Karnataka news paper

ಉತ್ತರ ಪ್ರದೇಶದಲ್ಲಿ ಬಿಜೆಪಿ ಟಿಕೆಟ್‌ ರಣತಂತ್ರ..! ಪ್ರತಿ ಕ್ಷೇತ್ರದಲ್ಲೂ ಅಳೆದು ತೂಗಿ ಅಭ್ಯರ್ಥಿ ಆಯ್ಕೆ


ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಗೆಲುವು ಸಾಧಿಸುವ ಪ್ರಯತ್ನದಲ್ಲಿರುವ ಬಿಜೆಪಿಯು ಪ್ರತಿಯೊಂದು ವಿಧಾನಸಭೆ ಕ್ಷೇತ್ರದ ಟಿಕೆಟ್‌ ಹಂಚಿಕೆಯಲ್ಲೂ ಇನ್ನಿಲ್ಲದ ಲೆಕ್ಕಾಚಾರ ಹಾಕುತ್ತಿದೆ. ಟಿಕೆಟ್‌ಗಾಗಿ ನಾಯಕರು ಜಟಾಪಟಿ ನಡೆಸುತ್ತಿದ್ದರೂ ಹಲವು ಬದಲಾವಣೆಗಳ ಮೂಲಕ ಟಿಕೆಟ್‌ ಹಂಚಿಕೆ ಮಾಡುತ್ತಿದೆ.

ಇದೇ ಕಾರ್ಯತಂತ್ರದ ಭಾಗವಾಗಿ 17 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿಯು ಹಲವು ಬದಲಾವಣೆ ಮಾಡಿದೆ. ವಿಧಾನಸಭೆ ಸ್ಪೀಕರ್‌, ಒಬ್ಬ ಸಚಿವೆಗೆ ಟಿಕೆಟ್‌ ನೀಡದ ಪಕ್ಷವು, ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಾವಣೆಯನ್ನೂ ಮಾಡಿದೆ. ಆ ಮೂಲಕ ಹೊಸಬರಿಗೆ ಅವಕಾಶ, ಗೆಲುವಿನ ತಂತ್ರವಾಗಿ ಅಭ್ಯರ್ಥಿಗಳ ಬದಲು ತಂತ್ರವನ್ನು ಅನುಸರಿಸಿದೆ.

ಸ್ಪೀಕರ್‌ ಹೃದಯ ನಾರಾಯಣ್‌ ದೀಕ್ಷಿತ್‌ ಅವರಿಗೆ ಭಗವಂತ ನಗರ ಕ್ಷೇತ್ರದಿಂದ ಟಿಕೆಟ್‌ ನಿರಾಕರಿಸಿದೆ. ದೀಕ್ಷಿತ್‌ ಅವರಿಗೆ 75 ವರ್ಷ ದಾಟಿದ ಕಾರಣ ಟಿಕೆಟ್‌ ನೀಡಿಲ್ಲ ಎಂದು ತಿಳಿದು ಬಂದಿದೆ. ಅವರು ತಮ್ಮ ಪುತ್ರನಿಗೆ ಟಿಕೆಟ್‌ ಕೊಡಿಸಲು ಯತ್ನಿಸಿದ್ದರಾದರೂ ಬಿಜೆಪಿಯು ಭಗವಂತ ನಗರದಲ್ಲಿ ಆಶುತೋಷ್‌ ಶುಕ್ಲಾ ಅವರಿಗೆ ಟಿಕೆಟ್‌ ನೀಡಿದೆ.

ಮಹಿಳಾ ಕಲ್ಯಾಣ (ಸ್ವತಂತ್ರ ನಿರ್ವಹಣೆ) ಖಾತೆ ಸಚಿವೆಯಾಗಿದ್ದ ಸ್ವಾತಿ ಸಿಂಗ್‌ ಅವರಿಗೂ ಸರೋಜಿನಿ ನಗರ ಕ್ಷೇತ್ರದಿಂದ ಟಿಕೆಟ್‌ ನಿರಾಕರಿಸಿದೆ. ಸ್ವಾತಿ ಸಿಂಗ್‌ ಅಲ್ಲದೆ, ಅವರ ಪತಿ ದಯಾ ಶಂಕರ್‌ ಸಿಂಗ್‌ ಅವರೂ ಸರೋಜಿನಿ ನಗರ ಕ್ಷೇತ್ರದಿಂದ ಟಿಕೆಟ್‌ ಪಡೆಯಲು ಲಾಬಿ ನಡೆಸುತ್ತಿದ್ದರು. ಆದರೆ, ಇಬ್ಬರಿಗೂ ಟಿಕೆಟ್‌ ನೀಡದೆ ಜಾರಿ ನಿರ್ದೇಶನಾಲಯ (ಇ.ಡಿ) ಮಾಜಿ ನಿರ್ದೇಶಕ ರಾಜೇಶ್ವರ್‌ ಸಿಂಗ್‌ ಅವರನ್ನು ಕಣಕ್ಕಿಳಿಸಿದೆ.

