ಹೈಲೈಟ್ಸ್:
- ರಾತ್ರಿ ಬೀಟ್ ಪೊಲೀಸ್, ಎಎಸ್ಐ ಜೊತೆ ಮರಳು ಸಾಗಣೆದಾರರ ಸಂಭಾಷಣೆ
- ಮರಳು ದಂಧೆ ನಡೆಸುವವರಿಂದ ಪೇದೆಗೆ ಪ್ರತ್ಯುತ್ತರ
- ನಾವು ನೇರವಾಗಿ ನಿಮ್ಮ ಠಾಣೆಯ ಪಿಎಸ್ಐ ಮಾತುಕತೆ ನಡೆಸಿದ್ದೇವೆ ಎನ್ನುವ ದಂಧೆಕೋರರು
ಠಾಣೆ ಪಿಎಸ್ಐಯೊಬ್ಬರು ಮರಳು ಮಾಫಿಯಾ ಜತೆ ಕೈಜೋಡಿಸಿರುವ ಅಂಶ ಬೆಳಕಿಗೆ ಬಂದಂತಾಗಿದೆ. ಈ ಮೂಲಕ ಮರಳು ಮಾಫಿಯಾದವರು ಬೀಟ್ ಪೊಲೀಸ್ ಸಿಬ್ಬಂದಿ ಗಮನಕ್ಕೆ ತರದೆ ನೇರವಾಗಿ ಆಯಾ ಠಾಣೆಯ ಪಿಎಸ್ಐ ಜತೆ ನೇರ ಡೀಲ್ ಕುದುರಿಸುತ್ತಿರುವ ವ್ಯವಹಾರ ನಡೆಯುತ್ತಿದೆ ಎಂಬ ಆರೋಪಕ್ಕೆ ಈ ಆಡಿಯೋ ಇಂಬು ನೀಡಿದೆ. ಸೇಡಂ ತಾಲೂಕಿನಲ್ಲಿ ರಾತ್ರಿ ಮರಳು ದಂಧೆ ಸದ್ದಿಲ್ಲದೆ ನಡೆಯುತ್ತಿದೆ. ರಂಜೋಳ, ಮಾಧ್ವಾರ ,ಕುಕ್ಕುಂದಾ, ಬಿಬ್ಬಳಿ, ಬೀರನಳ್ಳಿ ಸೇರಿ ನಾನಾ ಕಡೆ ಮರಳು ದಂಧೆ ನಡೆಯುತ್ತಿದೆ. ಇಷ್ಟೆಲ್ಲ ನಡೆದರೂ ಹಿರಿಯ ಅಧಿಕಾರಿಗಳು ಮೌನ ವಹಿಸಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಆಡಿಯೋದಲ್ಲಿ ಏನಿದೆ?: ಕೆಲವು ದಿನಗಳ ಹಿಂದೆ ರಾತ್ರಿ ಬೀಟ್ ಪೊಲೀಸ್, ಎಎಸ್ಐ ಒಬ್ಬರು ತಮ್ಮ ಠಾಣೆ ವ್ಯಾಪ್ತಿಯ ಕುಕ್ಕುಂದಾಗೆ ತೆರಳಿದ್ದಾರೆ. ಅಗ ನದಿಯಲ್ಲಿ ಮರಳು ತೆಗೆದು ಟ್ರ್ಯಾಕ್ಟರ್ಗೆ ತುಂಬುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಅಲ್ಲಿರುವ ಜನರನ್ನು ಕರೆದು ವಿಚಾರಿಸಿದ್ದಾರೆ. ಆಗ ಮರಳು ದಂಧೆ ನಡೆಸುವವರು ನಾವು ನೇರವಾಗಿ ನಿಮ್ಮ ಠಾಣೆಯ ಪಿಎಸ್ಐ ಮಾತುಕತೆ ನಡೆಸಿದ್ದೇವೆ. ರಾತ್ರಿ ಮರಳು ಹೊಡೆದು ಬೆಳಗ್ಗೆ ಭೇಟಿಯಾಗುತ್ತೇವೆ ಎಂದು ಹೇಳುತ್ತಾರೆ. ಆಗ ಪೇದೆ, ಎಎಸ್ಐ ಕಂಗಾಲು ಆಗಿದ್ದಾರೆ. ಆಗ ಪೇದೆ, ಎಎಸ್ಐ ನಮ್ಮ ಠಾಣೆಯ ಬಾಸ್ ಗಮನಕ್ಕೆ ತಂದರೆ ಸಾಲದು ನಮ್ಮ ಗಮನಕ್ಕೆ ತರಬೇಕು ಎಂದಿದ್ದಾರೆ. ಆಗ ಮರಳು ಮಾಫಿಯಾದವರು ‘ನಾವು ನಿಮ್ಮ ಠಾಣೆಯ ಬಾಸ್ ಜತೆ ನೇರ ವ್ಯವಹಾರ ಇದೆ’ ಎಂದಿದ್ದಾರೆ. ಕೊನೆಗೆ ಬಂದ ದಾರಿಗೆ ಸುಂಕವಿಲ್ಲದೇ ಪೇದೆ, ಎಎಸ್ಐ ವಾಪಸ್ ಆಗಿದ್ದಾರೆ. ಅಂದು ರಾತ್ರಿ ಮರಳು ಮಾಫಿಯಾ ಹಾಗೂ ಪೊಲೀಸ್ ಸಿಬ್ಬಂದಿ ಜತೆ ನಡೆದ ಆಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.
ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ
ಪೊಲೀಸರಿಂದ ವಸೂಲಿ ಮಿತಿ ಮೀರಿದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಪಾದಿಸಿದ್ದಾರೆ. ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ. ಡ್ರಗ್ಸ್, ಮದ್ಯ ನೀರಿನಂತೆ ಹರಿಯುತ್ತಿವೆ. ಇದರ ಜೊತೆಗೆ ಅಕ್ರಮ ಮರಳು ದಂಧೆಯೂ ಎಗ್ಗಿಲ್ಲದೇ ಸಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಪ್ರಿಯಾಂಕ್ ಖರ್ಗೆ, ಮರಳು ಮಾಫಿಯಾದ ಆಡಿಯೋ ಕುರಿತಾಗಿ ಅನೇಕ ಪ್ರಶ್ನೆಗಳನ್ನು ಬಿಜೆಪಿ ಸರಕಾರಕ್ಕೆ ಕೇಳಿದ್ದಾರೆ.
ಮರಳು ಮಾಫಿಯಾದವರು ನೇರವಾಗಿ ಆಯಾ ಠಾಣೆಯ ಪಿಎಸ್ಐ ಜತೆ ನೇರ ಡೀಲ್ ಕುದುರಿಸುತ್ತಿರುವ ವ್ಯವಹಾರಕ್ಕೆ ಆಡಿಯೋ ನೇರ ಸಾಕ್ಷಿಯಾಗಿದೆ. ನಾನಾ ಕಡೆ ಪೊಲೀಸರ ಹಾಗೂ ಆಡಳಿತ ಪಕ್ಷದ ರಾಜಕಾರಣಿಗಳ ಕೃಪಾಕಟಾಕ್ಷದಿಂದ ಸರಾಗವಾಗಿ ಮರಳು ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಇದು ಇಡೀ ಸರಕಾರಕ್ಕೆ ನಾಚಿಕೆಯಾಗುವ ವಿಚಾರ. ಇದರಲ್ಲಿ ಆಡಳಿತ ಪಕ್ಷದ ಜನಪ್ರತಿನಿಧಿಗಳ ಪಾಲೆಷ್ಟು? ಸರಕಾರದ ಪಾಲೆಷ್ಟು? ಗೃಹ ಸಚಿವರ ಪಾಲೆಷ್ಟು? ಎಂಬುದು ಬಯಲಾಗಬೇಕಿದೆ. ಕಲಬುರ್ಗಿಯನ್ನು ಹಾಳು ಮಾಡಲು ಬಿಜೆಪಿ ಸರ್ವ ಸನ್ನದ್ಧ ರೀತಿಯಲ್ಲಿ ಕೆಲಸ ಮಾಡುತ್ತಿರುವುದು ಈ ಆಡಿಯೋ ಮುಖೇನ ಜಗಜ್ಜಾಹೀರಾಗಿದೆ ಎಂದು ಹೇಳಿದ್ದಾರೆ.
ಇನ್ನು ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ‘ಸೇಡಂ ತಾಲೂಕಿನ ಸೇಡಂ, ಮಳಖೇಡ, ಕುರುಕುಂಟ, ಮುಧೋಳ ಮತ್ತು ಸುಲೇಪೇಟ ಠಾಣೆ ವ್ಯಾಪ್ತಿಯಲ್ಲಿ ರಾಜಾರೋಷವಾಗಿ ಮರಳು ದಂಧೆ ನಡೆಯುತ್ತಿದ್ದರೂ ಎಸ್ಪಿ ಕ್ರಮ ಕೈಗೊಳ್ಳುತ್ತಿಲ್ಲ. ಮೇಲಧಿಕಾರಿಗಳು ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ತಿಳಿಯುತ್ತಿಲ್ಲ. ಕ್ರಮ ಕೈಗೊಳ್ಳದಿದ್ದರೆ ಪೊಲೀಸ್ ಇಲಾಖೆ ಮೇಲೆ ಸಂಶಯ ಪಡಬೇಕಾಗುತ್ತದೆ. ತಕ್ಷಣ ಮರಳು ದಂಧೆಯಲ್ಲಿ ಭಾಗಿಯಾದವರನ್ನು ಅರೆಸ್ಟ್ ಮಾಡಬೇಕು. ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.
Read more
[wpas_products keywords=”deal of the day sale today offer all”]