Karnataka news paper

‘ಗರುಡ ಗಮನ ವೃಷಭ ವಾಹನ’ ಬಳಿಕ ಬೆಂಗಳೂರಿನ ರೌಡಿಯಾದ ರಾಜ್ ಬಿ. ಶೆಟ್ಟಿ!


ಹೈಲೈಟ್ಸ್‌:

  • ‘ಗರುಡ ಗಮನ ವೃಷಭ ವಾಹನ’ ಸಿನಿಮಾದ ಯಶಸ್ಸಿನಲ್ಲಿರುವ ರಾಜ್‌ ಬಿ. ಶೆಟ್ಟಿ
  • ರಾಜ್‌ ಬಿ. ಶೆಟ್ಟಿ ನಟನೆಯ ಮತ್ತೊಂದು ಸಿನಿಮಾದ ಶೂಟಿಂಗ್ ಕಂಪ್ಲೀಟ್‌
  • ಈ ಹೊಸ ಸಿನಿಮಾದಲ್ಲಿ ಬೆಂಗಳೂರಿನ ರೌಡಿ ಪಾತ್ರ ಮಾಡಲಿರುವ ರಾಜ್‌ ಬಿ. ಶೆಟ್ಟಿ

ಹರೀಶ್‌ ಬಸವರಾಜ್‌
ನಟ, ನಿರ್ದೇಶಕ ರಾಜ್‌ ಬಿ. ಶೆಟ್ಟಿ ಯಾವಾಗಲೂ ವಿಭಿನ್ನ ಕಥೆ ಮತ್ತು ವಿಭಿನ್ನ ಶೈಲಿಯ ನಿರೂಪಣೆ ಇರುವ ಸಿನಿಮಾಗಳಲ್ಲಿ ನಟಿಸಲು ಇಷ್ಟಪಡುತ್ತೇನೆ ಎಂದು ಹೇಳುತ್ತಿರುತ್ತಾರೆ. ಅದು ಅವರ ಇತ್ತೀಚಿನ ಸಿನಿಮಾ ‘ಗರುಡ ಗಮನ ವೃಷಭ ವಾಹನ‘ದಲ್ಲಿಯೂ ಎಲ್ಲರಿಗೂ ಗೊತ್ತಾಯಿತು. ಈಗ ಅಂತಹದ್ದೇ ಒಂದು ವಿಭಿನ್ನ ಶೈಲಿಯ ನಿರೂಪಣೆಯ ಸಿನಿಮಾದಲ್ಲಿ ಅವರು ನಟಿಸಿದ್ದು, ಅದರ ಹೆಸರು ‘ರೂಪಾಂತರ‘.

ಬೆಂಗಳೂರಿನ ರೌಡಿಯಾದ ರಾಜ್‌ ಬಿ. ಶೆಟ್ಟಿ
‘ಒಂದು ಮೊಟ್ಟೆಯ ಕಥೆ’ ಎಂಬ ತಿಳಿ ಹಾಸ್ಯದ ಕಥೆ ಇರುವ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಾಜ್‌ ಬಿ. ಶೆಟ್ಟಿ ಅವರನ್ನು ಆರಂಭದಲ್ಲಿ ಬರಿಯ ಹಾಸ್ಯದ ಕಥೆಗಳೇ ಹುಡುಕಿಕೊಂಡು ಬಂದವು. ಅವರ ನಿರ್ದೇಶನದ ಚಿತ್ರಗಳೂ ಹಾಸ್ಯ ಪ್ರಧಾನವೇ ಆಗಿರುತ್ತವೆ ಎಂದವರೂ ಉಂಟು. ಆದರೆ ‘ಗರುಡ ಗಮನ ವೃಷಭ ವಾಹನ’ದ ಮೂಲಕ ಅವರು ಈ ರೀತಿಯ ಹಣೆಪಟ್ಟಿ ಹಚ್ಚಿಬಿಡುವ ಅಪಾಯದಿಂದ ಹೊರಬಂದಿದ್ದಾರೆ. ಗಂಭೀರ ಗ್ಯಾಂಗ್‌ಸ್ಟರ್‌ ಸಿನಿಮಾ ಮಾಡಬಲ್ಲೆನೆಂದು ಸಾಬೀತುಪಡಿಸಿದ್ದಾರೆ. ಇದೀಗ ತಮ್ಮ ನಟನೆಯ ಹೊಸ ಸಿನಿಮಾ ‘ರೂಪಾಂತರ’ದಲ್ಲಿಯೂ ಅವರು ರೌಡಿಯ ಪಾತ್ರ ನಿರ್ವಹಿಸಿದ್ದಾರೆ. ಅದೂ ಅಪ್ಪಟ ಬೆಂಗಳೂರಿಗನ ಪಾತ್ರ ಇದಾಗಿರುವುದು ವಿಶೇಷ.

