ಹೈಲೈಟ್ಸ್:
- ಜ. 19ರಂದು ಆತ್ಮಹತ್ಯೆಯಿಂದ ಮೃತಪಟ್ಟಿದ್ದ ವಿದ್ಯಾರ್ಥಿನಿ ಲಾವಣ್ಯಾ
- ಲಾವಣ್ಯಾ ಸಾವಿನ ಬಳಿಕ ವಿಡಿಯೋ ಸಾಮಾಜಿಕ ಮಧ್ಯಮದಲ್ಲಿ ವೈರಲ್
- ಬಲವಂತದ ಮತಾಂತರಕ್ಕೆ ಪ್ರಯತ್ನಿಸಲಾಗಿತ್ತು ಎಂದಿದ್ದ ಲಾವಣ್ಯಾ
- ಮತಾಂತರ ಪ್ರಕರಣದ ನಿಟ್ಟಿನಲ್ಲಿ ತನಿಖೆ ನಡೆಸಲು ಬಾಲಕಿ ತಂದೆ ಒತ್ತಾಯ
- ಮೊಬೈಲ್ ಹಸ್ತಾಂತರಿಸಲು ವಿಡಿಯೋ ಚಿತ್ರೀಕರಿಸಿದ ವ್ಯಕ್ತಿಗೆ ಸೂಚನೆ
ಜನವರಿ 9ರಂದು ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಫಲಕಾರಿಯಾಗದೆ ಜ. 19ರಂದು ಮೃತಪಟ್ಟ ವಿದ್ಯಾರ್ಥಿನಿ ಲಾವಣ್ಯಾ, ಮತಾಂತರವಾಗುವಂತೆ ತನಗೆ ಹಾಗೂ ತನ್ನ ಕುಟುಂಬಕ್ಕೆ ಹಾಸ್ಟೆಲ್ ವಾರ್ಡನ್ ಕಿರುಕುಳ ನೀಡಿದ್ದರು ಎಂದು ಆರೋಪಿಸುವುದು ವಿಡಿಯೋದಲ್ಲಿ ದಾಖಲಾಗಿತ್ತು. ಇದನ್ನು ಚಿತ್ರೀಕರಿಸಿದ ವ್ಯಕ್ತಿಯನ್ನು ಮುತ್ತುವೇಲ್ ಎಂದು ಗುರುತಿಸಲಾಗಿದ್ದು, ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಹಾಗೂ ಮೊಬೈಲ್ ಫೋನ್ ಹಸ್ತಾಂತರಿಸುವಂತೆ ಆತನಿಗೆ ಆದೇಶಿಸಲಾಗಿದೆ.
ಲಾವಣ್ಯಾ ಮಾತನಾಡುವ 44 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಆಕೆಯ ಸಾವಿನ ಬಳಿಕ ವೈರಲ್ ಆಗಿತ್ತು. ಎರಡು ವರ್ಷಗಳ ಹಿಂದೆ ರಕ್ವೆಲ್ ಮೇರಿ ಎಂಬ ಮಹಿಳೆ ತನಗೆ ಮತ್ತು ತನ್ನ ಕುಟುಂಬಕ್ಕೆ ಮತಾಂತರವಾಗುವಂತೆ ಒತ್ತಡ ಹೇರಿದ್ದಳು. ಇದಕ್ಕೆ ನಿರಾಕರಿಸಿದ್ದೆವು ಎಂದು ಆಕೆ ಹೇಳುವುದು ವಿಡಿಯೋದಲ್ಲಿ ದಾಖಲಾಗಿತ್ತು.
