ಹೈಲೈಟ್ಸ್:
- ಮಲಯಾಳಂ ಚಿತ್ರರಂಗವನ್ನು ಬೆಚ್ಚಿಬೀಳಿಸಿದ ಪ್ರಕರಣ
- 2017ರಲ್ಲಿ ಸಂಭವಿಸಿದ ಲೈಂಗಿಕ ದೌರ್ಜನ್ಯ ಪ್ರಕರಣ
- ಅನೇಕ ತಿರುವುಗಳಿಗೆ ಸಾಕ್ಷಿಯಾಗಿರುವ ಮಲಯಾಳಂ ನಟಿಯ ದೌರ್ಜನ್ಯ ಪ್ರಕರಣ
ಫೆಬ್ರವರಿ 17, 2017: ಕೊಚ್ಚಿ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಪುರುಷರ ಗುಂಪೊಂದು ಮಲಯಾಳಂನ ಜನಪ್ರಿಯ ನಟಿಯನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದರು. ಎರಡು ಗಂಟೆಗಳ ಬಳಿಕ ಆಕೆಯನ್ನು ನಟ-ನಿರ್ದೇಶಕ ಲಾಲ್ ಮನೆ ಬಳಿ ಬಿಡಲಾಗುತ್ತದೆ. ಮಲಯಾಳಂ ಫಿಲ್ಮ್ ಇಂಡಸ್ಟ್ರಿಯಲ್ಲಿ ಹಲವು ನಟರ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಪಲ್ಸರ್ ಸುನಿ ಎಂಬಾತನೇ ತಮ್ಮ ಮೇಲೆ ದಾಳಿ ಮಾಡಿದ್ದು ಎಂದು ನಟಿಗೆ ತಿಳಿದಿತ್ತು. ಅಂದೇ ಈ ಪ್ರಕರಣದ ಕುರಿತಾಗಿ ನಟಿ ಪೊಲೀಸರಿಗೆ ದೂರು ನೀಡುತ್ತಾರೆ. ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳುತ್ತಾರೆ.
ಫೆಬ್ರವರಿ 19, 2017: ಪ್ರಕರಣದಲ್ಲಿನ ಏಳು ಆರೋಪಿಗಳ ಪೈಕಿ ಮೂವರನ್ನು ಎರಡು ದಿನಗಳಲ್ಲಿ ಪೊಲೀಸರು ಬಂಧಿಸುತ್ತಾರೆ. ಆದರೆ, ಪ್ರಕರಣದ ಪ್ರಮುಖ ಆರೋಪಿ ಸುನೀಲ್ ಕುಮಾರ್ ಅಲಿಯಾಸ್ ಪಲ್ಸರ್ ಸುನಿ ಪರಾರಿಯಾಗಿರುತ್ತಾನೆ.
ಫೆಬ್ರವರಿ 23, 2017: ಪಲ್ಸರ್ ಸುನಿ ಮತ್ತು ಇನ್ನೋರ್ವ ಆರೋಪಿ ವಿಜೀಶ್ ಶರಣಾಗಲು ಎರ್ನಾಕುಲಂನ ಹೆಚ್ಚುವರಿ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಬಂದಾಗ ಬಂಧಿಸಲಾಗುತ್ತದೆ. ಇದಕ್ಕೂ ಮುನ್ನ ವಕೀಲರು ಅಂಗಮಾಲಿ ಮ್ಯಾಜಿಸ್ಟ್ರೇಟ್ಗೆ ಹಲ್ಲೆಯ ದೃಶ್ಯಗಳನ್ನು ಒಳಗೊಂಡ ಮೊಬೈಲ್ ಫೋನ್ ಹಾಗೂ ಮೆಮರಿ ಕಾರ್ಡ್ಗಳನ್ನು ಹಸ್ತಾಂತರಿಸಿದರು.
ಫೆಬ್ರವರಿ 26, 2017: ಸಂತ್ರಸ್ತೆ ಆರೋಪಿಸಿದಂತೆ ಪ್ರಕರಣದಲ್ಲಿ ಯಾವುದೇ ಪಿತೂರಿ ಇಲ್ಲ ಎಂದು ಹೇಳಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಳ್ಳುತ್ತಾರೆ.