‘ಈ ಸಿನಿಮಾ ಗರುಡ ಗಮನದ ಸಮಯದಲ್ಲಿಯೇ ಮಾಡಿದ್ದು, ಈಗಾಗಲೇ ಚಿತ್ರೀಕರಣವೂ ಮುಗಿದಿದೆ. ‘ಗರುಡ ಗಮನ ವೃಷಭ ವಾಹನ’ ರೀತಿ ನನಗೆ ಖುಷಿ ಕೊಟ್ಟ ಪ್ರಾಜೆಕ್ಟ್ ಇದು. ಇಂಟ್ರೆಸ್ಟಿಂಗ್‌ ಕಥೆಯನ್ನು ಈ ಸಿನಿಮಾ ಹೊಂದಿದೆ. ಮಿಥಿಲೇಶ್‌ ಎಡವಲದ್‌ ಎಂಬುವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮನುಷ್ಯ ಬೇರೆ ಬೇರೆ ಸಂದರ್ಭಗಳಲ್ಲಿ ಬದಲಾಗುತ್ತಾನೆ. ಅಂತಹ ಒಂದು ಬದಲಾವಣೆಯ ಕಥೆ ಈ ಚಿತ್ರದಲ್ಲಿದೆ. ನಾನು ಇದರಲ್ಲಿ ಬೆಂಗಳೂರು ಮೂಲದ ರೌಡಿಯಾಗಿರುತ್ತೇನೆ. ನನ್ನನ್ನು ಬಿಟ್ಟರೆ ನಟಿಸಿರುವ ಹಲವರು ಹೊಸಬರು ಇದ್ದಾರೆ. ‘ಒಂದು ಮೊಟ್ಟೆಯ ಕಥೆ’ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಸುಹಾಸ್‌ ‘ರೂಪಾಂತರ’ಕ್ಕೂ ಹಣ ಹೂಡಿದ್ದಾರೆ’ ಎಂದಿದ್ದಾರೆ ರಾಜ್‌ ಬಿ. ಶೆಟ್ಟಿ. ಈ ಮೂಲಕ ಮಂಗಳೂರು ಕನ್ನಡ ಮಾತಾಡುವ ಪಾತ್ರಗಳಿಂದ ತೆರೆಯಲ್ಲಿ ಗಮನ ಸೆಳೆದಿರುವ ಅವರು ಆ ಚೌಕಟ್ಟಿನಿಂದಲೂ ಹೊರಬರುವ ತಯಾರಿ ನಡೆಸಿದ್ದಾರೆ.

ತಮಿಳಿಗೆ ಗರುಡ ಗಮನ
‘ಗರುಡ ಗಮನ ವೃಷಭ ವಾಹನ ಸಿನಿಮಾದ ನೆಪದಲ್ಲಿ ಸಿನಿಮಾ ಮಾರುಕಟ್ಟೆಯನ್ನು ಸ್ವಲ್ಪ ಎಕ್ಸ್‌ಪ್ಲೋರ್‌ ಮಾಡುವಂತಾಯಿತು. ತಮಿಳು ಭಾಷೆಗೆ ರಿಮೇಕ್‌ ಹಕ್ಕನ್ನು ಅಲ್ಲಿನ ಖ್ಯಾತ ನಿರ್ದೇಶಕ ಗೌತಮ್‌ ವಾಸುದೇವ್‌ ಮೆನನ್‌ ತೆಗೆದುಕೊಂಡಿದ್ದಾರೆ. ಉಳಿದ ಭಾಷೆಗಳದ್ದು ಮಾತುಕತೆಯಲ್ಲಿದೆ. ಸದ್ಯದಲ್ಲೆ ಅದು ಅಧಿಕೃತ ಆಗುತ್ತದೆ’ ಎಂದಿದ್ದಾರೆ ರಾಜ್‌ ಶೆಟ್ಟಿ. ‘ರೂಪಾಂತರ’ ಸಿನಿಮಾದ ಚಿತ್ರೀಕರಣ ಮುಗಿದು ಸಂಕಲನದ ಕೆಲಸ ನಡೆಯುತ್ತಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಬೇರೆ ಬೇರೆ ಊರುಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

ಓಟಿಟಿಯಲ್ಲಿ ರಿಲೀಸ್ ಆಗ್ತಿದೆ ರಾಜ್ ಬಿ ಶೆಟ್ಟಿ, ರಿಷಬ್ ಶೆಟ್ಟಿ ನಟನೆಯ ‘ಗರುಡ ಗಮನ ವೃಷಭ ವಾಹನ’ ಚಿತ್ರ

ಕೋಟ್‌:
‘ರೂಪಾಂತರ’ ಸಿನಿಮಾ ಬಗ್ಗೆ ನಾನು ಎಕ್ಸೈಟ್‌ ಆಗಿದ್ದೇನೆ. ರಾಜ್‌ ಬರೀ ಮಂಗಳೂರಿನ ಸಿನಿಮಾವನ್ನು ಮಾಡುತ್ತಾರೆ ಎನ್ನುವ ಮಾತಿದೆ. ಆದರೆ ಈ ಸಿನಿಮಾದಲ್ಲಿ ಅದಿಲ್ಲ. ಇದು ರಾಜ್ಯದ ಬೇರೆ ಬೇರೆ ಊರುಗಳಲ್ಲಿ ನಡೆಯುವ ಕಥೆ. ಜತೆಗೆ ನಾನು ಬೆಂಗಳೂರಿನ ರೌಡಿಯಾಗಿ ಕಾಣಿಸಿಕೊಂಡಿದ್ದೇನೆ.
– ರಾಜ್‌ ಬಿ ಶೆಟ್ಟಿ, ನಟ/ನಿರ್ದೇಶಕ

‘ಗರುಡ ಗಮನ ವೃಷಭ ವಾಹನ’; ಶಿವನ ಕೋಪತಾಪವನ್ನು ಆವಾಹಿಸಿಕೊಂಡಂತೆ ರಾಜ್ ಬಿ ಶೆಟ್ಟಿ ನಟನೆ



Read more

[wpas_products keywords=”deal of the day sale today offer all”]