Karnataka news paper

ಬಳ್ಳಾರಿ ನಗರಸಭೆ ಸದಸ್ಯೆ ಪದ್ಮಾವತಿ ಯಾದವ್‌ ಕೊಲೆ ಪ್ರಕರಣಕ್ಕೆ 12 ವರ್ಷಗಳ ನಂತರ ಮರುಜೀವ


ಮಾರುತಿ ಸುಣಗಾರ
ಬಳ್ಳಾರಿ: ನಗರಸಭೆ ಸದಸ್ಯ ಜಿ.ಪದ್ಮಾವತಿ ಯಾದವ್‌ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವುದಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಮಹಾನಿರ್ದೇಶಕರಿಗೆ ಕೆಲವೊಂದು ಮಾಹಿತಿಯನ್ನು ಕೇಳಿ ರಾಜ್ಯ ಸರಕಾರದ ಒಳಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಪತ್ರ ಬರೆದಿರುವುದು ಪ್ರಕರಣಕ್ಕೆ 12 ವರ್ಷಗಳ ನಂತರ ಮರುಜೀವ ಬಂದಂತಾಗಿದೆ.

ನಗರದಲ್ಲಿ 12 ವರ್ಷಗಳ ಹಿಂದೆ ನಡೆದ ನಗರಸಭೆ ಸದಸ್ಯೆ ಪದ್ಮಾವತಿ ಯಾದವ್‌ ಕೊಲೆ ಪ್ರಕರಣ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿತ್ತು. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮೃತ ಪದ್ಮಾವತಿ ಅವರ ಸಹೋದರ ಸುಬ್ಬರಾಯುಡು, ಧಾರವಾಡ ಹೈಕೋರ್ಟ್‌ ಮೆಟ್ಟಿಲೇರುವುದರೊಂದಿಗೆ, ರಾಜ್ಯ ಸರಕಾರಕ್ಕೆ ಸಹ ಮನವಿ ಮಾಡಿದ್ದರು. ಈಗ ದೂರುದಾರರ ಅರ್ಜಿ ಪರಿಗಣಿಸಿದ ರಾಜ್ಯ ಸರಕಾರ, ಒಳಾಡಳಿತ ಇಲಾಖೆ ಪ್ರಧಾನ ಕಾರ್ಯದರ್ಶಿ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಮುಂದಾಗಿರುವುದು ಪ್ರಕರಣಕ್ಕೆ ತಿರುವು ಸಿಕ್ಕಂತಾಗಿದೆ.
ತಮಿಳುನಾಡು ವಿದ್ಯಾರ್ಥಿನಿ ಲಾವಣ್ಯ ಆತ್ಮಹತ್ಯೆ ಪ್ರಕರಣ; ಬಿಜೆಪಿಯಿಂದ ಸತ್ಯಶೋಧನಾ ಸಮಿತಿ ರಚನೆ
2010ರ ಫೆ.4ರಂದು ಹತ್ಯೆ:
ಬಳ್ಳಾರಿ ನಗರದಲ್ಲಿ 2010ರ ಫೆ.4ರಂದು ನಗರಸಭೆ ಸದಸ್ಯೆ ಜಿ.ಪದ್ಮಾವತಿ ಯಾದವ್‌ ಅವರ ಕೊಲೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಸರಕಾರ ಮರು ದಿನವೇ ಸಿಐಡಿ ತನಿಖೆಗೆ ವಹಿಸಿತ್ತು. ತನಿಖೆ ವಿಳಂಬ ಪ್ರಶ್ನಿಸಿ ಧಾರವಾಡದ ಹೈಕೋರ್ಟ್‌ 2015ರ ಡಿಸೆಂಬರ್‌ನಲ್ಲಿ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಿಐಡಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ 2016ರ ಸೆಪ್ಟೆಂಬರ್‌ನಲ್ಲಿ ಸಿಐಡಿ ಬಳ್ಳಾರಿ ನ್ಯಾಯಾಲಯಕ್ಕೆ ‘ಸಿ’ ರಿಪೋರ್ಟ್‌ ಸಲ್ಲಿಸಿತ್ತು. ‘ಸಿ’ ರಿಪೋರ್ಟ್‌ ಪ್ರಶ್ನಿಸಿ, ತನಿಖೆ ಮೇಲೆ ರಾಜಕೀಯ ಪ್ರಭಾವ ಬೀರಲಾಗಿದೆ ಎಂದು ಆರೋಪಿಸಿ ದೂರುದಾರ ಸುಬ್ಬರಾಯುಡು ಅವರು ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ 2017ರಲ್ಲಿ ಬಳ್ಳಾರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಸಿಬಿಐಗೆ ವಹಿಸುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಾಲಯ ಸೂಚಿಸಿತ್ತು.
ನರಗುಂದ ಕೊಲೆ ಪ್ರಕರಣ: ನ್ಯಾಯಾಂಗ ತನಿಖೆಗೆ ನೀಡಿ, ಬಸವರಾಜ ಬೊಮ್ಮಾಯಿಗೆ ಸಲೀಂ ಅಹ್ಮದ್ ಪತ್ರ
ಪ್ರಕರಣದ ತೀವ್ರತೆ ಹೆಚ್ಚಳ:
ಬಳಿಕ ದೂರುದಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಬಳ್ಳಾರಿ ಎಸ್ಪಿ, ಐಜಿಪಿಗೆ ಮನವಿ ಮಾಡಿಕೊಂಡಿದ್ದರು. ಬಳಿಕ 2018ರಲ್ಲಿ ಧಾರವಾಡ ಹೈಕೋರ್ಟ್‌ನಲ್ಲಿಅರ್ಜಿ ಸಲ್ಲಿಸಿದ್ದರು. ಇದಾದ ಬಳಿಕ ಹೈಕೋರ್ಟ್‌ನಲ್ಲಿ 2019ರಿಂದ ಅರ್ಜಿ ವಿಚಾರಣೆ ನಡೆಸಲಾಗುತ್ತಿದೆ. ಇದರ ನಡುವೆಯೂ ದೂರುದಾರ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ 2020ರ ಡಿ.1ರಂದು ರಾಜ್ಯ ಸರಕಾರದ ಮೊರೆ ಹೋಗಿದ್ದು, ಬೆಂಗಳೂರಿನ ಮುಖ್ಯಮಂತ್ರಿ ಕಚೇರಿ, ಗೃಹ ಇಲಾಖೆ ಕಾರ್ಯದರ್ಶಿ, ಗೃಹ ಸಚಿವರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ದರು. ಧಾರವಾಡ ಹೈಕೋರ್ಟ್‌ನಲ್ಲಿ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವ ಅರ್ಜಿಯನ್ನು 2022ರ ಜನವರಿ ಒಂದೇ ತಿಂಗಳಲ್ಲಿ ಜ.4, 11 ಮತ್ತು 19ರಂದು ನಿರಂತರವಾಗಿ ವಿಚಾರಣೆಗೆ ಬಂದಿರುವುದು ಪ್ರಕರಣದ ತೀವ್ರತೆ ಹೆಚ್ಚಿಸುವಂತಾಗಿದೆ.

ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಗಮನ ಸೆಳೆದಿದ್ದ ಪದ್ಮಾವತಿ ಯಾದವ್‌ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒಂದೆಡೆ ಧಾರವಾಡ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಹಂತದಲ್ಲಿದ್ದರೆ, ಮತ್ತೊಂದೆಡೆ ರಾಜ್ಯ ಸರಕಾರ ಪ್ರಕರಣದ ಮಾಹಿತಿ ಕೋರಿರುವುದು ಗಣಿನಾಡಿನಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಧಾರವಾಡದ ಜಿ.ಪಂ. ಸದಸ್ಯ ಯೋಗೇಶ್‌ ಗೌಡ ಕೊಲೆ ಪ್ರಕರಣದಂತೆ ಪದ್ಮಾವತಿ ಯಾದವ್‌ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಲಾಗಿತ್ತು. ಸರಕಾರ ನನ್ನ ಮನವಿಗೆ ಸ್ಪಂದಿಸಿ ಪ್ರಕರಣ ಸಿಬಿಐಗೆ ವಹಿಸುವುದಕ್ಕೆ ಸಂಬಂಧಿಸಿದಂತೆ ಪೂರಕ ಮಾಹಿತಿ ಕೇಳಿ ಪತ್ರ ಬರೆದಿರುವುದು ಸಂತಸ ತಂದಿದೆ. ಪ್ರಕರಣವನ್ನು ಸಿಬಿಐಗೆ ವಹಿಸಿದ್ದಲ್ಲಿ ತನಿಖೆಯಿಂದ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಭರವಸೆ ಮೂಡಿದೆ.

ಸುಬ್ಬರಾಯುಡು, ದೂರುದಾರ, ಬಳ್ಳಾರಿ



Read more

[wpas_products keywords=”deal of the day sale today offer all”]