Karnataka news paper

Breaking: ಮತ್ತೊಂದು ದುಃಖದ ಸುದ್ದಿ: ಫಲಿಸದ ಪ್ರಾರ್ಥನೆ, ಕ್ಯಾ. ವರುಣ್ ಸಿಂಗ್ ವಿಧಿವಶ


ಹೈಲೈಟ್ಸ್‌:

  • ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ನಿಧನ
  • ಕೆಲವು ದಿನಗಳಿಂದ ಬೆಂಗಳೂರಿನ ಸೇನಾ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ
  • ಐಎಎಫ್ ಹೆಲಿಕಾಪ್ಟರ್‌ನಲ್ಲಿದ್ದ 14 ಜನರಲ್ಲಿ ಬದುಕುಳಿದಿದ್ದ ಏಕೈಕ ವ್ಯಕ್ತಿ

ಬೆಂಗಳೂರು: ಕಳೆದ ವಾರ ತಮಿಳುನಾಡಿನ ಕೂನೂರು ಸಮೀಪದಲ್ಲಿ ಸಂಭವಿಸಿದ ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದಿದ್ದ ಏಕೈಕ ಯೋಧ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ (39) ಅವರನ್ನು ಉಳಿಸುವ ಪ್ರಯತ್ನಗಳು ವಿಫಲವಾಗಿವೆ. ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಯೋಧ ಜೀವಂತ ಮರಳಿ ಬರಲಿ ಎಂಬ ಪ್ರಾರ್ಥನೆಗಳು ಫಲಿಸಲಿಲ್ಲ. ಬೆಂಗಳೂರಿನ ಸೇನಾ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವರುಣ್ ಸಿಂಗ್ ಅವರು ಬುಧವಾರ ಬೆಳಿಗ್ಗೆ ವಿಧಿವಶರಾಗಿದ್ದಾರೆ.

‘ಕೆಚ್ಚೆದೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ನಿಧನದ ಸುದ್ದಿಯನ್ನು ತಿಳಿಸಲು ಐಎಎಫ್ ದುಃಖಿಸುತ್ತದೆ. ಡಿ. 8ರಂದು ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಗಾಯಗಳಿಂದ ಬಳಲುತ್ತಿದ್ದ ಅವರು ಇಂದು ಬೆಳಿಗ್ಗೆ (ಡಿ. 15) ನಿಧನರಾಗಿದ್ದಾರೆ. ಅವರ ಕುಟುಂಬಕ್ಕೆ ಐಎಎಫ್ ತೀವ್ರ ಸಂತಾಪ ವ್ಯಕ್ತಪಡಿಸುತ್ತಿದೆ ಮತ್ತು ಅವರ ಜತೆಗೆ ಇರಲಿದೆ’ ಎಂದು ಭಾರತೀಯ ವಾಯುಪಡೆ ಟ್ವೀಟ್ ಮಾಡಿದೆ.
Chopper Crash: 14 ಮಂದಿ ಪೈಕಿ ದುರಂತದಲ್ಲಿ ಬದುಕುಳಿದ ಶೌರ್ಯಚಕ್ರ ವಿಜೇತ ಕ್ಯಾಪ್ಟನ್‌ ವರುಣ್‌
ಸೇನಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ 14 ಮಂದಿಯ ಪೈಕಿ 13 ಮಂದಿ ಮೃತಪಟ್ಟಿದ್ದರು. ಈಗ ವರುಣ್ ಸಿಂಗ್ ಅವರ ನಿಧನದೊಂದಿಗೆ ಎಲ್ಲ 14 ಮಂದಿಯೂ ಜೀವ ಕಳೆದುಕೊಂಡಂತಾಗಿದೆ. ವರುಣ್ ಅವರು ಬದುಕಿ ಬರಲಿದ್ದಾರೆ ಎಂಬ ಭರವಸೆ ಇತ್ತು. ಆದರೆ ಅದು ಈಡೇರಲಿಲ್ಲ.

