ಹೈಲೈಟ್ಸ್:
- ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರಿಗೆ ಪದ್ಮ ಪ್ರಶಸ್ತಿ
- ಆಜಾದ್ ಪರ ಜಿ-23 ಗುಂಪಿನ ಕಾಂಗ್ರೆಸ್ ನಾಯಕರ ಸಂತಸ
- ಕೊಡುಗೆಯನ್ನು ದೇಶ ಗುರುತಿಸಿರುವಾಗ ಕಾಂಗ್ರೆಸ್ ಗುರುತಿಸಲಿಲ್ಲ
- ಪಕ್ಷದ ವಿರುದ್ಧ ಹಿರಿಯ ನಾಯಕ ಕಪಿಲ್ ಸಿಬಲ್ ಅಸಮಾಧಾನ
ಪದ್ಮ ಭೂಷಣ ಪ್ರಶಸ್ತಿ ತಿರಸ್ಕರಿಸಿದ ಪಶ್ಚಿಮ ಬಂಗಾಳದ ಕಮ್ಯುನಿಷ್ಟ್ ನಾಯಕ ಬುದ್ಧದೇವ್ ಭಟ್ಟಾಚಾರ್ಯ
ಪಕ್ಷದ ನಾಯಕತ್ವ ಹಾಗೂ ಒಟ್ಟಾರೆ ರಚನೆಯನ್ನು ಬದಲಿಸುವಂತೆ ಒತ್ತಾಯಿಸಿ ಪತ್ರ ಬರೆದಿದ್ದ ಜಿ-23 ಗುಂಪಿನ ನಾಯಕರಲ್ಲಿ ಒಬ್ಬರಾದ ಗುಲಾಂ ನಬಿ ಆಜಾದ್ ಅವರಿಗೆ ಸಾರ್ವಜನಿಕ ವ್ಯವಹಾರಗಳಿಗೆ ನೀಡಿದ ಕೊಡುಗೆಗಾಗಿ ಪದ್ಮ ವಿಭೂಷಣ ಗೌರವ ಸಂದಿದೆ. ಅವರಿಗೆ ಜಿ-23 ಗುಂಪಿನ ಇತರೆ ನಾಯಕರು ಶುಭಾಶಯಗಳ ಮಹಾಪೂರ ಹರಿಸಿದ್ದಾರೆ. ಇನ್ನು ಕೆಲವು ನಾಯಕರು ಆಜಾದ್ ಅವರ ವಿರುದ್ಧ ಅಸಮಾಧಾನದ ಬಾಣ ಪ್ರಯೋಗಿಸಿದ್ದಾರೆ.
‘ಗುಲಾಂ ನಬಿ ಆಜಾದ್ ಅವರಿಗೆ ಪದ್ಮಭೂಷಣ ನೀಡಲಾಗಿದೆ. ಅಭಿನಂದನೆಗಳು ಸಹೋದರ’ ಎಂದು ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದಾರೆ. ‘ದೇಶವು ಸಾರ್ವಜನಿಕ ಜೀವನಕ್ಕೆ ಅವರ ಕೊಡುಗೆಯನ್ನು ಗುರುತಿಸಿರುವಾಗ, ಕಾಂಗ್ರೆಸ್ಗೆ ಅವರ ಸೇವೆಯ ಅಗತ್ಯವಿಲ್ಲದಿರುವುದು ವಿಪರ್ಯಾಸ’ ಎಂದು ಸಿಬಲ್ ಹೇಳಿದ್ದಾರೆ.
ಜಿ-23 ಗುಂಪಿನ ಮತ್ತೊಬ್ಬ ನಾಯಕ ಶಶಿ ತರೂರ್ ಅವರೂ ಆಜಾದ್ ಅವರನ್ನು ಅಭಿನಂದಿಸಿದ್ದಾರೆ. ‘ಪದ್ಮ ಭೂಷಣಕ್ಕಾಗಿ ಗುಲಾಂ ನಬಿ ಆಜಾದ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಒಬ್ಬರ ಸಾರ್ವಜನಿಕ ಸೇವೆಯನ್ನು ಮತ್ತೊಂದು ಬದಿಯಲ್ಲಿರುವ ಸರ್ಕಾರ ಕೂಡ ಗುರುತಿಸುತ್ತಿರುವುದು ಒಳ್ಳೆಯ ಸಂಗತಿ’ ಎಂದು ಟ್ವೀಟ್ ಮಾಡಿದ್ದಾರೆ.
ಆದರೆ ಹಿರಿಯ ನಾಯಕ ಜೈರಾಂ ರಮೇಶ್ ಅವರು ಆಜಾದ್ ವಿರುದ್ಧ ಹರಿಹಾಯ್ದಿದ್ದಾರೆ. ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ ಅವರು ಪದ್ಮ ಪ್ರಶಸ್ತಿಯನ್ನು ತಿರಸ್ಕರಿಸಿದಂತೆ ಆಜಾದ್ ಮಾಡದೆ ಇರುವುದನ್ನು ಅವರು ಪರೋಕ್ಷವಾಗಿ ಟೀಕಿಸಿದ್ದಾರೆ. ಬುದ್ಧದೇವ್ ಅವರು ಪದ್ಮ ಭೂಷಣ ತಿರಸ್ಕರಿಸಿದ ಕುರಿತಾದ ಟ್ವೀಟ್ ಹಂಚಿಕೊಂಡಿರುವ ಜೈರಾಂ ರಮೇಶ್, ‘ಇದು ಸರಿಯಾದ ಕ್ರಮ. ಅವರಿಗೆ ಆಜಾದ್ (ಸ್ವಾತಂತ್ರ್ಯ) ಆಗಿರಲು ಬಯಸಿದ್ದಾರೆ, ಆದರೆ ಗುಲಾಮನಲ್ಲ’ ಎಂದು ಪ್ರಶಸ್ತಿ ಒಪ್ಪಿಕೊಂಡಿರುವ ಗುಲಾಂ ನಬಿ ಆಜಾದ್ ವಿರುದ್ಧ ಕಿಡಿಕಾರಿದ್ದಾರೆ.
Read more
[wpas_products keywords=”deal of the day sale today offer all”]