ಅಪರ್ಣಾಗೆ ಶಾಕ್‌, ರೀಟಾ ಪುತ್ರನಿಗೂ ನಿರಾಶೆ

ಸಂಸದೆ ರೀಟಾ ಬಹುಗುಣ ಅವರ ಪುತ್ರ ಮಯಾಂಕ್‌ ಜೋಶಿ ಹಾಗೂ ಇತ್ತೀಚೆಗಷ್ಟೇ ಬಿಜೆಪಿ ಸೇರಿದ ಮುಲಾಯಂ ಸಿಂಗ್‌ ಯಾದವ್‌ ಅವರ ಸೊಸೆ ಅಪರ್ಣಾ ಯಾದವ್‌ ಅವರಿಗೆ ಲಖನೌ ಕಂಟೋನ್ಮೆಂಟ್‌ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ನೀಡಿಲ್ಲ. ರಾಜ್ಯ ಕಾನೂನು ಸಚಿವ ಬ್ರಿಜೇಶ್‌ ಪಾಠಕ್‌ ಅವರಿಗೆ ಕಂಟೋನ್ಮೆಂಟ್‌ನಿಂದ ಟಿಕೆಟ್‌ ನೀಡುವ ಮೂಲಕ ಮತ್ತೊಂದು ಅಚ್ಚರಿ ಮೂಡಿಸಿದೆ. ಆದರೆ, ಮುಂದಿನ ದಿನಗಳಲ್ಲಿ ಅಪರ್ಣಾ ಯಾದವ್‌ ಅವರಿಗೆ ಬೇರೆ ಕ್ಷೇತ್ರದಿಂದ ಕಮಲ ಪಾಳಯವು ಟಿಕೆಟ್‌ ನೀಡಲಿದೆ ಎಂದು ತಿಳಿದು ಬಂದಿದೆ.

ಲಖನೌ ಪೂರ್ವದಿಂದ ಆಶುತೋಷ್‌ ಟಂಡನ್‌, ಲಖನೌ ಉತ್ತರದಿಂದ ನೀರಜ್‌ ಬೋರಾ, ಲಖನೌ ಕೇಂದ್ರದಿಂದ ರಜನೀಶ್‌ ಗುಪ್ತಾ, ಮಲಿಹಾಬಾದ್‌ನಿಂದ ಕೇಂದ್ರ ಸಚಿವ ಕೌಶಲ್‌ ಕಿಶೋರ್‌ ಪತ್ನಿ ಜಯಾದೇವಿ, ಎಸ್‌ಪಿ ಬಿಟ್ಟು ಬಿಜೆಪಿ ಸೇರಿದ ಮನೀಶ್‌ ರಾವತ್‌ ಅವರನ್ನು ಸಿಧೌಲಿ ಅವರನ್ನು ಕಣಕ್ಕಿಳಿಸಿದೆ.

