Karnataka news paper

ಊರಮ್ಮ ದೇವಿ ಜಾತ್ರೆ ವೇಳೆ ದಾವಣಗೆರೆಯ ಇಡೀ ಗ್ರಾಮವೇ 9 ದಿನಗಳ ಕಾಲ ಸೀಲ್‌ ಡೌನ್..!


ಹೈಲೈಟ್ಸ್‌:

  • ತೊಟ್ಟಿರುವ ಬಟ್ಟೆ, ನೋಟು ಬಿಟ್ಟು ಏನನ್ನೂ 9 ದಿನ ಹೊರಗೆ ತರುವಂತಿಲ್ಲ
  • ಬೇಲಿ ಒಳಗೆ ಊರಿಗೆ ಏನನ್ನಾದರೂ ಒಯ್ಯಬಹುದು. ಆದರೆ, ಅಲ್ಲಿಂದ 9 ದಿನಗಳ ಕಾಲ ಹೊರಗೆ ತರುವಂತಿಲ್ಲ
  • ಗೊತ್ತಿಲ್ಲದೇ ವಾಹನ ಹೋದರೂ, ಬೇಲಿ ತೆಗೆದ ನಂತರವೇ ಆ ವಾಹನ ಹೊರ ಬರಬೇಕು

ದಾವಣಗೆರೆ: ಶತ ಶತಮಾನಗಳಿಂದಲೂ ತನ್ನದೇ ಆದ ವಿಶಿಷ್ಟ ಆಚರಣೆ ಮೂಲಕ ಮನೆ ಮಾತಾಗಿರುವ ಗ್ರಾಮವೊಂದು ದಾವಣಗೆರೆ ಜಿಲ್ಲೆಯಲ್ಲಿದೆ. ಈ ಗ್ರಾಮದ ಸುತ್ತಲೂ 9 ದಿನಗಳ ಕಾಲ ಮುಳ್ಳಿನ ಬೇಲಿಯಿಂದ ದಿಗ್ಬಂಧನ ಹಾಕಲಾಗುತ್ತದೆ. ಹಬ್ಬ ಮಾಡಲು ಬಿಟ್ಟರೆ ಊರಿನಲ್ಲಿ ಸಾವು ನೋವುಗಳು ಹೆಚ್ಚಾಗುತ್ತೆ ಅನ್ನೋದು ಗ್ರಾಮಸ್ಥರ ನಂಬಿಕೆ. ಹೀಗಾಗಿ, ಸರಳವಾಗಿ ಹಬ್ಬ ಆಚರಣೆ ಮಾಡಲಿ ಅನ್ನೋ ಕಾರಣಕ್ಕೆ ಇಡೀ ಗ್ರಾಮಕ್ಕೇ ಬೇಲಿ ಹಾಕುತ್ತಾರೆ. ಇಡೀ ರಾಜ್ಯ ಕೊರೊನಾ ಮೂರನೇ ಅಲೆ ಹಿನ್ನೆಲೆಯಲ್ಲಿ ಲಾಕ್ ಡೌನ್ ಭೀತಿಯಲ್ಲಿದ್ದರೆ, ಈ ಗ್ರಾಮ ಮಾತ್ರ ತಮ್ಮ ಇಡೀ ಊರಿಗೇ ಬೇಲಿ ಹಾಕಿಕೊಂಡಿದೆ. ಅಂದ್ರೆ ಇಡೀ ಗ್ರಾಮ ಸೀಲ್ ಡೌನ್ ಆಗಿದೆ..!

ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದ ಗ್ರಾಮ ದೇವತೆ ಊರಮ್ಮ ದೇವಿ ಜಾತ್ರೆ, ಪ್ರತಿ 3 ವರ್ಷಕ್ಕೊಮ್ಮೆ ನಡೆಯುತ್ತದೆ. ಈ ವೇಳೆ ಇಡೀ ಗ್ರಾಮದ ಸುತ್ತಲೂ ಸುಮಾರು 3-4 ಕಿ. ಮೀ. ನಷ್ಟು ಉದ್ದ ಬೇಲಿ ಹಾಕಲಾಗುತ್ತದೆ. ಊರಿನ ಜನರ ಸಹಕಾರದೊಂದಿಗೆ ದೇವಸ್ಥಾನ ಸಮಿತಿಯವರು ಮುಳ್ಳು ಬೇಲಿಯನ್ನು ಊರ ಹೊರ ಭಾಗಕ್ಕೆ ಸಾಲಾಗಿ ಹಾಕುತ್ತಾರೆ. ಈ ಮೂಲಕ ಮಹಾಮಾರಿಗಳಿಂದ ಗ್ರಾಮದ ಜನ, ಜಾನುವಾರುಗಳು, ಗ್ರಾಮವನ್ನು ಕಾಪಾಡುವಂತೆ ದೇವರಲ್ಲಿ ಪ್ರಾರ್ಥಿಸಿ, ಬೇಲಿ ಹಾಕುತ್ತಾರೆ.

