Karnataka news paper

IAF Chopper Crash: ರಕ್ಷಣಾ ಕಾರ್ಯಕ್ಕೆ ನೆರವು ನೀಡಿದ ಹಳ್ಳಿಯನ್ನು ದತ್ತು ಪಡೆದ ಸೇನೆ


ಹೈಲೈಟ್ಸ್‌:

  • ತಮಿಳುನಾಡಿನ ಕೂನೂರು ಸಮೀಪದ ನಂಜಪ್ಪ ಸದಿರಂ ಹಳ್ಳಿಯನ್ನು ದತ್ತು ಪಡೆದ ಸೇನೆ
  • ಐಎಎಫ್ ಹೆಲಿಕಾಪ್ಟರ್ ಅಪಘಾತದ ಬಳಿಕ ರಕ್ಷಣೆಗೆ ಸಹಾಯ ಮಾಡಿದ್ದ ಗ್ರಾಮಸ್ಥರು
  • ಎಲ್ಲರನ್ನೂ ರಕ್ಷಿಸುವ ಪ್ರಯತ್ನಕ್ಕೆ ನೆರವಾದ ಗ್ರಾಮಸ್ಥರು 14 ಮಂದಿ ಪಾಲಿಗೆ ದೇವರು
  • ಹಳ್ಳಿಯಲ್ಲಿ ಶೆಡ್ ನಿರ್ಮಾಣದ ಭರವಸೆ ನೀಡಿದ ಸೇನೆ, ವಿವಿಧ ಸೌಲಭ್ಯಗಳ ವಿತರಣೆ
  • ಆಸ್ಪತ್ರೆಯಲ್ಲಿರುವ ಕ್ಯಾ. ವರುಣ್ ಸಿಂಗ್ ಆರೋಗ್ಯ ಸ್ಥಿರ, ಮುಂದುವರಿದ ಚಿಕಿತ್ಸೆ

ಚೆನ್ನೈ: ಸೇನಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಮಂದಿ ಮೃತಪಟ್ಟ ಹೆಲಿಕಾಪ್ಟರ್ ಅಪಘಾತ ಘಟನೆ ನಡೆದ ತಮಿಳುನಾಡಿನ ಕೂನೂರಿನ ನಂಜಪ್ಪ ಸದಿರಂ ಹಳ್ಳಿಯ ಜನರು ಆ ಸಂದರ್ಭದಲ್ಲಿ ನೀಡಿದ ಸಹಕಾರಕ್ಕೆ ಭಾರತೀಯ ಸೇನೆ ಕೃತಜ್ಞತೆ ಸಲ್ಲಿಸಿದೆ. ಅಲ್ಲದೆ, ಹಳ್ಳಿಯನ್ನು ದತ್ತ ತೆಗೆದುಕೊಳ್ಳುವುದಾಗಿ ಅದು ಪ್ರಕಟಿಸಿದೆ.

