ಹೈಲೈಟ್ಸ್:
- ಗಂಡ-ಹೆಂಡತಿ ಜಗಳ ಹೊಯ್ಸಳ ಬರುವ ತನಕ!
- 112 ಸಹಾಯವಾಣಿಗೆ ಪತಿ ಪತ್ನಿ ಕಲಹದ ಕರೆಗಳೇ ಹೆಚ್ಚು
- ಜಗಳ ಬಿಡಿಸುವುದರಲ್ಲೇ ಪೊಲೀಸ್ ಸಿಬ್ಬಂದಿ ಸುಸ್ತು
ಬೆಳಗಾವಿ: ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ತ್ವರಿತವಾಗಿ ಸಹಾಯ ಒದಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಪ್ರಾರಂಭಿಸಲಾಗಿರುವ 112 ಸಹಾಯವಾಣಿಯ (ಹೊಯ್ಸಳ) ಪೊಲೀಸ್ ಸಿಬ್ಬಂದಿ ಬೆಳಗಾವಿಯಲ್ಲಿ ಗಂಡ-ಹೆಂಡತಿ ಜಗಳ ಬಿಡಿಸುವುದರಲ್ಲೇ ಸುಸ್ತಾಗುತ್ತಿದ್ದಾರೆ.
ಪೊಲೀಸರ ಸಹಾಯ ಯಾಚಿಸಿ 112ಕ್ಕೆ ಬರುವ ಕರೆಗಳಲ್ಲಿ ಅರ್ಧದಷ್ಟು ಪತಿ ಪತ್ನಿ ಕಲಹದ್ದಾಗಿವೆ. ಪೊಲೀಸ್, ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್ನ ತುರ್ತು ಸೇವೆಗೆ ದೇಶಾದ್ಯಂತ ಒಂದೇ ಸಹಾಯವಾಣಿ ಸಂಖ್ಯೆ 112 ಅನ್ನು ನಾಲ್ಕು ತಿಂಗಳ ಹಿಂದೆ ಪ್ರಾರಂಭಿಸಲಾಗಿದೆ. ಸಹಾಯವಾಣಿಯ ಅನುಷ್ಠಾನಕ್ಕೆ ಕೋಟ್ಯಂತರ ರೂ. ಖರ್ಚು ಮಾಡಿ ಪ್ರತಿ ಜಿಲ್ಲೆಗೆ ತಲಾ 10-12 ಹೊಸ ವಾಹನಗಳನ್ನು ಒದಗಿಸಲಾಗಿದೆ. ಸಾರ್ವಜನಿಕರಿಗೆ ಅಪಾಯ ಉಂಟಾದ ತುರ್ತು ಸಂದರ್ಭದಲ್ಲಿ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಸಮಸ್ಯೆ ಬಗೆಹರಿಸುವುದು ಈ ಸಹಾಯವಾಣಿ ಸ್ಥಾಪನೆಯ ಉದ್ದೇಶ. ಆದರೆ ಬೆಳಗಾವಿ ಮಹಾನಗರ ಮತ್ತು ತಾಲೂಕಿನ ವ್ಯಾಪ್ತಿಯಲ್ಲಿ ಅರ್ಧದಷ್ಟು ಕರೆಗಳು ಗಂಡ -ಹೆಂಡತಿ ಜಗಳದ ಮಧ್ಯಸ್ಥಿಕೆ ವಹಿಸುವುದಕ್ಕಾಗಿಯೇ ಸಹಾಯವಾಣಿಗೆ ಬರುತ್ತಿವೆ.