​ಯೋಗಿಗೆ ಕಪ್ಪು ಧ್ವಜ ಪ್ರದರ್ಶನ ಮಾಡಿದ್ದ ಯುವತಿಗೆ ಎಸ್‌ಪಿ ಟಿಕೆಟ್‌

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಕಪ್ಪು ಧ್ವಜ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದ 25 ವರ್ಷದ ಯುವತಿಗೆ ಸಮಾಜವಾದಿ ಪಕ್ಷವು ಟಿಕೆಟ್‌ ನೀಡಿದೆ. ಅಲ್ಲದೆ, ಉತ್ತರ ಪ್ರದೇಶದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಕಡಿಮೆ ವಯಸ್ಸಿನ ಅಭ್ಯರ್ಥಿ ಎಂದು ಎನಿಸಿದ್ದಾರೆ. ಪೂಜಾ ಶುಕ್ಲಾ ಅವರು ಯೋಗಿ ಸರಕಾರದ ವಿರುದ್ಧ 2017ರಲ್ಲಿ ಘೋಷಣೆ ಕೂಗಿದ್ದರು. ಯೋಗಿ ಅವರು ಲಖನೌ ವಿಶ್ವ ವಿದ್ಯಾಲಯಕ್ಕೆ ತೆರಳುವಾಗ ಅವರ ವಿರುದ್ಧ ಪ್ರತಿಭಟನೆ ನಡೆಸಿದ ಪ್ರಮುಖ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದರು. ಇವರನ್ನು ರಾಜಕೀಯಕ್ಕೆ ಸೆಳೆದಿರುವ ಅಖಿಲೇಶ್‌ ಯಾದವ್‌, ಲಖನೌ ಉತ್ತರ ಕ್ಷೇತ್ರದಿಂದ ಟಿಕೆಟ್‌ ನೀಡಿದ್ದಾರೆ.

ಫಾಜಿಲ್‌ ನಗರದಿಂದ ಮೌರ್ಯ ಸ್ಪರ್ಧೆ

ಬಿಜೆಪಿ ತೊರೆದು ಅಖಿಲೇಶ್‌ ಯಾದವ್‌ ಪಕ್ಷ ಸೇರಿದ್ದ ಒಬಿಸಿ ನಾಯಕ ಸ್ವಾಮಿ ಪ್ರಸಾದ್‌ ಮೌರ್ಯ ಅವರಿಗೆ ಖುಷಿ ನಗರ ಜಿಲ್ಲೆ ಫಾಜಿಲ್‌ ನಗರದಿಂದ ಟಿಕೆಟ್‌ ನೀಡಲಾಗಿದೆ. ಪದ್ರೌಣ ಕ್ಷೇತ್ರದ ಹಾಲಿ ಶಾಸಕರಾಗಿರುವ ಮೌರ್ಯ ಅವರ ವಿರುದ್ಧ ಬಿಜೆಪಿಯು ಇತ್ತೀಚೆಗಷ್ಟೇ ಕಾಂಗ್ರೆಸ್‌ನಿಂದ ಆಗಮಿಸಿದ ಆರ್‌ಪಿಎನ್‌ ಸಿಂಗ್‌ ಅವರನ್ನು ಪದ್ರೌಣದಲ್ಲಿ ಕಣಕ್ಕಿಳಿಸಲಿದೆ ಎಂಬ ಕಾರಣದಿಂದ ಸಮಾಜವಾದಿ ಪಕ್ಷವು ಮೌರ್ಯ ಅವರಿಗೆ ಫಾಜಿಲ್‌ ನಗರದಿಂದ ಟಿಕೆಟ್‌ ನೀಡಿದೆ ಎಂದು ತಿಳಿದು ಬಂದಿದೆ.

ನಾನು ಹೇಮಾಮಾಲಿನಿ ಆಗಲ್ಲ ಎಂದ ಚೌಧರಿ

‘ನಾನು ಮತ್ತೊಬ್ಬ ಹೇಮಾಮಾಲಿನಿ ಆಗಲು ಬಯಸುವುದಿಲ್ಲ. ಹಾಗಾಗಿಯೇ ನಾನು ಬಿಜೆಪಿ ಸೇರಲಿಲ್ಲ’ ಎಂದು ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಮುಖ್ಯಸ್ಥ ಜಯಂತ್‌ ಚೌಧರಿ ನೀಡಿದ ಹೇಳಿಕೆ ಈಗ ವಿವಾದ ಸೃಷ್ಟಿಸಿದೆ. ‘ನಮ್ಮ ಪಕ್ಷದ ನಾಯಕರಾದ ಯೋಗೇಶ್‌ ನೌಶ್ವರ್‌ ಅವರನ್ನು ಅಮಿತ್‌ ಶಾ ಅವರು ಬಿಜೆಪಿಗೆ ಆಹ್ವಾನಿಸಿದ್ದರು. ನೀವು ನಮ್ಮ ಪಕ್ಷ ಸೇರಿದರೆ ನಿಮ್ಮನ್ನು ಹೇಮಾಮಾಲಿನಿಯಂತೆ ಮಾಡುತ್ತೇವೆ ಎಂದು ಯೋಗೇಶ್‌ ಅವರಿಗೆ ಶಾ ಹೇಳಿದ್ದರು. ನಾನು ಮತ್ತೊಬ್ಬ ಹೇಮಾಮಾಲಿನಿ ಆಗಲು ಇಷ್ಟ ಪಡುವುದಿಲ್ಲ. ಹಾಗಾಗಿ ಬಿಜೆಪಿ ಸೇರಿಲ್ಲ’ ಎಂದು ಹೇಳಿದ್ದಾರೆ. ಚೌಧರಿ ಹೇಳಿಕೆ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ‘ಆರ್‌ಎಲ್‌ಡಿ ಮುಖ್ಯಸ್ಥ ತಮ್ಮ ತಾತನ ಹೆಸರು ಕೆಡಿಸುತ್ತಿದ್ದಾರೆ’ ಎಂದು ಟೀಕಿಸಿದೆ. ಉತ್ತರ ಪ್ರದೇಶದಲ್ಲಿ ಎಸ್‌ಪಿ ಹಾಗೂ ಆರ್‌ಎಲ್‌ಡಿ ಮೈತ್ರಿ ಮಾಡಿಕೊಂಡಿವೆ.

