ಹೈಲೈಟ್ಸ್:
- ಬಿಸಿಸಿಐ ಬಾಸ್ ಸೌರವ್ ಗಂಗೂಲಿ ಖುದ್ದಾಗಿ ಕೊಹ್ಲಿ ಬಳಿ ಮಾತನಾಡಿದ್ದಾಗಿ ಹೇಳಿದ್ದರು.
- ಆದರೆ ವಿರಾಟ್ ಕೊಹ್ಲಿ ನಾಯಕತ್ವ ಬಿಡುವ ಬಗ್ಗೆ ಯಾರೊಬ್ಬರೂ ಚರ್ಚೆ ಮಾಡಲಿಲ್ಲ ಎಂದಿದ್ದರು.
- ವಿರಾಟ್ ಕೊಹ್ಲಿ ಅವರ ವಿವಾದಾತ್ಮಕ ಪತ್ರಿಕಾಗೋಷ್ಠಿ ಬಗ್ಗೆ ಶೋ ಕಾಸ್ ನೋಟೀಸ್ ನೀಡಲು ಮುಂದಾಗಿದ್ದ ದಾದಾ.
ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಗೆ ತಂಡ ಪ್ರಕಟಿಸಿದ ಸಂದರ್ಭದಲ್ಲಿ ವಿರಾಟ್ ಕೊಹ್ಲಿಗೆ ಟೆಸ್ಟ್ ನಾಯಕತ್ವ ಮಾತ್ರ ನೀಡಿ ಸೀಮಿತ ಓವರ್ಗಳ ಕ್ರಿಕೆಟ್ಗೆ ರೋಹಿತ್ ಶರ್ಮಾ ಅವರನ್ನು ನೂತನ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿತ್ತು. ಸೀಮಿತ ಓವರ್ಗಳ ಕ್ರಿಕೆಟ್ನ ಎರಡೂ ಮಾದರಿಗಳಲ್ಲಿ ಒಬ್ಬನೇ ನಾಯಕ ಬೇಕೆಂದು ಬಿಸಿಸಿಐ ಆಯ್ಕೆ ಸಮಿತಿ ಈ ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು.
ಅಂದಹಾಗೆ ಇದಕ್ಕೂ ಮುನ್ನ ಟಿ20 ಕ್ರಿಕೆಟ್ ವಿಶ್ವಕಪ್ಗೂ ಮುನ್ನ ಭಾರತ ಟಿ20 ತಂಡದ ನಾಯಕತ್ವಕ್ಕೆ ಕೊಹ್ಲಿ ವಿದಾಯ ಹೇಳಿದ್ದೇ ಈ ಎಲ್ಲಾ ಗೊಂದಲಗಳಿಗೆ ಬಹುಮುಖ್ಯ ಕಾರಣವಾಯಿತು. ಅಂದು ಕೊಹ್ಲಿ ಟಿ20 ತಂಡದ ನಾಯಕತ್ವ ಬಿಟ್ಟಾಗ ಮಾಧ್ಯಮಗಳ ಎದುರು ಮಾತನಾಡಿದ್ದ ಬಿಸಿಸಿಐ ಬಾಸ್ ಸೌರವ್ ಗಂಗೂಲಿ ತಾವೇ ಖುದ್ದಾಗಿ ಕೊಹ್ಲಿ ಬಳಿ ಮಾತನಾಡಿ ನಿರ್ಧಾರ ಮರು ಪರಿಗಣಿಸುವಂತೆ ಮನವಿ ಮಾಡಿದ್ದಾಗಿ ಹೇಳಿದ್ದರು.
ಒಡಿಐ ರನ್ ಗಳಿಕೆಯಲ್ಲಿ ಸಚಿನ್ ದಾಖಲೆ ಮುರಿದ ‘ಕಿಂಗ್ ಕೊಹ್ಲಿ’!
