ಹೈಲೈಟ್ಸ್:
- ಒಟಿಪಿ ಎಕ್ಸ್ಪ್ರೆಸ್ ಕಂಪನಿಯು 17 ರೈತರಿಗೆ 44 ಲಕ್ಷ ರೂ.ಗಿಂತ ಹೆಚ್ಚಿನ ಹಣ ವಂಚನೆ ಮಾಡಿ ಬಾಗಿಲು ಮುಚ್ಚಿ, ಪರಾರಿಯಾಗಿದೆ
- ಚೆಕ್ ಪಡೆದು ಮೋಸ ಹೋದ ರೈತರು ಎಪಿಎಂಸಿ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿ ಮೊರೆ ಹೋಗಿದ್ದಾರೆ
- ವ್ಯಾಪಾರಿಗಳನ್ನು ನಂಬಿ ಬೆಳೆಯಿಡುವ ರೈತರು ನಂಬಿದವರಿಂದಲೇ ಮೋಸ ಹೋದರೆ ಹೇಗೆ?
ಚಿಕ್ಕಬಳ್ಳಾಪುರ: ಟೊಮೇಟೊ, ಬೀನ್ಸ್, ಹಿರೇಕಾಯಿ, ಕ್ಯಾಪ್ಸಿಕಾಂ, ಬಾಳೆ ಬೆಳೆಗಾರರ ಬದುಕಲ್ಲಿ ಹರ್ಷದ ಹೊಳೆ ಹರಿಸುತ್ತಿರುವ ಹೊತ್ತಲ್ಲಿ ಒಟಿಪಿ ಎಕ್ಸ್ಪ್ರೆಸ್ ಕಂಪನಿಯು 17 ರೈತರಿಗೆ 44 ಲಕ್ಷ ರೂ.ಗಿಂತ ಹೆಚ್ಚಿನ ಹಣ ವಂಚನೆ ಮಾಡಿ ಬಾಗಿಲು ಮುಚ್ಚಿ, ಪರಾರಿಯಾಗಿದೆ. ಚೆಕ್ ಪಡೆದು ಮೋಸ ಹೋದ ರೈತರು ಎಪಿಎಂಸಿ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿ ಮೊರೆ ಹೋಗಿದ್ದಾರೆ.
ಏನಿದು ಸಮಸ್ಯೆ?
ಚಿಕ್ಕಬಳ್ಳಾಪುರ ನಗರದ ಎಪಿಎಂಸಿ ಯಾರ್ಡ್ ಮಳಿಗೆ ಸಂಖ್ಯೆ 30ರಲ್ಲಿ ಕಳೆದ ಒಂದೂವರೆ ವರ್ಷದಿಂದ ರೈತರಿಂದ ನೇರವಾಗಿ ತರಕಾರಿ ಖರೀದಿ ವ್ಯಾಪಾರ ಮಾಡುತ್ತಿದ್ದ ಸಬ್ಜಿ ಎಕ್ಸ್ಪ್ರೆಸ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಒಟಿಪಿ ಎಕ್ಸ್ಪ್ರೆಸ್ ಕಂಪನಿ ರೈತರಿಗೆ 1 ವಾರದಿಂದ 10 ದಿನದ ಅಂತರದಲ್ಲಿ ಹಣ ಪಾವತಿ ಮಾಡುತ್ತಿತ್ತು. ನಂಬಿಕೆಯಿಂದ ಜಿಲ್ಲೆಯ ರೈತರು ತರಕಾರಿ ತಂದುಹಾಕಿ ಅವರು ಸೂಚಿಸಿದ ದಿನ ಬಂದು ಹಣ ಪಡೆದು ಹೋಗುತ್ತಿದ್ದರು. ಹೀಗೆ ವಹಿವಾಟು ನಡೆಸುತ್ತಿದ್ದ ಕಂಪನಿಯು ಜು.20ರ ನಂತರ ರೈತಾಪಿ ವರ್ಗಕ್ಕೆ ಹೇಳಿದ ಸಮಯಕ್ಕೆ ನಗದು ನೀಡದೆ, ಚೆಕ್ ಕ್ಲಿಯರನ್ಸ್ ಮಾಡದೆ ಖಾತೆಯಲ್ಲಿ ಹಣ ಇಲ್ಲ ಎಂದು ಹಿಂಬರಹ ನೀಡಿದೆ. ಇದರಿಂದ ಆತಂಕಗೊಂಡ ರೈತರು, ಹಣ ಪಾವತಿಸುವಂತೆ ಕಂಪನಿ ಮಾಲಿಕರಿಗೆ ಒತ್ತಡ ಹಾಕುತ್ತಿದ್ದಂತೆ ಮಾಲೀಕ ಬಾಗಿಲು ಮುಚ್ಚಿ ಪರಾರಿಯಾಗಿದ್ದಾನೆ.