ಹೀಗಾಗಿ ತನ್ನ ಮಗಳ ಸಾವಿನ ಪ್ರಕರಣವನ್ನು ಬಲವಂತದ ಮತಾಂತರ ಆರೋಪದಡಿ ಸಿಬಿ-ಸಿಐಡಿ ತನಿಖೆಗೆ ಒಳಪಡಿಸಬೇಕು ಎಂದು ಲಾವಣ್ಯಾ ತಂದೆ ಅರ್ಜಿ ಸಲ್ಲಿಸಿದ್ದರು. ಈ ವಿಡಿಯೋವನ್ನು ಮುತ್ತುವೇಲ್ ಎಂಬಾತ ಚಿತ್ರೀಕರಿಸಿದ್ದಾಗಿ ತನಿಖಾಧಿಕಾರಿ ನ್ಯಾಯಮೂರ್ತಿ ಸ್ವಾಮಿನಾಥನ್ ಅವರಿದ್ದ ಪೀಠಕ್ಕೆ ಸೋಮವಾರ ಮಾಹಿತಿ ನೀಡಿದ್ದರು. ವಿಡಿಯೋದಲ್ಲಿ ಇರುವುದು ವಿದ್ಯಾರ್ಥಿನಿಯ ಧ್ವನಿಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕಿದೆ. ಹೀಗಾಗಿ ಮುತ್ತುವೇಲ್ ಮಂಗಳವಾರ ತನಿಖಾಧಿಕಾರಿ ಮುಂದೆ ಹಾಜರಾಗಬೇಕು ಎಂದು ಪೀಠ ಸೂಚಿಸಿತ್ತು.
ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಒಬ್ಬ ನರ್ಸ್ ಸೇರಿದಂತೆ 37 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಈವರೆಗೂ 14 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತನಿಖಾಧಿಕಾರಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಬಾಲಕಿಯ ವಿಡಿಯೋ ಯೂಟ್ಯೂಬ್ನಲ್ಲಿದೆ. ವಿಡಿಯೋದರ ಮೂಲ ಹಾಗೂ ಅಸಲಿಯತ್ತು ತಿಳಿಯಲು ಫೋನ್ ಅನ್ನು ವಶಪಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ಹೇಳಿದ್ದರು.
ವಿಡಿಯೋದ ವಿಧಿ ವಿಜ್ಞಾನ ಪರೀಕ್ಷೆ ಬಳಿಕ ಜ. 27ರಂದು ವರದಿ ಸಲ್ಲಿಸುವಂತೆ ಕೋರ್ಟ್ ನಿರ್ದೇಶನ ನೀಡಿದೆ. ಕೋರ್ಟ್ ನಿರ್ದೇಶನದಂತೆ ಬಾಲಕಿಯ ಪೋಷಕರು ಮ್ಯಾಜಿಸ್ಟ್ರೇಟ್ ಎದುರು ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ತಮ್ಮ ಹೇಳಿಕೆಯನ್ನು ತನಿಖಾಧಿಕಾರಿ ಮುಂದೆ ಕೂಡ ನೀಡುವಂತೆ ಕೋರ್ಟ್ ಸೂಚಿಸಿದೆ.
ತಂಜಾವೂರ್ನ ಮೈಕಲ್ಪಟ್ಟಿಯ ಸೆಕ್ರೆಡ್ ಹಾರ್ಟ್ಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಲಾವಣ್ಯಾ, ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆ ಸಾಯುವ ಮುನ್ನ ನೀಡಿದ್ದ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದರು. ಹಾಸ್ಟೆಲ್ ವಾರ್ಡನ್ ಸಗಾಯ ಮೇರಿ ಎಂಬಾಕೆ ತನಗೆ ಕಿರುಕುಳ ನೀಡಿ, ಆಕೆಯ ಖಾಸಗಿ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಳು ಎಂದು ಆರೋಪಿಸಿದ್ದಳು. ಆದರೆ ಮತಾಂತರ ಕಿರುಕುಳದ ಬಗ್ಗೆ ಆಕೆ ಹೇಳಿಕೆ ನೀಡಿರಲಿಲ್ಲ. ಆಕೆ ಮೃತಪಟ್ಟ ಮಾರನೇ ದಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೇ ಶಾಲೆಯಲ್ಲಿ ಕೆಲಸ ಮಾಡುವ ಕ್ರೈಸ್ತ ಸನ್ಯಾಸಿನಿ ರಕ್ವೆಲ್ ಮೇರಿ, ತನಗೆ ಹಾಗೂ ತನ್ನ ಪೋಷಕರಿಗೆ ಮತಾಂತರ ಆಗುವಂತೆ ಒತ್ತಾಯಿಸಿದ್ದಾಗಿ ಅದರಲ್ಲಿ ಹೇಳಲಾಗಿದೆ.
Read more
[wpas_products keywords=”deal of the day sale today offer all”]