Karnataka news paper

ಬೆಂಗಳೂರು-ಮೈಸೂರು-ಹೈದರಾಬಾದ್‌ ನಡುವೆ ‘ಹೈ ಸ್ಪೀಡ್‌ ರೈಲು’: ಸಿಎಂ ಬೊಮ್ಮಾಯಿ



ಬೆಂಗಳೂರು: ಪ್ರಧಾನಮಂತ್ರಿ ಗತಿ ಶಕ್ತಿ ಕಾರ್ಯಕ್ರಮದಡಿಯಲ್ಲಿ ಬೆಂಗಳೂರು-ಮೈಸೂರು-ಹೈದರಾಬಾದ್‌ ನಡುವೆ ‘ಹೈ ಸ್ಪೀಡ್‌ ರೈಲು’ ಯೋಜನೆ ಪ್ರಮುಖವಾಗಿದ್ದು, ಸುಮಾರು 453 ಕಿ.ಮೀ. ಉದ್ದದ ರೈಲು ಮಾರ್ಗವನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಸೋಮವಾರ ನಡೆದ ‘ಪಿಎಂ ಗತಿ ಶಕ್ತಿ’ ಯೋಜನೆಯ ದಕ್ಷಿಣ ವಲಯ ಸಮ್ಮೇಳನದಲ್ಲಿ ವರ್ಚುವಲ್‌ ವೇದಿಕೆ ಮೂಲಕ ಪಾಲ್ಗೊಂಡು ಮಾತನಾಡಿದ ಅವರು, ”ಈ ಯೋಜನೆ ಅನುಷ್ಠಾನದಿಂದ ಕರ್ನಾಟಕ ಮತ್ತು ತೆಲಂಗಾಣ ಎರಡೂ ರಾಜ್ಯಗಳ ನಡುವೆ ಆರ್ಥಿಕಾಭಿವೃದ್ಧಿಗೆ ಸಹಕಾರಿಯಾಗಲಿದೆ,” ಎಂದರು.

”ಬೆಂಗಳೂರು ಉಪನಗರ ಹಾಗೂ ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೆ ಸಂಪರ್ಕಕ್ಕಾಗಿ ‘ಕೆ-ರೈಡ್‌’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ. ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದರಾಬಾದ್‌ ಹಾಗೂ ಬೆಂಗಳೂರು-ಮುಂಬಯಿ ನಡುವೆ ಮೆಗಾ ಮೂಲ ಸೌಕರ್ಯ ಕೈಗಾರಿಕೆ ಕಾರಿಡಾರ್‌ ಯೋಜನೆಗಳನ್ನು ಸ್ಥಾಪಿಸಲು ಸುಮಾರು 11 ಸಾವಿರ ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ರಾಜ್ಯದಲ್ಲಿ ಇಂಡಸ್ಟ್ರಿಯಲ್‌ ಕಾರಿಡಾರ್‌, ಕೃಷಿ, ತೋಟಗಾರಿಕೆ ಕ್ಲಸ್ಟರ್‌ ಮತ್ತು ವಿಶೇಷ ಆರ್ಥಿಕ ವಲಯಗಳಲ್ಲಿ ಮೂಲ ಸೌಕರ್ಯ ನಿರ್ಮಾಣಕ್ಕಾಗಿ ಹಲವು ಯೋಜನೆಗಳ ಜಾರಿಗೆ ಕ್ರಮ ವಹಿಸಲಾಗಿದೆ,” ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

”ಸುಮಾರು 2,274 ಕಿ.ಮೀ.ಗಳಷ್ಟು ರಾಜ್ಯ ಹೆದ್ದಾರಿ, ಸುಮಾರು 3,611 ಕಿ.ಮೀ.ಗಳಷ್ಟು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಜಂಟಿ ಸಹಭಾಗಿತ್ವದಲ್ಲಿ 1,100 ಕಿ.ಮೀ., ಹೊಸ ರೈಲ್ವೆ ಲೈನ್‌ ನಿರ್ಮಾಣಕ್ಕೆ ಅನುಮೋದನೆ ದೊರಕಿದೆ. ದಕ್ಷಿಣ ಭಾರತದ ಪ್ರಮುಖ ಮೆಟ್ರೊ ನಗರಗಳಾದ ಚೆನ್ನೈ-ಬೆಂಗಳೂರು-ಮೈಸೂರು ಹಾಗೂ ಹೈದರಾಬಾದ್‌-ಬೆಂಗಳೂರು ನಡುವೆ ‘ಹೈ ಸ್ಪೀಡ್‌ ರೈಲು’ ಮಾರ್ಗ ನಿರ್ಮಾಣಕ್ಕೆ ರೈಲ್ವೆ ಇಲಾಖೆ ತೀರ್ಮಾನಿಸಿದೆ,” ಎಂದು ವಿವರಿಸಿದರು.

“ಉಡಾನ್‌ ಯೋಜನೆಯಡಿ ಶಿವಮೊಗ್ಗ, ಬಳ್ಳಾರಿ, ವಿಜಯಪುರ, ಹಾಸನ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಹೆಲಿ ಟೂರಿಸಂಗಾಗಿ ಚಿಕ್ಕಮಗಳೂರು, ಮಡಿಕೇರಿ, ಹಂಪಿಯಲ್ಲಿ ಹೆಲಿಪೋರ್ಟ್‌ ನಿರ್ಮಾಣ, ಖಾಸಗಿ ಸಹಭಾಗಿತ್ವದಲ್ಲಿ ಬೇಲೆಕೆರೆಯಲ್ಲಿ ಎರಡು ‘ಗ್ರೀನ್‌ ಫೀಲ್ಡ್‌ ಬಂದರು’ ನಿರ್ಮಾಣ, ಸಾಗರಮಾಲಾ ಯೋಜನೆಯಡಿ ಪವಿನಕುರ್ವೆ, ಕಾರವಾರ ಮತ್ತು ಹಳೆ ಮಂಗಳೂರು ಬಂದರುಗಳ ಆಧುನೀಕರಣಕ್ಕೆ ಯೋಜನೆ ಸಿದ್ಧಪಡಿಸಲಾಗಿದೆ. ರಾಷ್ಟ್ರೀಯ ಗ್ಯಾಸ್‌ ಗ್ರಿಡ್‌ ಯೋಜನೆಯಡಿ ರಾಜ್ಯದ 28 ಜಿಲ್ಲೆಗಳಲ್ಲಿ 1,204 ಕಿ.ಮೀ. ಗ್ಯಾಸ್‌ ಪೈಪ್‌ ಲೈನ್‌ ಅಳವಡಿಸಲಾಗುವುದು. ಆದ್ದರಿಂದ ಮೂಲಭೂತ ಸೌಕರ್ಯ ನಿರ್ಮಾಣ ಯೋಜನೆಗಳಿಗೆ ತೀವ್ರಗತಿಯಲ್ಲಿಅನುಮೋದನೆ ಹಾಗೂ ಚಾಲನೆ ಕೊಡಲು ಅಗತ್ಯ ನೆರವು ನೀಡಬೇಕು,” ಎಂದು ಸಿಎಂ ಕೋರಿದರು.



Read more

[wpas_products keywords=”deal of the day sale today offer all”]