ಏಪ್ರಿಲ್ 18, 2017: ಪ್ರಕರಣದ ಮೊದಲ ಆರೋಪ ಪಟ್ಟಿಯನ್ನು ಪೊಲೀಸರು ಸಲ್ಲಿಸುತ್ತಾರೆ. ಪಲ್ಸರ್ ಸುನಿ ಮತ್ತು ಇತರ ಆರು ಮಂದಿಯನ್ನು ಆರೋಪಿಗಳೆಂದು ಹೆಸರಿಸುತ್ತಾರೆ.
ಮೇ 18, 2017: ಉದ್ಯಮದಲ್ಲಿನ ಮಹಿಳಾ ವೃತ್ತಿಪರರಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಎತ್ತಿ ತೋರಿಸಲು ಸಂತ್ರಸ್ತೆಯ ಸ್ನೇಹಿತರು ಒಂದುಗೂಡಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿದರು. ಪ್ರಕರಣದ ಕುರಿತು ತ್ವರಿತ ಕ್ರಮ ಕೈಗೊಳ್ಳಲು ಸಿಎಂ ಬಳಿ ಮನವಿ ಮಾಡಿದರು. ಪಲ್ಸರ್ ಸುನಿ ಮತ್ತು ಆತನ ತಂಡವನ್ನು ಬಂಧಿಸಲಾಗಿದ್ದರೂ, ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರೆಸಿದರು.
ಜೂನ್ 23, 2017: ಕಾಕ್ಕನಾಡು ಉಪ ಕಾರಾಗೃಹದಲ್ಲಿ ಪಲ್ಸರ್ ಸುನಿ ಜೊತೆಗಿದ್ದ ಕೈದಿ ಜಿನ್ಸನ್ನಿಂದ ಪ್ರಕರಣಕ್ಕೆ ಸ್ಫೋಟಕ ತಿರುವು ಲಭಿಸಿತು. ಪ್ರಕರಣದ ಬಗ್ಗೆ ಪಲ್ಸರ್ ಸುನಿ ಹಂಚಿಕೊಂಡಿದ್ದ ಕೆಲ ವಿವರಗಳನ್ನು ಜಿನ್ಸನ್ ಬಹಿರಂಗಪಡಿಸಿದ.
ಜೂನ್ 24, 2017: ನಟ ದಿಲೀಪ್ ಅವರಿಗೆ ಪಲ್ಸರ್ ಸುನಿ ಕಳುಹಿಸಿದ್ದಾರೆ ಎನ್ನಲಾದ ಪತ್ರ ಹೊರಬಿತ್ತು. ಮಲಯಾಳಂ ಚಿತ್ರರಂಗದಲ್ಲಿ ದಿಲೀಪ್ ಖ್ಯಾತಿ ಪಡೆದಿರುವ ನಟ. ಸಂತ್ರಸ್ತೆ ಜೊತೆಗೂ ಕೆಲ ಸಿನಿಮಾಗಳಲ್ಲಿ ದಿಲೀಪ್ ನಟಿಸಿದ್ದರು. ಸಂತ್ರಸ್ತೆಯ ಆಪ್ತ ಸ್ನೇಹಿತೆ ಮಂಜು ವಾರಿಯರ್ರನ್ನು ಈ ಹಿಂದೆ ದಿಲೀಪ್ ಮದುವೆಯಾಗಿದ್ದರು.
ಪ್ರಕರಣದಲ್ಲಿ ದಿಲೀಪ್ ಅವರ ಹೆಸರನ್ನು ಬಹಿರಂಗಪಡಿಸದಿರಲು ಸುನಿ ಅವರೊಂದಿಗೆ ಜೈಲಿನಲ್ಲಿ ಜೊತೆಗಿದ್ದ ವ್ಯಕ್ತಿಯಿಂದ 1.5 ಕೋಟಿ ರೂಪಾಯಿ ಬೇಡಿಕೆಯ ಫೋನ್ ಕರೆ ಬಂದಿತ್ತು ಎಂದು ನಿರ್ದೇಶಕ ನಾದಿರ್ಶಾ ಟಿವಿ ವಾಹಿನಿಯೊಂದಕ್ಕೆ ತಿಳಿಸಿದರು.
