Karnataka news paper

ಜೆಡಿಎಸ್‌ ನಮಗೆ ಅನಿವಾರ್ಯವೇ ಹೊರತು ಅದಕ್ಕೆ ನಾವು ಅನಿವಾರ್ಯವಲ್ಲ! ಸಾರಾ ಮಹೇಶ್‌


ಹೈಲೈಟ್ಸ್‌:

  • ʼನಮಗೆ ಜೆಡಿಎಸ್ ಅನಿವಾರ್ಯವೇ ಹೊರತು, ಜೆಡಿಎಸ್‌ಗೆ ನಾವು ಅನಿವಾರ್ಯವಲ್ಲʼ
  • ಇನ್ನಾದರೂ ಪಕ್ಷ ವಿರೋಧ ಚಟುವಟಿಕೆ ಬಿಡಿ ಎಂದ ಶಾಸಕ ಸಾರಾ ಮಹೇಶ್‌
  • ಪರಿಷತ್‌ ಫಲಿತಾಂಶ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬುದನ್ನು ತೋರಿಸಿದೆ ಎಂದ ಶಾಸಕ

ಮೈಸೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮತಗಳು ಬಂದಿವೆ. ಈ ಮೂಲಕ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬುದನ್ನು ಜೆಡಿಎಸ್ ಕಾರ್ಯಕರ್ತರು ಸಾಬೀತು ಮಾಡಿದ್ದಾರೆ ಎಂದು ಶಾಸಕ ಸಾರಾ ಮಹೇಶ್ ತಿಳಿಸಿದರು.

ಪರಿಷತ್ ಚುನಾವಣೆ ಫಲಿತಾಂಶ ಹೊರಬಿದ್ದ ಮರುದಿನವೇ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕ ಸಾರಾ ಮಹೇಶ್‌, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ, ಜಿಲ್ಲಾ ಉಸ್ತುವಾರಿ ಸಚಿವರು ಮೈಸೂರಿನಲ್ಲೇ ಇದ್ದುಕೊಂಡು ಪ್ರಚಾರ ನಡೆಸಿದ್ದರು. ಇದೆಲ್ಲದರ ನಡುವೆಯೂ ಜೆಡಿಎಸ್ ಅಭ್ಯರ್ಥಿ ಕಳೆದ ಬಾರಿಗಿಂತ ಹೆಚ್ಚಿನ ಮತ ಪಡೆದು ಆಯ್ಕೆಯಾಗಿದ್ದಾರೆ. ಜೆಡಿಎಸ್ ಪ್ರಬಲವಾಗಿದೆ ಎಂಬುದನ್ನು ಈ ಚುನಾವಣೆ ಸಾಬೀತು ಪಡಿಸಿದೆ‌ ಎಂದರು.

ನನ್ನನ್ನು ಸೇರಿ ನಮಗೆ ಜೆಡಿಎಸ್ ಅನಿವಾರ್ಯವೇ ಹೊರತು, ಜೆಡಿಎಸ್‌ಗೆ ನಾವು ಅನಿವಾರ್ಯವಲ್ಲ ಎಂಬುದನ್ನು ಈ ಚುನಾವಣೆ ಫಲಿತಾಂಶ ತೋರಿಸಿದೆ. ಈಗಲಾದರೂ ಪಕ್ಷದಲ್ಲಿದ್ದುಕೊಂಡು ವಿರೋಧಿ ಕೆಲಸ ಮಾಡುತ್ತಿರುವವರು ಚಿಂತನೆ ಮಾಡಿ, ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಿ ಎಂದು ಹೇಳಿದರು.

ಪಕ್ಷ ವಿರೋಧಿ ಕೆಲಸ ಮಾಡುತ್ತಿರುವ ನಾಯಕರು ಎಷ್ಟೇ ನೋವು ಕೊಟ್ಟರೂ ಅದನ್ನು ಕಾರ್ಯಕರ್ತರು ಸಹಿಸಿಕೊಂಡಿದ್ದಾರೆ. ಹಾಗಾಗಿ ಪಕ್ಷ ವಿರೋಧಿ ಕೆಲಸ ಮಾಡುತ್ತಿರುವ ನಾಯಕರು ಅರ್ಥ ಮಾಡಿಕೊಳ್ಳಿ. ನಾವು ನಿಮ್ಮನ್ನು ನಾಯಕರೆಂದು ಒಪ್ಪಿಕೊಂಡಿದ್ದೇವೆ. ನೀವು ಇತರರಿಗೆ ಮಾರ್ಗದರ್ಶನ ನೀಡಿ, ನೀವು ನಮ್ಮ ಪಕ್ಷದ ಚಿಹ್ನೆ, ಕಾರ್ಯಕರ್ತರ ಶ್ರಮದಿಂದ ಗೆದ್ದಿದ್ದೀರಿ. ಹಾಗಾಗಿ ನೀವು ನಮ್ಮ ಪಕ್ಷದ ಪರವಾಗಿ ಕೆಲಸ ಮಾಡಿ. ಅವರ ಮನಸ್ಸು ಈಗಲಾದರೂ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದು ಶಾಸಕ ಜಿಟಿ ದೇವೆಗೌಡರ ಹೆಸರು ಹೇಳದೇ ಟಾಂಗ್ ನೀಡಿದರು.

