Karnataka news paper

ಶಾಲಾ ಮಕ್ಕಳಿಗೆ ನೀಡುವ ಮಧ್ಯಾಹ್ನ ಬಿಸಿಯೂಟದಲ್ಲಿ ಮೊಟ್ಟೆ ಕೈಬಿಡಿ: ಸಸ್ಯಹಾರಿಗಳ ಒಕ್ಕೂಟ ಆಗ್ರಹ


ಹೈಲೈಟ್ಸ್‌:

  • ಸುವರ್ಣ ವಿಧಾನಸೌಧದ ಎದುರು ಸಂತ ಸಮಾವೇಶ
  • ಡಿಸೆಂಬರ್ 20ಕ್ಕೆ ವಿಧಾನಸೌಧ ಚಲೋ ಚಳವಳಿ
  • ಮೊಟ್ಟೆ ಕೈಬಿಡದಿದ್ದರೆ ಸಸ್ಯಹಾರಿಗಳಿಗೆ ಪ್ರತ್ಯೇಕ ಶಾಲೆ ತೆರೆಯಿರಿ ಎಂದು ಆಗ್ರಹ

ಕಲಬುರಗಿ: ರಾಜ್ಯ ಸರಕಾರ ಶಾಲೆಗಳಲ್ಲಿ ಮತ್ತು ಅಂಗನವಾಡಿಯಲ್ಲಿ ಮೊಟ್ಟೆ ಬದಲಿಗೆ ಸತ್ವಯುತ – ಸರ್ವಸಮ್ಮತ ಸಸ್ಯಹಾರ ಪದಾರ್ಥ ನೀಡಬೇಕು. ಇಲ್ಲವೆ, ರಾಜ್ಯಾದ್ಯಂತ ಸಸ್ಯಹಾರಿಗಳಿಗೆ ಪ್ರತ್ಯೇಕ ಶಾಲೆ ಹಾಗೂ ಅಂಗನವಾಡಿ ತೆರೆಯಬೇಕು ಎಂದು ಅಖಿಲ ಭಾರತ ಸಸ್ಯಹಾರಿಗಳ ಒಕ್ಕೂಟದ ಪ್ರಧಾನ ಸಂಚಾಲಕ ಪೂಜ್ಯ ದಯಾನಂದ ಸ್ವಾಮೀಜಿ ಹಾಗೂ ಪ್ರಧಾನ ಸಂಘಟಕ ಪೂಜ್ಯ ಚನ್ನಬಸವಾನಂದ ಸ್ವಾಮೀಜಿ ಆಗ್ರಹಿಸಿದರು.

ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸರಕಾರ ಮತ್ತು ಅನುದಾನಿತ ಶಾಲೆಗಳ ಮತ್ತು ಅಂಗನವಾಡಿಗಳಲ್ಲಿನ ಮಕ್ಕಳಿಗೆ – ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶದ ಹೆಸರಲ್ಲಿ ಸರಕಾರ ಮೊಟ್ಟೆ ತಿನ್ನಿಸುತ್ತಿರುವುದನ್ನು ಕೈ ಬಿಟ್ಟು, ಮೊಟ್ಟೆಗಿಂತಲೂ ಅಧಿಕ ಬಹು ಪೋಷಕಾಂಶಗಳನ್ನೊಳಗೊಂಡ ಶುದ್ಧ ಸಸ್ಯಹಾರ ಪದಾರ್ಥಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಯೊಂದು ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೌಷ್ಟಿಕಾಂಶದ ಹೆಸರಲ್ಲಿ ಮೊಟ್ಟೆ ತಿನ್ನಿಸುವ ಮೂಲಕ ಸರಕಾರವು ಸಸ್ಯಾಹಾರಿ ಧರ್ಮ ಸಂಸ್ಕೃತಿಯ ಮೇಲೆ ಪರೋಕ್ಷವಾಗಿ ಆಕ್ರಮಣ ಮಾಡಿದೆ. ಸಿಎಂ ಬಸವರಾಜ ಬೊಮ್ಮಾಯಿ ಲಿಂಗಾಯತರು, ಶಿಕ್ಷಣ ಸಚಿವ ನಾಗೇಶ ಬ್ರಾಹ್ಮಣರು. ಆದರೂ, ಮೊಟ್ಟೆ ವಿತರಿಸುತ್ತಿರುವುದು ಖಂಡನೀಯ ಎಂದು ಹೇಳಿದರು.

