ಶಾಸಕರ ಅನಿವಾರ್ಯತೆ ನನಗೂ ಅರ್ಥವಾಗುತ್ತದೆ. ಆದರೆ ಅನಿವಾರ್ಯತೆ ಎಲ್ಲದಕ್ಕೂ ಅನ್ವಯಿಸದೆ, ಸದನಕ್ಕೆ ಹಾಜರಾಗಬೇಕು.
ಊರಿನಲ್ಲಿ ಇರುವವರು ಇದನ್ನು ಪರಿಗಣಿಸಿ ಹೆಚ್ಚಿನ ಸಂಖ್ಯೆಯಲ್ಲಿ ಅಧಿವೇಶನಕ್ಕೆ ಬರಬೇಕು. ವರ್ಷದಲ್ಲಿ ಮೂವತ್ತು, ನಲವತ್ತು ದಿನ ನಡೆಸುವ ಅಧಿವೇಶನದಲ್ಲಿ ಹಾಜರಾತಿ ವಿಚಾರವಾಗಿ ನಿರ್ಲಕ್ಷ್ಯ ತೋರುವುದು ಸಂಸದೀಯ ವ್ಯವಸ್ಥೆಗೆ ಶೋಭೆ ತರುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ರೈಲು ವಿಳಂಬದಿಂದ ಪರೀಕ್ಷೆಗೆ ವಿದ್ಯಾರ್ಥಿಗಳು ಗೈರು, ಸದನದಲ್ಲಿ ಪ್ರಸ್ತಾಪ
ಹಾಸನ – ಸೊಲ್ಲಾಪುರ ಸೂಪರ್ ಫಾಸ್ಟ್ ರೈಲು ನಿಗದಿತ ಸಮಯಕ್ಕಿಂತ ವಿಳಂಬವಾಗಿ ಆಗಮಿಸಿದ್ದರಿಂದ ಸಹಾಯಕ ಇಂಜಿನಿಯರಿಂಗ್ ಪರೀಕ್ಷೆಗೆ ವಿದ್ಯಾರ್ಥಿಗಳು ಗೈರಾದ ವಿಚಾರವಾಗಿ ಸದನದಲ್ಲಿ ಚರ್ಚೆ ನಡೆಯಿತು. ಶೂನ್ಯವೇಳೆಯಲ್ಲಿ ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ವಿಚಾರ ಪ್ರಸ್ತಾಪ ಮಾಡಿದರು. ಇದಕ್ಕೆ ಪ್ರಿಯಾಂಕ್ ಖರ್ಗೆ, ಯು.ಟಿ. ಖಾದರ್ ಹಾಗೂ ಡಾ. ಅಜಯ್ ಸಿಂಗ್ ಧ್ವನಿಗೂಡಿಸಿದರು.
ಹತ್ತು ಗಂಟೆಗೆ ಪರೀಕ್ಷೆ ನಡೆಯಬೇಕಿತ್ತು. ಆದರೆ ರೈಲು ವಿಳಂಬದಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ತಲುಪಲು ತಡವಾಗಿದೆ. ಅವರಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರ ನೀಡಿದ ಸಚಿವ ಜೆ.ಸಿ. ಮಾಧುಸ್ವಾಮಿ, ಈ ವಿಚಾರವಾಗಿ ಮಕ್ಕಳು ಫೋನ್ ಮಾಡಿ ಹೇಳಿದ್ದಾರೆ. ನಾನು ಹಾಗೂ ಸಚಿವ ಸಿ.ಸಿ. ಪಾಟೀಲ್ ತಕ್ಷಣ ರಿಯಾಕ್ಟ್ ಮಾಡಿದ್ದೇವೆ. ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ. ಗೈರು ಆದವರಿಗೆ ಮತ್ತೊಂದು ಪರೀಕ್ಷೆ ಬರೆಯಲು ಅವಕಾಶ ನೀಡಲು ಸೂಚನೆ ನೀಡಲಾಗುವುದು ಎಂದರು.
ಆದರೆ ರೈಲು ವಿಳಂಬದಿಂದ ಮಧ್ಯಾಹ್ನದ ನಂತರವೂ ಪರೀಕ್ಷೆಗೆ ತಲುಪಲು ಸಾಧ್ಯವಿಲ್ಲ. ಮಧ್ಯಾಹ್ನದ ನಂತರದ ಪರೀಕ್ಷೆಗೂ ತಲುಪಲು ವಿದ್ಯಾರ್ಥಿಗಳಿಗೆ ಸಾಧ್ಯವಿಲ್ಲ ಎಂಬ ಶಾಸಕರ ಮನವಿಗೆ ಸ್ಪಂದಿಸಿದ ಮಾಧುಸ್ವಾಮಿ, ರೈಲು ತಡವಾಗಿ ಮಧ್ಯಾಹ್ನದ ನಂತರದ ಪರೀಕ್ಷೆಗೂ ವಿದ್ಯಾರ್ಥಿಗಳು ಗೈರಾದರೆ ಮತ್ತೊಮ್ಮೆ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.