ಜೂನ್ 28, 2017: ಎಡಿಜಿಪಿ ಬಿ.ಸಂಧ್ಯಾ ಮತ್ತು ಎಸ್ಪಿ ಎ.ವಿ.ಜಾರ್ಜ್ ನೇತೃತ್ವದ ತನಿಖಾ ತಂಡ ದಿಲೀಪ್ ಮತ್ತು ನಾದಿರ್ಶಾ ಅವರನ್ನು ಸುಮಾರು 13 ಗಂಟೆಗಳ ಕಾಲ ವಿಚಾರಣೆ ನಡೆಸಿತು.
ಜುಲೈ 10, 2017: ದಿಲೀಪ್ ಅವರನ್ನು ಎಸ್ಐಟಿ ಬಂಧಿಸುತ್ತದೆ. ದಿಲೀಪ್ ಅವರನ್ನು ಅಲುವಾ ಉಪ-ಜೈಲಿನಲ್ಲಿ ಇರಿಸಲಾಗುತ್ತದೆ. ಸಂತ್ರಸ್ತೆ ಹಾಗೂ ಮಂಜು ವಾರಿಯರ್ ಸ್ನೇಹಿತರಾಗಿದ್ದು, ದಿಲೀಪ್ ಹಾಗೂ ಕಾವ್ಯಾ ಮಾಧವನ್ ನಡುವಿನ ಸಂಬಂಧದ ಬಗ್ಗೆ ಸಂತ್ರಸ್ತೆಗೆ ಮಂಜು ವಾರಿಯರ್ ತಿಳಿಸಿದ್ದರು. ಹೀಗಾಗಿ ಈ ದುಷ್ಕೃತ್ಯದ ಹಿಂದೆ ಸೇಡು ತೀರಿಸಿಕೊಳ್ಳುವ ಉದ್ದೇಶವಿದೆ ಎಂದು ಹೇಳಲಾಯಿತು. ಮಂಜು ವಾರಿಯರ್ಗೆ ವಿಚ್ಛೇದನ ನೀಡಿದ ಬಳಿಕ 2016ರಲ್ಲಿ ಕಾವ್ಯಾ ಅವರನ್ನು ದಿಲೀಪ್ ವಿವಾಹವಾದರು.
ಜುಲೈ 11, 2017: ತೀವ್ರ ಒತ್ತಡದ ಬಳಿಕ ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ಸ್ (ಅಮ್ಮ)ನಿಂದ ದಿಲೀಪ್ ಅವರನ್ನು ಹೊರಹಾಕಲಾಯಿತು.
ಆಗಸ್ಟ್ 15, 2017: ಪೂಂಜಾರ್ ಶಾಸಕ ಎಂಎಲ್ಎ ಪಿ.ಸಿ.ಜಾರ್ಜ್ ಸಂತ್ರಸ್ತೆ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡಿದರು. ಈ ಬಗ್ಗೆ ಮಧ್ಯ ಪ್ರವೇಶಿಸುವಂತೆ ಮುಖ್ಯಮಂತ್ರಿಗಳಿಗೆ ಸಂತ್ರಸ್ತೆ ಪತ್ರ ಬರೆದರು. ಬಳಿಕ ಪಿ.ಸಿ.ಜಾರ್ಜ್ ವಿರುದ್ಧ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದರು.
ಸೆಪ್ಟೆಂಬರ್ 10, 2017: ಸಂತ್ರಸ್ತೆ ಜೊತೆಗಿನ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಲು ಸಾಮಾಜಿಕ ಮಾಧ್ಯಮದಲ್ಲಿ ‘ಅವಕೊಪ್ಪಂ’ ಅಭಿಯಾನವನ್ನು ಪ್ರಾರಂಭಿಸಲಾಯಿತು. ಚಿತ್ರರಂಗದಲ್ಲಿ ಕೆಲವರು ಆರೋಪಿ ದಿಲೀಪ್ಗೆ ಬಹಿರಂಗವಾಗಿ ಬೆಂಬಲ ನೀಡಿದ್ದರಿಂದ ಈ ಅಭಿಯಾನ ಆರಂಭಿಸಲಾಯಿತು. ನಟಿಯರ ಪರವಾಗಿ ಹಲವರು ಬೆಂಬಲ ವ್ಯಕ್ತಪಡಿಸಿದರು.
