Karnataka news paper

ವಿಷ ಸೇವಿಸಿ ಬದುಕುಳಿದಿದ್ದ ಯುವಕ ಎರಡು ದಿನಗಳ ಬಳಿಕ ಸಾವು: ಮರಣೋತ್ತರ ಪರೀಕ್ಷೆ ನಡೆಸದೇ ಸತಾಯಿಸಿದ ವೈದ್ಯರು..!


ಹೈಲೈಟ್ಸ್‌:

  • ಜೊಯಿಡಾ ತಾಲ್ಲೂಕಿನ ಕುಂಬಾರ ವಾಡ ನಿವಾಸಿ 24 ವರ್ಷದ ಸಂತೋಷ್ ಗಾಂವ್ಡೇಕರ್
  • ಗೋವಾದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಸಂತೋಷ್
  • ಜನವರಿ 16ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ

ಉತ್ತರ ಕನ್ನಡ: ವಿಷ ಸೇವಿಸಿಯೂ ಜೀವನ್ಮರಣ ಹೋರಾಟ ನಡೆಸಿ ಚಿಕಿತ್ಸೆಯಿಂದಾಗಿ ಬದುಕುಳಿದಿದ್ದ ಯುವಕ, ಎರಡು ದಿನಗಳ ಬಳಿಕ ಮತ್ತೆ ಆಸ್ಪತ್ರೆ ಸೇರಿ ಕೊನೆಯುಸಿರೆಳೆದಿದ್ದಾನೆ. ಈ ನಡುವೆ 24 ಗಂಟೆ ಕಳೆದರೂ ಯುವಕನ ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನೂ ನಡೆಸದೇ, ಕುಟುಂಬಸ್ಥರಿಗೆ ಮೃತ ದೇಹವನ್ನೂ ಹಸ್ತಾಂತರಿಸಿದೆ ಸತಾಯಿಸಿರುವ ಅಮಾನವೀಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ಮೃತದೇಹಕ್ಕಾಗಿ ಮೃತನ ಕುಟುಂಬಸ್ಥರು ಆಸ್ಪತ್ರೆಯ ಆವರಣದಲ್ಲೇ ರಾತ್ರಿ ಕಳೆದಿರುವ ಮನ ಕಲಕುವ ಘಟನೆ ನಡೆದಿದೆ.

ಜೊಯಿಡಾ ತಾಲ್ಲೂಕಿನ ಕುಂಬಾರ ವಾಡ ನಿವಾಸಿ, 24 ವರ್ಷದ ಸಂತೋಷ್ ಗಾಂವ್ಡೇಕರ್ ಗೋವಾದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಅದ್ಯಾವುದೋ ಕಾರಣಕ್ಕೆ ಮನನೊಂದು ಜನವರಿ 16ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಈ ವೇಳೆ ಆತನ ಪರಿಚಯದವರು ಗೋವಾದ ಮಡಗಾಂವ್‌ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರಿಂದ ಈತ ಬದುಕುಳಿದಿದ್ದ.

ಎರಡು ದಿನ ಆಸ್ಪತ್ರೆಯಲ್ಲಿದ್ದ ಸಂತೋಷ್, ಬಳಿಕ ಅಲ್ಲಿಂದ ಡಿಸ್ಚಾರ್ಜ್ ಆಗಿ ಬಸ್ ಮೂಲಕ ಕರ್ನಾಟಕ ಗಡಿಯವರೆಗೆ ಬಂದಿದ್ದ. ಅಲ್ಲಿಂದ ಮನೆಯವರು ಆತನನ್ನ ಕರೆದುಕೊಂಡು ಹಿಂತಿರುಗುತ್ತಿದ್ದಾಗ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ವಿಷದ ಪ್ರಭಾವದಿಂದ ಸಂತೋಷ್‌ಗೆ ಬಹು ಅಂಗಾಂಗ ವೈಫಲ್ಯ ಉಂಟಾಗಿ, ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಸಂಜೆ 6ಕ್ಕೆ ಮೃತಪಟ್ಟಿದ್ದಾನೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಪರಿಣಾಮ ಮರಣೋತ್ತರ ಪರೀಕ್ಷೆ ನಡೆಸದೇ, ಮೃತ ದೇಹವನ್ನು ನೀಡುವ ಯಾವ ಪ್ರಕ್ರಿಯೆಯನ್ನೂ ನಡೆಸದೇ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮುಂದಿನ ರಾಜಕೀಯದ ಬಗ್ಗೆ ಆಸೆ ಇಟ್ಟುಕೊಂಡಿಲ್ಲ, ಇಷ್ಟು ದಿನ ಇದ್ದದ್ದೇ ಪುಣ್ಯ: ಸಂಸದ ಅನಂತಕುಮಾರ
ಸಂತೋಷ್ ಸಾವನ್ನಪ್ಪಿದ ಒಂದು ಗಂಟೆಯ ಬಳಿಕ ಕಾರವಾರ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಬಹುದು ಎಂದು ತಿಳಿಸಿದ್ದರು. ಆದರೆ ಈ ಬಗ್ಗೆ ಕುಟುಂಬಸ್ಥರಿಗೆ ಸರಿಯಾದ ಮಾಹಿತಿ ನೀಡದ್ದರಿಂದ ತಡ ರಾತ್ರಿಯವರಿಗೆ ಅವರು ಕಾದು ಕುಳಿತುಕೊಳ್ಳುವಂತಾಯಿತು.

ಮೃತನ ಕುಟುಂಬಸ್ಥರು ಬಡವರಾಗಿದ್ದು, ಲಾಡ್ಜ್‌ನಲ್ಲಿ ಉಳಿದುಕೊಳ್ಳಲು ಹಣವಿಲ್ಲದೇ ರಸ್ತೆ ಬದಿಯ ಕಟ್ಟೆಯಲ್ಲೇ ರಾತ್ರಿ ಕಳೆದಿದ್ದಾರೆ. ಮರು ದಿನ ಬೆಳಗ್ಗೆಯಾದರೂ ಮೃತ ದೇಹ ಸಿಗಬಹುದು ಎಂದು ಕುಟುಂಬಸ್ಥರು ಕಾದು ಕುಳಿತಿದ್ದರಾದರೂ ಮರಣೋತ್ತರ ಪರೀಕ್ಷೆ ನಡೆಸುವ ವೈದ್ಯರಿಲ್ಲದೇ ಗುರುವಾರ ಸಂಜೆಯಾದರೂ ಮೃತ ದೇಹ ಹಸ್ತಾಂತರವಾಗಿಲ್ಲ.

ಉತ್ತರ ಕನ್ನಡದಲ್ಲಿ ಒಂದೂವರೆ ವರ್ಷದಲ್ಲಿ ಒಬ್ಬರೇ ನ್ಯಾಯಾಧೀಶರಿಂದ 39 ಶಿಕ್ಷೆ ಪ್ರಕಟ
ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಹಾಗೂ ಇತರ ವೈದ್ಯರಿಗೆ ಕೇಳಿದರೂ ಸಮರ್ಪಕ ಉತ್ತರ ಸಿಗದೇ ಕುಟುಂಬಸ್ಥರು ಹೈರಾಣಾಗಿದ್ದಾರೆ. ಕೊನೆಗೆ ಮಾಜಿ ಸಚಿವ ಆರ್. ವಿ. ದೇಶಪಾಂಡೆ ಅವರಿಗೆ ವಿಷಯ ತಿಳಿಸಿದ ಬಳಿಕ ವೈದ್ಯರು ಗುರುವಾರ ಸಂಜೆ ವೇಳೆಗೆ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಆಸ್ಪತ್ರೆಯ ಅವ್ಯವಸ್ಥೆ ಕುರಿತು ಮೃತನ ಕಡೆಯವರು ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಪರಿಸ್ಥಿತಿ ಇನ್ಯಾರಿಗೂ ಆಗದಂತೆ ಸಂಬಂಧಪಟ್ಟವರು ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.

ಗೋವಾಕ್ಕೆ ಸುಮ್ನೆ ಹೋಗ್ಬೇಡಿ, ಹೋಗೋದನ್ನ ನಿಲ್ಸಿ: ಉತ್ತರ ಕನ್ನಡ ಡಿಸಿ



Read more

[wpas_products keywords=”deal of the day sale today offer all”]