Karnataka news paper

ಬಾಂಗ್ಲಾದೇಶದ 50ನೇ ವರ್ಷದ ವಿಜಯ ದಿವಸ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದಿನಿಂದ ಮೂರು ದಿನಗಳ ಪ್ರವಾಸ


Source : ANI

ನವದೆಹಲಿ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನೆರವೇರಲಿರುವ 50ನೇ ವಿಜಯ ದಿನ ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ಬುಧವಾರದಿಂದ ಮೂರು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದಾರೆ.

ರಾಷ್ಟ್ರಪತಿಗಳು ಡಿಸೆಂಬರ್ 15ರಿಂದ 17ರವರೆಗೆ ಮೂರು ದಿನಗಳ ಕಾಲ ಬಾಂಗ್ಲಾದೇಶ ಪ್ರವಾಸದಲ್ಲಿರುತ್ತಾರೆ. ಭಾರತದಿಂದ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲು ರಾಷ್ಟ್ರಪತಿ ಕೋವಿಂದ್ ಅವರಿಗೆ ಬಾಂಗ್ಲಾದೇಶ ಅಧ್ಯಕ್ಷ ಅಬ್ದುಲ್ ಹಮೀದ್ ಆಹ್ವಾನ ನೀಡಿದ್ದರು. ಈ ಸಂಬಂಧ ಢಾಕಾದಲ್ಲಿ ನಡೆಯಲಿರುವ 50ನೇ ವರ್ಷದ ಸಂಭ್ರಮಾಚರಣೆಯಲ್ಲಿ ರಾಷ್ಟ್ರಪತಿಗಳು ಭಾಗವಹಿಸುತ್ತಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶೃಂಗ್ಲಾ ನಿನ್ನೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದರು.

ಕೋವಿಡ್-19 ಸೋಂಕು ಜಗತ್ತಿನಾದ್ಯಂತ ಬಂದ ನಂತರ ರಾಷ್ಟ್ರಪತಿಗಳು ಬಾಂಗ್ಲಾದೇಶಕ್ಕೆ ಹೋಗುತ್ತಿರುವುದು ಇದು ಮೊದಲ ಸಲ, ರಾಷ್ಟ್ರಪತಿ ಕೋವಿಂದ್ ಮಾತ್ರ ಈ ಬಾರಿಯ ಬಾಂಗ್ಲಾದೇಶ ವಿಜಯ ದಿವಸ ಕಾರ್ಯಕ್ರಮದಲ್ಲಿ ವಿದೇಶದಿಂದ ಭಾಗವಹಿಸುತ್ತಿರುವ ಅತಿಥಿಯಾಗಿದ್ದಾರೆ. ಕೊರೋನಾ ಬಂದ ನಂತರ ವಿದೇಶಕ್ಕೆ ರಾಷ್ಟ್ರಪತಿಗಳು ಹೋಗುತ್ತಿರುವುದು ಇದು ಮೊದಲ ಬಾರಿ ಎಂದು ಶೃಂಗ್ಲಾ ಹೇಳಿದ್ದಾರೆ.

ಬಾಂಗ್ಲಾದೇಶ ಜೊತೆಗೆ ಭಾರತದ ಬಾಂಧವ್ಯವನ್ನು ವೃದ್ಧಿಪಡಿಸಲು ರಾಷ್ಟ್ರಪತಿಗಳ ಈ ಭೇಟಿ ಮಹತ್ವದ್ದಾಗಿದೆ. ಭಾರತ-ಬಾಂಗ್ಲಾದೇಶಗಳು ಭೌಗೋಳಿಕ, ಅಂತರಿಕ್ಷ, ಪಾರಂಪರಿಕ, ಐತಿಹಾಸಿಕ ವಿಷಯಗಳಲ್ಲಿ ಸಾಮ್ಯತೆ ಹೊಂದಿದ್ದು, ಬಾಂಗ್ಲಾದೇಶದ ವಿಮೋಚನೆಗೆ ಭಾರತ ಈ ಹಿಂದೆ ಸಹಾಯ ಮಾಡಿತ್ತು.

ತಮ್ಮ ಭೇಟಿ ವೇಳೆ ರಾಷ್ಟ್ರಪತಿಗಳು ಅಲ್ಲಿನ ರಾಷ್ಟ್ರಪತಿ ಹಮೀದ್ ಜೊತೆಗೆ ನಿಯೋಗ ಮಟ್ಟದ ಮಾತುಕತೆ ನಡೆಸುತ್ತಾರೆ. ಈ ಮಧ್ಯೆ ಬಾಂಗ್ಲಾಗೇಶ ಪ್ರಧಾನಿ ಶೇಖ್ ಹಸೀನಾ ಮತ್ತು ವಿದೇಶಾಂಗ ಸಚಿವ ಡಾ ಎ ಕೆ ಅಬ್ದುಲ್ ಮೊಮೆನ್ ಅವರು ಸಹ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ಅಲ್ಲಿನ ವಿದೇಶಾಂಗ ಸಚಿವಾಲಯ ತಿಳಿಸಿದೆ.





Read more