ಹೈಲೈಟ್ಸ್:
- ಚುಚ್ಚು ಮದ್ದು ಪಡೆದ ಬಳಿಕ ಅಸ್ವಸ್ಥಗೊಂಡು ಸಾವನ್ನಪ್ಪಿದ ಮಕ್ಕಳು
- ಮೈಲಿ ಬೇನೆ, ಧಡಾರ ರೋಗ ನಿಯಂತ್ರಣಕ್ಕೆ ನೀಡುವ ರುಬೆಲ್ಲಾ ಚುಚ್ಚುಮದ್ದು
- ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮಕ್ಕಳಿಗೆ ರುಬೆಲ್ಲಾ ಚುಚ್ಚು ಮದ್ದು ನೀಡಿದ್ದರು
ರಾಮದುರ್ಗ ತಾಲೂಕಿನ ಬೋಚಬಾಳ ಗ್ರಾಮದ ಪವಿತ್ರಾ ಹುಲಗೂರ (13 ತಿಂಗಳು), ಮಧು ಕರಗುಂದಿ (14 ತಿಂಗಳು) ಹಾಗೂ ಮಲ್ಲಾಪುರ ಗ್ರಾಮದ ಚೇತನ ಪೂಜಾರಿ (1.5 ವರ್ಷ ) ಮೃತ ಮಕ್ಕಳು.
ಜನವರಿ 11 ಮತ್ತು 12 ರಂದು ಬೋಚಬಾಳ ಗ್ರಾಮಕ್ಕೆ ಭೇಟಿ ನೀಡಿದ್ದ ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಮಕ್ಕಳಿಗೆ ರುಬೆಲ್ಲಾ ಚುಚ್ಚು ಮದ್ದು ನೀಡಿದ್ದರು. ಚುಚ್ಚು ಮದ್ದು ಹಾಕಿಸಿಕೊಂಡು ಮನೆಗೆ ಹೋಗಿದ್ದ ಮಕ್ಕಳಲ್ಲಿ ಐವರು ಮಕ್ಕಳು ವಾಂತಿ ಭೇದಿಯಿಂದ ತೀವ್ರ ಅಸ್ವಸ್ಥಗೊಂಡಿದ್ದರು. ಅವರನ್ನು ಮುನವಳ್ಳಿ ಹಾಗೂ ರಾಮದುರ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ನಾಲ್ಕು ಮಕ್ಕಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ಕಳಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಒಂದೂವರೆ ವರ್ಷದ ಬಾಲಕ ಚೇತನ ಪೂಜಾರಿ ಜನವರಿ 12 ರಂದೇ ಮೃತಪಟ್ಟಿದ್ದ. ಉಳಿದ ಮೂವರು ಮಕ್ಕಳನ್ನು ಜಿಲ್ಲಾಸ್ಪತ್ರೆಯ ಐಸಿಯು ಘಟಕಕ್ಕೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಬ್ಬರು ಮಕ್ಕಳು ಜನವರಿ 16 ರಂದು ಮೃತಪಟ್ಟಿದ್ದಾರೆ. ಇನ್ನೊಂದು ಮಗುವಿಗೆ ಚಿಕಿತ್ಸೆ ಮುಂದುವರೆದಿದೆ.

ಬೆಳಗಾವಿಯಲ್ಲಿ 3 ಕಂದಮ್ಮಗಳ ಉಸಿರು ನಿಲ್ಲಿಸಿದ ರುಬೆಲ್ಲಾಇಂಜೆಕ್ಷನ್..! ತನಿಖೆಗೆ ಡಿಎಚ್ಒ ಆದೇಶ
ಈ ಘಟನೆಯ ಕುರಿತು ‘ವಿಜಯ ಕರ್ನಾಟಕ’ಕ್ಕೆ ಮಾಹಿತಿ ನೀಡಿದ ರಾಮದುರ್ಗ ತಾಲೂಕು ವೈದ್ಯಾಧಿಕಾರಿ ಡಾ. ಸತೀಶ್ ಪೋತದಾರ್, ‘ತಾಲೂಕಿನ ಎಲ್ಲ ಪಿಎಚ್ಸಿಗಳಲ್ಲಿ ಮಕ್ಕಳಿಗೆ ವಿವಿಧ ಲಸಿಕೆ ನೀಡಲಾಗುತ್ತಿದೆ. ಆದರೆ, ಸಾಲಹಳ್ಳಿ ಪಿಎಚ್ಸಿ ವ್ಯಾಪ್ತಿಯಲ್ಲಿ ಮಾತ್ರ ಇಂಥ ದುರ್ಘಟನೆ ನಡೆದಿದೆ. ಮಕ್ಕಳಿಗೆ ನೀಡಿದ ರುಬೆಲ್ಲಾ ಚುಚ್ಚುಮದ್ದಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಒಂದು ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕವಷ್ಟೇ ಕಾರಣ ಸ್ಪಷ್ಟವಾಗಬೇಕಿದೆ’ ಎಂದರು.
