Karnataka news paper

ಕೊಪ್ಪಳದಲ್ಲಿ ನಲುಗಿದ ಕೂದಲು ಉದ್ಯಮ; ರಫ್ತಿಗೆ ಧಕ್ಕೆ, ಉದ್ಯೋಗಕ್ಕೂ ಕುತ್ತು!


ಹೈಲೈಟ್ಸ್‌:

  • ಕೋವಿಡ್‌ ಸೋಂಕಿನಿಂದ ಕೂದಲು ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ
  • ಚೀನಾ, ಅಮೆರಿಕ, ಯುರೋಪ್‌ ರಾಷ್ಟ್ರಗಳಲ್ಲಿ ಕೂದಲು ಕೇಳುವವರೇ ಇಲ್ಲದಂತಾಗಿದೆ
  • ಖರೀದಿದಾರರು ಖರೀದಿಗೆ ಮುಂದೆ ಬರುತ್ತಿಲ್ಲ. ಶೇ.80ರಷ್ಟು ಕೂದಲು ಉದ್ಯಮದ ಮೇಲೆ ಹೊಡೆತ ಬಿದ್ದಿದೆ
  • ಸಂಸ್ಕರಿಸಿದ ಕೂದಲು ವಿದೇಶಕ್ಕೆ ರಫ್ತು ಆಗುತ್ತಿಲ್ಲ ಎಂದ ಮೇಲೆ ಅದನ್ನು ಸಂಸ್ಕರಿಸುವ ಘಟಕಗಳ ಮೇಲೆ ದುಷ್ಪರಿಣಾಮ ಬೀರಿದೆ

ಗಂಗಾಧರ ಬಂಡಿಹಾಳ ಕೊಪ್ಪಳ
ಕೊಪ್ಪಳ: ಕೋವಿಡ್‌ ಸೋಂಕಿನಿಂದ ಕೂದಲು ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಸಾವಿರಾರು ಕುಟುಂಬಗಳು ಬೀದಿಗೆ ಬಂದಿವೆ. ಸಮೀಪದ ಭಾಗ್ಯನಗರ ಪಟ್ಟಣದಲ್ಲಿ ಕೂದಲು ಉದ್ಯಮವೇ ಪ್ರಮುಖ ಉದ್ಯೋಗವಾಗಿದ್ದು, ದೇಶ, ವಿದೇಶಕ್ಕೂ ರಫ್ತು ಆಗುತ್ತಿದೆ. ಪಟ್ಟಣದ ಶೇ.60 ರಷ್ಟು ಕುಟುಂಬಗಳು ಕೂದಲು ಉದ್ಯಮವನ್ನೇ ನಂಬಿ ಜೀವನ ಸಾಗಿಸುತ್ತಿವೆ. ಬೆಳಗ್ಗೆ ಎದ್ದ ತಕ್ಷಣವೇ ಕೂದಲು ತೆಗೆದುಕೊಂಡು ಹೋಗಿ ಹಳ್ಳದಲ್ಲಿ ಸ್ವಚ್ಛಗೊಳಿಸಿ, ಹಿಂಜುವ ಕಾಯಕದಲ್ಲಿ ತೊಡಗುತ್ತಾರೆ. ಸಂಸ್ಕರಿಸಿದ ಕೂದಲು ಸಂಗ್ರಹಿಸಿ ವಿದೇಶಗಳಿಗೆ ಕಳುಹಿಸುತ್ತಾರೆ. ಆದರೆ, ಕಳೆದ ವರ್ಷದಿಂದ ಕೋವಿಡ್‌ ಪರಿಣಾಮ ಕೂದಲು ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಉದ್ಯಮಕ್ಕೆ ಹೊಡೆತ
ಚೀನಾ, ಅಮೆರಿಕ, ಯುರೋಪ್‌ ರಾಷ್ಟ್ರಗಳಲ್ಲಿ ಕೂದಲು ಕೇಳುವವರೇ ಇಲ್ಲದಂತಾಗಿದೆ. ಜನರು ಹೊರಗೆ ಬಾರದಿರುವುದರಿಂದ ಅಲಂಕಾರಿಕ ವಸ್ತುಗಳನ್ನು ಹೆಚ್ಚಾಗಿ ಉಪಯೋಗಿಸುತ್ತಿಲ್ಲ. ಅವಶ್ಯಕ ವಸ್ತುಗಳಾದರೆ ಜನರು ಎಲ್ಲಿಯಾದರೂ ಖರೀದಿಸುತ್ತಾರೆ. ಆದರೆ, ಸೌಂದರ್ಯವರ್ಧಕ ವಸ್ತು ಆಗಿರುವುದರಿಂದ ಹೊರಗಡೆ ಹಾಗೂ ವಿಶೇಷ ಸಂದರ್ಭದಲ್ಲಿ ಬಳಸುತ್ತಾರೆ. ಈ ಹಿನ್ನೆಲೆಯಲ್ಲಿ ವಿದೇಶದಲ್ಲೂ ಕೂದಲು ಉದ್ಯಮಕ್ಕೆ ತೀವ್ರ ಹೊಡೆತ ಬಿದ್ದಿದೆ ಎನ್ನುತ್ತಾರೆ ವ್ಯಾಪಾರಿಗಳು.

