ಹೈಲೈಟ್ಸ್:
- ಮಳವಳ್ಳಿ ತಾಲೂಕಿನ ಕೋರೇಗಾಲದಲ್ಲಿ ಮಾನವೀಯ ನಡೆ
- ಐವರಿಗೆ ಹೊಸ ಬದುಕು
- ಅನಾರೋಗ್ಯದಿಂದ ಮೆದುಳು ನಿಷ್ಕ್ರಿಯವಾಗಿತ್ತು
ಗ್ರಾಮದ ಪುಟ್ಟರಾಮೇಗೌಡ ಅವರ ಪತ್ನಿ ನಾಗಮ್ಮ (45) ಕೆಲ ದಿನಗಳಿಂದ ತಲೆ ನೋವಿನಿಂದ ಬಳಲುತ್ತಿದ್ದರು. ಮೈಸೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಕುಟುಂಬದ ಸದಸ್ಯರು ದಾಖಲಿಸಿ ಪರೀಕ್ಷೆಗೆ ಒಳಪಡಿಸಿದರು. ಆಸ್ಪತ್ರೆಯ ವೈದ್ಯರು ತಲೆಯಲ್ಲಿ ಗೆಡ್ಡೆ ಕಾಣಿಸಿಕೊಂಡಿದ್ದು, ಮೆದುಳು ನಿಷ್ಕ್ರಿಯಗೊಂಡಿದೆ. ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದರು.
ವಾಪಸ್ ಮಳವಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಾಯಿಯನ್ನು ಕರೆದೊಯ್ದು ವೈದ್ಯರನ್ನು ಸಂಪರ್ಕಿಸಿದಾಗ ವರದಿಗಳನ್ನು ಪರಿಶೀಲಿಸಿದ ವೈದ್ಯರು, ಬದುಕುಳಿಯುವುದಿಲ್ಲ ಎಂದರು. ಮಗನನ್ನು ಕರೆದು ಅಂಗಾಂಗ ದಾನದ ಬಗ್ಗೆ ಮಾಹಿತಿ ನೀಡಿದರು. ನಾಗಮ್ಮ ಅವರ ಮಗ ಚರಣ್, ತಂದೆ ಪುಟ್ಟರಾಮೇಗೌಡ ಅವರೊಂದಿಗೆ ಚರ್ಚಿಸಿ, ಅಂಗಾಂಗ ದಾನಕ್ಕೆ ಒಪ್ಪಿಗೆ ಕೊಟ್ಟರು. ಮೈಸೂರಿನ ಬಿಜಿಎಸ್ ಅಪೋಲೊ ಆಸ್ಪತ್ರೆಗೆ ದಾಖಲಿಸಿ ಅಂಗಾಂಗ ದಾನ ಮಾಡಿದರು.
ಜೀರೋ ಟ್ರಾಫಿಕ್: ಶನಿವಾರ ಯಕೃತ್, ಎರಡು ಮೂತ್ರ ಪಿಂಡಗಳನ್ನು ಅಪೋಲೊ ಬಿಜಿಎಸ್ ಆಸ್ಪತ್ರೆಯ ಇಬ್ಬರು ರೋಗಿಗಳಿಗೆ, ಲಿವರ್ ಹಾಗೂ ಹೃದಯದ ಕವಚವನ್ನು ಗ್ರೀನ್ ಕಾರಿಡಾರ್ ನಿಯಮದಲ್ಲಿ ಜೀರೋ ಟ್ರಾಫಿಕ್ನಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಒಯ್ದರು. ಎರಡು ಕಣ್ಣುಗಳನ್ನು ಮೈಸೂರಿನ ಐ ಬ್ಯಾಂಕ್ಗೆ ನೀಡಲಾಗಿದೆ.
ಗೌರವ: ಮೃತ ಮಹಿಳೆಯ ಕುಟುಂಬದವರು ಐವರ ಹೊಸ ಬದುಕಿಗೆ ಸಹಕರಿಸಿ ಸಾರ್ಥಕತೆ ಮೆರೆದಿದ್ದಾರೆ. ಮೃತ ನಾಗಮ್ಮ ಅವರ ದೇಹವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸುವ ವೇಳೆ ಆಸ್ಪತ್ರೆಯ ವೈದ್ಯರು, ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ಎರಡೂ ಬದಿ ಸಾಲಾಗಿ ನಿಂತು ಗೌರವ ಸಲ್ಲಿಸಿದರು.
ವೈದ್ಯರ ಮನವಿ: ರಾಜ್ಯದಲ್ಲಿ ಅಂಗಾಂಗ ದಾನದ ಬಗ್ಗೆ ಜನರಿಗೆ ಅರಿವು ಮೂಡಿಸುವ ಅವಶ್ಯಕತೆ ಇದೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಜನರೇ ಮೆದುಳು ನಿಷ್ಕ್ರಿಯಗೊಂಡಾಗ ಅಂಗಾಂಗ ದಾನಕ್ಕೆ ಮುಂದಾಗುತ್ತಿದ್ದು, ನಗರ ಪ್ರದೇಶಗಳಲ್ಲೂ ಈ ಬಗ್ಗೆ ಅರಿವು ಮೂಡಬೇಕಿದೆ ಎಂದು ಅಪೋಲೊ ಬಿಜಿಎಸ್ ಆಸ್ಪತ್ರೆಯ ಆಡಳಿತ ವಿಭಾಗದ ಮುಖ್ಯಸ್ಥ ಎನ್. ಜಿ. ಭರತೇಶ್ ರೆಡ್ಡಿ ಮನವಿ ಮಾಡಿದರು.
Read more
[wpas_products keywords=”deal of the day sale today offer all”]