ಮೊಟ್ಟೆ ನಿಲ್ಲಿಸದಿದ್ದರೆ ಬ್ರಾಹ್ಮಣರು, ಲಿಂಗಾಯತರು, ಜೈನರಿಗೆ ಪ್ರತ್ಯೇಕ ಸಸ್ಯಾಹಾರಿ ಶಾಲೆ ತೆರೆಯಲಿ; ದಯಾನಂದ ಸ್ವಾಮಿ
ಶಾಲೆಗಳಲ್ಲಿ ಏಕರೂಪತೆ ಪಡೆದುಕೊಳ್ಳಬೇಕಿದ್ದ ಸರಕಾರ ಈ ರೀತಿ ಮಾಡಬಾರದು. ಮೌಲ್ಯ ಆಧಾರಿತ ಶಿಕ್ಷಣ ಕೊಡಿ, ಮೊಟ್ಟೆ ಅಲ್ಲ. ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ಏಕೆ? ಎಲ್ಲರಿಗೂ ಒಂದೇ ತರವಾಗಿ ಸರಕಾರ ನೋಡಬೇಕು. ಮೊಟ್ಟೆಯನ್ನು ಶಾಲೆಯಲ್ಲಿ ತರಲು ಹುನ್ನಾರ ಏನು? ಕಾಂಗ್ರೆಸ್‌, ಜೆಡಿಎಸ್‌ ತೆಗೆದಿರುವ ಈ ಯೋಜನೆ ಬಿಜೆಪಿ ಏಕೆ ತಂದಿದೆ? ಲಿಂಗಾಯತ, ಬ್ರಾಹ್ಮಣ, ಜೈನ ಧರ್ಮದ ಜನರಿಂದ ಮತ ಪಡೆದ ಬಿಜೆಪಿ ಈ ರೀತಿ ಮಾಡಬಾರದು ಎಂದು ಹೇಳಿದರು.

ಈಗಾಗಲೇ ಸಿಎಂ ಅವರಿಗೆ ಮೊಟ್ಟೆ ಕೈ ಬಿಡಬೇಕೆಂದು ಕಳೆದ ತಿಂಗಳಲ್ಲಿ ನಿಯೋಗದೊಂದಿಗೆ ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದೇವೆ, ಕೂಡಲೇ ಮೊಟ್ಟೆ ವಿತರಣೆ ಹಿಂಪಡೆಯದಿದ್ದರೆ ರಾಜ್ಯದ ವಿವಿಧ ಮಠಾಧೀಶರಿಂದ ಬೃಹತ್‌ ಹೋರಾಟ ಹಂತ ಹಂತವಾಗಿ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಆರ್‌. ಜಿ. ಶೆಟಗಾರ, ಸಿದ್ರಾಮಪ್ಪ ಲದ್ದೆ, ವೀರಣ್ಣ, ಆರ್‌. ಕೆ. ಹೆಗಡೆ, ಸುನಂದಾ ದೇವಿ ಇತರರಿದ್ದರು.

Karnataka School Midday Meal: ‘ನಮಗೂ ಮೊಟ್ಟೆ ಕೊಡಲ್ವಾ ಸಾರ್‌?’; ಹೈಸ್ಕೂಲ್‌ ಮಕ್ಕಳ ಈ ಬೇಡಿಕೆ ಮೊಟ್ಟೆ ವಿರೋಧಿಗಳಿಗೆ ಕೇಳುವುದೇ?
20ರಂದು ಬೆಳಗಾವಿ ಚಲೋ