ಅಕ್ಟೋಬರ್ 3, 2017: 85 ದಿನಗಳನ್ನು ಜೈಲಿನಲ್ಲಿ ಕಳೆದ ಬಳಿಕ ದಿಲೀಪ್ಗೆ ಜಾಮೀನು ಲಭಿಸಿತು.
ನವೆಂಬರ್ 22, 2017: ಅಂಗಮಾಲಿ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ತನಿಖಾ ತಂಡ ಸಹಾಯಕ ಚಾರ್ಜ್ಶೀಟ್ ಸಲ್ಲಿಸುತ್ತದೆ. 650 ಪುಟಗಳ ಚಾರ್ಜ್ಶೀಟ್ನಲ್ಲಿ 12 ಆರೋಪಿಗಳನ್ನು ಹೆಸರಿಸಲಾಯಿತು. ಪ್ರಕರಣದಲ್ಲಿ ದಿಲೀಪ್ ಎಂಟನೇ ಆರೋಪಿ. ಮಂಜು ವಾರಿಯರ್ ಅವರನ್ನು ಪ್ರಮುಖ ಸಾಕ್ಷಿಯನ್ನಾಗಿ ಪರಿಗಣಿಸಲಾಯಿತು.
ಡಿಸೆಂಬರ್ 5, 2017: ಆರೋಪಪಟ್ಟಿಯನ್ನು ನ್ಯಾಯಾಲಯವು ಸ್ವೀಕರಿಸುತ್ತದೆ. ಒಂದು ತಿಂಗಳ ಅವಧಿಯಲ್ಲಿ ಮಲಯಾಳಂ ಚಿತ್ರರಂಗದ 50ಕ್ಕೂ ಹೆಚ್ಚು ಮಂದಿ ಪ್ರಕರಣದಲ್ಲಿ ಸಾಕ್ಷಿಯಾಗುತ್ತಾರೆ.
ಜನವರಿ 20, 2018: ಪ್ರಕರಣದ ತನಿಖೆ ನಡೆಸುತ್ತಿರುವ ತಂಡದ ಭಾಗವಾಗಿರುವ ಎಡಿಜಿಪಿ ಸಂಧ್ಯಾ ಅವರನ್ನು ವರ್ಗಾವಣೆ ಮಾಡಲಾಯಿತು. ಈ ಮಧ್ಯೆ ಲೈಂಗಿಕ ದೌರ್ಜನ್ಯದ ವಿಡಿಯೋ ಪ್ರತಿಯನ್ನು ನೀಡುವಂತೆ ನ್ಯಾಯಾಲಯದ ಮುಂದೆ ದಿಲೀಪ್ ಅಸಾಧಾರಣ ಕೋರಿಕೆಯನ್ನಿಟ್ಟರು. ಲೈಂಗಿಕ ದೌರ್ಜನ್ಯದ ವಿಡಿಯೋ ಪ್ರತಿಯನ್ನು ವೀಕ್ಷಿಸಿ, ಇದು ತನ್ನ ವಿರುದ್ಧದ ಪಿತೂರಿ ಎಂದು ಸಾಬೀತುಪಡಿಸಲು ದಿಲೀಪ್ ಬಯಸಿದ್ದರು.
ಫೆಬ್ರವರಿ 7, 2018: ಲೈಂಗಿಕ ದೌರ್ಜನ್ಯದ ವಿಡಿಯೋ ಪ್ರತಿಯನ್ನು ನೀಡಲು ನ್ಯಾಯಾಲಯ ತಿರಸ್ಕರಿಸಿತು. ಪ್ರಕರಣದ ವಿಚಾರಣೆಯನ್ನು ಎರ್ನಾಕುಲಂ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಅಂಗಮಾಲಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವರ್ಗಾಯಿಸಿತು. ಬಳಿಕ ಲೈಂಗಿಕ ದೌರ್ಜನ್ಯದ ವಿಡಿಯೋ ಪ್ರತಿಯನ್ನು ನೀಡುವಂತೆ ಕೋರಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮೊರೆ ಹೋದರು ದಿಲೀಪ್. 2019ರ ನವೆಂಬರ್ ತಿಂಗಳಿನಲ್ಲಿ ದಿಲೀಪ್ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸುತ್ತದೆ.