ಕಾರ್ಯಕರ್ತರ ಶ್ರಮದಿಂದ ಮೈಸೂರಲ್ಲಿ ಜೆಡಿಎಸ್ ಗೆದ್ದಿದೆ: ಸಾರಾ ಮಹೇಶ್ ಭಾವುಕ
ವಿಧಾನ ಪರಿಷತ್‌ ಸದಸ್ಯ ಸಂದೇಶ್ ನಾಗರಾಜ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, 12 ವರ್ಷ ಎಂಎಲ್‌ಸಿಯಾಗಿ, ಅವರ ಕುಟುಂಬದವರು ಮೇಯರ್ ಆಗಿ ಕೆಲಸ ಮಾಡಿದ್ದಾರೆ. ನಮ್ಮ ಪಕ್ಷಕ್ಕಾಗಿ ಅವರೂ ಕೆಲಸ ಮಾಡಿದ್ದರು. ಪಕ್ಷ ಅವರ ದುಡಿಮೆಗಿಂತ ಹೆಚ್ಚು ಅವಕಾಶ ನೀಡಿದೆ. ಹೀಗಿದ್ದೂ ನಮ್ಮ ವಿರುದ್ಧ ಯಾಕೆ ಮಾತನಾಡುತ್ತಾರೋ ಗೊತ್ತಿಲ್ಲ ಎಂದರು.

ಮೈಸೂರಲ್ಲಿ ಗೆದ್ದು ವರ್ಚಸ್ಸು ಹೆಚ್ಚಿಸಿಕೊಂಡ ಸಿದ್ದು , ಎಚ್‌ಡಿಕೆ : ಹೇಗೆ ವರ್ಕ್ ಆಯ್ತು ಕೈ ರಣತಂತ್ರ?
ಸಂದೇಶ್ ನಾಗರಾಜ್ ಕುಟುಂಬಕ್ಕೆ ಜೆಡಿಎಸ್ ಯಾವ ಮೋಸ ಮಾಡಿಲ್ಲ. ಅವರು ಯಾಕೆ ನಮ್ಮ‌ ಪಕ್ಷದ ನಾಯಕರನ್ನು ದೂರುತ್ತಿದ್ದಾರೋ ಗೊತ್ತಿಲ್ಲ. ಸಂದೇಶ್ ನಾಗರಾಜ್ ಜನವರಿ 5ಕ್ಕೆ ಸುದ್ದಿಗೋಷ್ಠಿ ನಡೆಸಲಿ. ಸುದ್ದಿಗೋಷ್ಠಿಯಲ್ಲಿ ಮಾಡುವ ಆರೋಪಕ್ಕೆ ಆವತ್ತೇ ಉತ್ತರ ಕೊಡುತ್ತೇವೆ. ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರು ಮತದಾನದಿಂದ ವಂಚಿತರಾದರು. ಇದರಿಂದ ಜೆಡಿಎಸ್ ತ್ರಾಸದಾಯಕವಾಗಿ ಗೆಲ್ಲಬೇಕಾಯಿತು. ಕೆಲ ವ್ಯಕ್ತಿಗಳಿಂದ ನಮಗೆ ಗೆಲುವು ಕಷ್ಟವಾಯಿತು ಎಂಬುದು ಸುಳ್ಳು ಎಂದು ಹೇಳಿದರು.

ಜೆಡಿಎಸ್ ನಮಗೆ ಸಹಕಾರ ನೀಡ್ತಾ ಬಂದಿದೆ! ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ: ಯಡಿಯೂರಪ್ಪ
ಜೆಡಿಎಸ್ ಶಕ್ತಿ ಹಳೆ ಮೈಸೂರು ಭಾಗದಲ್ಲಿ ಇನ್ನೂ ಇದೆ. ಕುಂಕುಮ ಕೊಟ್ಟರು, ದುಡ್ಡು ಕೊಟ್ಟರು ಅಂತ ನಮ್ಮ‌ ಶಾಸಕರೇ ಹೇಳಿದ್ದಾರೆ. ಹಾಗಾದರೆ ನೀವೇನೂ ಕಡ್ಲೆಪುರಿ ಕೊಟ್ರಾ? ಜೆಡಿಎಸ್‌ಗೆ ಯಾರು ಅನಿವಾರ್ಯವಲ್ಲ. ಜೆಡಿಎಸ್ ನಮಗೆ ಅನಿವಾರ್ಯ. ನಮಗೆ ಈಗಲೂ ನಿಮ್ಮ ಮೇಲೆ ಗೌರವವಿದೆ ಎಂದರು.

ನಾಮನಿರ್ದೇಶಿತ ಸದಸ್ಯರಿಗೆ ಮತ ಹಾಕುವ ಹಕ್ಕು ನೀಡಿದ್ದು ನಮ್ಮ ಪ್ರಯಾಸಕ್ಕೆ ಕಾರಣವಾಯ್ತು ಎಂದು ವಿಶ್ಲೇಷಿಸಿದ ಅವರು ಕಳೆದ ಬಾರಿ ತಾಲೂಕು ಪಂಚಾಯಿತಿಯ 150, ಜಿಲ್ಲಾ ಪಂಚಾಯಿತಿಯ 21 ಸದಸ್ಯರಿದ್ದರು‌. ಈಗ ತಾ‌ಪಂ, ಜಿಪಂ ಸದಸ್ಯರಿಲ್ಲ. ಬಿಜೆಪಿ ಸರ್ಕಾರ ನಾಮನಿರ್ದೇಶಿತ ಸದಸ್ಯರಿಗೆ ಅವಕಾಶ ಮಾಡಿಕೊಟ್ಟಿತ್ತು. ಹೀಗಿದ್ದೂ ನಮಗೂ ಬಿಜೆಪಿಗೂ 139 ಮತಗಳ ಅಂತರ ಇತ್ತು. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತ ಗಳಿಸಿದ್ದೇವೆ ಎಂದು ತಿಳಿಸಿದರು.



Read more