ಹೈಲೈಟ್ಸ್:
- ಸ್ಥಳೀಯ ಸಂಸ್ಥೆಗಳಿಂದ ಪರಿಷತ್ಗೆ ನಡೆದ ಚುನಾವಣೆ
- ಮುಂಬರುವ ಚುನಾವಣೆಗೆ ಹೆಚ್ಚಿನ ಶ್ರಮ ವಹಿಸಿ
- ಕಾಂಗ್ರೆಸ್ಸಿಗರ ಗೆದ್ದ ಅಮಲಿನ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೀದರ್ ಜಿಲ್ಲೆಯಲ್ಲೂ ನಮ್ಮ ಅಭ್ಯರ್ಥಿ ಪ್ರಕಾಶ್ ಖಂಡ್ರೆಯವರು ಒಳ್ಳೆಯ ಮತಗಳನ್ನು ಪಡೆದುಕೊಂಡಿದ್ದಾರೆ. ನಮ್ಮ ಅಭ್ಯರ್ಥಿ ಹಾಗೂ ನಮ್ಮ ಪಕ್ಷದ ಸೇವೆ ಸದಾ ಜನತೆಯೊಂದಿಗಿರುತ್ತದೆ. ಸೇವೆ ಮಾಡಲು ಅಧಿಕಾರದ ಅವಶ್ಯಕತೆಯಿಲ್ಲ. ಇನ್ನು ಹೆಚ್ಚು ಜನಸೇವೆ ಮಾಡಿ, ಬಡವರಿಗೆ ನ್ಯಾಯ ಒದಗಿಸಿ ಕೊಡುವ ಕೆಲಸ ನಮ್ಮ ಪಕ್ಷದಿಂದ ಹಾಗೂ ನಮ್ಮ ಅಭ್ಯರ್ಥಿಯಿಂದ ಸಾಗಲಿದೆ ಎಂದಿದ್ದಾರೆ.
ಕಳೆದ ಬಾರಿ ಬೀದರ್ ಜಿಲ್ಲೆಯಲ್ಲಿ ನಮ್ಮ ಅಭ್ಯರ್ಥಿ 959 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ 2,329 ಮತಗಳನ್ನು ಪಡೆದು 1,370 ಮತಗಳಿಂದ ಗೆದ್ದಿದ್ದರು. ಆದರೆ, ಈ ಸಲ ನಮ್ಮ ಪಕ್ಷದ ಸಂಘಟನಾ ಶಕ್ತಿ ಹಾಗೂ ಒಮ್ಮತದ ಪ್ರಯತ್ನದಿಂದ ನಮ್ಮ ಅಭ್ಯರ್ಥಿ 1,562 ಮತ ಪಡೆದು ಕೇವಲ 227 ಅತಿ ಕಡಿಮೆ ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ.
ಆದರೆ, ಇದು ಸೋಲಲ್ಲ. ಇನ್ನೂ ಹೆಚ್ಚಿನ ಕೆಲಸ ಹಾಗೂ ಸೇವೆ ಮಾಡಲು ನೀಡಿರುವ ಪ್ರೋತ್ಸಾಹವಾಗಿದೆ. ಇದೇ ತರಹ ಪಕ್ಷದ ಮುಖಂಡರು, ಕಾರ್ಯಕರ್ತರೆಲ್ಲರೂ ಸೇರಿ ಮುಂದೆಯೂ ಕೆಲಸ ಮಾಡಿ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ನಮ್ಮ ಪಕ್ಷದ ಗೆಲುವಿಗಾಗಿ ಶ್ರಮಿಸೋಣ. ಯಾರೂ ಕೂಡ ಈ ಸೋಲಿನಿಂದ ಧೃತಿಗೆಡುವ ಅವಶ್ಯಕತೆ ಇಲ್ಲ ಎಂದು ಖೂಬಾ ಹೇಳಿದ್ದಾರೆ.
ಕಾಂಗ್ರೆಸ್ಸಿಗರ ಗೆದ್ದ ಅಮಲಿನ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ
ಕಾಂಗ್ರೆಸ್ಸಿಗರು ಗೆದ್ದ ಅಮಲಿನಲ್ಲಿ ಮನಸ್ಸಿಗೆ ಬಂದ ಹಾಗೆ ಮಾತಾಡುತ್ತಿರಬಹುದು. ನಮ್ಮ ಶಕ್ತಿ ಹಾಗೂ ವಿಶ್ವಾಸ ಕುಂದಿಸಲು ಪ್ರಯತ್ನಿಸುತ್ತಿರಬಹುದು. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಇನ್ನು ಹೆಚ್ಚಿನ ಶ್ರಮ ಹಾಕಿ, ನಮ್ಮ ಪಕ್ಷವನ್ನು ಗೆಲ್ಲಿಸೋಣ, ಜನತೆ ಕೂಡ ಕಾಂಗ್ರೆಸ್ಸಿಗರಿಗೆ ತಕ್ಕ ಪಾಠ ಕಲಿಸುತ್ತಾರೆ. ಅವರ ದುರ್ವರ್ತನೆಗೆ, ದುರಹಂಕಾರ ಕೊನೆಗಾಣಿಸುತ್ತಾರೆ ಎಂದು ಪಕ್ಷದ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಖೂಬಾ ಧೈರ್ಯ ತುಂಬಿದ್ದಾರೆ.
2015ರಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಕೇವಲ 6 ಸ್ಥಾನಕ್ಕೆ ಸೀಮಿತವಾಗಿತ್ತು. ಅದರೆ ಇಂದು 12 ಸ್ಥಾನ ಪಡೆದುಕೊಂಡು ಮೇಲ್ಮನೆಯಲ್ಲಿ ಬಹುಮತ ಸಾಧಿಸಿದ್ದೇವೆ ಎಂದಿದ್ದಾರೆ.