಲಿ ಪ್ರತಿ ವಾರ ಮೂರು ಉತ್ತಮ ಆಪರೇಟರ್ಸ್ ಗಳನ್ನು ಆಯ್ಕೆ ಮಾಡಿ ಪ್ರಥಮ ಬಹುಮಾನ 10,000 ರೂ. ದ್ವಿತೀಯ ಬಹುಮಾನ ರೂ.7,000 ಹಾಗೂ ತೃತೀಯ ಬಹುಮಾನ ರೂ.5,000 ಗಳನ್ನು ಇ ಆಡಳಿತ ಇಲಾಖೆ ವತಿಯಿಂದ ನೀಡಲಾಗುವುದು. ಜಿಲ್ಲಾಮಟ್ಟದಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದ ಜಿಲ್ಲೆ ತಿಂಗಳಿಗೊಮ್ಮೆ 1 ಲಕ್ಷ ರೂ. ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದರು.

ಸರ್ಕಾರದ ಪ್ರತಿನಿಧಿಗಳು
ಗ್ರಾಮ ಒನ್ ಕಂಪ್ಯೂಟರ್ ಆಪರೇಟರ್‍ಗಳು ಸರ್ಕಾರದ ಪ್ರತಿನಿಧಿಗಳಾಗಿದ್ದು, ತಮ್ಮ ಕಾರ್ಯವೈಖರಿಯ ಮೇಲೆ ಸರ್ಕಾರದ ವರ್ಚಸ್ಸು ಅವಲಂಬಿಸಿದೆ. ಗ್ರಾಮ ಒನ್ ಆಪರೇಟರ್‍ಗಳು ಗ್ರಾಮ ಒನ್ ಸೇವೆಗಳನ್ನು ಜನರಿಗೆ ಯಶಸ್ವಿಯಾಗಿ ತಲುಪಿಸುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬಾಕಿ ಇರುವ ಗ್ರಾಮ ಒನ್ ಕೇಂದ್ರಗಳನ್ನು ಆದ್ಯತೆ ಮೇಲೆ ಪ್ರಾರಂಭಿಸಲು ಹಾಗೂ ಸಾರ್ವಜನಿಕರು ಗ್ರಾಮ ಒನ್‍ನಲ್ಲಿ ಸೇವೆಗಳ ಬಗ್ಗೆ ಹೆಚ್ಚಿನ ಪ್ರಚಾರವನ್ನು ನೀಡಬೇಕೆಂದು ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.



Read more

[wpas_products keywords=”deal of the day”]