Karnataka news paper

ಮಂಡಲದ ಹಾವುಗಳ ಮಿಲನ ಕಾಲ..! ಮೈಸೂರು ಹೊರವಲಯದ ಜನತೆಗೆ ಉರಗ ಭಯ..!


ಹೈಲೈಟ್ಸ್‌:

  • ರಿಂಗ್‌ ರಸ್ತೆ ಸುತ್ತಮುತ್ತಲ ನಿವಾಸಿಗಳಿಗೆ ನಿತ್ಯ ಉರಗ ದರ್ಶನ
  • ಹಾವು ಕಂಡಾಗಲೆಲ್ಲಾ ಉರಗ ತಜ್ಞರ ಮೊರೆ ಹೋಗುವ ಜನತೆ
  • ಜನತೆ ಎಚ್ಚರ ವಹಿಸಬೇಕು ಎಂದು ಉರಗ ತಜ್ಞರಿಂದ ಸಲಹೆ

ಎಸ್‌. ಕೆ. ಚಂದ್ರಶೇಖರ್‌
ಮೈಸೂರು:
ಇದು ಮಂಡಲ ಹಾವಿನ ಮಿಲನದ ಸಮಯವಾಗಿರುವುದರಿಂದ ಸಾಕಷ್ಟು ಕಡೆ ಇವುಗಳು ಕಾಣ ಸಿಗುತ್ತಿವೆ. ಅದರಲ್ಲೂ ಮೈಸೂರಿನ ಹೊರ ವರ್ತುಲ ರಸ್ತೆ ಆಸು – ಪಾಸಿನಲ್ಲಿರುವ ಬಡಾವಣೆ ನಿವಾಸಿಗಳ ಕಣ್ಣಿಗೆ ನಿತ್ಯ ಕಾಣಿಸಿಕೊಂಡರೂ ಆಶ್ಚರ್ಯ ಪಡಬೇಕಿಲ್ಲ. ಹಾಗಾಗಿ ಇಲ್ಲಿನವರು ತುಸು ಎಚ್ಚರ ವಹಿಸದಿದ್ದರೆ ಅಪಾಯ ನಿಶ್ಚಿತ ಎಂದು ಉರಗ ತಜ್ಞರು ಹೇಳುತ್ತಿದ್ದಾರೆ.

ಡಿಸೆಂಬರ್‌ನಿಂದ ಜನವರಿ 10ರವರೆಗಿನ ತಿಂಗಳ ಅವಧಿಯಲ್ಲಿ 300ಕ್ಕೂ ಹೆಚ್ಚು ಮಂಡಲದ ಹಾವನ್ನು ನಾನಾ ಬಡಾವಣೆಗಳಲ್ಲಿ ಸಂರಕ್ಷಿಸಿ ಅರಣ್ಯಕ್ಕೆ ಬಿಟ್ಟಿರುವ ಉರಗ ತಜ್ಞ ಸೂರ್ಯ ಕೀರ್ತಿ ಅವರ ಕಾಳಜಿಯ ನುಡಿಗಳಿವು.

mysuru snake

ಸಾಮಾನ್ಯವಾಗಿ ಡಿಸೆಂಬರ್‌, ಜನವರಿ ಹಾಗೂ ಫೆಬ್ರವರಿವರೆಗೂ ಕೊಳಕು ಮಂಡಲ ಹಾವಿನ ಓಡಾಟ ಹೆಚ್ಚಿದ್ದು, ಜನರ ಕಣ್ಣಿಗೆ ಬೀಳುವ ಸಾಧ್ಯತೆ ಈ ತಿಂಗಳಲ್ಲೇ ಅಧಿಕ. ಅದರಲ್ಲೂ ರಿಂಗ್‌ ರಸ್ತೆ ಸುತ್ತಮುತ್ತಲ ಆಲನಹಳ್ಳಿ, ಸಾತಗಳ್ಳಿ, ದಟ್ಟಗಳ್ಳಿ, ವಿಜಯನಗರ 4ನೇ ಹಂತ, ಬೋಗಾದಿ, ಬನ್ನಿಮಂಟ, ಕಾವೇರಿ ನಗರ, ಬಿಎಂಶ್ರೀ ನಗರ, ಸಿದ್ದಿಖಿ ನಗರ, ಹಿನಕಲ್‌, ಹೂಟಗಳ್ಳಿ, ಶ್ರೀರಾಂಪುರ ಸೇರಿದಂತೆ ಹಲವೆಡೆ ಕಂಡು ಬರುವ ಇವು, ಸಂತಾನೋತ್ಪತ್ತಿ ಕಾಲದಲ್ಲಿ ಆಹಾರಕ್ಕಿಂತ ಸಂಗಾತಿ ಹುಡುಕಾಟದಲ್ಲೇ ಹೆಚ್ಚಿನ ಸಮಯ ಕಳೆಯುತ್ತವೆ.

