Karnataka news paper

ಗ್ರಾಮ ಪಂಚಾಯಿತಿ ಕೆಡಿಪಿ ಸಭೆಗಿಲ್ಲ ಬೆಲೆ; ಅಧಿಕಾರಿಗಳ ಗೈರು, ಸುಳ್ಳು ಮಾಹಿತಿ, ಹಾರಿಕೆ ಉತ್ತರ!


ಹೈಲೈಟ್ಸ್‌:

  • ಗ್ರಾಮ ಪಂಚಾಯಿತಿ ಮಟ್ಟದ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ) ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ
  • ಕೆಲವೆಡೆ ಸಭೆ ನಡೆದರೂ ನಿರ್ಣಯಗಳು ಸರಕಾರಕ್ಕೆ ತಲುಪುವುದೇ ಇಲ್ಲ
  • . ಸಭೆಗೆ ಗೈರುಹಾಜರಾಗುವ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಏನೇನೂ ಕಾನೂನು ಕ್ರಮ ಇಲ್ಲವಾಗಿದೆ

ರಾಘವೇಂದ್ರ ಮೇಗರವಳ್ಳಿ ತೀರ್ಥಹಳ್ಳಿ (ಶಿವಮೊಗ್ಗ)
ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಕಾರ‍್ಯಗಳ ಅನುಷ್ಠಾನದ ಮೇಲೆ ಹೆಚ್ಚಿನ ನಿಗಾವಹಿಸುವ ಗ್ರಾಮ ಪಂಚಾಯಿತಿ ಮಟ್ಟದ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ) ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಬಹುತೇಕ ಗ್ರಾ.ಪಂ.ನಲ್ಲಿ ಕೆಡಿಪಿ ಸಭೆಯೇ ನಡೆಯುತ್ತಿಲ್ಲ. ಕೆಲವೆಡೆ ಸಭೆ ನಡೆದರೂ ನಿರ್ಣಯಗಳು ಸರಕಾರಕ್ಕೆ ತಲುಪುವುದೇ ಇಲ್ಲ.

ಮೂರು ತಿಂಗಳಿಗೊಮ್ಮೆ ಕೆಡಿಪಿ ಸಭೆ ಆಯೋಜಿಸುವ ಅವಕಾಶ ಇದ್ದು ಸಭೆಯಲ್ಲಾದ ಚರ್ಚೆ, ನಿರ್ಣಯಗಳನ್ನು ಸ್ಪಷ್ಟವಾಗಿ ದಾಖಲಿಸಿ ಅನುಪಾಲನಾ ವರದಿ ಪಡೆಯಬೇಕು. ಪ್ರಮುಖವಾಗಿ ಆಗಬೇಕಾದ ಈ ಕೆಲಸಗಳೇ ಆಗುತ್ತಿಲ್ಲ ಎಂಬ ದೂರು ಹೆಚ್ಚಾಗಿದೆ. ಸಭೆಗೆ ಗೈರುಹಾಜರಾಗುವ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಏನೇನೂ ಕಾನೂನು ಕ್ರಮ ಇಲ್ಲವಾಗಿದೆ.

ಹಲವು ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಗ್ರಾ.ಪಂ. ಕೆಡಿಪಿ ಸಭೆಯನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಕೆಲವೊಮ್ಮೆ ನಡೆಯವ ಸಭೆಯಲ್ಲಿ ಅಪೂರ್ಣ, ಸುಳ್ಳು ಮಾಹಿತಿ ಒದಗಿಸಲಾಗುತ್ತದೆ. ಸದಸ್ಯರು ಪಟ್ಟು ಹಿಡಿದರೆ ಸಭೆಯಲ್ಲಿ ಹಾರಿಕೆ ಉತ್ತರ ನೀಡಿ ಜಾರಿಕೊಳ್ಳಲಾಗುತ್ತಿದೆ.

