The New Indian Express
ಬೆಂಗಳೂರು: ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಪಾತ್ರವನ್ನು ಎತ್ತಿ ತೋರಿಸಲು ಮುಂದಾಗಿರುವ ರಾಜ್ಯ ಪ್ರವಾಸೋದ್ಯಮ ಇಲಾಖೆಯು, ಹೋರಾಟದಲ್ಲಿ ಮಹತ್ವದ ಕೊಡುಗೆ ನೀಡಿದ ರಾಜ್ಯದ ಸ್ಥಳಗಳನ್ನು ಪ್ರವಾಸಿ ತಾಣವಾಗಿ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಪ್ರವಾಸೋದ್ಯಮ ದಿನ ಹಾಗೂ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಪ್ರವಾಸೋದ್ಯಮ ಇಲಾಖೆಯು ‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ಪಾತ್ರ’ ಕುರಿತು ಮಂಗಳವಾರ ವೆಬ್ನಾರ್ ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ವಿವಿ ನಿವೃತ್ತ ಪ್ರಾಧ್ಯಾಪಕರು ಹಾಗೂ ಇತಿಹಾಸ ತಜ್ಞರು ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಸಿಂಧು ಬಿ ರೂಪೇಶ್ ಅವರು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಸ್ಥಳಗಳ ಕುರಿತು ಮಾಹಿತಿ ಕಲೆ ಹಾಕುವ ಕೆಲಸ ಮಾಡಲಾಗುತ್ತಿದೆ. ಈ ಕಾರ್ಯದಲ್ಲಿ ಸಾರ್ವಜನಿಕ ಸಹಭಾಗಿತ್ವವನ್ನು ಕೋರಲಾಗುತ್ತಿದ್ದು, ಜನರು ತಮಗೆ ತಿಳಿದ ಸ್ಥಳಗಳ ಕುರಿತ ಮಾಹಿತಿಗಳನ್ನು ಇಲಾಖೆಯೊಂದಿಗೆ ಹಂಚಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.
ಜನರು ತಮಗೆ ತಿಳಿದ ವ್ಯಕ್ತಿಗಳ ಬಗ್ಗೆ ಕಥೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು. ಹಾಗೆಯೇ ತಮಗೆ ತಿಳಿದ ಸ್ಥಳಗಳ ಕುರಿತ ಮಾಹಿತಿ ನೀಡಿದರೆ, ಆ ಸ್ಥಳಗಳನ್ನು ಪ್ರವಾಸೋದ್ಯಮದ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗುತ್ತದೆ. ಸ್ವಾತಂತ್ರ್ಯ ಹೋರಾಟದ ಬಗ್ಗೆ ಸಾಕಷ್ಟು ಸ್ಥಳೀಯ ಮಾಹಿತಿಗಳಿದ್ದು, ಕಲ್ಯಾಣ ಕರ್ನಾಟಕ ಪ್ರದೇಶವು ಅಂತಹ ಅನೇಕ ಸ್ಥಳಗಳನ್ನು ಹೊಂದಿದೆ,
ಇಲಾಖೆಯು ರಾಜ್ಯದಲ್ಲಿ 770 ಪ್ರವಾಸೋದ್ಯಮ ತಾಣಗಳನ್ನು ಪಟ್ಟಿ ಮಾಡಿದೆ, ಅದರಲ್ಲಿ 25 ಕಡಿಮೆ ಪ್ರಸಿದ್ಧ ಸ್ಥಳಗಳನ್ನು ಅಂತಿಮಗೊಳಿಸಿದೆ. ಸಿದ್ಧಪಡಿಸಲಾಗುತ್ತಿರುವ ಪಟ್ಟಿಯಲ್ಲಿ ಸ್ವಾತಂತ್ರ್ಯ ಹೋರಾಟದ ಭಾಗವಾಗಿರುವವರನ್ನೂ ಸೇರಿಸಲಾಗುವುದು. ಈ 25 ತಾಣಗಳನ್ನು ಪ್ರವಾಸಿಗರು ಆಗಾಗ್ಗೆ ಭೇಟಿ ನೀಡುವ ಜನಪ್ರಿಯ ತಾಣಗಳಿಗೆ ಲಿಂಕ್ ಮಾಡಲಾಗುತ್ತಿದೆ. ಇದರಿಂದ ಈ ಸ್ಥಳಗಳ ಕುರಿತಂತೆಯೂ ಹೆಚ್ಚೆಚ್ಚು ಜನರು ತಿಳಿದುಕೊಳ್ಳುವಂತೆ ಮಾಡಲಾಗುತ್ತದೆ ಎಂದು ರೂಪೇಶ್ ಮಾಹಿತಿ ನೀಡಿದ್ದಾರೆ.
Read more
[wpas_products keywords=”deal of the day”]