The New Indian Express
ಬೆಂಗಳೂರು: ರಾಜ್ಯಕ್ಕೆ ಭ್ರಷ್ಟಾಚಾರದ ಕಾವಲುನಾಯಿ ಲೋಕಾಯುಕ್ತ ಕಚೇರಿ. ಲೋಕಾಯುಕ್ತ ನ್ಯಾಯಮೂರ್ತಿಗಳಾದ ಪಿ ವಿಶ್ವನಾಥ ಶೆಟ್ಟರು ನಿವೃತ್ತಿಯ ಹೊಸ್ತಿಲಿನಲ್ಲಿದ್ದಾರೆ. ಕಚೇರಿಯಿಂದ ನಿರ್ಗಮಿಸುವ ಮುನ್ನ ಅವರು ಮಹತ್ವದ ಕೆಲಸವನ್ನು ಮಾಡುವ ಉಮೇದಿನಲ್ಲಿದ್ದಾರೆ. ಅದು ಕಳೆದ ಐದು ವರ್ಷಗಳಿಂದ ಬಾಕಿ ಉಳಿದಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮಂಜೂರಾತಿ ಕೋರಿ ತಾವು ಸಲ್ಲಿಸಿದ್ದ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲು ರಾಜ್ಯ ಸರ್ಕಾರಕ್ಕೆ ಆದೇಶ ನೀಡಬೇಕೆಂದು ಹೈಕೋರ್ಟ್ ಕದತಟ್ಟುವುದು.
ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ಲೋಕಾಯುಕ್ತ ನ್ಯಾಯಮೂರ್ತಿಗಳು ಲೋಕಾಯುಕ್ತ ರಿಜಿಸ್ಟ್ರಿಗಳಿಗೆ ಹೈಕೋರ್ಟ್ ಮೊರೆಹೋಗುವ ಕೆಲಸಕ್ಕೆ ಚಾಲನೆ ನೀಡಬೇಕೆಂದು ಸೂಚನೆ ನಿರ್ದೇಶನ ನೀಡಿದ್ದಾರೆ. ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಳ್ಳುವ ಸಂದರ್ಭದಲ್ಲಿ ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಲೋಕಾಯುಕ್ತ ಇಲಾಖೆಗೆ ಉತ್ತಮ ಇಮೇಜ್ ನ್ನು ಸೃಷ್ಟಿಸಲು ಅವರು ಪ್ರಯತ್ನಿಸಿದ್ದರು. ಭ್ರಷ್ಠಾಚಾರಕ್ಕೆ ಮುಕ್ತಿ ಹಾಡಲು ಸಾಕಷ್ಟು ಪ್ರಯತ್ನಿಸಿದ್ದರು.
ರಾಜ್ಯಾದ್ಯಂತ ಸಾರ್ವಜನಿಕ ಹಿತಾಸಕ್ತಿಯ 300ಕ್ಕೂ ಹೆಚ್ಚು ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದರು. ಇದರಲ್ಲಿ ಕೆರೆಗಳ ಸಮೀಕ್ಷೆ ಮತ್ತು ಒತ್ತುವರಿ ತೆರವು, ಅಕ್ರಮ ಮರಳು ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆ, ಶಾಲಾ-ಕಾಲೇಜುಗಳಿಗೆ ಮೂಲಸೌಕರ್ಯ, ಭಿಕ್ಷುಕರ ಪುನರ್ವಸತಿ ಕೇಂದ್ರದ ನಿವಾಸಿಗಳಿಗೆ ಕೈದಿಗಳಿಗೆ ಸಮಾನವಾದ ವೇತನ, ಸುಧಾರಣೆಗಳು ಸೇರಿವೆ. ಕೇಂದ್ರ ಕಾರಾಗೃಹದಲ್ಲಿ, ಹೊರಗುತ್ತಿಗೆ ಏಜೆನ್ಸಿಗಳ ಮೂಲಕ ನೇಮಕಗೊಂಡ ನೌಕರರಿಗೆ ವೇತನ ಮತ್ತು ಇತರ ಸೌಲಭ್ಯಗಳ ಪಾವತಿಯಲ್ಲಿ ಅಕ್ರಮಗಳು, ಗಾಯಗೊಂಡ ಸೈನಿಕರು, ಹುತಾತ್ಮರ ವಿಧವೆಯರಿಗೆ ಭೂಮಿ ಮತ್ತು ನಿವೇಶನ ಮಂಜೂರು, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಕ್ರಮ ರಚನೆ ಮತ್ತು ನಿವೇಶನ ಹಂಚಿಕೆ ಇತ್ಯಾದಿ ಪ್ರಕರಣಗಳನ್ನು ಸ್ವಯಂ ಪ್ರೇರಿತವಾಗಿ ತನಿಖೆಗೆ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಕೈಗೆತ್ತಿಕೊಂಡಿದ್ದರು.