ಜೂನ್ 25, 2018: AMMAಗೆ ಮೋಹನ್ ಲಾಲ್ ಅಧ್ಯಕ್ಷರಾದ ಬಳಿಕ ದಿಲೀಪ್ರನ್ನ ಮತ್ತೆ ಸೇರಿಸಿಕೊಳ್ಳಲು ಆಹ್ವಾನ ನೀಡಲಾಗುತ್ತದೆ.
ಜೂನ್ 28, 2018: ಮತ್ತೆ ಸೇರ್ಪಡೆಗೊಳ್ಳಲು AMMA ನೀಡಿದ ಆಹ್ವಾನವನ್ನು ದಿಲೀಪ್ ರಿಜೆಕ್ಟ್ ಮಾಡಿದರು.
ನವೆಂಬರ್ 2019: ಪ್ರಕರಣದ ವಿಚಾರಣೆಯನ್ನು ವರ್ಗಾಯಿಸಲು ಕೋರಿ ಹೈಕೋರ್ಟ್ಗೆ ಸಂತ್ರಸ್ತೆ ಮೊರೆಹೋದರು. ವಿಚಾರಣೆಯ ಉದ್ದಕ್ಕೂ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.
ಜನವರಿ 6, 2020: ವಿಚಾರಣಾ ನ್ಯಾಯಾಲಯವು ದಿಲೀಪ್, ಪಲ್ಸರ್ ಸುನಿ ಮತ್ತು ಇತರೆ ಎಂಟು ಆರೋಪಿಗಳ ವಿರುದ್ಧ ಆರೋಪಗಳನ್ನು ರೂಪಿಸಿತು.
ಅಕ್ಟೋಬರ್ 28, 2020: ಸಂತ್ರಸ್ತೆ ಕೇರಳ ಹೈಕೋರ್ಟ್ಗೆ ಮೊರೆ ಹೋದರು. ಪಕ್ಷಪಾತದ ವರ್ತನೆಯಿಂದಾಗಿ ನ್ಯಾಯಮೂರ್ತಿ ಹನಿ.ಎಂ.ವರ್ಗೀಸ್ ಅವರನ್ನು ಬದಲಾಯಿಸುವಂತೆ ಸಂತ್ರಸ್ತೆ ಕೇಳಿಕೊಂಡರು.
ನವೆಂಬರ್ 23, 2020: ಸಂತ್ರಸ್ತರ ಅರ್ಜಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿತು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎ.ಸುರೇಸನ್ ನ್ಯಾಯಮೂರ್ತಿ ಹನಿ.ಎಂ.ವರ್ಗೀಸ್ ಅವರ ಪಕ್ಷಪಾತ್ರದ ವಿಧಾನವನ್ನು ಟೀಕಿಸಿ ರಾಜೀನಾಮೆ ನೀಡಿದರು.
ಡಿಸೆಂಬರ್ 2, 2020: ನ್ಯಾಯಾಧೀಶರನ್ನು ಬದಲಾಯಿಸುವಂತೆ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿತು.
ಡಿಸೆಂಬರ್ 15, 2020: ಕೇರಳ ಸರ್ಕಾರದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು.
ಜನವರಿ 4, 2021: ಹೊಸ ಎಸ್ಪಿಪಿ ಆಗಿ ವಿ.ಎನ್.ಅನಿಲ್ ಕುಮಾರ್ ಅವರನ್ನು ನೇಮಕ ಮಾಡಲಾಗುತ್ತದೆ.
ಡಿಸೆಂಬರ್ 25, 2021: ದಿಲೀಪ್ ಅವರ ಮಾಜಿ ಸ್ನೇಹಿತ ಬಾಲಚಂದ್ರಕುಮಾರ್ ನಟನ ವಿರುದ್ಧ ಕೆಲ ಆರೋಪಗಳನ್ನು ಮಾಡಿದರು. ದಿಲೀಪ್ ಬಳಿ ಅದಾಗಲೇ ಲೈಂಗಿಕ ದೌರ್ಜನ್ಯದ ವಿಡಿಯೋ ಇತ್ತು. ಈ ಪ್ರಕರಣದಲ್ಲಿ ದಿಲೀಪ್ಗೆ ‘ವಿಐಪಿ’ಯೊಬ್ಬರು ಸಹಾಯ ಮಾಡಿದ್ದಾರೆ ಅಂತ ಬಾಲಚಂದ್ರಕುಮಾರ್ ಪ್ರಸ್ತಾಪಿಸಿದರು. ತನಿಖಾಧಿಕಾರಿಗಳ ಜೀವಕ್ಕೇ ಅಪಾಯವನ್ನುಂಟು ಮಾಡಲು ದಿಲೀಪ್ ಸಂಚು ರೂಪಿಸಿದ್ದಾರೆ ಎಂದೂ ಬಾಲಚಂದ್ರಕುಮಾರ್ ಆರೋಪಿಸಿದರು. ಇದಕ್ಕೆ ಸಂಬಂಧಿಸಿದ ಕೆಲ ಆಡಿಯೋ ಕ್ಲಿಪ್ಗಳನ್ನು ಅವರು ಬಿಡುಗಡೆ ಮಾಡಿದರು.
