Karnataka news paper

ಐಷಾರಾಮಿ ಕಾರುಗಳ ನೋಂದಣಿ ಹಗರಣದಲ್ಲಿ ತೆರಿಗೆ ವಂಚನೆ: ತನಿಖೆ ತೀವ್ರಗೊಳಿಸಿದ ಸಾರಿಗೆ ಇಲಾಖೆ


ಬೆಂಗಳೂರು: ತೆರಿಗೆ ಪಾವತಿಸಿಕೊಳ್ಳದೆಯೇ ಐಷಾರಾಮಿ ಕಾರುಗಳನ್ನು ನೋಂದಣಿ ಮಾಡಿ ತೆರಿಗೆ ಲಪಟಾಯಿಸಿರುವ ಹಗರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಾರಿಗೆ ಇಲಾಖೆಯು ತನಿಖೆಯನ್ನು ತೀವ್ರಗೊಳಿಸಿದೆ. ಅಕ್ರಮದ ತನಿಖೆಗಾಗಿಯೇ ಪ್ರತ್ಯೇಕ ತಂಡವನ್ನು ರಚಿಸಿದೆ.

ಗೌಡರ ಕುಟುಂಬದ ವಿಶೇಷ ದಾಖಲೆ: ಜಿಪಂನಿಂದ ಸಂಸತ್‌ವರೆಗೆ ಪ್ರತಿ ಹಂತದಲ್ಲೂ ಮನೆ ಸದಸ್ಯರು!

ಬೆಂಗಳೂರು ಸಾರಿಗೆ ಇಲಾಖೆಯ ಹೆಚ್ಚುವರಿ ಮುಖ್ಯ ಆಯುಕ್ತ ನರೇಂದ್ರ ಹೋಳ್ಕರ್‌ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ. 2010ರ ಏ.1ರಿಂದ ಇಲ್ಲಿಯವರೆಗೆ ನೋಂದಣಿಯಾಗಿರುವ 20 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ವಾಹನಗಳಿಂದ ತೆರಿಗೆ ಪಾವತಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ತಂಡವನ್ನು ರಚಿಸಲಾಗಿದೆ. ‘ವಿಜಯ ಕರ್ನಾಟಕ’ದ ಮಂಗಳವಾರ ಸಂಚಿಕೆಯ ಮುಖಪುಟದಲ್ಲಿ ಪ್ರಕಟವಾದ ‘ನಕಲಿ ನೋಂದಣಿ, ತೆರಿಗೆ ಗುಳಂ’ ವರದಿ ಉಲ್ಲೇಖಿಸಿ ತನಿಖೆಗೆ ಆದೇಶಿಸಲಾಗಿದೆ.

ಈ ಹಗರಣದಲ್ಲಿ ಕೆಲವು ಆರ್‌ಟಿಒ ಅಧಿಕಾರಿಗಳು, ಸಿಬ್ಬಂದಿ ಮತ್ತು ಮಧ್ಯವರ್ತಿಗಳು ಶಾಮೀಲಾಗಿರುವುದು ಕಂಡುಬಂದಿದೆ. ವಾಹನ ಮಾಲೀಕರಿಂದ ತೆರಿಗೆ ಹಣ ಪಡೆದಿರುವ ಇವರು, ಅದನ್ನು ಇಲಾಖೆಗೆ ಪಾವತಿಸದೆಯೇ ಗುಳುಂ ಮಾಡಿದ್ದಾರೆ. ಬೇರೊಂದು ಆರ್‌ಟಿಒದಲ್ಲಿ ನೋಂದಣಿಯಾಗಿರುವ ವಾಹನಗಳ ಮಾಲೀಕರು ಪಾವತಿಸಿರುವ ತೆರಿಗೆ ಚಲನ್‌ ಸಂಖ್ಯೆಯನ್ನು ‘ವಾಹನ್‌-1’ ತಂತ್ರಾಂಶದಲ್ಲಿ ನಮೂದಿಸಿ, ನೂರಾರು ವಾಹನಗಳನ್ನು ನೋಂದಣಿ ಮಾಡಿದ್ದಾರೆ. ಇವರ ವಂಚನೆಯ ಜಾಲಕ್ಕೆ ಬಿದ್ದಿರುವ ಮಾಲೀಕರು ಸಂಕಷ್ಟಕ್ಕೆ ಸಿಲುಕಿ ಹಾಕಿಕೊಂಡಿದ್ದಾರೆ.