ಆದರೆ, ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ವಿರಾಟ್ ತಮ್ಮ ಬಳಿಕ ನಾಯಕತ್ವ ಬಿಡದೇ ಇರುವಂತೆ ಯಾರೊಬ್ಬರೂ ಚರ್ಚೆ ಮಾಡಿಲ್ಲ ಎಂದಿದ್ದರು. ಜೊತೆಗೆ ಒಡಿಐ ತಂಡದ ನಾಯಕತ್ವದಿಂದ ತೆಗೆಯುವ ಬಗ್ಗೆಯೂ ಚರ್ಚೆ ಮಾಡಿರಲಿಲ್ಲ ಎಂದು ಬಾಂಬ್ ಸಿಡಿಸಿದ್ದರು. ಈ ಮೂಲಕ ಗಂಗೂಲಿ ಈ ವಿಚಾರದಲ್ಲಿ ಮಾಧ್ಯಮಗಳ ಎದುರು ಸುಳ್ಳು ಹೇಳಿದ್ದಾರೆ ಎಂಬಂತೆ ಭಾಸವಾಗಿತ್ತು.
ಈ ವಿಚಾರವಾಗಿ ಅಂದೇ ಪ್ರತಿಕ್ರಿಯೆ ನೀಡಿದ್ದ ಸೌರವ್ ಬಿಸಿಸಿಐ ಮುಂದಿನದ್ದನ್ನು ನೋಡಿಕೊಳ್ಳಲಿದೆ ಎಂದಿದ್ದರು. ಇತ್ತೀಚಿನ ವರದಿಗಳ ಪ್ರಕಾರ ವಿವಾದಾತ್ಮಕ ಪತ್ರಿಕಾ ಗೋಷ್ಠಿ ಕುರಿತಂತೆ ವಿರಾಟ್ ಕೊಹ್ಲಿಗೆ ಸೌರವ್ ಶೋ ಕಾಸ್ ನೋಟೀಸ್ ನೀಡಲು ಮುಂದಾಗಿದ್ದರು ಎಂಬುದು ಬೆಳಕಿದೆ ಬಂದಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮೊದಲೇ ಸೌರವ್ ಈ ನಿರ್ಧಾರ ಮಾಡಿದ್ದರು ಎನ್ನಲಾಗಿದೆ.
ಭಾರತ ತಂಡದ ಮಾಜಿ ನಾಯಕ 49 ವರ್ಷದ ಸೌರವ್ ಗಂಗೂಲಿ ಈ ವಿಚಾರವಾಗಿ ಮಂಡಳಿ ಸದಸ್ಯರ ಜೊತೆಗೆ ಸಭೆ ಕೂಡ ನಡೆಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮಹತ್ವದ ಟೆಸ್ಟ್ ಸರಣಿಗೂ ಮುನ್ನ ಕ್ಯಾಪ್ಟನ್ಗೆ ನೋಟೀಸ್ ನೀಡಿ ಪರಿಸ್ಥಿತಿ ಕೆಡಿಸುವುದು ಬೇಡವೆಂದು ನಿರ್ಧರಿಸಿ ಸುಮ್ಮನಾಗಿದ್ದಾರೆ ಎಂದು ವರದಿಗಳು ಹೇಳಿವೆ.
ಕೊಹ್ಲಿ ನಾಯಕತ್ವ ತೊರೆದ ಬೆನ್ನಲ್ಲೆ ನಂ.1 ಸ್ಥಾನ ಕಳೆದುಕೊಂಡ ಭಾರತ!