ಡಿಸೆಂಬರ್ 29, 2021: ಕೆಲವು ಸಾಕ್ಷಿಗಳ ಮರು ವಿಚಾರಣೆಗೆ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವುದರ ವಿರುದ್ಧ ಆದೇಶ ಹೊರಡಿಸಿದ ನ್ಯಾಯಮೂರ್ತಿ ಹನಿ.ಎಂ.ವರ್ಗೀಸ್ ಅವರೊಂದಿಗಿನ ವಾದದ ಬಳಿಕ ಎಸ್ಪಿಪಿ ವಿ.ಎನ್.ಅನಿಲ್ಕುಮಾರ್ ಕೂಡ ಪ್ರಕರಣವನ್ನು ತ್ಯಜಿಸಿದರು.
ಜನವರಿ 4, 2022: ಪ್ರಕರಣದ ಮುಂದಿನ ತನಿಖೆಯನ್ನು ನಿಲ್ಲಿಸುವಂತೆ ದಿಲೀಪ್ ಅವರು ಡಿಜಿಪಿಗೆ ಪತ್ರ ಬರೆದರು.
ಜನವರಿ 5, 2022: ವಿಚಾರಣೆಯನ್ನು ಪೂರ್ಣಗೊಳಿಸಲು ಆರು ತಿಂಗಳ ವಿಸ್ತರಣೆಗಾಗಿ ಸುಪ್ರೀಂ ಕೋರ್ಟ್ಅನ್ನು ಕೇರಳ ಸರ್ಕಾರವು ಕೇಳುತ್ತದೆ. ಮುಂದಿನ ವಿಚಾರಣೆಯನ್ನು ಜನವರಿ 20ರೊಳಗೆ ಪೂರ್ಣಗೊಳಿಸುವಂತೆ ವಿಚಾರಣಾ ನ್ಯಾಯಾಲಯ ಕೇಳಿತು.
ಜನವರಿ 7, 2022: ಶ್ರೀಜಿತ್ ಐಪಿಎಸ್ ಅಡಿಯಲ್ಲಿ ಕೇರಳ ಸರ್ಕಾರ ಹೊಸ ತನಿಖಾ ತಂಡವನ್ನು ರಚಿಸಿತು.
ಜನವರಿ 9, 2022: ಬಾಲಚಂದ್ರಕುಮಾರ್ ಸಲ್ಲಿಸಿದ ಆಡಿಯೋ ಕ್ಲಿಪ್ಗಳ ಮೇಲೆ ಪೊಲೀಸರು ದಿಲೀಪ್ ವಿರುದ್ಧ ಹೊಸ ಎಫ್ಐಆರ್ ದಾಖಲಿಸಿದರು.
ಜನವರಿ 10, 2022: ದಿಲೀಪ್ ನಿರೀಕ್ಷಣಾ ಜಾಮೀನು ಪಡೆದುಕೊಂಡರು.
ಜನವರಿ 13, 2022: ತನಿಖಾಧಿಕಾರಿಗಳ ಜೀವಕ್ಕೇ ಅಪಾಯವನ್ನುಂಟು ಮಾಡಲು ದಿಲೀಪ್ ಸಂಚು ರೂಪಿಸುವ ಕುರಿತಾದ ಆಡಿಯೋ ಕ್ಲಿಪ್ಗಳು ಲಭ್ಯವಾದ ಬೆನ್ನಲ್ಲೇ ದಿಲೀಪ್ ಹಾಗೂ ಸಹೋದರನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದರು.
Read more
[wpas_products keywords=”deal of the day party wear dress for women stylish indian”]