Karnataka news paper

ಬಜೆಟ್‌ 2022; ರಾಯಚೂರಿಗೆ ಈಡೇರುವುದೇ ಎರಡು ದಶಕಗಳ ಏಮ್ಸ್‌ ಬೇಡಿಕೆ!


ಜಗನ್ನಾಥ ಆರ್‌.ದೇಸಾಯಿ ರಾಯಚೂರು
ಕಳೆದ ಎರಡು ದಶಕಗಳಿಂದ ಮಂದಗತಿಯಲ್ಲಿ ಸಾಗುತ್ತಿರುವ ರೈಲ್ವೆ ಯೋಜನೆಗಳು, ಹಿಂದುಳಿದ ರಾಯಚೂರಿನಲ್ಲಿ ಏಮ್ಸ್‌ ಸಂಸ್ಥೆ ಸ್ಥಾಪಿಸಬೇಕೆಂಬ ಒತ್ತಾಯ, ಜಿಲ್ಲೆಯ ಪ್ರಗತಿಗೆ ಪೂರಕವಾದ ಹತ್ತಾರು ಕಾರ್ಯಕ್ರಮಗಳು ಬಜೆಟ್‌ನಲ್ಲಿ ಘೋಷಣೆಯಾಗಲಿ ಎಂಬ ನಿರೀಕ್ಷೆಗಳು ಗರಿಗೆದರಿದ್ದು, ಜಿಲ್ಲೆಯ ಜನರಲ್ಲಿ ಆಶಾವಾದ ವ್ಯಕ್ತವಾಗಿದೆ.

ಕೇಂದ್ರ ಬಜೆಟ್‌ಗೆ ಕ್ಷಣಗಣನೆ ಆರಂಭವಾಗಿದ್ದು, ಪ್ರತಿ ವರ್ಷ ಕೇಂದ್ರ ಮತ್ತು ರಾಜ್ಯ

ಬಜೆಟ್‌ ಸಂದರ್ಭದಲ್ಲಿ ಜಿಲ್ಲೆಯ ಜನರಲ್ಲಿ ನಿರೀಕ್ಷೆಗಳು ಹುಟ್ಟುವುದು ಸಹಜ. ಅದರಲ್ಲೂ ಕೇಂದ್ರ ಸರಕಾರದಿಂದ ಜಾರಿಯಲ್ಲಿರುವ ರೈಲ್ವೆ ಯೋಜನೆಗಳು ಜಿಲ್ಲೆಯಲ್ಲಿ ಕುಂಟುತ್ತಾ ಸಾಗಿರುವುದು ಜನರ ಬೇಸರಕ್ಕೆ ದಾರಿ ಮಾಡಿದೆ. ದಶಕಗಳಿಂದ ನಡೆಯುತ್ತಿರುವ ಕಾಮಗಾರಿಗೆ ಈ ಸಲವಾದರೂ ವೇಗ ಸಿಗಲಿದೆಯೇ ಎಂಬ ಪ್ರಶ್ನೆಗಳು ಉದ್ಭವವಾಗಿವೆ.

ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರದ 2ನೇ ಘಟಕದಲ್ಲಿ ವಿದ್ಯುತ್‌ ಉತ್ಪಾದನೆ ಶುರು..!

ಏನೇನು ನಿರೀಕ್ಷೆ?:
ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಿಂದ ರಾಯಚೂರು ಜಿಲ್ಲೆಗೆ ಸಂಪರ್ಕ ಕಲ್ಪಿಸಿ ಆ ಮೂಲಕ ತೆಲಂಗಾಣದ ಮಹೆಬೂಬ್‌ ನಗರಕ್ಕೆ ರೈಲು ಸಂಪರ್ಕ ಕಲ್ಪಿಸುವ ಯೋಜನೆ ಎರಡು ದಶಕಗಳಿಗೂ ಹೆಚ್ಚಿನ ಸಮಯ ಹರಣವಾಗಿದೆ.247 ಕಿಮೀ ಉದ್ದದ ರೈಲು ಮಾರ್ಗ ನಿರ್ಮಾಣಕ್ಕೆ ಬರೋಬ್ಬರಿ ಕೇಂದ್ರ ಮತ್ತು ರಾಜ್ಯ ಸರಕಾರಗಳು 25 ವರ್ಷ ಸಮಯ ವ್ಯಯಿಸಿದರೂ ಇನ್ನೂ ರೈಲು ಮಾರ್ಗ ನಿರ್ಮಾಣ ಹಂತಹಂತವಾಗಿ ಸಾಗಿದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳು ತಲಾ 50ರಷ್ಟು ಅನುದಾನ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಈ ಯೋಜನೆ ಜಾರಿಗೆ 1,350ಕೋಟಿ ರೂ.ಗೂ ಹೆಚ್ಚಿನ ಮೊತ್ತ ತಗುಲಲಿದೆ. ಮುನಿರಾಬಾದ್‌ನಿಂದ ಕಾರಟಗಿವರೆಗೆ ಈಗಾಗಲೇ ರೈಲು ಸಂಚಾರ ಆರಂಭಗೊಂಡಿದೆ. ಆದರೆ, ಅಲ್ಲಿಂದ ನಂತರ ಸಿಂಧನೂರಿನಲ್ಲಿ ರೈಲು ನಿಲ್ದಾಣಕ್ಕೆ ಚಾಲನೆ ನೀಡಿದ್ದು, ಮಾನ್ವಿ ತಾಲೂಕಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆಗಬೇಕಿದೆ.

