ಹೈಲೈಟ್ಸ್:
- ಕೆ. ಆರ್. ಕ್ಷೇತ್ರದಲ್ಲಿ ಉತ್ತಮವಾದ ರಸ್ತೆ ಮಾಡಿದ್ದೇವೆ
- ಈಗ ಅದನ್ನು ಅಗೆದು ಅನಿಲ ಪೈಪ್ ಲೈನ್ ಹಾಕುವುದು ಬೇಡ
- ಜನರ ಹಿತದೃಷ್ಟಿಯಿಂದ ಅನಿಲ ಪೈಪ್ ಲೈನ್ ಅಳವಡಿಕೆಗೆ ಅನುಮತಿ ಕೊಡಬಾರದೆಂದು ರಾಮದಾಸ್ ಮನವಿ
ಕೇಂದ್ರ ಸರ್ಕಾರದ ಈ ಮಹತ್ವದ ಯೋಜನೆಯನ್ನ ಶೀಘ್ರವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಂಸದ ಪ್ರತಾಪ್ ಸಿಂಹ ಪ್ರಯತ್ನಿಸುತ್ತಿರುವ ಬೆನ್ನಲ್ಲೇ, ಸದರಿ ಯೋಜನೆಗೆ ಅನುಮತಿ ನೀಡದಂತೆ ಶಾಸಕ ಎಸ್. ಎ. ರಾಮದಾಸ್ ಒತ್ತಾಯಿಸಿದ್ದಾರೆ. ಇದು ಪ್ರತಾಪ್ ಸಿಂಹ ಆಕ್ರೋಶಕ್ಕೆ ಕಾರಣವಾಗಿದೆ.
ಬಿಜೆಪಿ ಶಾಸಕರಿಂದಲೇ ಅಡ್ಡಿ..!
ಗ್ಯಾಸ್ ಪೈಪ್ ಲೈನ್ ಮತ್ತು ಕೇಬಲ್ ಅಳವಡಿಕೆಗೆ ಬಿಜೆಪಿ ಶಾಸಕರಿಂದಲೇ ವಿರೋಧ ಕೇಳಿ ಬಂದಿದೆ. ಸದರಿ ಯೋಜನೆಯ ಕಾಮಗಾರಿ ಮೈಸೂರಿನಲ್ಲಿ ನಡೆಯುತ್ತಿದ್ದರೂ, ಅನಿಲ ಪೈಪ್ ಲೈನ್ ಅಳವಡಿಕೆಗೆ ಅನುಮತಿ ಕೊಡದಂತೆ ಕೆ. ಆರ್. ಕ್ಷೇತ್ರದ ಬಿಜೆಪಿ ಶಾಸಕ ಎಸ್. ಎ. ರಾಮದಾಸ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಪ್ರಮುಖವಾಗಿ ತಮ್ಮ ಕ್ಷೇತ್ರದಲ್ಲಿ ಈ ಯೋಜನೆಗೆ ಅವಕಾಶ ನೀಡದಂತೆ ಕೋರಿರುವ ಅವರು, ಕೆ. ಆರ್. ಕ್ಷೇತ್ರದಲ್ಲಿ ಉತ್ತಮವಾದ ರಸ್ತೆ ಮಾಡಿದ್ದೇವೆ. ಈಗ ಅದನ್ನು ಅಗೆದು ಅನಿಲ ಪೈಪ್ ಲೈನ್ ಹಾಕುವುದು ಬೇಡ. ಜನರ ಹಿತದೃಷ್ಟಿಯಿಂದ ಅನಿಲ ಪೈಪ್ ಲೈನ್ ಅಳವಡಿಕೆಗೆ ಅನುಮತಿ ಕೊಡಬಾರದೆಂದು ನಗರ ಪಾಲಿಕೆಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಆ ಮೂಲಕ ಮೈಸೂರು ನಗರದ ಕೆ. ಆರ್. ಕ್ಷೇತ್ರ ವ್ಯಾಪ್ತಿಯಲ್ಲಿ ಅನಿಲ ಪೈಪ್ ಲೈನ್ ಅಳವಡಿಕೆಗೆ ಮುಂದಾಗಿರೋ ಕೇಂದ್ರ ಸರ್ಕಾರದ ಯೋಜನೆಗೆ ಬಿಜೆಪಿ ಶಾಸಕರೇ ವಿರೋಧ ವ್ಯಕ್ತಪಡಿಸಿದ್ದಾರೆ.
