ಹೈಲೈಟ್ಸ್:
- ಬಿಜೆಪಿ ಬಳಿ 1600ಕ್ಕೂ ಹೆಚ್ಚು ಮತಗಳು ಇದ್ದವು
- ಆದ್ರೆ, ಬಿದ್ದಿರುವ ಮತಗಳು ಮಾತ್ರ 1,514
- ಇನ್ನುಳಿದ ಮತದಾರರ ಕುರಿತು ಮುಂದಿನ ದಿನದಲ್ಲಿ ಬಣ್ಣ ಬಯಲಾಗುವ ಸಾಧ್ಯತೆ ಇದೆ: ರೂಪಾಲಿ ನಾಯ್ಕ
ವಿಧಾನ ಪರಿಷತ್ ಚುನಾವಣೆಯಲ್ಲಿ ಜಯಭೇರಿ ಭಾರಿಸಿದ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರಗೆ ಅಂಕೋಲಾ ತಾಲೂಕು ಬಿಜೆಪಿ ಕಾರ್ಯಾಲಯದಲ್ಲಿ ಸನ್ಮಾನ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ, ಬಿಜೆಪಿ ಪಕ್ಷದಲ್ಲಿರುವ ಕೆಲವು ವಿರೋಧಿಗಳಿಗೆ ತಮ್ಮ ಮಾತಿನುದ್ದಕ್ಕೂ ಟಾಂಗ್ ನೀಡಿದರು.
ಗಣಪತಿ ಉಳ್ವೇಕರರಿಗೆ ನಿರೀಕ್ಷಿತ ಮಟ್ಟದ ಅಂತರದ ಗೆಲುವು ಬರಲಿಲ್ಲ. ಬಿಜೆಪಿ ಪಕ್ಷದಲ್ಲಿ ಎಲ್ಲಿ ಏನಾಗಿದೆ ಎನ್ನುವುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಗಣಪತಿ ಉಳ್ವೇಕರ ಗೆಲುವಿಗೆ ನಾವು ಹಗಲಿರುಳೂ ಶಕ್ತಿ ಮೀರಿ ಪ್ರಯತ್ನಿಸಿದ್ದೇವೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಅನಂತಕುಮಾರ ಹೆಗಡೆ, ಉಸ್ತುವಾರಿ ಸಚಿವರು, ಜಿಲ್ಲೆಯ ಬಿಜೆಪಿ ಶಾಸಕರು, ನಾಮ ನಿರ್ದೇಶಿತ ವಿಧಾನ ಪರಿಷತ್ ಸದಸ್ಯರು ಹೀಗೆ ಎಲ್ಲರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಎಲ್ಲ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ಸಾಂಘಿಕ ಪ್ರಯತ್ನದಿಂದ ಪಕ್ಷದ ಅಭ್ಯ ರ್ಥಿ ಗೆಲುವು ಸಾಧ್ಯವಾಗಿದೆ. ಆದರೆ ಬಿಜೆಪಿ ಬಳಿ 1600ಕ್ಕೂ ಹೆಚ್ಚು ಮತಗಳು ಇದ್ದವು. ಆದ್ರೆ, ಬಿದ್ದಿರುವ ಮತಗಳು ಮಾತ್ರ 1,514. ಇನ್ನುಳಿದ ಮತದಾರರ ಕುರಿತು ಮುಂದಿನ ದಿನದಲ್ಲಿ ಬಣ್ಣ ಬಯಲಾಗುವ ಸಾಧ್ಯತೆ ಇದೆ ಎಂದು ರೂಪಾಲಿ ನಾಯ್ಕ ಹೇಳಿದರು.
ನನ್ನ ಶ್ರಮಕ್ಕೆ ಹಿನ್ನಡೆಯುಂಟು ಮಾಡಲು ಯಾರೇ ಪ್ರಯತ್ನಿಸಿದರೂ ಕೊನೆಗೆ ನಮ್ಮ ಪ್ರಾಮಾಣಿಕ ಪರಿಶ್ರಮಕ್ಕೆ ಜಯ ಸಿಕ್ಕಿದೆ. ನನ್ನನ್ನು ಮುಂದೆ ಚುನಾವಣೆಯಲ್ಲಿ ಸೋಲಿಸಬಹುದು. ಆದರೆ ನನ್ನ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಎಂದಿಗೂ ಸೋಲೊಪ್ಪಿಕೊಳ್ಳುವುದಿಲ್ಲ ಎಂದು ಶಾಸಕಿ ಖಡಕ್ ಆಗಿ ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.