ಹೈಲೈಟ್ಸ್:
- ಆಟವಾಡುತ್ತಿದ್ದ ಮಕ್ಕಳನ್ನು ಓಡಿಸಲು ಗುಂಡು ಹಾರಿಸಿದ ಸಚಿವನ ಪುತ್ರ
- ಕುಪಿತಗೊಂಡ ಗ್ರಾಮಸ್ಥರಿಂದ ಸಚಿವನ ಪುತ್ರನ ಮೇಲೆ ಹಲ್ಲೆ
- ಬಿಜೆಪಿ ಮುಖಂಡ, ಬಿಹಾರದ ಸಚಿವ ನಾರಾಯಣ್ ಪ್ರಸಾದ್ ಪುತ್ರನ ಮೇಲೆ ಹಲ್ಲೆ
ಪಶ್ಚಿಮ ಚಂಪಾರಣ್ ಜಿಲ್ಲೆಯ ಹರ್ದಿಯಾ ಗ್ರಾಮದಲ್ಲಿ ಬಿಜೆಪಿ ಮುಖಂಡರೂ ಆಗಿರುವ ನಾರಾಯಣ್ ಪ್ರಸಾದ್ ಅವರ ತೋಟದಲ್ಲಿ ಕೆಲ ಮಕ್ಕಳು ಭಾನುವಾರ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ತೋಟಕ್ಕೆ ಬಂದ ಸಚಿವರ ಪುತ್ರ ಬಬ್ಲು ಪ್ರಸಾದ್, ಮಕ್ಕಳನ್ನು ಓಡಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಬಬ್ಲು ಕುಮಾರ್ ಕೃತ್ಯದ ಪರಿಣಾಮ ಐವರು ಮಕ್ಕಳಿಗೆ ಗಾಯಗಳಾಗಿದ್ದು, ಇದರಿಂದ ಕುಪಿತಗೊಂಡ ಗ್ರಾಮಸ್ಥರು ಬಬ್ಲುಕುಮಾರ್ ಹಾಗೂ ಆತನ ಸಹಚರರನ್ನು ಓಡಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ. ಬಬ್ಲು ಪ್ರಸಾದ್, ಆತನ ಚಿಕ್ಕಪ್ಪ ಹರೇಂದ್ರ ಪ್ರಸಾದ್, ಮ್ಯಾನೇಜರ್ ವಿಜಯ್ ಸೇರಿ ಹಲವರ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ. ಅವರ ವಾಹನಗಳನ್ನು ಧ್ವಂಸ ಮಾಡಿದ್ದಾರೆ.
ಘಟನೆಯಲ್ಲಿ ಬಬ್ಲು ಪ್ರಸಾದ್ ಸೇರಿ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಪೇಂದ್ರ ವರ್ಮಾ ತಿಳಿಸಿದ್ದಾರೆ. ಅಲ್ಲದೆ, ಸ್ಥಳದಲ್ಲಿ ಇನ್ನೂ ಬಿಗುವಿನ ವಾತಾವರಣ ಇರುವುದರಿಂದ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
ಭೂ ಅತಿಕ್ರಮಣಕ್ಕೆ ಯತ್ನ: ‘ಗ್ರಾಮಸ್ಥರು ನಮ್ಮ ಭೂಮಿ ಅತಿಕ್ರಮಿಸಲು ಯತ್ನಿಸಿದ್ದಾರೆ’ ಎಂದು ಸಚಿವ ನಾರಾಯಣ ಪ್ರಸಾದ್ ಆರೋಪಿಸಿದ್ದಾರೆ. ‘ಗ್ರಾಮದ ಕೆಲವರು ನಮ್ಮ ಭೂಮಿಯನ್ನು ಅತಿಕ್ರಮಿಸಲು ಯತ್ನಿಸಿದ್ದಾರೆ. ಇದು ಗಮನಕ್ಕೆ ಬಂದು ನಮ್ಮ ಕುಟುಂಬಸ್ಥರು ಜಮೀನಿಗೆ ತೆರಳಿದಾಗ ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ. ಇದಾದ ಬಳಿಕ ನನ್ನ ಮಗ ಅಲ್ಲಿಗೆ ತೆರಳಿದ್ದು, ಅವನ ಮೇಲೆಯೂ ಜನ ಹಲ್ಲೆಗೆ ಮುಂದಾದಾಗ ಪರವಾನಗಿ ಇರುವ ಗನ್ ತೆಗೆದು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಆದರೂ ನನ್ನ ಕುಟುಂಬಸ್ಥರ ಮೇಲೆ ಹಲ್ಲೆ ನಡೆದಿದೆ’ ಎಂದು ದೂರಿದ್ದಾರೆ.
ಭೂಮಿಯ ಅತಿಕ್ರಮಣ ಆರೋಪವನ್ನು ಗ್ರಾಮಸ್ಥರು ನಿರಾಕರಿಸಿದ್ದು, ಕ್ರಿಕೆಟ್ ಆಡುತ್ತಿದ್ದ ಬಾಲಕರ ಮೇಲೆ ಗುಂಡು ಹಾರಿಸಿದ ಕಾರಣಕ್ಕಾಗಿಯೇ ಗಲಾಟೆ ನಡೆದಿದೆ ಎಂದಿದ್ದಾರೆ. ‘ಬಾಲಕರು ಕ್ರಿಕೆಟ್ ಆಡಿದ ಮಾತ್ರಕ್ಕೇ ಗುಂಡು ಹಾರಿಸಿದ್ದು, ಐವರು ಬಾಲಕರಿಗೆ ಗಾಯಗಳಾಗಿವೆ. ಹಾಗಾಗಿ ಗಲಾಟೆಯುಂಟಾಗಿದೆ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
Read more
[wpas_products keywords=”deal of the day sale today offer all”]