ಚಿಲ್ಲರೆ ಬುದ್ದಿ ಬೇಡ, ಕೇರ್ ಮಾಡಲ್ಲ..!
ಪೈಪ್ ಲೈನ್ ಮೂಲಕ ಅಡುಗೆ ಅನಿಲ ಪೂರೈಸುವ ಕಾಮಗಾರಿಗೆ ಅನುಮತಿ ನೀಡದಂತೆ ಶಾಸಕ ರಾಮದಾಸ್ ಪತ್ರ ಬರೆದಿರುವ ವಿಚಾರಕ್ಕೆ ಸಂಸದ ಪ್ರತಾಪ್ ಸಿಂಹ ಗರಂ ಆಗಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪೈಪ್ ಲೈನ್ ಮೂಲಕ ಗ್ಯಾಸ್ ನೀಡುವ ಯೋಜನೆಗೆ ಅನುಮತಿ ನೀಡದಂತೆ ಪತ್ರ ಬರೆದಿರುವ ರಾಮದಾಸ್, ನರೇಂದ್ರ ಮೋದಿಗಿಂತ ಸೀನಿಯರ್. ಅವರಿಗಿಂತ ಬುದ್ದಿವಂತರು, ಜ್ಞಾನಿಗಳು. ಕೇವಲ ಬ್ಯಾನರ್ನಲ್ಲಿ ಮೋದಿ ಪೋಟೋ ಹಾಕಿಕೊಂಡು ಉತ್ಸವ ಮಾಡಿದರೆ ಆಗುವುದಿಲ್ಲ. ಮೋದಿ ಯೋಜನೆಗಳನ್ನು ವಿರೋಧಿಸಿದರೆ ಜನ ಪಾಠ ಕಲಿಸುತ್ತಾರೆ. ಸದರಿ ಯೋಜನೆಯನ್ನು ಕಾಂಗ್ರೆಸ್ – ಜೆಡಿಎಸ್ ಶಾಸಕರು ವಿರೋಧಿಸಿಲ್ಲ. ನಮ್ಮದೇ ಪಕ್ಷದ ಶಾಸಕರು ವಿರೋಧಿಸಿದ್ದಾರೆ. ಅವರನ್ನು ತಾಯಿ ಚಾಮುಂಡೇಶ್ವರಿ ಹಾಗೂ ಮೈಸೂರಿನ ಜನ ನೋಡಿಕೊಳ್ಳುತ್ತಾರೆ. ಈ ರೀತಿ ಚಿಲ್ಲರೆ ರಾಜಕಾರಣ ಮಾಡಬೇಡಿ ಎಂದಿರುವ ಪ್ರತಾಪ್ ಸಿಂಹ, ನಾನು ಇದ್ಯಾವುದಕ್ಕೂ ಕೇರ್ ಮಾಡುವುದಿಲ್ಲ. ಈ ಯೋಜನೆಯನ್ನು ಪೂರ್ತಿ ಮಾಡುತ್ತೇನೆ ಎಂದು ಶಾಸಕ ರಾಮದಾಸ್ ಅವರಿಗೆ ತಿರುಗೇಟು ನೀಡಿದ್ದಾರೆ.
ಕನಸಿನ ಯೋಜನೆ..!