ಮಾಸಿಕ ಕನಿಷ್ಠ 20 ರಿಂದ 25 ಕೆ.ಜಿ. ಸಂಸ್ಕರಿಸಿದ ಕೂದಲು ಹೊರಗೆ ಕಳುಹಿಸಲಾಗುತ್ತಿತ್ತು. ಆದರೆ, ಪ್ರಸ್ತುತ ಬರೀ 2-3 ಕೆ.ಜಿ. ಹೋಗಬೇಕೆಂದರೆ ಹೆಚ್ಚಾದಂತಾಗಿದೆ. ಖರೀದಿದಾರರು ಖರೀದಿಗೆ ಮುಂದೆ ಬರುತ್ತಿಲ್ಲ. ಶೇ.80 ರಷ್ಟು ಕೂದಲು ಉದ್ಯಮದ ಮೇಲೆ ಹೊಡೆತ ಬಿದ್ದಿದೆ.

ಉದ್ಯೋಗ ಕಳೆದುಕೊಳ್ಳುವ ಭೀತಿ
ಸಂಸ್ಕರಿಸಿದ ಕೂದಲು ವಿದೇಶಕ್ಕೆ ರಫ್ತು ಆಗುತ್ತಿಲ್ಲ ಎಂದ ಮೇಲೆ ಅದನ್ನು ಸಂಸ್ಕರಿಸುವ ಘಟಕಗಳ ಮೇಲೆ ದುಷ್ಪರಿಣಾಮ ಬೀರಿದೆ. ಸಾವಿರಾರು ಕಾರ್ಮಿಕರು ಉದ್ಯೋಗ ಕಳೆದುಕೊಳ್ಳಬೇಕಾಗಿದೆ. ಈಗಾಗಲೇ ಸಂಸ್ಕರಿಸಿದ ಸಾವಿರಾರು ಕೆ.ಜಿ. ಕೂದಲು ದಾಸ್ತಾನು ಕೊಠಡಿಯಲ್ಲಿ ಕೊಳೆಯುತ್ತಿದೆ. ಆದ್ದರಿಂದ ಹೆಚ್ಚುವರಿಯಾಗಿ ಸಂಸ್ಕರಿಸಿದ ಕೂದಲು ಸಂಗ್ರಹಿಸಲು ಸ್ಥಳವಿಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರು ಕೆಲಸ ಕಳೆದುಕೊಳ್ಳುವುದು ಅನಿವಾರ್ಯವಾಗಿದೆ.
ಇದೇ ಕಾರಣಕ್ಕೆ ಪುರುಷರಲ್ಲಿ ಕೂದಲು ಉದುರುವುದು! ಪರಿಹಾರ ಇಲ್ಲಿದೆ ನೋಡಿ…