ಮುಂಬೈ, ಬೆಂಗಳೂರಿನಿಂದ ರಾಯಚೂರಿಗೆ ಕಾರ್ಮಿಕರ ಮರು ವಲಸೆ: ಹೆಚ್ಚುತ್ತಲೇ ಇದೆ ಕೋವಿಡ್‌..!

ರಾಯಚೂರಿನಲ್ಲಿಯೇ ಏಮ್ಸ್‌:
ಹಿಂದುಳಿದಿರುವ ರಾಯಚೂರಿನಲ್ಲಿ ಕೇಂದ್ರ ಸರಕಾರದ ಉನ್ನತ ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸಬೇಕೆಂಬ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಿದ್ದ ದಿ.ಡಾ.ಡಿ.ಎಂ. ನಂಜುಂಡಪ್ಪ ಅವರ ಶಿಫಾರಸಾಗಿತ್ತು. ಕೇಂದ್ರ ಸರಕಾರ ರಾಜ್ಯಕ್ಕೆ ಮಂಜೂರು ಮಾಡಿದ್ದ ಐಐಟಿಯನ್ನು ರಾಜ್ಯ ಸರಕಾರ ಧಾರವಾಡಕ್ಕೆ ಮಂಜೂರು ಮಾಡಿ ರಾಯಚೂರಿಗೆ ಅನ್ಯಾಯ ಮಾಡಿತು. ಅದರಿಂದ ಆಕ್ರೋಶಗೊಂಡ ಜನರಲ್ಲಿ ಅಡಗಿದ್ದ ಅಸಮಾಧಾನ ಶಮನಕ್ಕೆ ಐಐಐಟಿ ರಾಯಚೂರಿಗೆ ಮಂಜೂರು ಮಾಡಿದೆ. ಈ ಮಧ್ಯೆ ರಾಜ್ಯಕ್ಕೆ ಮಂಜೂರಾಗಿರುವ ಏಮ್ಸ್‌ ಸಂಸ್ಥೆ ರಾಯಚೂರಿನಲ್ಲಿಯೇ ಸ್ಥಾಪಿಸಬೇಕೆಂದು ಹೋರಾಟ ತೀವ್ರಗೊಂಡಿದೆ.

ರಾಜ್ಯದ ಸಿಎಂ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಈಗಾಗಲೇ ಹುಬ್ಬಳ್ಳಿ-ಧಾರವಾಡದಲ್ಲಿ ಏಮ್ಸ್‌ ಸ್ಥಾಪಿಸಿ ಎಂದು ಕೇಂದ್ರಕ್ಕೆ ಮನವಿ ಪತ್ರ ಸಲ್ಲಿಸಿದ್ದು, ಜಿಲ್ಲೆಯ ಹೋರಾಟಗಾರರನ್ನು ಕೆರಳಿಸಿದೆ. ಈಗಲಾದರೂ ಕೇಂದ್ರ ಸರಕಾರವು ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ರಾಯಚೂರಿಗೆ ಮಂಜೂರು ಮಾಡುವ ಕಾರ್ಯ ಮಾಡಬೇಕೆಂಬುದು ಹೋರಾಟಗಾರರ ಒತ್ತಾಯವಾಗಿದೆ. ಈಗ ಕೇಂದ್ರ ಬಜೆಟ್‌ ಮಂಡನೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಬಜೆಟ್‌ನಲ್ಲಿ ಏಮ್ಸ್‌ ವಿಚಾರ ಪ್ರಸ್ತಾಪವಾಗುವುದೇ ಎಂಬ ಕುತೂಹಲ ಜನರಲ್ಲಿ ಮೂಡಿದೆ.

ರಾಜ್ಯಕ್ಕೆ ಮಂಜೂರಾಗಿರುವ ಏಮ್ಸ್‌ ಸಂಸ್ಥೆಯನ್ನು ಹಿಂದುಳಿದ ರಾಯಚೂರಿನಲ್ಲಿಯೇ ಆರಂಭಿಸಬೇಕೆಂಬುದು ನಮ್ಮ ಬೇಡಿಕೆ. ಈಗಾಗಲೇ ಐಐಟಿ ವಿಚಾರದಲ್ಲಿ ಅನ್ಯಾಯವಾಗಿದೆ. ಮತ್ತೆ ಅದೇ ರೀತಿ ಅನ್ಯಾಯ ಮಾಡಕೂಡದು ಎಂಬುದು ನಮ್ಮ ಒತ್ತಾಯವಾಗಿದೆ.

ಡಾ.ಬಸವರಾಜ್‌ ಕಳಸ, ಸಂಚಾಲಕರು, ಏಮ್ಸ್‌ ಹೋರಾಟ ಸಮಿತಿ, ರಾಯಚೂರು.



Read more…

[wpas_products keywords=”deal of the day”]