Karnataka news paper

ದಿಲ್ಲಿ ಗಲಭೆ ಪ್ರಕರಣದಲ್ಲಿ ಮೊದಲ ಶಿಕ್ಷೆ: ವೃದ್ಧೆ ಮನೆಯನ್ನು ದೋಚಿ, ಬೆಂಕಿ ಹಚ್ಚಿದ ಆರೋಪಿಗೆ 5 ವರ್ಷ ಜೈಲು


ಹೈಲೈಟ್ಸ್‌:

  • 2020ರ ಫೆಬ್ರವರಿಯಲ್ಲಿ ವೃದ್ಧೆಯ ಮನೆ ದೋಚಿ ಬೆಂಕಿ ಹಚ್ಚಿದ ಪ್ರಕರಣ
  • ಅಪರಾಧಿ ದಿನೇಶ್ ಯಾದವ್‌ಗೆ ಐದು ವರ್ಷ ಜೈಲು, 12,000 ರೂ ದಂಡ
  • 50ಕ್ಕೂ ಅಧಿಕ ಮಂದಿಯನ್ನು ಬಲಿ ತೆಗೆದುಕೊಂಡಿದ್ದ ದಿಲ್ಲಿ ಹಿಂಸಾಚಾರ
  • ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ದಿಲ್ಲಿಯಲ್ಲಿ ಗಲಭೆ

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆ ವೇಳೆ 2020ರ ಫೆಬ್ರವರಿಯಲ್ಲಿ ರಾಜಧಾನಿ ದಿಲ್ಲಿಯ ಅನೇಕ ಭಾಗಗಳಲ್ಲಿ ನಡೆದ ಹಿಂಸಾಚಾರ ಗಲಭೆಗಳಿಗೆ ಸಂಬಂಧಿಸಿದಂತೆ ದಿಲ್ಲಿ ನ್ಯಾಯಾಲಯವೊಂದು ಆರೋಪಿ ದಿನೇಶ್ ಯಾದವ್ ಎಂಬಾತನಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈತ ಈ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ಮೊದಲ ವ್ಯಕ್ತಿಯಾಗಿದ್ದಾನೆ.

ಕಾನೂನು ಬಾಹಿರ ಸೇರುವಿಕೆ ಹಾಗೂ ಗಲಭೆಯ ಗುಂಪಿನ ಸದಸ್ಯನಾಗಿ, 73 ವರ್ಷದ ಮಹಿಳೆಯ ಮನೆಯನ್ನು ಲೂಟಿ ಮಾಡಿ ಬೆಂಕಿ ಹಚ್ಚಿ ಸುಟ್ಟ ಪ್ರಕರಣದಲ್ಲಿ ದಿನೇಶ್ ಯಾದವ್ ತಪ್ಪಿತಸ್ಥ ಎಂದು ಕಳೆದ ತಿಂಗಳು ಕೋರ್ಟ್ ತೀರ್ಪು ನೀಡಿತ್ತು. ಆತನಿಗೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿತ್ತು. ಗುರುವಾರ ಶಿಕ್ಷೆಯ ತೀರ್ಪು ಪ್ರಕಟಿಸಿದ ನ್ಯಾಯಾಲಯ, ಐದು ವರ್ಷಗಳ ಕಾರಾಗೃಹ ವಾಸ ವಿಧಿಸಿದೆ.
ದಿಲ್ಲಿ ದಂಗೆ ಪೂರ್ವ ನಿಯೋಜಿತ: ಸಂಚುಕೋರ ಇಬ್ರಾಹಿಂಗೆ ಜಾಮೀನು ನಿರಾಕರಿಸಿದ ಹೈಕೋರ್ಟ್
ಗಲಭೆ ನಡೆಸಿದ ಗುಂಪಿನಲ್ಲಿ ದಿನೇಶ್ ಯಾದವ್ ಸಕ್ರಿಯ ಸದಸ್ಯನಾಗಿದ್ದ. ಮಹಿಳೆಯ ಮನೆಯನ್ನು ದೋಚಿ ಅದಕ್ಕೆ ಬೆಂಕಿ ಇಡುವಲ್ಲಿ ಪಾತ್ರ ವಹಿಸಿದ್ದ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು. ಫೆಬ್ರವರಿ 25ರಂದು 150- 200 ಮಂದಿ ಗಲಭೆಕೋರರು ತನ್ನ ಮನೆ ಮೇಲೆ ದಾಳಿ ನಡೆಸಿದ್ದರು. ಆಗ ಕುಟುಂಬದ ಯಾರೂ ಮನೆಯಲ್ಲಿ ಇರಲಿಲ್ಲ. ಮನೆಯಲ್ಲಿನ ಅನೇಕ ಮೌಲ್ಯಯುತ ವಸ್ತುಗಳನ್ನು ದೋಚಿದ್ದರು ಎಂದು ಮನೋರಿ ಎಂಬ 73 ವರ್ಷದ ಮಹಿಳೆ ಆರೋಪಿಸಿದ್ದರು.

ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಟವಾಗಿರುವ ಮೊದಲ ಶಿಕ್ಷೆ ಇದಾಗಿದೆ. ಯಾದವ್‌ಗೆ 12,000 ರೂ ದಂಡ ಸಹ ವಿಧಿಸಲಾಗಿದೆ. 25 ವರ್ಷದ ಯಾದವ್‌ನನ್ನು 2020ರ ಜೂನ್ 8ರಂದು ಬಂಧಿಸಲಾಗಿತ್ತು. 2021ರ ಆಗಸ್ಟ್‌ 3ರಂದು ಆತನ ವಿರುದ್ಧದ ಆರೋಪಗಳನ್ನು ಕೋರ್ಟ್ ನಿಗದಿಗೊಳಿಸಿತ್ತು. ತಾನು ನಿರಪರಾಧಿ ಎಂದು ಆತ ವಾದಿಸಿದ್ದ.
ಈಶಾನ್ಯ ದಿಲ್ಲಿ ಗಲಭೆ: ಯುಎಪಿಎ ಪ್ರಕರಣದಲ್ಲಿ ಕಲಿತಾ, ನತಾಶಾ ಮತ್ತು ಇಕ್ಬಾಲ್ ತನ್ಹಾಗೆ ಜಾಮೀನು
ಈಶಾನ್ಯ ದಿಲ್ಲಿಯ ಗಲಭೆಗೆ ಸಂಬಂಧಿಸಿದ ಬೇರೆ ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟ್, ಬುಧವಾರ ಆರು ಆರೋಪಿಗಳಿಗೆ ಜಾಮೀನು ನೀಡಿತ್ತು. ಗೋಕುಲಪುರಿ ಪ್ರದೇಶದಲ್ಲಿ ಅಂಗಡಿಯೊಂದನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ ಆರೋಪದಡಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಬೆಂಕಿಯು ಅಂಗಡಿ ಕೆಲಸಗಾರನಾಗಿದ್ದ 22 ವರ್ಷದ ದಿಲ್ಬಾರ್ ನೇಗಿ ಎಂಬಾತನ ಸಾವಿಗೆ ಕಾರಣವಾಗಿತ್ತು. ಎರಡು ದಿನಗಳ ಬಳಿಕ ಅಂಗಡಿ ಆವರಣದಲ್ಲಿ ಆತನ ಛಿದ್ರಗೊಂಡ ಮೃತದೇಹ ಪತ್ತೆಯಾಗಿತ್ತು.

ಈ ಪ್ರದೇಶದಲ್ಲಿ ಇನ್ನೂ ಅನೇಕ ಅಂಗಡಿಗಳನ್ನು ದರೋಡೆ ಮಾಡಿ ಧ್ವಂಸ ಮಾಡಲಾಗಿತ್ತು. ಹಲವು ಕಡೆ ಬೆಂಕಿ ಹಚ್ಚಲಾಗಿತ್ತು. ಸಿಎಎ ಪ್ರತಿಭಟನೆಯನ್ನು ಬಳಸಿಕೊಂಡಿದ್ದ ಗಲಭೆಕೋರರು ಅನೇಕ ಕಡೆ ದಾಂದಲೆ ನಡೆಸಿದ್ದರು. ಈ ವೇಳೆ 50ಕ್ಕೂ ಹೆಚ್ಚುಜೀವ ಕಳೆದುಕೊಂಡಿದ್ದರೆ, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.



Read more

[wpas_products keywords=”deal of the day sale today offer all”]