ಲೋಕಾಯುಕ್ತ ನ್ಯಾಯಮೂರ್ತಿ ಶೆಟ್ಟಿ ಅವರು 7 ಸಾವಿರಕ್ಕೂ ಹೆಚ್ಚು ದೂರುಗಳನ್ನು ತಮ್ಮ 5 ವರ್ಷಗಳ ಅಧಿಕಾರಾವಧಿಯಲ್ಲಿ ವಿಲೇವಾರಿ ಮಾಡಿದ್ದಾರೆ. ತಪ್ಪಿತಸ್ಥ ಸಾರ್ವಜನಿಕ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ 115 ವಿಚಾರಣೆಗಳನ್ನು ನಡೆಸಿದ್ದಾರೆ. 77 ಪ್ರಕರಣಗಳಲ್ಲಿ ವರದಿ ಸಲ್ಲಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಈ ಪೈಕಿ ವಿಕಾಸ ಸೌಧದಲ್ಲಿ ಕಳಪೆ ಕಾಮಗಾರಿಯೂ ಸೇರಿದೆ.
ಜಿಲ್ಲಾ ನ್ಯಾಯಾಧೀಶರ ಸಮಾನ ಹುದ್ದೆಯ ಒಂಬತ್ತು ಹೆಚ್ಚುವರಿ ವಿಚಾರಣಾ ಅಧಿಕಾರಿಗಳನ್ನು ಮತ್ತು ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಹಾಯಕ ಸಿಬ್ಬಂದಿಯನ್ನು ರಾಜ್ಯ ಸರ್ಕಾರ ಒದಗಿಸಿದ್ದರಿಂದ ಇದೆಲ್ಲವೂ ಸಾಧ್ಯವಾಯಿತು. ಲೋಕಾಯುಕ್ತ ಸಂಸ್ಥೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಬ್ಲಾಕ್ ಅನ್ನು ಬಿಟ್ಟುಕೊಡುವ ಮೂಲಕ ಸರ್ಕಾರ ಹೆಚ್ಚುವರಿ ಜಾಗವನ್ನು ಒದಗಿಸಿದೆ ಎಂದು ನಿವೃತ್ತಿ ಹೊಸ್ತಿಲಿನಲ್ಲಿ ನ್ಯಾಯಮೂರ್ತಿ ಶೆಟ್ಟಿ ಹೇಳಿದ್ದಾರೆ.
ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ 53 (ಎ) ಗೆ ತಿದ್ದುಪಡಿಯನ್ನು ತರುವಲ್ಲಿ ನ್ಯಾ.ಶೆಟ್ಟಿ ಪಾತ್ರ ಮಹತ್ವದ್ದು, ಅದೇ ರೀತಿ ಕಾರ್ಪೊರೇಟರ್ಗಳು, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರ ವಿಷಯದಲ್ಲಿಯೂ ಕಾನೂನು ಮಾರ್ಪಾಡು ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದರು. ಶಾಸಕರು/ಎಂಎಲ್ಸಿಗಳನ್ನು ಹೊರತುಪಡಿಸಿ ಕಾರ್ಪೊರೇಟರ್ಗಳು, ಗ್ರಾ.ಪಂ, ತಾ.ಪಂ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರಗಳನ್ನು ಸಲ್ಲಿಸುವಾಗ, ನ್ಯಾಯಮೂರ್ತಿ ಶೆಟ್ಟಿ ಅವರು ಕಾನೂನನ್ನು ಮಾರ್ಪಡಿಸಲು ಸರ್ಕಾರದ ಮನವೊಲಿಸಿದ್ದರು.
