ಬೆಳಗಾವಿ (ಸುವರ್ಣ ವಿಧಾನಸೌಧ): ವಿಧಾನಮಂಡಲದ ಚಳಿಗಾಲದ ಅಧಿವೇಶನದ ಮೊದಲ ದಿನವೇ ವಿಧಾನಸಭೆಯಲ್ಲಿ ಬಹುತೇಕ ಶಾಸಕರ ಗೈರು ಹಾಜರಿ ಎದ್ದು ಕಾಣುತ್ತಿತ್ತು.
ಸೋಮವಾರ ಮಧ್ಯಾಹ್ನದವರೆಗೆ ಸುಮಾರು 75 ರಿಂದ 80 ಶಾಸಕರು ಮಾತ್ರ ಭಾಗವಹಿಸಿದ್ದರು. ಮಧ್ಯಾಹ್ನದ ಬಳಿಕವೂ ಸರಿ ಸುಮಾರು ಅಷ್ಟೇ ಶಾಸಕರು ಇದ್ದರು. ಬೆಳಿಗ್ಗೆ ಹಾಜರಾದವರಲ್ಲಿ ಕೆಲವರು ಮಧ್ಯಾಹ್ನದ ಬಳಿಕ ಹಾಜರಾಗಲಿಲ್ಲ.
ಬೆಳಿಗ್ಗೆ 11 ಕ್ಕೆ ಕರೆಗಂಟೆ ಹಾಕಿದರೂ ಸುಮಾರು ಹೊತ್ತು ಕೋರಂ ಇಲ್ಲದೇ ಕಲಾಪ ಆರಂಭವಾಗಲಿಲ್ಲ.
ಶಾಸಕರಾದ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್ನ ಕೆ.ಆರ್.ರಮೇಶ್ಕುಮಾರ್, ಜೆಡಿಎಸ್ನ ಬಂಡೆಪ್ಪ ಕಾಶೆಂಪೂರ, ಕೆ.ಎಂ.ಶಿವಲಿಂಗೇಗೌಡ ಅವರು ಎಂದಿನ ಉತ್ಸಾಹದಲ್ಲೇ ಬೆಳಗ್ಗಿನಿಂದ ಸಂಜೆಯವರೆಗೆ ಕಲಾಪದಲ್ಲಿ ಭಾಗವಹಿಸಿದ್ದರು. ಜೆಡಿಎಸ್ನ ಶಾಸಕರಾದ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಅವರು ಬಂದಿರಲಿಲ್ಲ. ಕಳೆದ ಅಧಿವೇಶನ ಪೂರ್ತಿ ಗೈರಾಗಿದ್ದ ಉಪಸಭಾಧ್ಯಕ್ಷ ಆನಂದ ಮಾಮನಿ ಕಲಾಪದಲ್ಲಿ ಹಾಜರಾಗಿದ್ದರು.
ಸುವರ್ಣ ವಿಧಾನಸೌಧದ ಹೊರಗೆ ಜನರ ಉತ್ಸಾಹ ಕಂಡು ಬಂದಿತು. ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಕಲಾಪವನ್ನು ವೀಕ್ಷಿಸಲು ಪಾಸ್ಗಾಗಿ ಉದ್ದ ಸಾಲೇ ಇತ್ತು.