davanagere

ಇದೇ ಬುಧವಾರದಿಂದ ಬರೋಬ್ಬರಿ 9 ದಿನಗಳ ಕಾಲ ಇಡೀ ಊರಿಗೆ ಊರೇ ಮುಳ್ಳಿನ ಬೇಲಿಯಲ್ಲಿ ಬಂಧಿಯಾಗುತ್ತದೆ. ಇಡೀ ಊರಿನ ಸುತ್ತಲೂ ಮುಳ್ಳು ಬೇಲಿ ಇರುತ್ತದೆ. ಈ ಅವಧಿಯಲ್ಲಿ ಇಡೀ ಊರಿಗೆ ಊರ ಬಾಗಿಲು ಬಿಟ್ಟರೆ ಬೇರೆ ಯಾವುದೇ ಕಡೆಯಿಂದಲೂ ಒಳಗೆ ಬರಲು, ಹೊರ ಹೋಗಲು ಅವಕಾಶ ಇಲ್ಲ. ಯಾರೇ ಬಂದರೂ, ಹೋದರೂ ಇದೇ ಊರ ಬಾಗಿಲಲ್ಲಿಯೇ ಬರಬೇಕು, ಹೋಗಬೇಕು.

ಇಡೀ ಊರಿಗೆ ಬೇಲಿ ಹಾಕಿದ ನಂತರ, ಊರ ಬಾಗಿಲ ಮೂಲಕ ಒಳಗೆ ಹೋಗುವವರು ಅಲ್ಲಿರುವ ಬೋರ್ಡ್ ಓದಿಯೇ ಒಳಗೆ ಹೋಗಬೇಕು. ಒಳಗೆ ಹೋಗುವಾಗ ತಾವು ಧರಿಸಿದ ಬೆಲ್ಟ್, ವಾಚ್, ಪರ್ಸ್, ಕನ್ನಡಕ, ವಾಚ್, ಕೈಗೆ ಕಟ್ಟಿದ ದಾರ, ಶೂ, ಚಪ್ಪಲಿ ಹೊರಗೆ ಬಿಟ್ಟು ಹೋಗಬೇಕು. ತೊಟ್ಟಿರುವ ಬಟ್ಟೆ, ನೋಟು ಬಿಟ್ಟು ಏನನ್ನೂ 9 ದಿನ ಹೊರಗೆ ತರುವಂತಿಲ್ಲ. ಬೇಲಿ ಒಳಗೆ ಊರಿಗೆ ಏನನ್ನಾದರೂ ಒಯ್ಯಬಹುದು. ಆದರೆ, ಅಲ್ಲಿಂದ 9 ದಿನಗಳ ಕಾಲ ಹೊರಗೆ ಅವುಗಳನ್ನು ತರುವಂತಿಲ್ಲ. ಗೊತ್ತಿಲ್ಲದೇ ವಾಹನ ಹೋದರೂ, ಬೇಲಿ ತೆಗೆದ ನಂತರವೇ ಆ ವಾಹನ ಹೊರ ಬರಬೇಕು. 9 ದಿನದ ನಂತರ ಜನವರಿ 26ರಂದು ಜಾತ್ರೆಯು ಸೀಮಿತ ಜನರ ಸಮ್ಮುಖದಲ್ಲಿ ನಡೆಯುತ್ತದೆ. ಆ ನಂತರವೇ ಪಾರು ಬೇಲಿ ತೆಗೆಯಲಾಗುತ್ತದೆ. ಆ ನಂತರವೇ ಹೊರಗೆ ಬರಲು, ಒಳಗೆ ಹೋಗಲು ಮುಕ್ತ ಅವಕಾಶ.

ಈ ಹಬ್ಬವನ್ನು ಮಾಡದೆ ಬಿಟ್ಟರೆ ಏನಾದರೂ ಕೆಡಕು ಆಗುತ್ತದೆ ಅಂತ ಅಲ್ಲಿ ಗ್ರಾಮದ ಜನರು ಜಾತ್ರೆಯನ್ನ ಪದ್ದತಿ ಸರಿಯಾಗಿ ಮಾಡುತ್ತಾ ಬಂದಿದ್ದಾರೆ. ಕಳೆದ ವರ್ಷ ಲಾಕ್ ಡೌನ್ ಆಗಿದ್ದರಿಂದ ಹಬ್ಬವನ್ನು ಮಾಡಲು ಆಗಿರಲಿಲ್ಲ. ಹಾಗಾಗಿ ಆ ವರ್ಷದಲ್ಲಿ ಅತಿ ಹೆಚ್ಚು ಸಾವು ನೋವುಗಳು ಸಂಭವಿಸಿದವು ಅಂತ ಅಲ್ಲಿನ ಗ್ರಾಮಸ್ಥರು ಹೇಳುತ್ತಾರೆ.

ದಾವಣಗೆರೆ ಬಸಾಪುರದ ಮಹೇಶ್ವರನ ವಿಶೇಷ ಜಾತ್ರೆ : ಇಲ್ಲಿ ಹೆಣ್ಣು ಮಕ್ಕಳಿಗೆ ಇಲ್ಲ ಪ್ರವೇಶ
ಅಲ್ಲದೇ, 9 ದಿನಗಳ ಕಾಲ ಗ್ರಾಮಸ್ಥರು ಸರದಿಯಲ್ಲಿ ಊರ ಬಾಗಿಲಿನಲ್ಲಿ ಹೊಸಬರಿಗೆ ರೀತಿ, ರಿವಾಜು, ನಿಯಮ ಹೇಳುತ್ತಾರೆ. ಈ ಅವಧಿಯಲ್ಲಿ ಶಾಲಾ-ಕಾಲೇಜು, ಕೆಲಸ, ವ್ಯಾಪಾರಗಳಿಗೆ ಹೋಗುವವರು ತಮ್ಮ ಸಂಬಂಧಿಗಳ ಮನೆಯಲ್ಲಿ, ಬೇಲಿ ಹೊರಗಿನ ಪರಿಚಯಸ್ಥರ ಮನೆಯಲ್ಲಿ ಸೈಕಲ್ ವಾಹನ, ಚಪ್ಪಲಿ, ಬೆಲ್ಟ್, ಪರ್ಸ್, ಬ್ಯಾಗ್, ಚರ್ಮದ ವಸ್ತುಗಳನ್ನು ಬಿಟ್ಟು, ಬರಿಗಾಲಲ್ಲಿ ತೊಟ್ಟ ಬಟ್ಟೆಯಲ್ಲಿ ಊರೊಳಗೆ ಬರುತ್ತಾರೆ. ಊರಿನಿಂದ ಹೊರ ಬರುವಾಗಲೂ ಒಣ ಬಟ್ಟೆಯಲ್ಲಿ ಬರಿಗಾಲಲ್ಲೇ ಹೊರಗೆ ಹೆಜ್ಜೆ ಇಡಬೇಕು. ಹಸಿ ಬಟ್ಟೆ, ಹಸಿಯಾದ ದಾರ ಹೀಗೆ ಯಾವುದೇ ಹಸಿ ಪದಾರ್ಥ ಊರಿನಿಂದ ಹೊರಗೆ ಬೇಲಿ ದಾಟುವುದಕ್ಕೆ ಅವಕಾಶವೂ ಇಲ್ಲ. ಇಂತಹದ್ದೊಂದು ಆಚರಣೆ ಮೂಲಕ ಕಕ್ಕರಗೊಳ್ಳ ಗ್ರಾಮದ ಊರಮ್ಮ ದೇವಿ ಜಾತ್ರೆಯು ಗಮನ ಸೆಳೆಯುತ್ತಿದೆ.

ಕೊರೊನಾ ಮಹಾಮಾರಿಗಿಂತಲೂ ಮುಂಚೆ ಅಂದರೆ, ಶತ ಶತಮಾನಗಳ ಹಿಂದೆ ಬಂದಂತೆ ಮಾರಿಗಳಿಂದ ಜನ, ಜಾನುವಾರುಗಳ ರಕ್ಷಣೆಗೆ ತಾಯಿ ಊರಮ್ಮನ ಜಾತ್ರೆ ಮಾಡಿಕೊಂಡು ಬಂದ ಜನರು, ಇಡೀ ಊರಿಗೆ ಪಾರು ಬೇಲಿ ಹಾಕಿಕೊಂಡು, 9 ದಿನಗಳ ಕಾಲ ದೇವಿ ಆರಾಧಿಸುತ್ತಾರೆ. ಎಲ್ಲೆಡೆ ಜಾತ್ರೆಯೆಂದರೆ ಸಾವಿರಾರು, ಲಕ್ಷಾಂತರ ಜನ ಸೇರಿ, ಕೋವಿಡ್ ಮಾರ್ಗಸೂಚಿ ಉಲ್ಲಂಘಿಸುವುದನ್ನು ಕಾಣುತ್ತೇವೆ. ಆದರೆ, ಅದಕ್ಕೆ ಭಿನ್ನವೆಂಬಂತೆ ಸರ್ಕಾರ ಈಗ ಹೇಳಿರುವ ಮಾರ್ಗಸೂಚಿಗಳನ್ನು, ಲಾಕ್ ಡೌನ್ ನಿಯಮಗಳನ್ನು ಕಕ್ಕರಗೊಳ್ಳ ಗ್ರಾಮಸ್ಥರು ಶತ ಶತಮಾನಗಳಿಂದಲೇ ಆಚರಿಸಿಕೊಂಡು ಬರುತ್ತಿದ್ದಾರೆ. ಊರಮ್ಮನ ಹೆಸರಿನಲ್ಲಿ, ದೇವಿಯ ಜಾತ್ರೆ ಹೆಸರಿನಲ್ಲಿ 9 ದಿನಗಳ ಕಾಲ ಇಡೀ ಊರಿಗೇ ಮುಳ್ಳು ಬೇಲಿಯ ದಿಗ್ಭಂಧನ ಇರುವುದು ಸಹ ವಿಶೇಷವಾಗಿದೆ.

ಕೋವಿಡ್ ಭೀತಿ: ಜ.14, 15ರ ಹರಜಾತ್ರೆ ತಾತ್ಕಾಲಿಕ ಮುಂದೂಡಿಕೆ!
‘ಕೋವಿಡ್ ಮಾರ್ಗಸೂಚಿಗಳನ್ನು ಈಗ ಎಲ್ಲೆಡೆ ಪಾಲಿಸುವುದನ್ನ ಕಾಣುತ್ತೇವೆ. ಆದರೆ, ನಮ್ಮೂರ ದೇವತೆ ಊರಮ್ಮ ದೇವಿ ಜಾತ್ರೆ ವೇಳೆ ಇಂತಹ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗುತ್ತವೆ. ನಮ್ಮೂರ ದೇವತೆಯ ನಿಯಮಗಳ ಜೊತೆಗೆ ಸರ್ಕಾರದ ಮಾರ್ಗಸೂಚಿಗಳನ್ನೂ ತಪ್ಪದೇ ಪಾಲಿಸುತ್ತೇವೆ. 9 ದಿನಗಳ ಕಾಲ ನಮ್ಮ ಊರಿಗೆ ಒಂದೇ ಊರ ಬಾಗಿಲಿರುತ್ತದೆ. ಯಾರೇ ಬಂದರೂ ಸ್ಯಾನಿಟೈಸ್ ಮಾಡಿ, ಮಾಸ್ಕ್ ನೀಡುತ್ತೇವೆ’ ಎನ್ನುತ್ತಾರೆ, ಗ್ರಾಮದ ಮುಖಂಡರಾದ ಕಕ್ಕರಗೊಳ್ಳ ಕೆ. ಪಿ. ಕಲ್ಲಿಂಗಪ್ಪ ಹಾಗೂ ಮೋಹನ್.

ಪಾರು ಬೇಲಿ ಹಾಕಿದ 9 ದಿನಗಳ ಅವಧಿಯಲ್ಲಿ ಇಡೀ ಕಕ್ಕರಗೊಳ್ಳ ಗ್ರಾಮದಲ್ಲಿ ಆಕಸ್ಮಾತ್ ಯಾವುದೇ ಸಾವು ಸಂಭವಿಸಿದರೆ ಗ್ರಾಮದ ಬೇಲಿ ಒಳಗಿನ ಒಂದು ಕಡೆ ಅಂತ್ಯಕ್ರಿಯೆ ಮಾಡಲಾಗುತ್ತದೆ. ನಮ್ಮ ಊರಿನಿಂದ ಪಾಲು ಬೇಲಿ ದಾಟಿ, ಒಂದು ಸಣ್ಣ ಸೂಜಿ ಸಹ ಹೊರ ಹೋದ ಇತಿಹಾಸವಿಲ್ಲ. ಹೀಗೆ ಒಯ್ದವರಿಗೆ ಆಪತ್ತೂ ತಪ್ಪಿದ್ದಲ್ಲವೆಂಬ ಭಯವೂ ಜನರಲ್ಲಿದೆ. ಕೊರೊನಾ, ಓಮಿಕ್ರಾನ್ ಮಹಾಮಾರಿಯಿಂದ ಊರು, ಜಿಲ್ಲೆ, ರಾಜ್ಯ, ದೇಶ, ಜಗತ್ತನ್ನು ಕಾಪಾಡು, ಜನರ ಪ್ರಾಣ ಕಾಪಾಡುವಂತೆ ದೇವರಲ್ಲಿ ಪ್ರಾರ್ಥಿಸುತ್ತೇವೆ ಎನ್ನುತ್ತಾರೆ ಗ್ರಾಮಸ್ಥರು.

ದಾವಣಗೆರೆ: ಹೊರ ರಾಜ್ಯದಿಂದ ಬರುವವರಲ್ಲಿ ಹೆಚ್ಚಿನ ಸೋಂಕು



Read more

[wpas_products keywords=”deal of the day sale today offer all”]