ಹೆಲಿಕಾಪ್ಟರ್ ಅಪಘಾತವಾದಾಗ ಜೀವಂತವಾಗಿ ಹೊರಗೆ ತೆಗೆದ ಇಬ್ಬರು ವ್ಯಕ್ತಿಗಳಲ್ಲಿ ವರುಣ್ ಸಿಂಗ್ ಒಬ್ಬರು. ಸಿಡಿಎಸ್ ಬಿಪಿನ್ ರಾವತ್ ಅವರೂ ಜೀವಂತವಾಗಿ ಪತ್ತೆಯಾಗಿದ್ದರು. ಆದರೆ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದರು. ಶೇ 60ಕ್ಕಿಂತಲೂ ಹೆಚ್ಚು ಭಾಗ ಸುಟ್ಟುಹೋಗಿದ್ದ ವರುಣ್ ಸಿಂಗ್ ಅವರಿಗೆ ಆರಂಭದಲ್ಲಿ ವೆಲ್ಲಿಂಗ್ಟನ್‌ನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಸೌಲಭ್ಯ ಮತ್ತು ಚಿಕಿತ್ಸೆಗಾಗಿ ಮರುದಿನ (ಡಿ. 9) ಬೆಂಗಳೂರಿಗೆ ಕರೆತರಲಾಗಿತ್ತು. ಇಲ್ಲಿನ ಸೇನಾ ಕಮಾಂಡ್ ಆಸ್ಪತ್ರೆಯಲ್ಲಿ ವಿವಿಧ ಖಾಸಗಿ ಆಸ್ಪತ್ರೆಗಳ ಪರಿಣತರು ಕೂಡ ಅವರ ಉಳಿವಿಗಾಗಿ ಶ್ರಮಿಸಿದ್ದರು. ಅವರನ್ನು ಬದುಕುಳಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗಿತ್ತು. ಅವರ ಸುಟ್ಟ ಚರ್ಮಗಳನ್ನು ಬದಲಿಸಲು ವಿಕ್ಟೋರಿಯಾ ಆಸ್ಪತ್ರೆಯ ಚರ್ಮ ಬ್ಯಾಂಕ್‌ನಿಂದ ಎಲ್ಲ ನಮೂನೆಯ ಚರ್ಮಗಳನ್ನು ಸಿದ್ಧವಾಗಿ ಇರಿಸಲಾಗಿತ್ತು. ಅಲ್ಲದೆ, ಚೆನ್ನೈ ಮತ್ತು ಮುಂಬಯಿಗಳ ಸ್ಕಿನ್ ಬ್ಯಾಂಕ್ ನೆರವು ಪಡೆಯಲೂ ಉದ್ದೇಶಿಸಲಾಗಿತ್ತು. ವರುಣ್ ಸಿಂಗ್ ಅವರು ಜೀವಂತ ಬರಲಿ ಎಂದು ಲಕ್ಷಾಂತರ ಮಂದಿ ಪ್ರಾರ್ಥಿಸಿದ್ದರು. ಇದು ಯಾವ ಪ್ರಯತ್ನಕ್ಕೂ ವಿಧಿ ದಯೆ ತೋರಿಸಲಿಲ್ಲ.

ಪ್ರಧಾನಿ ಮೋದಿ ಸಂತಾಪ

ಗ್ರೂಪ್ ಕ್ಯಾ. ವರುಣ್ ಸಿಂಗ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಹೆಮ್ಮೆ, ಶೌರ್ಯ ಮತ್ತು ಅತೀವ ಬದ್ಧತೆಯಿಂದ ದೇಶಕ್ಕೆ ಸೇವೆ ಸಲ್ಲಿಸಿದ್ದರು. ಅವರ ನಿಧನದಿಂದ ನನಗೆ ಬಹಳ ದುಃಖವಾಗಿದೆ. ದೇಶಕ್ಕಾಗಿ ಅವರು ನೀಡಿದ ಅಮೋಘ ಸೇವೆಯನ್ನು ಎಂದಿಗೂ ಮರೆಯುವುದಿಲ್ಲ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪಗಳು. ಓಂ ಶಾಂತಿ’ ಎಂದು ಟ್ವೀಟ್ ಮಾಡಿದ್ದಾರೆ.
ಹೆಲಿಕಾಪ್ಟರ್ ಅಪಘಾತ: ಬದುಕುಳಿದ ಏಕೈಕ ವ್ಯಕ್ತಿ ಕ್ಯಾ. ವರುಣ್ ಸಿಂಗ್ ಬೆಂಗಳೂರಿಗೆ ಸ್ಥಳಾಂತರ
ವಿಮಾನಗಳ ಬಗ್ಗೆ ಕುತೂಹಲ
ಶೌರ್ಯಚಕ್ರ ಪ್ರಶಸ್ತಿ ಪುರಸ್ಕೃತರಾಗಿದ್ದ ವರುಣ್ ಸಿಂಗ್ ಅವರು ಉತ್ತರ ಪ್ರದೇಶದ ಕನ್ಹೊಲಿಯಲ್ಲಿ 1982ರಲ್ಲಿ ಜನಿಸಿದ್ದರು. ಬಾಲ್ಯದಿಂದಲೇ ವಿಮಾನಯಾನದಲ್ಲಿ ಬಹಳ ಆಸಕ್ತಿ ಹೊಂದಿದ್ದ ಅವರು, ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ ಆಯೋಜಿಸಿದ್ದ ರಸಪ್ರಶ್ನೆಗಳಲ್ಲಿ ಎರಡು ಬಾರಿ ತಮ್ಮ ಶಾಲೆಯನ್ನು ಪ್ರತಿನಿಧಿಸಿದ್ದರು. ಆದರೆ ಶಾಲಾ ಪಠ್ಯಗಳಲ್ಲಿ ಅವರು ಹೆಚ್ಚಿನ ಆಸಕ್ತಿ ಹೊಂದಿರಲಿಲ್ಲ. ಅವರು ಒಡಿಶಾದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದರು. ಬಳಿಕ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಮೊದಲ ಪ್ರಯತ್ನದಲ್ಲಿಯೇ ತೇರ್ಗಡೆ ಹೊಂದಿದ್ದರು.
IAF Chopper Crash: ರಕ್ಷಣಾ ಕಾರ್ಯಕ್ಕೆ ನೆರವು ನೀಡಿದ ಹಳ್ಳಿಯನ್ನು ದತ್ತು ಪಡೆದ ಸೇನೆ