ರಾಜಿ ಸಂಧಾನ: ನವೆಂಬರ್ 1ರಿಂದ ಈವರೆಗೆ ಸಹಾಯವಾಣಿಗೆ ಪೊಲೀಸ್ ಸಹಾಯಯಾಚಿಸಿ ಒಟ್ಟು 65 ಕರೆಗಳು ಬಂದಿವೆ. ಅದರಲ್ಲಿ 30 ಕರೆಗಳು ಗಂಡ -ಹೆಂಡತಿ ಜಗಳದ್ದಾಗಿದೆ. ಅನಗೋಳ, ಗೋಜಗೆ, ಟಿಳಕವಾಡಿಯ ವಿದ್ಯಾನಗರ, ಹನುಮಾನ ನಗರ, ಹುಂಚನಾಟ್ಟಿ, ಬಾಳೆಕುಂದ್ರಿ, ಉದ್ಯಮಬಾಗ, ಸಿಂಧೋಳಿ, ಸಂತಿಬಸ್ತವಾಡ, ರುಕ್ಮಿಣಿ ನಗರ ಸೇರಿದಂತೆ ನಗರದ ಹಲವು ಕಡೆಗಳಿಂದ ಪತಿ ಪತ್ನಿ ಕಲಹದ ಕರೆಗಳು ಬರುತ್ತಿವೆ. ಉಳಿದಂತೆ ಅಣ್ಣ ತಮ್ಮಂದಿರ ಜಗಳ, ಮಗ ಮದ್ಯ ಸೇವಿಸಿ ಮನೆಗೆ ಬಂದು ಗಲಾಟೆ ಮಾಡಿದ ದೂರು, ಜೋರಾಗಿ ಸೌಂಡ್ ಸಿಸ್ಟಂ ಹಚ್ಚಿ ಗಲಾಟೆ ಮಾಡುತ್ತಿರುವ ಕುರಿತು ದೂರು, ನೆರೆ ಹೊರೆಯವರ ಜಗಳದ ಕುರಿತು ಹೆಚ್ಚು ಕರೆಗಳು ಬಂದಿವೆ. ಒಂದು ಪ್ರಕರಣದಲ್ಲಿ ತಾಯಿ ಮಗಳ ಜಗಳದ ದೂರು ಸಹ ಬಂದಿದ್ದರೆ, ಎರಡು ಪ್ರಕರಣಗಳು ನೀರಿಗಾಗಿ ನಾರಿಯರ ಜಗಳದ ದೂರಿಗೆ ಸಂಬಂಧಿಸಿದ್ದಾಗಿದೆ.
ಜಾಗೃತಿ ಅಗತ್ಯ: ಲಭ್ಯವಿರುವ ಕೆಲವೇ ವಾಹನಗಳು ಮತ್ತು ಪೊಲೀಸ್ ಸಿಬ್ಬಂದಿ ಗಂಡ-ಹೆಂಡತಿ ಜಗಳ ಬಿಡಿಸುವುದರಲ್ಲೇ ಹೆಚ್ಚು ಗಮನ ಕೊಟ್ಟರೆ ನೈಜವಾಗಿ ತುರ್ತು ಅಗತ್ಯದ ಪ್ರಕರಣಗಳ ಕಡೆ ಗಮನ ಹರಿಸಲು ಕಷ್ಟವಾಗುತ್ತದೆ. ಪೊಲೀಸ್ ಇಲಾಖೆ 112 ಸಹಾಯವಾಣಿಯ ಸದ್ಬಳಕೆಯ ಬಗ್ಗೆ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕೌಟುಂಬಿಕ ಮೌಲ್ಯ ಕುಸಿತ: ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ ಪತಿ-ಪತ್ನಿ ಕಲಹಗಳು ಸಾಮಾನ್ಯವಾಗಿ ಮನೆಯ ಹಿರಿಯರ ಸಮ್ಮುಖದಲ್ಲೇ ರಾಜಿಯಾಗುತ್ತಿದ್ದವು. ಆದರೆ, ಪ್ರಸ್ತುತ ಕುಟುಂಬಗಳು ಕಿರಿದಾಗುತ್ತ ಬಂದಂತೆ ಕೌಟುಂಬಿಕ ವ್ಯವಸ್ಥೆಯ ಮೌಲ್ಯ ಕುಸಿಯುತ್ತಿದೆ. ಗಂಡ ಹೆಂಡತಿ ನಡುವಿನ ಕ್ಷುಲ್ಲಕ ಜಗಳಗಳು ಸಹ ಪೊಲೀಸರವರೆಗೆ ಹೋಗುತ್ತಿವೆ ಎಂದು ಕೆಎಲ್ಇ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಆಪ್ತ ಸಮಾಲೋಚಕ ಪ್ರಮೋದ ಸೂಳಿಕೇರಿ ಅಭಿಪ್ರಾಯಪಡುತ್ತಾರೆ.
112 ಸಹಾಯವಾಣಿಗೆ ಕರೆ ಬಂದಾಗ ಅದಕ್ಕೆ ಕ್ಷಿಪ್ರವಾಗಿ ಸ್ಪಂದಿಸಲೇಬೇಕಾಗುತ್ತದೆ. ಗಂಡ- ಹೆಂಡತಿ ಜಗಳವೂ ಕೆಲವೊಮ್ಮೆ ಗಂಭೀರ ರೂಪಕ್ಕೆ ತಿರುಗಬಹುದು. ಸಹಾಯವಾಣಿಯ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ.
ಸ್ನೇಹಾ ಪಿ.ವಿ., ಡಿಸಿಪಿ ಬೆಳಗಾವಿ.
Read more
[wpas_products keywords=”deal of the day sale today offer all”]