ನಂಜಪ್ಪ ಸದಿರಂ ಹಳ್ಳಿಗೆ ಮಂಗಳವಾರ ಭೇಟಿ ನೀಡಿದ ಜನರಲ್ ಆಫೀಸರ್ ಕಮಾಂಡಿಂಗ್ ಕೇಂದ್ರ ಕಚೇರಿ ದಕ್ಷಿಣ ಭಾರತದ ಲೆಫ್ಟಿನೆಂಟ್ ಜನರಲ್ ಎ ಅರುಣ್ ಅವರು, ಆ ಸಂಕಷ್ಟದ ಸಮಯದಲ್ಲಿ ಯೋಧರನ್ನು ರಕ್ಷಿಸುವ ಕಾರ್ಯಾಚರಣೆಗೆ ಸಹಾಯ ಮಾಡಿದ ಗ್ರಾಮಸ್ಥರಿಗೆ ಧನ್ಯವಾದ ತಿಳಿಸಿದರು. ಅಪಘಾತದಲ್ಲಿ ಉಳಿದ ಪ್ರಯಾಣಿಕರನ್ನು ರಕ್ಷಿಸಲು ಪ್ರಯತ್ನಿಸಿದ ಗ್ರಾಮಸ್ಥರನ್ನು ‘ದೇವರು’ ಎಂದು ಅವರು ಬಣ್ಣಿಸಿದರು.
ಬಿಪಿನ್ ರಾವತ್ ಅವರಿದ್ದ ಹೆಲಿಕಾಪ್ಟರ್ ದುರಂತ: ಎಲ್ಲ ಸೈನಿಕರ ಶವದ ಗುರುತು ಪತ್ತೆ
ಐಎಎಫ್ ಹೆಲಿಕಾಪ್ಟರ್ ಅಪಘಾತದಲ್ಲಿ ಅದರಲ್ಲಿದ್ದ 14 ಮಂದಿಯ ಪೈಕಿ 13 ಜನರು ಮೃತಪಟ್ಟಿದ್ದರು. ಘಟನೆಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಸಾವು ಬದುಕಿನ ನಡುವೆ ಹೋರಾಟ ಮುಂದುವರಿಸಿದ್ದಾರೆ ಎಂದು ತಿಳಿಸಿದ ಜನರಲ್ ಅರುಣ್, ಈ ಹಳ್ಳಿಯ ಜನರ ಪ್ರಯತ್ನ ಅವರನ್ನು ಜೀವಂತ ರಕ್ಷಿಸಲು ಸಹಾಯ ಮಾಡಿದೆ ಎಂದರು.

ಹೆಲಿಕಾಪ್ಟರ್ ಅಪಘಾತಕ್ಕೀಡಾಗುವುದನ್ನು ಕಂಡ ಕೆಲವು ಗ್ರಾಮಸ್ಥರು ಕೂಡಲೇ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದರು. ಜತೆಗೆ ಕಾಡುಮೇಡಿನ ಪ್ರದೇಶದಲ್ಲಿ ಹೊತ್ತಿ ಉರಿಯುತ್ತಿದ್ದ ಬೆಂಕಿಯ ನಡುವೆ ಒಳಗಿದ್ದವರನ್ನು ಹೊರಕ್ಕೆಳೆಯಲು ಸಹಾಯ ಮಾಡಿದ್ದರು. ‘ನಿಮ್ಮಲ್ಲಿ ಅನೇಕರು ಸೇನೆ ಮತ್ತು ಪೊಲೀಸರಿಗೆ ಸಹಾಯ ಮಾಡಿದ್ದೀರಿ. ಇದರಿಂದಾಗಿ ಎಲ್ಲ 14 ಜನರನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಯಿತು. ಕ್ಯಾಪ್ಟನ್ ವರುಣ್ ಸಿಂಗ್ ಅವರು ಈಗಲೂ ಜೀವಂತ ಇರುವುದಕ್ಕೆ ನೀವು ಕಾರಣ. ನೀವು ಆ ಎಲ್ಲ 14 ಮಂದಿಯ ಪಾಲಿಗೆ ದೇವರು’ ಎಂದು ಅವರು ಹೇಳಿದರು.
Bipin Rawat Chopper Crash: ಐಎಎಫ್ ಹೇಳಿಕೆಗಳಲ್ಲಿಯೇ ವಿರೋಧಾಭಾಸ
ಅಪಘಾತವನ್ನು ಮೊದಲು ಕಂಡು, ಸಮಯಪ್ರಜ್ಞೆ ಮೆರೆದು ಪೊಲೀಸರಿಗೆ ವಿಷಯ ಮುಟ್ಟಿಸಿದ ಇಬ್ಬರು ಗ್ರಾಮಸ್ಥರಿಗೆ ಸೇನೆ 5,000 ರೂ ನಗದು ಬಹುಮಾನ ನೀಡಿತು. ಜತೆಗೆ ಸ್ಥಳೀಯರಿಗೆ ಬ್ಲಾಂಕೆಟ್, ಪಡಿತರ ಸಾಮಗ್ರಿಗಳು, ಸೋಲಾರು ತುರ್ತು ದೀಪಗಳನ್ನು ವಿತರಿಸಲಾಯಿತು. ಗ್ರಾಮಸ್ಥರು ಕಾರ್ಯಕ್ರಮಗಳು ಹಾಗೂ ಸಮಾರಂಭಗಳನ್ನು ನಡೆಸಲು ಸೂಕ್ತವಾಗುವ ಶೆಡ್ ಒಂದನ್ನು ನಿರ್ಮಿಸಿ ಕೊಡಲಾಗುವುದು. ವೈದ್ಯಕೀಯ ಶಿಬಿರಗಳನ್ನು ನಡೆಸಲು ವೈದ್ಯರು ಮತ್ತು ದಾದಿಯರನ್ನು ಹಳ್ಳಿಗೆ ಕಳುಹಿಸಲಾಗುವುದು ಎಂದು ಲೆಫ್ಟಿನೆಂಟ್ ಜನರಲ್ ಅರುಣ್ ತಿಳಿಸಿದರು.

