ಹೈಲೈಟ್ಸ್:
- ತ್ಯಾವರೆಕೊಪ್ಪ ಸಿಂಹಧಾಮದಿಂದ ಅನಂದಪುರದವರೆಗೆ ಚತುಷ್ಪಥ ರಸ್ತೆ
- ಶ್ರೀರಾಮಪುರದಿಂದ ಹೊಳೆಹೊನ್ನೂರು ರಸ್ತೆವರೆಗೆ ಬೈಪಾಸ್ ನಿರ್ಮಾಣ
- ಕೇಂದ್ರ ಬಜೆಟ್ನಲ್ಲಿ ಹಲವು ಯೋಜನೆಗಳ ನಿರೀಕ್ಷೆಯಲ್ಲಿ ಸಂಸದ ಬಿ. ವೈ. ರಾಘವೇಂದ್ರ
ಶಿವಮೊಗ್ಗ ನಗರದಲ್ಲಿ ಬುಧವಾರ ಗಣರಾಜ್ಯೋತ್ಸವದ ನಂತರ ಡಿಎಆರ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಸಂಸತ್ ಅಧಿವೇಶನದಲ್ಲಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ 1,500 ಕೋಟಿ ರೂ. ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ತ್ಯಾವರೆಕೊಪ್ಪ ಸಿಂಹಧಾಮದಿಂದ ಅನಂದಪುರದವರೆಗೆ ಚತುಷ್ಪಥ ರಸ್ತೆ ಜತೆಗೆ ಶ್ರೀರಾಮಪುರದಿಂದ ಹೊಳೆಹೊನ್ನೂರು ರಸ್ತೆವರೆಗೆ ಬೈಪಾಸ್ ನಿರ್ಮಾಕ್ಕೂ ಯೋಜನೆ ರೂಪಿಸಲಾಗಿದೆ. ಬಜೆಟ್ನಲ್ಲಿ ಹಣ ಒದಗಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದರು.
ಶಿವಮೊಗ್ಗ – ಶಿಕಾರಿಪುರ – ರಾಣೇಬೆನ್ನೂರು ನೂತನ ರೈಲ್ವೆ ಮಾರ್ಗಕ್ಕೆ ಪರಿಹಾರದ ವಿಷಯದಲ್ಲಿ ರೈತರ ಅಸಹಕಾರದಿಂದಾಗಿ ಭೂ ಸ್ವಾಧೀನ ಪ್ರಕ್ರಿಯೆ ತಡವಾಗಿದೆ. ಈ ಬಾರಿ ಬಜೆಟ್ನಲ್ಲಿ ಮೊದಲ ಹಂತದಲ್ಲಿ 250 ಕೋಟಿ ರೂ. ಬಿಡುಗಡೆಯಾಗುವ ಸಾಧ್ಯತೆ ಇದ್ದು ಹಣ ಬಿಡುಗಡೆಯಾಗುತ್ತಿದ್ದಂತೆ ಟೆಂಡರ್ ಕರೆಯಲಾಗುತ್ತದೆ. ಶಿವಮೊಗ್ಗದಲ್ಲಿ ರೈಲ್ವೆ ಕೋಚಿಂಗ್ ಡಿಪೋ ನಿರ್ಮಾಣಕ್ಕೆ ಅಂತಿಮ ಅಧಿಸೂಚನೆಯಾಗಿದ್ದು, 75 ಕೋಟಿ ರೂ. ಬಿಡುಗಡೆಯಾಗಲಿದೆ. ತಾಳಗುಪ್ಪ – ಸಿದ್ದಾಪುರ ರೈಲ್ವೆ ಮಾರ್ಗ ಅನುಷ್ಠಾನಕ್ಕೆ ಅನುದಾನ ಬಿಡುಗಡೆ ಮಾಡುವಂತೆ ರೈಲ್ವೆ ಸಚಿವರನ್ನು ಕೋರಲಾಗಿದೆ ಎಂದರು.