ಇವು ತಮ್ಮ ಸಂಗಾತಿ ಹುಡುಕಾಟಕ್ಕಾಗಿ 7 – 8 ಕಿ. ಮೀ.ವರೆಗೂ ಚಲಿಸಿ ತಮ್ಮ ಮೂಲ ನೆಲೆಗೆ ವಾಪಸಾಗಬಲ್ಲವು. ಜತೆಗೆ ಒಂದು ಹೆಣ್ಣು ಹಾವನ್ನು ಪಡೆಯಲು ಕೆಲವು ಬಾರಿ 2 – 3 ಗಂಡು ಮಂಡಲಗಳು ಪೈಪೋಟಿ ಮಾಡುವುದುಂಟು. ಹಾಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ.

ಒಂದೇ ದಿನ 10 ಹಾವು ಸಂರಕ್ಷಣೆ

ವೀಕೆಂಡ್‌ ಕರ್ಫ್ಯೂ ಇದ್ದ ಕಳೆದ ಭಾನುವಾರ ಒಂದೇ ದಿನ ನಗರದಲ್ಲಿ 15 ಕ್ಕೂ ಹೆಚ್ಚು ಹಾವುಗಳನ್ನು ಸೂರ್ಯ ಕೀರ್ತಿ ಸಂರಕ್ಷಿಸಿದ್ದಾರೆ. ಅದರಲ್ಲಿ ಮಂಡಲದ ಹಾವುಗಳೇ ಹೆಚ್ಚು ಎಂಬುದು ವಿಶೇಷ. ಕೆ. ಆರ್‌. ಎಸ್‌. ರಸ್ತೆಯಲ್ಲಿರುವ ಇಎಸ್‌ಐ ಆಸ್ಪತ್ರೆ, ಇನ್ಫೋಸಿಸ್‌ ಆವರಣ, ಸಿವೇಜ್‌ ಟ್ರೀಟ್‌ಮೆಂಟ್‌ ಪ್ಲಾಂಟ್‌, ಶ್ರೀರಾಂಪುರ, ಹಂಸ ಬಡಾವಣೆ, ಬನ್ನಿ ಮಂಟಪ, ವಿಜಯನಗರ 4ನೇ ಹಂತ, ಆಲನಹಳ್ಳಿ ಬಡಾವಣೆಗಳಲ್ಲಿ ಇವುಗಳನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಗಿದೆ. ಮಂಡಲದ ಹಾವಿನ ಜತೆಗೆ ಕೇರೆ ಹಾವು, ಆಭರಣದ ಹಾವು, ನಾಗರ ಹಾವು, ಕುಕ್ರಿ ಉರಗಗಳು ಕಾಣಿಸಿಕೊಂಡಿವೆ.

ಮೈಸೂರಿನಲ್ಲಿ ಸಿಕ್ತು ಹಾರುವ ಹಾವು..! ಸಂರಕ್ಷಣೆ ಮಾಡಿ ಝೂಗೆ ಬಿಟ್ಟ ಸ್ನೇಕ್ ಕೆಂಪರಾಜು..
ಆಶ್ಚರ್ಯವೆಂದರೆ ಕರ್ಫ್ಯೂನಿಂದಾಗಿ ಹೆಚ್ಚು ಜನರು ಹೊರಗೆ ತೆರಳದೆ ಮನೆಯಲ್ಲೇ ಇದ್ದ ಸಂದರ್ಭದಲ್ಲಿ ಇವುಗಳು ಗೋಚರಿಸಿವೆ. ಅದೃಷ್ಟವಶಾತ್‌ ಯಾರಿಗೂ ತೊಂದರೆಯಾಗಿಲ್ಲ. ಅದೊಂದೇ ದಿನ ಹಾವುಗಳನ್ನು ಕಂಡ ಜನ ಭಯಭೀತರಾಗಿ ನಾನಾ ಬಡಾವಣೆಗಳಿಂದ ಸೂರ್ಯ ಕೀರ್ತಿ ಅವರಿಗೆ 18ಕ್ಕೂ ಹೆಚ್ಚು ಕರೆಗಳನ್ನು ಮಾಡಿದ್ದಾರೆ. ಕೆಲವು ಕಡೆಗಳಲ್ಲಿ ಇವರು ತೆರಳುವಷ್ಟರಲ್ಲಿ ಹಾವುಗಳು ಕಣ್ಮರೆಯಾಗಿವೆ.