ವ್ಯಾಪಾರಿಗಳನ್ನು ನಂಬಿ ಬೆಳೆಯಿಡುವ ರೈತರು ನಂಬಿದವರಿಂದಲೇ ಮೋಸ ಹೋದರೆ ಹೇಗೆ? ಎನ್ನುವುದೇ ಅರ್ಥವಾಗದೆ ಪರಿತಪಿಸುತ್ತಿದ್ದಾರೆ. ಅತಿವೃಷ್ಟಿಯಿಂದಾಗಿ ಬೆಳೆಗಳು ಹಾಳಾಗಿರುವ ನೋವು ಒಂದೆಡೆಯಾದರೆ, ಅಳಿದುಳಿದ ಬೆಳೆಗೆ ಉತ್ತಮ ಬೆಲೆಯಿದ್ದರೂ ಇಂತಹ ವಂಚಕ ಕಂಪನಿಗಳಿಂದ ಮೋಸ ಹೋಗುವ ಪರಿಸ್ಥಿತಿ ಯಾವ ಶತ್ರುವಿಗೂ ಬೇಡ ಎನ್ನುವುದು ನೊಂದ ರೈತರ ಅಸಹಾಯಕ ಮಾತಾಗಿದೆ.
ರೈತರ ಅಳಲು
ರೈತರ ಹಿತ ಕಾಯುವುದಕ್ಕೋಸ್ಕರ ಇರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ವ್ಯಾಪಾರಿಗಳಿಗೆ ಲೈಸೆನ್ಸ್ ಜತೆಗೆ ಮಳಿಗೆಗಳನ್ನು ಬಾಡಿಗೆ ನೀಡಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದೆ. ವ್ಯಾಪಾರಿಗಳು ಕಮಿಷನ್ ಆಧಾರದಲ್ಲಿ ರೈತರಿಂದ ತರಕಾರಿ ಖರೀದಿಸಿ ವ್ಯಾಪಾರ ಮಾಡುತ್ತಾರೆ. ಆದರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ವ್ಯಾಪಾರಿಗಳ ಮೇಲೆ ಯಾವುದೇ ಹಿಡಿತ ಸಾಧಿಸದ ಕಾರಣ, ಮಂಡಿಯಲ್ಲಿರುವ ಮಳಿಗೆಯನ್ನು ಅವರು ಬೇಕಾದಾಗ ತೆರೆದು, ಬೇಡವೆಂದಾಗ ಮುಚ್ಚಿ ಓಡಿ ಹೋಗುವುದು ನಡೆದೇ ಇದೆ.
ಲೀಸ್ ಸಬ್ಲೀಸ್ಗೆ ನೀಡಿರುವ ಪುರಾವೆಗಳೂ ಇವೆ. ಮಾರುಕಟ್ಟೆಯ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸುವಷ್ಟರ ಮಟ್ಟಿಗೆ ಇವರು ಬೇರು ಬಿಟ್ಟಿದ್ದಾರೆ. ಇಂಥಹುದಕ್ಕೆ ಅವಕಾಶ ನೀಡಿದ್ದರಿಂದಲೇ ರೈತರಿಗೆ ಮೋಸವಾಗುತ್ತಿದೆ ಎನ್ನುವುದು ಜಿಲ್ಲೆಯ ತರಕಾರಿ, ಹಣ್ಣು ಬೆಳೆಗಾರರ ಅಳಲಾಗಿದೆ. ಆದರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರೈತರ ಈ ಹೇಳಿಕೆಯನ್ನು ಇದನ್ನು ನಿರಾಕರಿಸುತ್ತಿದೆ.