ವರುಣ್ ಸಿಂಗ್ ಸ್ಪಂದನೆ
ಬೆಂಗಳೂರಿನ ಏರ್ ಫೋರ್ಸ್ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗ್ರೂಪ್ ಕ್ಯಾಪ್ಟರ್ ವರುಣ್ ಸಿಂಗ್ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಬೆಂಗಳೂರು ಮೂಲದ ಖಾಸಗಿ ಆಸ್ಪತ್ರೆ ಹಾಗೂ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳ ಪರಿಣತರು ಸೇನಾ ಆಸ್ಪತ್ರೆಗೆ ಸಲಹೆಗಳನ್ನು ನೀಡುತ್ತಿದ್ದಾರೆ ಎಂದು ವರದಿಯಾಗಿದೆ.
ಒಂದೇ ಚಿತೆಯಲ್ಲಿ ರಾವತ್ ದಂಪತಿ ಅಂತ್ಯಸಂಸ್ಕಾರ: ಹೆಣ್ಣುಮಕ್ಕಳಿಂದ ಅಂತಿಮ ವಿಧಿವಿಧಾನ
ವರುಣ್ ಸಿಂಗ್ ಅವರ ದೇಹದ ಶೇ 80ರಷ್ಟು ಚರ್ಮ ಸುಟ್ಟುಹೋಗಿದೆ ಎನ್ನಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಚರ್ಮದ ಬ್ಯಾಂಕ್‌ನಿಂದ ಸುಮಾರು 1000 ಚದರ ಸೆಂಟಿ ಮೀಟರ್‌ನಷ್ಟು ಚರ್ಮವನ್ನು ಆಸ್ಪತ್ರೆಗೆ ಈಗಾಗಲೇ ರವಾನಿಸಲಾಗಿದೆ. ಅಗತ್ಯವಿದ್ದರೆ ಮುಂಬಯಿ ಮತ್ತು ಚೆನ್ನೈನ ಸ್ಕಿನ್ ಬ್ಯಾಂಕ್‌ಗಳಿಂದ ಚರ್ಮ ತರಿಸಿಕೊಳ್ಳಲು ಆಲೋಚಿಸಲಾಗಿದೆ.

ವರುಣ್ ಸಿಂಗ್ ಅವರ ಆರೋಗ್ಯದಲ್ಲಿ ಏರಿಳಿತವಾಗುತ್ತಿದೆ. ಅವರೊಬ್ಬ ಹೋರಾಟಗಾರ. ಗೆದ್ದು ಹೊರಬರುತ್ತಾರೆ ಎಂದು ಅವರ ತಂದೆ ವಿಶ್ವಾಸ ವ್ಯಕ್ತಪಡಿಸಿದ್ದರು.



Read more