ಬರುವ ಡಿಸೆಂಬರ್ 19ರ ಒಳಗಾಗಿ ಈ ಮೊಟ್ಟೆ ವಿತರಣೆ ಯೋಜನೆ ಮುಕ್ತಗೊಳಿಸಬೇಕು. ಇಲ್ಲದಿದ್ದರೆ ರಾಜ್ಯದ ಸಾವಿರಾರು ಮಠಾಧೀಶರು, ಲಿಂಗಾಯತ ಧರ್ಮ, ಜೈನ ಧರ್ಮ ಮುಂತಾದ ಧರ್ಮಗಳ, ಬ್ರಾಹ್ಮಣ, ವೈಶ್ಯ ಸಮುದಾಯಗಳ ಜನರು ಸೇರಿ ಡಿಸೆಂಬರ್ 20ರಂದು ಬೆಳಗ್ಗೆ 10ಕ್ಕೆ ಬೆಳಗಾವಿ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಸುವರ್ಣ ವಿಧಾನಸೌಧದ ಎದುರು ಸಂತ ಸಮಾವೇಶ ಮತ್ತು ವಿಧಾನಸೌಧ ಚಲೋ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಸಸ್ಯಹಾರಿಗಳ ಒಕ್ಕೂಟದ ಪ್ರಧಾನ ಸಂಚಾಲಕ ಪೂಜ್ಯ ದಯಾನಂದ ಸ್ವಾಮೀಜಿ ಸರಕಾರಕ್ಕೆ ಪರೋಕ್ಷವಾಗಿ ಎಚ್ಚರಿಸಿದರು.

‘ಮೊಟ್ಟೆ ಪೌಷ್ಟಿಕಾಂಶದಿಂದ ಕೂಡಿದೆಯೇ, ಆರೋಗ್ಯದಾಯಕವೇ ಎಂಬುದು ಮುಖ್ಯವಲ್ಲ. ಮಕ್ಕಳು ಒಂದೇ ಪಂಕ್ತಿಯಲ್ಲಿ ಮೊಟ್ಟೆ ಹಾಗೂ ಬಾಳೆಹಣ್ಣು ತಿನ್ನುತ್ತಿರುವುದು ಆಘಾತಕಾರಿಯಾಗಿದೆ. ಇದು ಬರುವ ದಿನಗಳಲ್ಲಿ ಸಸ್ಯಾಹಾರಿ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ’ ಎಂದು ಅಖಿಲ ಭಾರತ ಸಸ್ಯಹಾರಿಗಳ ಒಕ್ಕೂಟದ ಪ್ರಧಾನ ಸಂಚಾಲಕ ದಯಾನಂದ ಸ್ವಾಮೀಜಿ ಹೇಳಿದ್ದಾರೆ.

‘ರಾಜ್ಯದ ನೂರಾರು ಶ್ರೀಗಳು ಸಿಎಂಗೆ ಮನವಿ ಮಾಡಿದ್ದಾರೆ. ಇನ್ನೇನಿದ್ರೂ ನಾವು ಯಾರ ಜೊತೆ ಮಾತನಾಡೋದಿಲ್ಲ. ಕೂಡಲೇ ಮೊಟ್ಟೆ ವಿತರಣೆ ಕೈ ಬಿಡಬೇಕು. ಎಲ್ಲ ಸ್ವಾಮೀಜಿಗಳು ಸೇರಿ ಬೀದಿಗಿಳಿದು ಹೋರಾಟ ಮಾಡುತ್ತೇವೆ’ ಎಂದು ಅಖಿಲ ಭಾರತ ಸಸ್ಯಹಾರಿಗಳ ಒಕ್ಕೂಟದ ಪ್ರಧಾನ ಸಂಘಟಕ ಚನ್ನಬಸವಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.

ಶಾಲಾ ಮಕ್ಕಳಿಗೆ ಊಟದ ಜೊತೆ ಮೊಟ್ಟೆ ಕೊಟ್ಟರೆ ತಪ್ಪೇನಿಲ್ಲ: ಶಾಸಕ ರಘುಪತಿ ಭಟ್



Read more