ಜಿಲ್ಲೆಯಲ್ಲಿ 3 ಪ್ರತ್ಯೇಕ ಕೇಂದ್ರೀಯ ವಿದ್ಯಾಲಯಗಳು ಆರಂಭವಾಗುವುದಲ್ಲದೆ ತೀರ್ಥಹಳ್ಳಿಯಲ್ಲಿ ಸೈನಿಕ ಶಾಲೆ ಶಾಲೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದಕ್ಕಾಗಿ 100 ಎಕರೆ ಜಾಗವನ್ನು ಒದಗಿಸಲು ತೀರ್ಮಾನಿಸಲಾಗಿದೆ. ಶಿಕಾರಿಪುರದಲ್ಲಿ ವಾಲ್ಮೀಕಿ ವಸತಿ ಶಾಲೆ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ಅಟಲ್ ವಸತಿ ಶಾಲೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ. ಸಿ. ನಾರಾಯಣ ಗೌಡ, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ್, ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್, ಜಿಲ್ಲಾ ಪಂಚಾಯಿತಿ ಸಿಇಒ ಎಂ. ಎಲ್. ವೈಶಾಲಿ ಇದ್ದರು.
ಜೋಗ್ ಅಭಿವೃದ್ಧಿಗೆ ಯೋಜನೆ
ಜೋಗದ ಸರ್ವಾಂಗೀಣ ಅಭಿವೃದ್ಧಿ ಹಿನ್ನೆಲೆಯಲ್ಲಿ 200 ಕೋಟಿ ರೂ. ಗಳ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗಿದ್ದು ಅದರಲ್ಲಿ ಶೇ.40ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಜೂನ್ ಅಂತ್ಯದೊಳಗೆ ಉಳಿದ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಮತ್ತೊಂದು ಪ್ರತ್ಯೇಕ ಅಭಿವೃದ್ಧಿ ಯೋಜನೆಗೆ 140 ಕೋಟಿ ರೂ. ವೆಚ್ಚದ ಪಿಪಿಪಿ ಮಾದರಿಯಲ್ಲಿ ಕೈಗೊಳ್ಳಲು ಟೆಂಡರ್ ಕರೆಯಲಾಗುವುದು. ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಲು ಬೈಂದೂರಲ್ಲಿ ವಿವಿಧ ದೇಶಗಳಿಗೆ ಸಂಪರ್ಕ ಕಲ್ಪಿಸುವ ಕ್ರೂಸರ್ಗಳ ತಾತ್ಕಾಲಿಕ ಅವಧಿಗೆ ನಿಲುಗಡೆ ಮಾಡುವಂತಹ ಬಂದರು ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. 260 ಕೋಟಿ ರೂ. ವೆಚ್ಚದಲ್ಲಿ ಮರವಂತೆ ಬೀಚ್ ಅಭಿವೃದ್ಧಿಗೂ ಯೋಜನೆ ರೂಪಿಸಲಾಗಿದೆ ಎಂದು ರಾಘವೇಂದ್ರ ಹೇಳಿದರು.
‘ಪ್ರಯಾಣಿಕರ ಅನುಕೂಲಕ್ಕಾಗಿ ನಗರದ ಬಸ್ ಸ್ಟ್ಯಾಂಡ್ ಎದುರಿನ ಅಶೋಕ ವೃತ್ತ ಮತ್ತು ಆಲ್ಕೊಳ ವೃತ್ತಕ್ಕೆ ಮೇಲುಸೇತುವೆ ನಿರ್ಮಾರ್ಣ, ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಪಕ್ಕದಲ್ಲಿ 50 ಕೋಟಿ ರೂ. ಜಿಲ್ಲಾಡಳಿತ ಭವನ ನಿರ್ಮಿಸಲು ಯೋಜನೆ ರೂಪಿಸಲಾಗಿದೆ’ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದ್ದಾರೆ.
Read more
[wpas_products keywords=”deal of the day sale today offer all”]