ನಿವೃತ್ತಿ ಹೊಸ್ತಿಲಿನಲ್ಲಿ ನ್ಯಾ.ಶೆಟ್ಟಿ ಹೇಳುವುದೇನು?:ಲೋಕಾಯುಕ್ತನಾಗಿ ನನ್ನ ಕೆಲಸ ನನಗೆ ತೃಪ್ತಿ ತಂದಿದೆ. ಹೈಕೋರ್ಟ್ ನ್ಯಾಯಮೂರ್ತಿಯಾಗಿ ನಿವೃತ್ತಿ ಹೊಂದಿದ ನಂತರ ಸುಪ್ರೀಂ ಕೋರ್ಟ್ನ ಹಿರಿಯ ವಕೀಲರಾಗಿ ಅಭ್ಯಾಸ ಮಾಡಿದ ನಂತರ ನಾನು ವಿಶ್ರಾಂತ ಸ್ಥಿತಿಯಲ್ಲಿದ್ದೆ. ಆಗ ಕರ್ನಾಟಕದ ಜನರಿಗೆ ಸೇವೆ ಸಲ್ಲಿಸಲು ದೇವರು ಕಳುಹಿಸಿದ ಅವಕಾಶ ಈ ಲೋಕಾಯುಕ್ತ ಹುದ್ದೆ ಎಂದು ನಾನು ಪರಿಗಣಿಸುತ್ತೇನೆ. ನನ್ನ ಕರ್ತವ್ಯ ನಿರ್ವಹಣೆಯಲ್ಲಿ ಲೋಕಾಯುಕ್ತ ಹಾಗೂ ಸರ್ಕಾರದೊಳಗಿನ ಅಧಿಕಾರಿಗಳಿಂದ ನನಗೆ ಅತ್ಯುತ್ತಮ ಸಹಕಾರ ಸಿಕ್ಕಿದೆ. ಕೋವಿಡ್ ಪರಿಸ್ಥಿತಿಯಿಂದಾಗಿ ನನ್ನ ಹಲವು ಕೆಲಸಗಳಿಗೆ ಅಡಚಣೆಯುಂಟಾಯಿತು, ಇಲ್ಲದಿದ್ದರೆ ಇನ್ನೂ ಹೆಚ್ಚು ಕೆಲಸ ಮಾಡುತ್ತಿದ್ದೆ ಎನ್ನುತ್ತಾರೆ.
ಕಚೇರಿಯಲ್ಲಿ ಕೊಲೆಗೆ ಯತ್ನ: ಕೆಲ ವರ್ಷಗಳ ಹಿಂದೆ ಕಛೇರಿಯಲ್ಲಿ ತಮ್ಮ ಮೇಲೆ ಕೊಲೆ ಯತ್ನ ನಡೆದಿದದ್ದರ ಬಗ್ಗೆ ಮಾತನಾಡಿದ ನ್ಯಾಯಮೂರ್ತಿಗಳು ಪ್ರಕರಣ ವಿಚಾರಣೆ ಹಂತದಲ್ಲಿದೆ. ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ ನನಗೆ ಯಾವುದೇ ವಿಷಾದವಿಲ್ಲ. ಆದರೆ ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆಯಾದ ನಂತರ ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿ ತಪ್ಪಿತಸ್ಥ ಸಾರ್ವಜನಿಕ ಸೇವಕರಿಗೆ ಕಾನೂನು ಕ್ರಮ ಜರುಗಿಸುವ ಅಧಿಕಾರವನ್ನು ಸರ್ಕಾರ ಲೋಕಾಯುಕ್ತದಿಂದ ಕಸಿದುಕೊಂಡಿರುವುದಕ್ಕೆ ಬೇಸರವಿದೆ ಎಂದು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಸರ್ಕಾರದ ಆಡಳಿತದಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ನನ್ನ ಮನಸ್ಸಿನಲ್ಲಿ ಸ್ಪಷ್ಟವಾದ ಗ್ರಹಿಕೆ ಮತ್ತು ಮಾರ್ಗಸೂಚಿ ಇತ್ತು, ಲೋಕಾಯುಕ್ತ ದುರಾಡಳಿತಕ್ಕೆ ಕಡಿಮೆ ಅವಕಾಶವನ್ನು ನೀಡುತ್ತದೆ.ಭ್ರಷ್ಟಾಚಾರ ವಿರೋಧಿ ಅಧಿಕಾರವನ್ನು ಲೋಕಾಯುಕ್ತಕ್ಕೆ ನೀಡಿ ಬಲಪಡಿಸಿದರೆ ಖಂಡಿತವಾಗಿಯೂ ಸರ್ಕಾರದ ಆಡಳಿತದಲ್ಲಿ ಪ್ರಾಮಾಣಿಕತೆ ಮತ್ತು ದಕ್ಷತೆ ಬರುತ್ತದೆ ಎಂದು ನಾನು ನಂಬುತ್ತೇನೆ ಎನ್ನುತ್ತಾರೆ ನ್ಯಾ.ವಿಶ್ವನಾಥ ಶೆಟ್ಟಿ.
Read more
[wpas_products keywords=”deal of the day”]