Karnataka news paper

ರೈತರು ಸೇರಿದಂತೆ 8 ಮಂದಿಯನ್ನು ಬಲಿ ಪಡೆದ ಲಖೀಂಪುರ ಖೇರಿ ಹಿಂಸಾಚಾರ ‘ಉದ್ದೇಶಪೂರ್ವಕ’ ಕೃತ್ಯ: ಎಸ್‍ಐಟಿ


Source : Online Desk

ನವದೆಹಲಿ: ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣವು ನಿರ್ಲಕ್ಷ್ಯ ಅಥವಾ ನಿಷ್ಠುರತೆಯಿಂದ ನಡೆದುದಲ್ಲ. ಇದು ಯೋಜಿತ ಮತ್ತು ಉದ್ದೇಶಪೂರ್ವಕ ಕೃತ್ಯ ಎಂದು ಉತ್ತರ ಪ್ರದೇಶ ಪೊಲೀಸ್ ವಿಶೇಷ ತನಿಖಾ ತಂಡ(ಎಸ್‍ಐಟಿ) ಹೇಳಿದೆ.

ಪ್ರಕರಣದ ತನಿಖೆ ನಡೆಸಿದ ಎಸ್‍ಐಟಿ ತನಿಖಾಧಿಕಾರಿ ವಿಧ್ಯಾರಾಮ್ ದಿವಾಕರ್ ಈ ಘಟನೆಯ ಉದ್ದೇಶಪೂರ್ವಕವಾಗಿಯೇ ನಡೆದಿದೆ ಎಂದು ಸಾಬೀತುಪಡಿಸಿದ್ದಾರೆ.

ಇದನ್ನು ಓದಿ: ಲಖೀಂಪುರ ಪ್ರಕರಣ: ‘ನಿರೀಕ್ಷಿತ ಮಟ್ಟದ ತನಿಖೆಯಾಗಿಲ್ಲ’; ಉತ್ತರ ಪ್ರದೇಶ ವಿರುದ್ಧ ಸುಪ್ರೀಂ ತರಾಟೆ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗೆ ವಿಚಾರಣೆ ಹೊಣೆ

ಈ ಪ್ರಕರಣದಲ್ಲಿ ಬಾಗಿಯಾಗಿದ್ದ 13 ಆರೋಪಿಗಳ ವಿರುದ್ಧ ಹೊಸ ಸೆಕ್ಷನ್‍ಗಳನ್ನು ದಾಖಲಿಸಲು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಅವರ ಅಪರಾಧವನ್ನು ಕೊಲೆ ಯತ್ನದ ಆರೋಪದಡಿಯಲ್ಲಿ ಶಿಕ್ಷಾರ್ಹಗೊಳಿಸಲು ಎಸ್‍ಐಟಿ ಡಿಸೆಂಬರ್ 13ರಂದು ಅರ್ಜಿ ಸಲ್ಲಿಸಿತು.

ಐಪಿಸಿ ಸೆಕ್ಷನ್ 279, 338 ಮತ್ತು 304ಎ ಬದಲಿಗೆ ವಾರಂಟ್‍ನಲ್ಲಿ ಹೊಸ ಸೆಕ್ಷನ್‍ಗಳನ್ನು ಸೇರಿಸಲು ಎಸ್‍ಐಟಿ ತನಿಖಾಧಿಕಾರಿ ವಿಧ್ಯಾರಾಮ್ ದಿವಾಕರ್ ಕಳೆದ ವಾರ ಸಿಜೆಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಅಕ್ಟೋಬರ್ 3 ರಂದು, ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ಅವರು ಮೆರವಣಿಗೆ ಹೋಗುತ್ತಿದ್ದ ರೈತರ ಮೇಲೆ ಎಸ್ ಯುವಿ ಕಾರು ಹರಿಸಿದ ಪರಿಣಾಮ ಸ್ಥಳೀಯ ಪತ್ರಕರ್ತರೂ, ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದರು.

ಈ ಹಿಂಸಾಚಾರ ಕೃತ್ಯಕ್ಕೆ ಕಾರಣರಾದ ಆಶಿಶ್ ಮಿಶ್ರಾ, ಲುವ್ಕುಶ್, ಆಶಿಶ್ ಪಾಂಡೆ, ಶೇಖರ್ ಭಾರ್ತಿ, ಅಂಕಿತ್ ದಾಸ್, ಲತೀಫ್, ಶಿಶುಪಾಲ್, ನಂದನ್ ಸಿಂಗ್, ಸತ್ಯಂ ತ್ರಿಪಾಠಿ, ಸುಮಿತ್ ಜೈಸ್ವಾಲ್, ಧಮೇರ್ಂದ್ರ ಬಂಜಾರಾ, ರಿಂಕು ರಾಣಾ ಮತ್ತು ಉಲ್ಲಾಸ್ ತ್ರಿವೇದಿ ಅವರನ್ನು ಎಸ್‍ಐಟಿ ಬಂಧಿಸಿ ಲಖೀಂಪುರ ಕಾರಾಗೃಹದಲ್ಲಿ ಇರಿಸಲಾಗಿದೆ.

ಏತನ್ಮಧ್ಯೆ, ಅಲಹಾಬಾದ್ ಹೈಕೋರ್ಟ್‍ನ ಲಖನೌ ಪೀಠವು ಆಶಿಶ್ ಮಿಶ್ರಾ ಅವರ ಜಾಮೀನು ಅರ್ಜಿಗೆ ಪ್ರತಿ-ಅಫಿಡವಿಟ್ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಎರಡು ವಾರಗಳ ಕಾಲಾವಕಾಶ ನೀಡಿದೆ.



Read more