ತನಿಖೆಗೆ ಆದೇಶ: ರುಬೆಲ್ಲಾ ಚುಚ್ಚುಮದ್ದು ಪಡೆದು ಮೂವರು ಕಂದಮ್ಮಗಳು ಮೃತಪಟ್ಟಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸಾವಿನ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ಡಿಹೆಚ್ಒ ಡಾ. ಎಸ್. ವಿ. ಮುನ್ಯಾಳ್ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜನವರಿ 12 ರಂದು 21 ಮಕ್ಕಳಿಗೆ ಲಸಿಕೆ ನೀಡಲಾಗಿತ್ತು. ಅದರಲ್ಲಿ ನಾಲ್ವರು ಮಕ್ಕಳಿಗೆ ದಡಾರ, ರುಬೆಲ್ಲಾ ವ್ಯಾಕ್ಸಿನ್ ನೀಡಲಾಗಿತ್ತು. ಆ ನಾಲ್ಕು ಮಕ್ಕಳಲ್ಲಿ ಪ್ರತಿಕೂಲ ಪರಿಣಾಮ ಕಾಣಿಸಿಕೊಂಡಿದೆ. ಬಳಿಕ ಅವರಿಗೆ ರಾಮದುರ್ಗ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು’ ಎಂದು ತಿಳಿಸಿದರು.
ವಯಸ್ಕರಿಗೆ ಕೋವಿಡ್ ಹಾಗೂ ಮಕ್ಕಳಿಗೆ ಎಂಆರ್ ಲಸಿಕೆ ಒಂದೇ ಕೇಂದ್ರದಲ್ಲಿ ನೀಡಿದ್ದು, ಈ ಅವಘಡಕ್ಕೆ ಕಾರಣವೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಂತಹ ಅಚಾತುರ್ಯ ಆಗಿದ್ದು ಕಂಡು ಬಂದಿಲ್ಲ, ಲಸಿಕೆ ಪ್ರತಿಕೂಲ ಪರಿಣಾಮ ಬೀರಿದರೆ ಆ ಬಗ್ಗೆ ಪರಿಶೀಲನೆಗೆ ಸಮಿತಿ ಇದೆ. ಆ ಸಮಿತಿಯ ವರದಿಯಂತೆ ಕ್ರಮ ವಹಿಸಲಾಗುವುದು. ಪ್ರಾಥಮಿಕ ತನಿಖೆಯಲ್ಲಿ ಲಸಿಕೆಯಿಂದ ಅಡ್ಡ ಪರಿಣಾಮ ಬೀರಿದ ಬಗ್ಗೆ ಮಾಹಿತಿ ಇದೆ’ ಎಂದರು.
ಹೆತ್ತವರ ಆಕ್ರಂದನ
ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಯಸ್ಕರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಮಕ್ಕಳಿಗೆ ರುಬೆಲ್ಲಾ ಲಸಿಕೆ ನೀಡುವಾಗ ಅಚಾತುರ್ಯದಿಂದ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಹೆತ್ತ ಮಕ್ಕಳನ್ನು ಕಳೆದುಕೊಂಡ ತಂದೆ – ತಾಯಿ, ಕುಟುಂಬದವರ ರೋಧನ ಮುಗಿಲು ಮುಟ್ಟಿದೆ. ಬೆಳಗಾವಿಯ ಬಿಮ್ಸ್ನಿಂದ ಎಳೆಯ ಕಂದಮ್ಮಗಳ ಮೃತ ದೇಹವನ್ನು ವಶಕ್ಕೆ ಪಡೆದ ವೇಳೆ ಕುಟುಂಬದವರ ಆಕ್ರಂದನ ಮನ ಕರಗುವಂತಿತ್ತು.
‘ಮೃತ ಮಕ್ಕಳ ರಕ್ತದ ಮಾದರಿ, ಮಲ – ಮೂತ್ರದ ಮಾದರಿ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಪರಿಶೀಲಿಸಿ ಕ್ರಮ ವಹಿಸುತ್ತೇವೆ. ಪ್ರಕರಣ ಕುರಿತು ಈಗಾಗಲೇ ತನಿಖೆಗೆ ಆದೇಶಿಸಿದ್ದೇವೆ. ಇದರಲ್ಲಿ ಯಾವ ಸಿಬ್ಬಂದಿ ತಪ್ಪು ಮಾಡಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಬೆಳಗಾವಿ ಡಿಎಚ್ಒ ಡಾ. ಎಸ್. ವಿ. ಮುನ್ಯಾಳ ಭರವಸೆ ನೀಡಿದ್ದಾರೆ.
Read more
[wpas_products keywords=”deal of the day sale today offer all”]