ಅಜೆಂಡಾ ಹೊರತಾದ ವಿಷಯ ಪ್ರಸ್ತಾಪಗೊಳ್ಳುತ್ತಿರುವುದು ಸಭೆ ಹಾದಿ ತಪ್ಪುವುದಕ್ಕೆ ಕಾರಣವಾಗುತ್ತಿದೆ. ಮಹತ್ವದ ಸಭೆಯನ್ನು ಗ್ರಾಮದ ಪ್ರಗತಿಗೆ ಬಳಸಿಕೊಳ್ಳಲು ಆಡಳಿತ ಸಂಪೂರ್ಣ ವಿಫಲವಾಗುವುದು ಸಾಮಾನ್ಯವಾಗಿದೆ. ಅಚ್ಚರಿ ಎಂದರೆ, ಗ್ರಾಮ ಮಟ್ಟದ ಕೆಡಿಪಿ ಸಭೆಯಲ್ಲಿ ಭಾಗವಹಿಸಲು ಅಧಿಕಾರಿ, ಸಿಬ್ಬಂದಿ ಹೆಚ್ಚಾಗಿ ಭಯ ಪಡುತ್ತಿರುವ ಸಂಗತಿ ಗುಟ್ಟಾಗಿಲ್ಲ.
ಗ್ರಾಮಗಳಲ್ಲಿ ‘ಗ್ರಾಮ ಒನ್‌’ ಕೇಂದ್ರಕ್ಕೆ ಚಾಲನೆ, ಒಂದೇ ಸೂರಿನಡಿ ಸಿಗಲಿದೆ 750 ಸೇವೆಗಳು!
ಇಲ್ಲದ ಸ್ಪಷ್ಟ ಮಾಹಿತಿ
ಶಾಸಕರ ಅಧ್ಯಕ್ಷತೆಯ ತಾಲೂಕು ಮಟ್ಟದ ಕೆಡಿಪಿ ಸಮಿತಿಯಂತೆ ಗ್ರಾ.ಪಂ.ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಗ್ರಾಮಮಟ್ಟದ ಕೆಡಿಪಿ ಸಮಿತಿ ಅಸ್ತಿತ್ವಗೊಂಡಿದೆ. ಸಭೆ ನಿರ್ವಹಣೆಯ ಸಂಪೂರ್ಣ ಅಧಿಕಾರ ಸಮಿತಿಯ ಸದಸ್ಯ ಕಾರ‍್ಯದರ್ಶಿಗೆ ಸಂಬಂಧಪಟ್ಟಿದೆ. ಸಮಿತಿ ಅಧ್ಯಕ್ಷರು ಸಭೆಗೆ ಗೈರಾದರೆ ಉಪಾಧ್ಯಕ್ಷರು, ಇಬ್ಬರೂ ಗೈರಾದರೆ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸಬೇಕು. ಒಂದು ವಾರ ಮುಂಚಿತವಾಗಿ ಸಮಿತಿ ಅಧ್ಯಕ್ಷರಿಂದ ಸಭೆಯ ಸದಸ್ಯ ಕಾರ‍್ಯದರ್ಶಿ ಸಭೆ ದಿನಾಂಕ ನಿಗದಿ ಮಾಡಿ ಮಾಹಿತಿ ನೀಡಬೇಕು. ಕೆಡಿಪಿ ಸಭೆಯಲ್ಲಿ ಚರ್ಚಿಸಬಹುದಾದ ವಿಷಯಗಳ ಪಟ್ಟಿಯನ್ನು ನಮೂನೆ -1ರಲ್ಲಿ ಲಗತ್ತಿಸಬೇಕು. ಇಲಾಖೆಗಳ ಆರ್ಥಿಕ, ಭೌತಿಕ ಪ್ರಗತಿ ವಿವರವನ್ನು ಪ್ರತ್ಯೇಕ ನಮೂನೆಯಲ್ಲಿ ಒದಗಿಸಬೇಕು. ಸಭೆ ಮುಕ್ತಾಯದ 3ದಿನದೊಳಗೆ ಸಭಾ ನಡವಳಿಗಳನ್ನು ಸಮಿತಿ ಸದಸ್ಯರಿಗೆ, ತಾಲೂಕು ಮಟ್ಟದ ಇಲಾಖೆ ಮುಖ್ಯಸ್ಥರಿಗೆ, ಆಹ್ವಾನಿತರಿಗೆ ಅಗತ್ಯ ಕ್ರಮಕ್ಕೆ ರವಾನಿಸಬೇಕು. ಸದಸ್ಯರ ಸಲಹೆ, ದೂರುಗಳ ಕುರಿತು ಕೈಗೊಂಡ ಕ್ರಮಗಳ ಅನುಪಾಲನೆ ವರದಿಯನ್ನು ಮುಂದಿನ ಸಭೆಗೆ ಮಂಡಿಸಬೇಕು. ಆದರೆ, ವರ್ಷದ ಹಿಂದಿನ ಗ್ರಾ.ಪಂ.ಹೊಸ ಆಡಳಿತಕ್ಕೆ ಕೆಡಿಪಿ ಸಭೆ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಇಲ್ಲದಂತಿದೆ.