ಅಂದಹಾಗೆ ಟಿ20 ತಂಡದ ನಾಯಕತ್ವ ಬಿಟ್ಟಾಗ ಕೊಹ್ಲಿ ತಮಗೆ ಟೆಸ್ಟ್ ಮತ್ತು ಒಡಿಐ ಕ್ರಿಕೆಟ್ನಲ್ಲಿ ನಾಯಕನಾಗಿ ಮುಂದುವರಿಯುವ ಆಸಕ್ತಿ ಇರುವುದಾಗಿ ಹೇಳಿಕೊಂಡಿದ್ದರು. ಆದರೆ, ಕೊಹ್ಲಿ ಆಸಕ್ತಿಗೆ ಮಣೆ ಹಾಕದ ಟೀಮ್ ಇಂಡಿಯಾ ಸೆಲೆಕ್ಟರ್ಸ್ ಒಡಿಐ ಮತ್ತು ಟಿ20 ತಂಡಗಳಿಗೆ ಒಬ್ಬನೇ ನಾಯಕ ಬೇಕು ಎಂದು ನಿರ್ಧರಿಸಿದ್ದರು.
ಇದು ವಿರಾಟ್ ಕೊಹ್ಲಿ ಅಸಮಾಧಾನಕ್ಕೆ ಬಹುಮುಖ್ಯ ಕಾರಣವಾಗಿದೆ. ಇನ್ನು ಟೆಸ್ಟ್ ಸರಣಿಯಲ್ಲಿ ಹರಿಣಗಳ ಎದುರು 1-2 ಅಂತರದ ಸೋಲನುಭವಿಸಿದ ಬಳಿಕ ಟೆಸ್ಟ್ ತಂಡದ ನಾಯಕತ್ವಕ್ಕೂ ಕೊಹ್ಲಿ ಅಚ್ಚರಿಯ ರೀತಿಯಲ್ಲಿ ರಾಜೀನಾಮೆ ಕೊಟ್ಟರು. ಟೆಸ್ಟ್ ತಂಡದ ನಾಯಕತ್ವ ಬಿಡುವ ಸುದ್ದಿಯನ್ನು ಖುದ್ದಾಗೆ ಕಾರ್ಯದರ್ಶಿ ಜಯ ಶಾ ಅವರಿಗೆ ದೂರವಾಣಿ ಕರೆ ಮೂಲಕ ಕೊಹ್ಲಿ ತಿಳಿಸಿದ್ದಾರೆ. ಆದರೆ ಗಂಗೂಲಿಗೆ ಕರೆ ಮಾಡಿಲ್ಲ ಎಂದು ಮೂಲಗಳು ಹೇಳಿವೆ.
ಆದರೆ ಸುದ್ದಿ ತಿಳಿದ ಸೌರವ್ ಕೂಡಲೇ ಟ್ವಿಟರ್ ಮೂಲಕ ಭಾರತ ಟೆಸ್ಟ್ ತಂಡ ಕಂಡ ಸಾರ್ವಕಾಲಿಕ ಶ್ರೇಷ್ಠ ಕ್ಯಾಪ್ಟನ್ಗೆ ಶುಭ ಹಾರೈಸಿದ್ದರು. “ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಭಾರತ ತಂಡ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಗಣನೀಯ ಪ್ರಗತಿ ಕಂಡಿದೆ. ಟೆಸ್ಟ್ ತಂಡದ ನಾಯಕತ್ವ ಬಿಟ್ಟಿರುವುದು ಅವರ ವೈಯಕ್ತಿಕ ನಿರ್ಧಾರ. ಬಿಸಿಸಿಐ ಇದನ್ನು ಗೌರವಿಸುತ್ತದೆ. ಭವಿಷ್ಯದಲ್ಲಿ ತಂಡವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಅವರು ಬಹುಮುಖ್ಯ ಸದಸ್ಯನಾಗಿ ಉಳಿಯಲಿದ್ದಾರೆ. ಒಬ್ಬ ಅದ್ಭುತ ಆಟಗಾರ. ವೆಲ್ ಡನ್ ವಿರಾಟ್ ಕೊಹ್ಲಿ,” ಎಂದು ಸೌರವ್ ಟ್ವೀಟ್ ಮಾಡಿದ್ದರು.
Read more
[wpas_products keywords=”deal of the day gym”]