​ಮುಜಫ್ಫರ್‌ ನಗರ ಹಿಂಸೆ ಉಲ್ಲೇಖಿಸಿ ಯೋಗಿ ಟೀಕಾಸ್ತ್ರ

ಮುಜಫ್ಫರ್‌ ನಗರದಲ್ಲಿ 2013ರಲ್ಲಿ ನಡೆದ ಗಲಭೆ ಉಲ್ಲೇಖಿಸಿ ಅಖಿಲೇಶ್‌ ಯಾದವ್‌ ಹಾಗೂ ಜಯಂತ್‌ ಚೌಧರಿ ವಿರುದ್ಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಟೀಕಿಸಿದ್ದಾರೆ. ‘ಮುಜಫ್ಫರ್‌ನಗರ ಗಲಭೆ ವೇಳೆ ಜಾಟ್‌ ಸಮುದಾಯದ ಸಚಿನ್‌ ಹಾಗೂ ಗೌರವ್‌ ಎಂಬುವರನ್ನು ಹತ್ಯೆ ಮಾಡಲಾಯಿತು. ಈಗ ಚೌಧರಿ ಹಾಗೂ ಯಾದವ್‌ ಅವರು ಜೋಡಿಯಾಗಿದ್ದಾರೆ. ಈ ಜೋಡಿಯಲ್ಲಿ ಒಬ್ಬರು (ಅಖಿಲೇಶ್‌) ಅಧಿಕಾರದಲ್ಲಿದ್ದರು. ಹತ್ಯೆಗೆ ಇವರೇ ಜವಾಬ್ದಾರಿಯಾಗಿದ್ದಾರೆ’ ಎಂದು ಟೀಕಿಸಿದ್ದಾರೆ.

‘ಇಬ್ಬರು ಸೇರಿಯೇ 2014 ಹಾಗೂ 2017ರಲ್ಲಿ ಚುನಾವಣೆ ಎದುರಿಸಿದರು. ಆದರೆ, ಜನ ಇವರು ಯೋಗ್ಯರಲ್ಲ ಎಂದು ತಿರಸ್ಕರಿಸಿದರು’ ಎಂದು ಕುಟುಕಿದ್ದಾರೆ. ಮುಜಫ್ಫರ್‌ ನಗರ ಹಿಂಸಾಚಾರದಲ್ಲಿ 60ಕ್ಕೂ ಅಧಿಕ ಜನ ಮೃತಪಟ್ಟಿದ್ದರು. ಆಗ ಅಖಿಲೇಶ್‌ ಯಾದವ್‌ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆದಾಗ್ಯೂ, ಜಯಂತ್‌ ಚೌಧರಿ ಜಾಟ್‌ ಸಮುದಾಯದ ನಾಯಕರಾದ ಕಾರಣ ಹತ್ಯೆಗೀಡಾದ ಜಾಟ್‌ ಸಮುದಾಯದವರನ್ನು ಉಲ್ಲೇಖಿಸಿ ಯೋಗಿ ಟೀಕಿಸಿದ್ದಾರೆ.



Read more

[wpas_products keywords=”deal of the day sale today offer all”]