ವಿಕ ಕಳಕಳಿ

ಮಂಡಲದ ಹಾವುಗಳು ಸುರುಳಿಯಾಕಾರದಲ್ಲಿರುತ್ತವೆ. ಜತೆಗೆ ಇವುಗಳು ಒಣಗಿದ ಎಲೆಗಳ ಬಣ್ಣದಂತೆಯೇ ಇರುವುದರಿಂದ ತಿಳಿಯದೆ ತುಳಿಯುವ ಸಾಧ್ಯತೆಯೂ ಹೆಚ್ಚು. ಇವುಗಳು ಸಾಮಾನ್ಯವಾಗಿ ಬಿಲಗಳು, ಪೊಟರೆ, ಗದ್ದೆ, ಮೈದಾನ, ನಿವೇಶನ, ಹುಲ್ಲುಗಳ ಮಧ್ಯೆ, ಸೌದೆ, ಕಾಯಿ ಮಟ್ಟೆ ರಾಶಿ, ಶೂ, ಚಪ್ಪಲಿ ಸ್ಟ್ಯಾಂಡಿನೊಳಗೆ ಸೇರಿಕೊಂಡಿರುತ್ತವೆ. ಹಾಗಾಗಿ ರಿಂಗ್‌ ರಸ್ತೆ ಸುತ್ತಮುತ್ತಲ ಬಡಾವಣೆ ನಿವಾಸಿಗಳು ರಾತ್ರಿ ವೇಳೆ ಸಂಚರಿಸಬೇಕಿದ್ದರೆ ಟಾರ್ಚ್ ಬೆಳಕಿನ ಸಹಾಯದಿಂದ ಹೊರ ಬನ್ನಿ. ಹಗಲಿನಲ್ಲೂ ತಮ್ಮ ಪಾದರಕ್ಷೆ ಹಾಕಿಕೊಳ್ಳುವ ಮುನ್ನ ಒಮ್ಮೆ ಕಡ್ಡಿಯಿಂದ ಪರಿಶೀಲಿಸಿಕೊಳ್ಳಿ.

ಮೈಸೂರಿನಲ್ಲಿ ಸ್ನೇಕ್ ಶ್ಯಾಂ ಪುತ್ರನ ಸಾಧನೆ: 45 ಹಾವಿನ ಮೊಟ್ಟೆಗಳನ್ನು ಕೃತಕವಾಗಿ ಮರಿ ಮಾಡಿದ ಸೂರ್ಯ ಕೀರ್ತಿ..!
ಕೆಲವು ಸಂದರ್ಭಗಳಲ್ಲಿ ಅವುಗಳು ಕಚ್ಚಿದ್ದೂ ಉಂಟು. ಆಗ ಗಾಬರಿಗೊಳ್ಳದೇ ತಕ್ಷಣ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಿರಿ. ಮಂಡಲ ಹಾವು ಕಚ್ಚಿದ ಭಾಗ ಉರಿಯುತ್ತದೆ. ಬಳಿಕ ಊದುತ್ತಾ ನೀಲಿಗಟ್ಟುತ್ತದೆ. ನಂತರ ವಾಂತಿಯೂ ಆಗಬಹುದು. ಆಗಲೂ ಎಚ್ಚರ ವಹಿಸದಿದ್ದರೆ ವಿಷ ಕಿಡ್ನಿಗೆ ಸೇರಿ ಪ್ರಾಣಾಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಜತೆಗೆ ಆ ಸ್ಥಳ ಕೊಳೆಯುತ್ತಾ ಹೋಗುತ್ತದೆ. ಇಷ್ಟೆಲ್ಲ ಅನಾಹುತಕ್ಕೆ ದಾರಿ ಮಾಡಿಕೊಡದೆ, ಬ್ಲೇಡ್‌ನಲ್ಲಿ ಕತ್ತರಿಸಿಕೊಳ್ಳದೇ, ಬಿಗಿಯಾಗಿ ಕಟ್ಟದೇ ತಕ್ಷಣ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು.

‘ಚಳಿಗಾಲದ ಅವಧಿಯಲ್ಲಿ ಕೊಳಕು ಮಂಡಲ ಹಾವಿನ ಮಿಲನದ ಸಮಯವಾಗಿರುವುದರಿಂದ ಅವುಗಳು ನಾನಾ ಕಡೆ ಕಾಣಿಸಿಕೊಳ್ಳುತ್ತಿವೆ. ಹೊರ ವರ್ತುಲ ರಸ್ತೆ ಆಸು – ಪಾಸಿನಲ್ಲಿರುವ ನಿವಾಸಿಗಳು ತುಸು ಎಚ್ಚರಿಕೆ ವಹಿಸಬೇಕು. ಹಾವುಗಳನ್ನು ಕೊಲ್ಲದೇ ನನಗೆ (7022042028) ಕರೆ ಮಾಡಿದರೆ ಅವುಗಳನ್ನು ಸಂರಕ್ಷಿಸಲಾಗುತ್ತದೆ’ ಎಂದು ಮೈಸೂರಿನ ಉರಗ ತಜ್ಞ ಸೂರ್ಯಕೀರ್ತಿ ಮಾಹಿತಿ ನೀಡಿದ್ದಾರೆ.

ಹೆಚ್ಚಾಯ್ತು ಧಗೆ, ಹಾವುಗಳು ಮನೆಯೊಳಗೆ ಲಗ್ಗೆ..! ಮೈಸೂರಿನಲ್ಲಿ ಉರಗ ರಕ್ಷಕರು ಫುಲ್ ಬ್ಯುಸಿ..!



Read more

[wpas_products keywords=”deal of the day sale today offer all”]