ಇದ್ದೂ ಇಲ್ಲದ ಅಧಿಕಾರ
ಕರ್ನಾಟಕ ಪ್ರಗತಿ ಪರಿಶೀಲನ ಸಭೆ ನಿಯಾಮಾವಳಿಗಳ ಅನ್ವಯ ಗ್ರಾ.ಪಂ. ಕೆಡಿಪಿ ಸಭೆ ಅನುಷ್ಠಾನಗೊಳ್ಳಲಿದೆ. ಹೋಬಳಿ, ಗ್ರಾಮಮಟ್ಟದ ಅಧಿಕಾರಿ, ಸಿಬ್ಬಂದಿಗಳು ಕೆಡಿಪಿ ಸಭೆಗೆ ಹಾಜರಾಗಬೇಕು. ಕೃಷಿ, ತೋಟಗಾರಿಕೆ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ, ಪಶು ಸಂಗೋಪಾನೆ, ಮೀನುಗಾರಿಕೆ, ಸಾಮಾಜಿಕ ಅರಣ್ಯ, ಸಣ್ಣ ನೀರಾವರಿ, ಗ್ರಾಮೀಣ ರಸ್ತೆ ಸೇತುವೆ ವಿಭಾಗ ( ಎಂಜಿನಿಯರ್‌), ಆಹಾರ ಮತ್ತು ನಾಗರಿಕ ಸರಬರಾಜು, ಕಂದಾಯ, ಗ್ರಾಮೀಣ ವಿದ್ಯುದ್ದೀಕರಣ ಮತ್ತು ಇಂಧನ, ಪ್ರವಾಸೋಧ್ಯಮ, ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಮೋದ್ಯೋಗ, ವಸತಿ, ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ, ಬಡತನ ನಿರ್ಮೂಲನೆ ಕಾರ‍್ಯಕ್ರಮಗಳ ಆದಾಯ ಉತ್ಪತ್ತಿಗಳ ಸ್ವಉದ್ಯೋಗ (ಎನ್‌ಆರ್‌ಎಲ್‌ಎಂ), ಕ್ರೀಡಾ ಮತ್ತು ಸಾಂಸ್ಕೃತಿಕ, ಕೃಷಿ ಉತ್ಪನ್ನ ಮಾರುಕಟ್ಟೆ, ಗ್ರಂಥಾಲಯ ಮತ್ತು ಜ್ಞಾನ ನಿರ್ವಹಣೆ, ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, ಅಂಕಿ ಅಂಶಗಳ ನಿರ್ವಹಣೆ ಯೋಜನೆ, ಸಹಕಾರ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಸಭೆಗೆ ಆಹ್ವಾನಿತರು. ಗ್ರಾ.ಪಂ.ಆಡಳಿತ ನಿರ್ಧರಿಸುವ ಇತರೆ ಇಲಾಖೆಗಳನ್ನೂ ಸಭೆಗೆ ಆಹ್ವಾನಿಸಬಹುದಾಗಿದೆ. ಆದರೆ, ಸಭೆಗೆ ಎಲ್ಲ ಅಧಿಕಾರ ಇದ್ದರೂ ಇಲ್ಲದಂತಹ ಸ್ಥಿತಿ ಆಡಳಿತದಲ್ಲಿದೆ.

ಗ್ರಾಮ ಪಂಚಾಯಿತಿ ಮಟ್ಟದ ಕೆಡಿಪಿ ಸಭೆ ನಿರ್ಣಯವನ್ನು ಕಳುಹಿಸಿದರೂ ಸ್ಪಷ್ಟ ಉತ್ತರ ಸಿಗುವುದಿಲ್ಲ. ಸಭೆಗೆ ಕೆಲವು ಇಲಾಖೆಯ ಅಧಿಕಾರಿ, ಸಿಬ್ಬಂದಿ ಭಾಗವಹಿಸುವುದಿಲ್ಲ. ಕೆಲವರು ಸಭೆಗೆ ಸುಳ್ಳು ಮಾಹಿತಿ ನೀಡುತ್ತಾರೆ. ಈ ಕುರಿತು ಅನೇಕ ಬಾರಿ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ, ಯಾವುದೇ ಕ್ರಮ ಆಗಿಲ್ಲ. ಕೆಡಿಪಿ ಸಭೆಯ ಮಹತ್ವವೇ ಆಡಳಿತಕ್ಕೆ ಗೊತ್ತಿಲ್ಲದಂತಾಗಿದೆ.
ಜಾದೂಗಾರ್‌ ನಿಶ್ಚಲ್‌ಶೆಟ್ಟಿ , ಸದಸ್ಯರು, ಮೇಲಿನಕುರುವಳ್ಳಿ ಗ್ರಾ.ಪಂ., ತೀರ್ಥಹಳ್ಳಿ



Read more

[wpas_products keywords=”deal of the day sale today offer all”]