ಈಗಾಗಲೇ ಕೆಲವೊಂದು ವಾಹನಗಳನ್ನು ಜಪ್ತಿ ಮಾಡಲಾಗಿದೆ. ಕೆಲ ವಾಹನ ಮಾಲೀಕರಿಗೆ ತೆರಿಗೆ ಮತ್ತು ದಂಡ ಪಾವತಿಸುವಂತೆ ನೋಟಿಸ್‌ ಜಾರಿ ಮಾಡುತ್ತಿದ್ದಾರೆ. ಇದರಿಂದ ಕಂಗಾಲಾಗಿರುವ ಮಾಲೀಕರು ತಮ್ಮ ಬಳಿ ಇರುವ ಆರ್‌ಸಿ ಕಾರ್ಡ್‌, ತೆರಿಗೆ ಪಾವತಿ ರಶೀದಿ ಹಿಡಿದು ಆರ್‌ಟಿಒ ಕಚೇರಿಗಳ ಕದ ತಟ್ಟುತ್ತಿದ್ದಾರೆ.

ಬಗೆದಷ್ಟು ಹೊರಬರುತ್ತಿರುವ ಅಕ್ರಮ

ಈ ಹಗರಣವು ಮೊದಲು ಬಯಲಿಗೆ ಬಂದದ್ದು ಕೋರಮಂಗಲ ಆರ್‌ಟಿಒ ಕಚೇರಿಯಲ್ಲಿ. ಇಲ್ಲಿ ತನಿಖೆ ತೀವ್ರಗೊಳಿಸುತ್ತಿದ್ದಂತೆಯೇ ನಿತ್ಯ ಒಂದಲ್ಲ, ಒಂದು ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಕಚೇರಿಯಲ್ಲಿ ತೆರಿಗೆ ಪಾವತಿಸಿಕೊಳ್ಳದೆ ನೋಂದಣಿಯಾಗಿರುವ ವಾಹನಗಳ ಸಂಖ್ಯೆ 35ಕ್ಕೆ ಏರಿದೆ. ಮಂಗಳವಾರವೂ ತೆರಿಗೆ ಕಟ್ಟಿಸಿಕೊಳ್ಳದೆ ನೋಂದಣಿ ಮಾಡಿರುವ ಎರಡು ಬೆಂಜ್‌ ಕಾರುಗಳು ಪತ್ತೆಯಾಗಿವೆ. ಈ ಎರಡೂ ಕಾರುಗಳಿಂದ ಅಂದಾಜು 40 ಲಕ್ಷ ರೂ. ತೆರಿಗೆ ವಂಚಿಸಲಾಗಿದೆ.

ಸಾರ್ವಜನಿಕ ಶೌಚಾಲಯ ಎಲ್ಲಿ ನಿರ್ಮಿಸಬೇಕೆಂದು ಕೋರ್ಟ್‌ ನಿರ್ಧರಿಸಲು ಸಾಧ್ಯವಿಲ್ಲ: ಹೈಕೋರ್ಟ್‌

ಲಾಗಿನ್‌ ಐಡಿ, ಪಾಸ್‌ವರ್ಡ್‌ ನೀಡುತ್ತಿಲ್ಲ: ಕೋರಮಂಗಲದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ, ಬಡ್ತಿ ಪಡೆದು ವರ್ಗಾವಣೆಗೊಂಡಿರುವ ವ್ಯಕ್ತಿಯು ಲಾಗಿನ್‌ ಐಡಿ ಮತ್ತು ಪಾಸ್‌ವರ್ಡ್‌ ನೀಡದೆ ಸತಾಯಿಸುತ್ತಿದ್ದಾರೆ. ಲಾಗಿನ್‌ ಐಡಿ ದೊರೆತರೆ ಮತ್ತಷ್ಟು ಅಕ್ರಮಗಳು ಹೊರಬರುತ್ತವೆ. ಆದರೆ, ಅವರು ಏಕೆ ಐಡಿ ನೀಡಲು ಮೀನಮೇಷ ಎಣಿಸುತ್ತಿದ್ದಾರೆಯೋ ಗೊತ್ತಾಗುತ್ತಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದರು.



Read more