Online Desk
ದಾವಣಗೆರೆ: ಬಿಜೆಪಿ ಪಾಳಯದಲ್ಲಿ ಮತ್ತೆ ಸಂಪುಟ ವಿಸ್ತರಣೆ, ಪುನರ್ರಚನೆ ಮಾತುಗಳು, ಬಹಿರಂಗ ಹೇಳಿಕೆಗಳು, ಸಮಾನ ಮನಸ್ಕರ ಸಭೆಗಳು, ಅಸಮಾಧಾನಗಳು ಜೋರಾಗಿವೆ. ಸಿಎಂ ಕಾರ್ಯದರ್ಶಿ ದಾವಣಗೆರೆಯ ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.ತಾವು ಪ್ರಬಲ ಸಚಿವಾಕಾಂಕ್ಷಿ ಎಂಬುದನ್ನು ಹೇಳಿಕೊಂಡಿದ್ದಾರೆ.
ಹಿಂದಿನ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ತಮ್ಮ ಹಾಗೂ ಬಸವಗೌಡ ಪಾಟೀಲ್ ಯತ್ನಾಳ್ ಪಾತ್ರ ಸಾಕಷ್ಟಿದೆ, ಹೀಗಿರುವಾಗ ನಮಗೆ ಸಚಿವರಾಗುವ ಯೋಗ್ಯತೆ ಇಲ್ಲವೇ, ತಮ್ಮನ್ನೇಕೆ ಸಂಪುಟಕ್ಕೆ ಸೇರಿಸಬಾರದು ಎಂದು ರೇಣುಕಾಚಾರ್ಯ ಕೇಳುತ್ತಿದ್ದಾರೆ.
ಸಚಿವರು ಫೋನ್ ಕೂಡ ಎತ್ತಲ್ಲ: ನಮ್ಮ ಕ್ಷೇತ್ರದ ಸಮಸ್ಯೆಗಳು, ಆಗಬೇಕಾದ ಕೆಲಸಗಳ ಬಗ್ಗೆ ಹೇಳೋಣವೆಂದರೆ ಕೆಲವು ಸಚಿವರು ಶಾಸಕರ ಫೋನ್ ಸಹ ರಿಸೀವ್ ಮಾಡಲ್ಲ. ಶಾಸಕರು ಪತ್ರವನ್ನು ಕೊಟ್ಟರೆ ಸಚಿವರು ಉತ್ತರ ಕೊಡಬೇಕು. ಆದರೆ ಸಚಿವರ ಆಪ್ತ ಸಹಾಯಕರು ಶರಾ ಬರೆಯುತ್ತಾರೆ. ಇಂಥ ಸಚಿವರು ಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಂಪುಟ ವಿಸ್ತರಣೆ ವರಿಷ್ಠರ ತೀರ್ಮಾನ, 6 ತಿಂಗಳ ಸಾಧನೆ ಪುಸ್ತಕ ರೂಪದಲ್ಲಿ ಬಿಡುಗಡೆ: ಸಿಎಂ ಬೊಮ್ಮಾಯಿ
ಸಚಿವ ಸಂಪುಟದಲ್ಲಿ ಈಗ 4 ಸ್ಥಾನಗಳು ಖಾಲಿ ಇವೆ. ಹಲವು ಬಾರಿ ಸಚಿವರಾದವರು ತಾವೇ ರಾಜೀನಾಮೆ ನೀಡಿ ಹೊಸಬರಿಗೆ ಅವಕಾಶ ನೀಡಲಿ. ಮಾರ್ಚ್ನಲ್ಲಿ ಸಂಪುಟ ವಿಸ್ತರಣೆ ಬೇಡ, ಈಗಲೇ ಮಾಡಲಿ. ಅಗತ್ಯ ಬಿದ್ದರೆ ನಾವು ದೆಹಲಿಗೂ ಹೋಗುತ್ತೇವೆ. ಹೊಸಬರಿಗೆ ಸಚಿವ ಸ್ಥಾನ ಸಿಗಬೇಕು ಎಂದು ಒಂದಾಗಿದ್ದೇವೆ. ನಮಗೆ ಸಚಿವರಾಗುವ ಯೋಗ್ಯತೆ ಇಲ್ಲವೇ? ನಮಗೆ ಸಚಿವ ಸ್ಥಾನ ಕೊಟ್ಟು ನೋಡಲಿ ಎಂದು ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ಸರ್ಕಾರಕ್ಕೆ ಸಂಪುಟ ವಿಸ್ತರಣೆಯ ಅಗತ್ಯವಿದೆ: ಕೆ ಎಸ್ ಈಶ್ವರಪ್ಪ
ವಿಜಯೇಂದ್ರಗೆ ಸಚಿವ ಸ್ಥಾನ ವರಿಷ್ಠರ ತೀರ್ಮಾನ: ಬಿ ವೈ ವಿಜಯೇಂದ್ರ ಅವರು ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ತಮ್ಮದೇ ವರ್ಚಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಏನೂ ಹೇಳುವುದಿಲ್ಲ. ಅವರಿಗೆ ಸಚಿವ ಸ್ಥಾನ ನೀಡುವುದು ವರಿಷ್ಠರಿಗೆ ಬಿಟ್ಟ ನಿರ್ಧಾರ ಎಂದರು.
Read more
[wpas_products keywords=”deal of the day”]