ಪ್ರಧಾನಿ ನರೇಂದ್ರ ಮೋದಿ ಕನಸಿನಂತೆ ಪ್ರತಿ ಮನೆಗೂ ಅಡುಗೆ ಅನಿಲ ಪೂರೈಸುವ ನಿಟ್ಟಿನಲ್ಲಿ, ದ್ರವ ರೂಪದ ನೈಸರ್ಗಿಕ ಅನಿಲವನ್ನು ಮನೆ ಮನೆಗೆ ಪೂರೈಸುವ ಯೋಜನೆಯ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಮೈಸೂರು, ಮಂಡ್ಯ, ಚಾಮರಾಜನಗರಕ್ಕೆ ವಿಸ್ತರಣೆ ಮಾಡುವ ಉದ್ದೇಶ ಹೊಂದಿರುವ ಈ ಕಾಮಗಾರಿ ಈಗಾಗಲೇ ಭರದಿಂದ ಸಾಗುತ್ತಿದೆ. ಸದರಿ ಯೋಜನೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ 56.8 ಕೆ.ಎಲ್. ಸಾಮರ್ಥ್ಯದ ಎರಡು ಟ್ಯಾಂಕ್ ಅಳವಡಿಸಲಾಗಿದೆ.
ಬಿಡದಿಯಿಂದ ಮೈಸೂರಿನವರೆಗೆ 130 ಕಿ. ಮೀ. ಮುಖ್ಯಪೈಪ್ ಲೈನ್ ಮೂಲಕ ಅನಿಲ ಪೂರೈಕೆ ಮಾಡುವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಹೆಬ್ಬಾಳು ಮತ್ತು ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ ಎಲ್ಎನ್ಜಿ ಟ್ಯಾಂಕ್ಗಳಲ್ಲಿ ಅಡುಗೆ ಅನಿಲ ಸಂಗ್ರಹಿಸಿ, ಪೈಪ್ ಲೈನ್ ಮೂಲಕ ಮನೆ ಮನೆಗೆ ಅನಿಲ ಪೂರೈಕೆ ಮಾಡಲಾಗುವುದು. ಮೇ ಅಂತ್ಯದಲ್ಲಿ ಯೋಜನೆ ಮುಕ್ತಾಯಗೊಳ್ಳುವ ನಿರೀಕ್ಷೆ ಹೊಂದಿದ್ದು, ಈ ಮೂಲಕ 3.75 ಲಕ್ಷ ಮನೆಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.
ನಿರೀಕ್ಷೆಯಂತೆ ಈ ಯೋಜನೆ ಯಶಸ್ವಿಯಾಗಿ ಅನುಷ್ಠಾನಕ್ಕೆ ಬಂದಲ್ಲಿ, ಮೈಸೂರಿನ ಪ್ರತಿ ಮನೆ ಮನೆಗೆ ಇನ್ಮುಂದೆ ಪೈಪ್ನಲ್ಲೇ ಬರುತ್ತೆ ಅಡುಗೆ ಅನಿಲ ಪೂರೈಕೆ ಆಗಲಿದ್ದು, ಸಾರ್ವಜನಿಕರು ಮನೆಯಲ್ಲಿ ಟ್ಯಾಪ್ ತಿರುಗಿಸಿದ್ರೆ ಅಡುಗೆ ಅನಿಲ ಲಭ್ಯವಾಗಲಿದೆ. ಅಲ್ಲದೆ ಪ್ರಮುಖವಾಗಿ ಸಾರ್ವಜನಿಕರು ಗ್ಯಾಸ್ ಬುಕ್ ಮಾಡುವ ಅಥವಾ ಗ್ಯಾಸ್ ಸಿಲಿಂಡರ್ ಬರುವವರೆಗೂ ಕಾಯಬೇಕಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನೀರು, ಕರೆಂಟ್ ಬಿಲ್ ರೀತಿ ಬಳಸಿದಷ್ಟು ಗ್ಯಾಸ್ಗೆ ಮಾತ್ರ ಬಿಲ್ ಕಟ್ಟಬೇಕಾಗುತ್ತದೆ.
Read more
[wpas_products keywords=”deal of the day sale today offer all”]