2004ರಲ್ಲಿ ವಾಯುಪಡೆ ಸೇರಿಕೊಂಡಿದ್ದ ವರುಣ್ ಸಿಂಗ್, 2004ರ ಜೂನ್ 19ರಿಂದ ಐಎಎಫ್‌ನಲ್ಲಿ ಫ್ಲೈಯಿಂಗ್ ಆಫೀಸರ್ ಆಗಿ ಯುದ್ಧ ವಿಮಾನ ಚಾಲನೆಗೆ ನಿಯೋಜಿತರಾಗಿದ್ದರು. ಅಭಿನಂದನ್ ವರ್ಧಮಾನ್ ಅವರ ಬ್ಯಾಚ್‌ಮೇಟ್‌ಗಳಲ್ಲಿ ಒಬ್ಬರು. 2006ರ ಜೂನ್ 19ರಂದು ಅವರಿಗೆ ಫ್ಲೈಟ್ ಲೆಫ್ಟಿನೆಂಟ್ ಆಗಿ ಬಡ್ತಿ ಸಿಕ್ಕಿತ್ತು. 2010ರ ಜೂನ್ 19ರಂದು ಸ್ಕ್ವಾಡ್ರನ್ ಲೀಡರ್ ಆದರು. 2017ರಲ್ಲಿ ವಿಂಗ್ ಕಮಾಂಡರ್ ಆಗಿದ್ದ ಅವರು, 2021ರಲ್ಲಿ ಗ್ರೂಪ್ ಕ್ಯಾಪ್ಟನ್ ಪದವಿಗೆ ಏರಿದ್ದರು.

ಇಸ್ರೋದ ಮಹತ್ವಾಕಾಂಕ್ಷೆಯ ‘ಗಗನಯಾನ’ ಯೋಜನೆಯಲ್ಲಿ ಮೊದಲು ಆಯ್ಕೆಯಾಗಿದ್ದ 12 ಮಂದಿಯಲ್ಲಿ ವರುಣ್ ಸಿಂಗ್ ಅವರೂ ಇದ್ದರು. ಆದರೆ ವೈದ್ಯಕೀಯ ಕಾರಣಗಳಿಂದ ಅವರು ಅದಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. 2020ರ ಅಕ್ಟೋಬರ್‌ 12ರಂದು 10 ಸಾವಿರ ಅಡಿಗಳಷ್ಟು ಎತ್ತರದಲ್ಲಿ ಪರೀಕ್ಷಾರ್ಥ ಹಾರಾಟದ ವೇಳೆ ತುರ್ತು ಭೂಸ್ಪರ್ಶದ ಅಪಾಯದಲ್ಲಿದ್ದ ಎಲ್‌ಸಿಎ ತೇಜಸ್‌ ಯುದ್ಧ ವಿಮಾನವನ್ನು ಬಹಳ ಚಾಣಾಕ್ಷತೆಯಿಂದ ಉಳಿಸಿದ ಸಾಹಸಕ್ಕಾಗಿ ಸ್ವಾತಂತ್ರ್ಯ ದಿನಾಚರಣೆಯಂದು ಶೌರ್ಯ ಚಕ್ರ ಪುರಸ್ಕಾರಕ್ಕೆ ಭಾಜನರಾಗಿದ್ದರು.



Read more