ಉದ್ಯಮ ನಶಿಸುವ ಸಾಧ್ಯತೆ
ಸುಮಾರು ಸಾವಿರಕ್ಕೂ ಅಧಿಕ ಕಾರ್ಮಿಕ ಕುಟುಂಬಗಳು ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗ ಕಳೆದುಕೊಂಡಿವೆ. ಒಂದು ಕಾಲದಲ್ಲಿ ತೀರ ಉತ್ತುಂಗಕ್ಕೆ ಏರಿದ್ದ ಕೂದಲು ಉದ್ಯಮ, ಈಗಿನ ಸನ್ನಿವೇಶದಲ್ಲಿ ಏನೇನೂ ಉಳಿದಿಲ್ಲ. ಕೊರೊನಾ ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದೊಂದು ದಿನ ಕೂದಲು ಉದ್ಯಮ ಸಂಪೂರ್ಣ ನೆಲ ಕಚ್ಚಲಿದೆ. ಕೂದಲು ಸಂಸ್ಕರಣ ಘಟಕಗಳಿಗೆ ಬೀಗ ಜಡಿಯುವ ಸ್ಥಿತಿ ಬರಬಹುದಾಗಿದೆ. ಅಷ್ಟಿಷ್ಟು ಕೆಲಸ ಮಾಡುತ್ತಿರುವ ಇನ್ನೂ ಸಾವಿರಾರು ಕುಟುಂಬಗಳು ಅನ್ಯ ಉದ್ಯೋಗದತ್ತ ವಾಲಬೇಕಿದೆ. ಈಗಲೇ ನೂರಾರು ಕುಟುಂಬಗಳು ಕೂದಲು ಸಂಸ್ಕರಣೆ ಬಿಟ್ಟು ಹೋಟೆಲ್‌, ಡಬ್ಬಿ ಅಂಗಡಿ, ಪಾನ್‌ಶಾಪ್‌ ಸೇರಿದಂತೆ ನಾನಾ ವ್ಯಾಪಾರ ಶುರು ಮಾಡಿದ್ದಾರೆ ಎಂದು ಕಾರ್ಮಿಕರು ಹೇಳುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರಕಾರ ಉದ್ಯಮಕ್ಕೆ ಪ್ರೋತ್ಸಾಹ ನೀಡಬೇಕಾಗಿದೆ. ತೆರಿಗೆ ವಿನಾಯಿತಿ ಘೋಷಣೆ ಸೇರಿದಂತೆ ಇತರ ಸೌಲಭ್ಯ ಕೆಲ ಕಾಲ ಒದಗಿಸಿದರೆ ಸ್ವಲ್ಪ ದಿನವಾದರೂ ಉಳಿದುಕೊಳ್ಳಬಹುದಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಭಾಗ್ಯ ನಗರದಲ್ಲಿ ಸಂಸ್ಕರಣೆ ಘಟಕ

ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕೊಪ್ಪಳ ತಾಲೂಕಿನ ಭಾಗ್ಯ ನಗರದಲ್ಲಿ ಖಾಸಗಿ ಕೂದಲು ಸಂಸ್ಕರಣೆ ಘಟಕ ಸ್ಥಾಪಿಸಲಾಗಿದೆ. ಇಲ್ಲಿ ಬಿಟ್ಟರೆ ಬೇರೆ ಯಾವ ಕಡೆಯೂ ಸಂಸ್ಕರಣ ಘಟಕಗಳಿಲ್ಲ, ರಾಜ್ಯಾದ್ಯಂತ ಸಂಗ್ರಹಿಸಿದ ಕೂದಲನ್ನು ಖರೀದಿದಾರರಿಂದ ಕೊಪ್ಪಳಕ್ಕೆ ಸರಬರಾಜು ಮಾಡಲಾಗುತ್ತಿದೆ. ನಂತರ ಕೊಪ್ಪಳದಲ್ಲಿ ಸಂಗ್ರಹಿಸಿದ ಕೂದಲನ್ನು ಸಂಸ್ಕರಿಸಿ ದೇಶ- ವಿದೇಶಗಳಿಗೆ ರಫ್ತು ಮಾಡುವ ಪ್ರಕ್ರಿಯೆ ನಡೆದಿದೆ.
ಕೂದಲಿನ ಆರೋಗ್ಯಕರ ಬೆಳವಣಿಗೆಗೆ ನೀವು ಬಳಕೆ ಮಾಡಬೇಕಾದ ಅತ್ಯುತ್ತಮ ಶ್ಯಾಂಪೂಗಳು
ಕೂದಲು ಸಂಗ್ರಹ ಹೀಗೆ
ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಮಹಿಳೆಯರು ಮನೆಯಲ್ಲಿ ತಲೆ ಬಾಚಿಕೊಳ್ಳುವ ವೇಳೆ ಉದುರುವ ಕೂದಲು ಸಂಗ್ರಹಿಸಿಡುವುದು ವಾಡಿಕೆ. ಹಳ್ಳಿಗಳಲ್ಲಿ ಹಿಂದೆ ಅಲೆಮಾರಿ ಕೊರವ, ಕೊರಚ, ಕೊರಮ ಸಮುದಾಯದ ಹೆಣ್ಣು ಮಕ್ಕಳು ಅಲೆದಾಡಿ ಊರ ಹೆಣ್ಣು ಮಕ್ಕಳಿಗೆ ಪ್ಲಾಸ್ಟಿಕ್‌ ಇಲ್ಲವೇ ಅಲ್ಯುಮಿನಿಯಂ ವಸ್ತುಗಳನ್ನು ಕೊಟ್ಟು ಕೂದಲು ಖರೀದಿಸಿ ನಂತರ ಕೊಪ್ಪಳ ಸಂಸ್ಕರಣ ಘಟಕಕ್ಕೆ ಪೂರೈಕೆ ಮಾಡುತ್ತಿದ್ದರು. ಈಗ ನಾನಾ ಅಲೆಮಾರಿ ಸಮುದಾಯಗಳ ಹೆಣ್ಣು ಮಕ್ಕಳು ಕೂದಲು ಸಂಗ್ರಹಿಸಿ ಉಪಜೀವನ ಕಟ್ಟಿಕೊಂಡಿದ್ದಾರೆ. ರಾಜ್ಯಾದ್ಯಂತ ಸಂಗ್ರಹಿಸಿದ ಕೂದಲನ್ನು ಭಾಗ್ಯ ನಗರದ ಕೂದಲು ಸಂಸ್ಕರಿಸುವ ಕುಟುಂಬಗಳಿಗೆ ಹಣಕ್ಕಾಗಿ ಮಾರಾಟ ಮಾಡುತ್ತಿದ್ದಾರೆ. ಈ ರೀತಿ ಸಂಗ್ರಹಿಸಿದ ಕೂದಲು ಸಂಸ್ಕರಿಸಿ ಬೇರೆಡೆ ಕಳುಹಿಸುವ ಪರಿಪಾಠವಿದೆ.

ಕೊರೊನಾದಿಂದ ಕೂದಲು ಉದ್ಯಮದ ಮೇಲೆ ಭಾರಿ ಹೊಡೆತ ಬಿದ್ದಿದೆ. ವಿದೇಶಕ್ಕೆ ರಫ್ತು ಆಗದಿರುವುದರಿಂದ ಸಾವಿರಾರು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಸರಕಾರ ತೆರಿಗೆ ವಿನಾಯಿತಿ ನೀಡಿದರೆ ಇನ್ನೂ ಸ್ವಲ್ಪ ದಿನ ಉದ್ಯಮ ಉಳಿಸಿಕೊಳ್ಳಬಹುದಾಗಿದೆ.
ಶ್ರೀನಿವಾಸ್‌ ಗುಪ್ತಾ, ಕೂದಲು ಉದ್ಯಮಿ, ಭಾಗ್ಯನಗರ (ಕೊಪ್ಪಳ)



Read more

[wpas_products keywords=”deal of the day sale today offer all”]