ರಾತ್ರಿ ವಶಕ್ಕೆ ಪಡೆದವರಲ್ಲಿ ಓರ್ವ ಮುಖಂಡನನ್ನು ಬಿಡುಗಡೆಗೊಳಿಸಲಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತೆರಳದಂತೆ ಮುನ್ನೆಚ್ಚರಿಕಾ ಕ್ರಮವಾಗಿ ತಹಶೀಲ್ದಾರ್ ಉಪ್ಪಿನಂಗಡಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದಾರೆ. ರಾತ್ರಿ 9.30ರ ಸುಮಾರಿಗೆ ಆಕ್ರೋಶಿತ ಪಿಎಫ್ಐ ಕಾರ್ಯಕರ್ತರ ಗುಂಪು ಮತ್ತಿಬ್ಬರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಪೊಲೀಸ್ ಠಾಣೆಯ ಮುಂಭಾಗ ಜಮಾಯಿಸಿದ್ದು, ಪರಿಸ್ಥಿತಿ ಕೈಮೀರುವ ಹಂತದಲ್ಲಿದ್ದಾಗ ಪೊಲೀಸರು ಲಾಠಿ ಚಾರ್ಚ್ ನಡೆಸಿದರು.
ನಾಲ್ವರು ಪೊಲೀಸರಿಗೆ ಗಾಯ:
ಲಾಠಿ ಚಾರ್ಚ್ ಸಂದರ್ಭ ಗುಂಪಿನ ಆಕ್ರೋಶಕ್ಕೆ ಸಿಲುಕಿ ಎಸ್ಐಗಳಾದ ಸಂದೇಶ್, ವಾಮನ ಹಾಗೂ ಪೊಲೀಸ್ ಸಿಬ್ಬಂದಿಗಳಾದ ರುದ್ರಪ್ಪ ಹಾಗೂ ರೇಣುಕಾ ಅವರಿಗೆ ಗಾಯಗಳಾಗಿದ್ದು, ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಪಿನಲ್ಲಿದ್ದ ಸುಮಾರು 10ಕ್ಕೂ ಅಧಿಕ ಮಂದಿಗೆ ಈ ಸಂದರ್ಭ ಗಾಯಗಳಾಗಿವೆ.
ಒಡೆದ ಗಾಜು, ಚಪ್ಪಲಿ: ಪೊಲೀಸ್ ಠಾಣೆಯ ಮುಂಭಾಗದ ರಸ್ತೆಯಲ್ಲಿ ಚಪ್ಪಲಿ, ನೀರಿನ ಬಾಟಲಿಗಳು, ವಾಹನಗಳ ಒಡೆದ ಗಾಜಿನ ಚೂರುಗಳು ಅಲ್ಲಲ್ಲಿ ಬಿದ್ದಿದೆ. ಪಕ್ಕದ ಉಡುಪಿ ಜಿಲ್ಲೆಯಿಂದಲೂ ಪೊಲೀಸ್ ಪಡೆಯನ್ನು ಕರೆಸಲಾಗಿದ್ದು, ಇವರೊಂದಿಗೆ ಜಿಲ್ಲಾ ಹಾಗೂ ರಾಜ್ಯ ಮೀಸಲು ಪಡೆ, ವಿವಿಧ ಠಾಣಾ ಪೊಲೀಸ್ ಉಪ ನಿರೀಕ್ಷಕರು, ಸಿಬ್ಬಂದಿ ಉಪ್ಪಿನಂಗಡಿಯಲ್ಲಿದ್ದು, ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಸಹಜ ಸ್ಥಿತಿಯಲ್ಲಿ ಪೇಟೆ
ಸ್ವಲ್ಪ ಮಟ್ಟಿನ ಜನರ ವಿರಳತೆ, ಕೆಲವು ಅಂಗಡಿಗಳು ಬಾಗಿಲು ಹಾಕಿರುವುದು ಬಿಟ್ಟರೆ, ಇನ್ನುಳಿದಂತೆ ಪೇಟೆ ಸಹಜ ಸ್ಥಿತಿಯಲ್ಲಿದ್ದು, ಎಂದಿನಂತೆ ವ್ಯವಹಾರ, ವ್ಯಾಪಾರಗಳು ನಡೆಯುತ್ತಿವೆ. ಅಡಿಷನಲ್ ಎಸ್ಪಿಯವರು ನಿನ್ನೆಯಿಂದಲೇ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ.