Karnataka news paper

ಕೊರೊನಾ ಲಸಿಕೆ ಹೆಸರಲ್ಲಿ ಬ್ಯಾಂಕ್‌ ಖಾತೆಗೆ ಕನ್ನ..! ಮೈಸೂರಿನಲ್ಲಿ ಸೈಬರ್‌ ಕಳ್ಳರ ಹೊಸ ವರಸೆ..!


ಹೈಲೈಟ್ಸ್‌:

  • ಕೋವಿಡ್‌ ಲಸಿಕೆ ನೋಂದಣಿಗೆ ಕರೆ ಮಾಡಿ ಆಧಾರ್‌, ಬ್ಯಾಂಕ್‌ ವಿವರ ಪಡೆದು ವಂಚನೆ ಯತ್ನ
  • ಎಚ್ಚರವಾಗಿರಲು ಪೊಲೀಸರ ಸಲಹೆ
  • ಬ್ಯಾಂಕಿನ ಅಧಿಕಾರಿಗಳು ಎಂದು ಗ್ರಾಹಕರಿಗೆ ಕರೆ ಮಾಡಿ ವಂಚನೆ

ಹರೀಶ ಎಲ್‌. ತಲಕಾಡು
ಮೈಸೂರು:
ಸೈಬರ್‌ ಕಳ್ಳರ ವರಸೆ ಬದಲಾಗಿದೆ..! ಬ್ಯಾಂಕಿನ ಅಧಿಕಾರಿಗಳು ಎಂದು ಗ್ರಾಹಕರಿಗೆ ಕರೆ ಮಾಡಿ, ಬ್ಯಾಂಕ್‌ ಖಾತೆ ವಿವರ ಪಡೆಯುವ ಮೂಲಕ ಹಣ ದೋಚುತ್ತಿದ್ದ ಸೈಬರ್‌ ಖದೀಮರು, ಈಗ ಹೊಸ ಮಾದರಿಯನ್ನು ಅನುಸರಿಸುವ ಮೂಲಕ ಸಾರ್ವಜನಿಕರ ಬ್ಯಾಂಕ್‌ ಖಾತೆಗೆ ಕೈ ಹಾಕುತ್ತಿದ್ದಾರೆ. ಜಗತ್ತನ್ನು ಕಾಡುತ್ತಿರುವ ಕೋವಿಡ್‌ ಸೋಂಕು ವಿರುದ್ಧದ ಲಸಿಕೆ ಅಭಿಯಾನವನ್ನೇ ಬಂಡವಾಳವಾಗಿಸಿಕೊಂಡು ವಂಚನೆಗೆ ಇಳಿದಿದ್ದಾರೆ.

ಕೊರೊನಾ ವಾರಿಯರ್ಸ್‌ಗಳಾದ ಆರೋಗ್ಯ ಕಾರ್ಯಕರ್ತರ ಹೆಸರಿನಲ್ಲಿ ಸಾರ್ವಜನಿಕರಿಗೆ ಕೋವಿಡ್‌ ಲಸಿಕೆ ಪಡೆಯುವಂತೆ ಕರೆ ಮಾಡುತ್ತಿರುವ ಸೈಬರ್‌ ಖದೀಮರು, ಲಸಿಕೆಗಾಗಿ ನೋಂದಣಿ ಮಾಡಲಾಗುತ್ತಿದೆ ಎಂದು ಹೇಳುತ್ತಾರೆ. ನಂತರ ಆಧಾರ್‌ ಸಂಖ್ಯೆ ಮತ್ತು ಬ್ಯಾಂಕ್‌ ವಿವರ ಪಡೆದು ಗ್ರಾಹಕರ ಬ್ಯಾಂಕ್‌ ಖಾತೆಗೆ ಕನ್ನ ಹಾಕುವ ಸಂಚು ನಡೆಸುತ್ತಿದ್ದಾರೆ. ಇದರೊಂದಿಗೆ ಕೋವಿಡ್‌ ಲಸಿಕೆ ಪಡೆಯಲು ನೋಂದಣಿಗೆ ಎಂದು ಸಾರ್ವಜನಿಕರ ಮೊಬೈಲ್‌ಗಳಿಗೆ ಎಸ್‌ಎಂಎಸ್‌ ಮೂಲಕ ಲಿಂಕ್‌ ಕಳುಹಿಸಲಾಗುತ್ತಿದ್ದು, ಲಿಂಕ್‌ ಮೂಲಕ ಬ್ಯಾಂಕ್‌ ಖಾತೆಯನ್ನು ಹ್ಯಾಕ್‌ ಮಾಡಿ ಹಣ ಲಪಟಾಯಿಸುವ ಸೈಬರ್‌ ಗ್ಯಾಂಗ್‌ ಕೂಡಾ ಸಕ್ರಿಯವಾಗಿದೆ.

ಎಚ್ಚರಿಕೆ: ಡಿಜಿಟಲ್‌ ವ್ಯವಹಾರ ವಿದ್ರೋಹಿಗಳಿಂದ ದುರ್ಬಳಕೆ: 50 ಕೋಟಿ ರೂ.ಗೂ ಅಧಿಕ ವಂಚನೆ!
ಆರೋಗ್ಯ ಕಾರ್ಯಕರ್ತರ ಹೆಸರಿನಲ್ಲಿ ಕರೆ ಮಾಡಿ, ಕೋವಿಡ್‌ ಲಸಿಕೆ ಪಡೆಯಲು ನೋಂದಣಿ ಮಾಡಲಾಗುತ್ತಿದ್ದು, ಮೊಬೈಲ್‌ಗೆ ಬಂದಿರುವ ಒಟಿಪಿ ನಂಬರ್‌ ಹೇಳಿದರೆ ನೋಂದಣಿಯಾಗಲಿದ್ದು, ಬಳಿಕ ಲಸಿಕೆ ಪಡೆಯಬಹುದು ಎಂದು ಹೇಳುವ ಮೂಲಕ ಅಮಾಯಕರನ್ನು ಯಾಮಾರಿಸುವ ಯತ್ನ ನಡೆಸುತ್ತಿದ್ದಾರೆ. ಲಸಿಕೆ ಪಡೆಯಲು ಈ ಹೊಸ ವ್ಯವಸ್ಥೆ ಸರಕಾರ ಮಾಡಿರಬೇಕು ಎಂದು ನಂಬಿ ಸಾರ್ವಜನಿಕರು, ತಮ್ಮ ಬ್ಯಾಂಕ್‌ ಖಾತೆ ವಿವರ ನೀಡಿದರೆ ಈ ಸೈಬರ್‌ ಖದೀಮರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಹೇಳಿದ್ದಾರೆ.

ಬ್ಯಾಂಕ್‌ ವಿವರ ನೀಡಬೇಡಿ

ಕೋವಿಡ್‌ ಲಸಿಕೆ ಪಡೆಯುವಂತೆ ಆರೋಗ್ಯ ಇಲಾಖೆಯಿಂದ ಯಾವುದೇ ಕರೆ ಮಾಡಿ, ಸಾರ್ವಜನಿಕರಿಂದ ಮಾಹಿತಿ ಪಡೆಯುವುದಿಲ್ಲ. ಲಿಂಕ್‌ ಕಳುಹಿಸುವುದಿಲ್ಲ. ಸಾರ್ವಜನಿಕರೇ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆಗಳಿಗೆ ತೆರಳಿ ಲಸಿಕೆ ಪಡೆಯಬಹುದು ಅಥವಾ ಆರೋಗ್ಯ ಕಾರ್ಯಕರ್ತರು ಮನೆ ಬಳಿ ಲಸಿಕೆಗೆ ಬಂದಾಗ ಲಸಿಕೆ ಪಡೆಯಬೇಕೇ ಹೊರತು, ಬ್ಯಾಂಕ್‌ ವಿವರ ಸೇರಿದಂತೆ ಇತರೇ ಮಾಹಿತಿ ನೀಡಬಾರದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ. ಎಚ್‌. ಪ್ರಸಾದ್‌ ತಿಳಿಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ ವಿದ್ರೋಹಿ ಸಂಘಟನೆಗಳಿಂದ 50 ಕೋಟಿ ರೂ.ಗೂ ಅಧಿಕ ಸೈಬರ್ ವಂಚನೆ..!
‘ಸಾರ್ವಜನಿಕರಿಗೆ ಕೋವಿಡ್‌ ಲಸಿಕೆ ಪಡೆಯುವ ಸಂಬಂಧ ವಂಚಕರು ಕರೆ ಮಾಡಿ, ಆಧಾರ್‌ ಮತ್ತು ಬ್ಯಾಂಕ್‌ ಖಾತೆ ವಿವರ ಪಡೆದು ವಂಚಿಸುತ್ತಿದ್ದಾರೆ. ಲಸಿಕೆ ಪಡೆಯುವ ಲಿಂಕ್‌ ಎಂದು ಕಳುಹಿಸಿ ಆ ಮೂಲಕ ಬ್ಯಾಂಕ್‌ ಖಾತೆ ಹ್ಯಾಕ್‌ ಮಾಡಿ ಹಣ ಲಪಟಾಯಿಸಲಿದ್ದಾರೆ. ಕೋವಿಡ್‌ ಲಸಿಕೆಗೆ ಸಂಬಂಧಿಸಿದಂತೆ ಬರುವ ವಂಚಕರ ಕರೆ ಮತ್ತು ಎಸ್‌ಎಂಎಸ್‌ಗಳ ಬಗ್ಗೆ ಸಾರ್ವಜನಿಕರು ಜಾಗರೂಕರಾಗಿರಬೇಕು’ ಎಂದು ಮೈಸೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ತಿಳಿಸಿದ್ದಾರೆ.

‘ಸಾರ್ವಜನಿಕರು ಕೋವಿಡ್‌ ಲಸಿಕೆ ಪಡೆಯಲು ಮತ್ತು ಸರ್ಟಿಫಿಕೇಟ್‌ ಪಡೆಯಲು ಮೊಬೈಲ್‌ ಸಂಖ್ಯೆಗೆ ಬರುವ ಒಟಿಪಿ ನಿಯಮವನ್ನು ಸೈಬರ್‌ ಕಳ್ಳರು, ಗ್ರಾಹಕರ ಬ್ಯಾಂಕ್‌ ಖಾತೆಯಿಂದ ಹಣ ಲಪಟಾಯಿಸಲು ಬಳಸಿಕೊಳ್ಳುತ್ತಿದ್ದಾರೆ. ನೆರೆ ರಾಜ್ಯಗಳಲ್ಲಿ ಇಂತಹ ವಂಚನೆ ಪ್ರಕರಣಗಳು ಸಾಕಷ್ಟು ನಡೆದಿವೆ. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ’ ಎಂದು ಸಿಐಡಿ ಸೈಬರ್‌ ಕ್ರೈಮ್‌ ಡಿವಿಷನ್‌ ಡಿವೈಎಸ್ಪಿ ಕೆ. ಎನ್‌. ಯಶವಂತ್‌ ಕುಮಾರ್‌ ಹೇಳಿದ್ದಾರೆ.

ಕರ್ನಾಟಕ ರಾಜ್ಯಾದ್ಯಂತ ಸೈಬರ್‌ ಕ್ರೈಂ ಕಳ್ಳಾಟದಲ್ಲಿ ಕಳ್ಳರದ್ದೇ ಮೇಲುಗೈ..!



Read more

[wpas_products keywords=”deal of the day sale today offer all”]