Karnataka news paper

ಟಿಬಿ ಡ್ಯಾಂಗೆ ಮೂರು ಪಟ್ಟು ನೀರು ಹೆಚ್ಚಳ..! 2ನೇ ಬೆಳೆಗೆ ನೀರು ಸಿಗುವ ನಿರೀಕ್ಷೆಯಲ್ಲಿ ರೈತರು..


ಹೈಲೈಟ್ಸ್‌:

  • ನೀರಿಡಿದಿಡುವ ಯೋಜನೆ ಜಾರಿಗೆ ಬರಲಿ
  • ಟಿಬಿ ಡ್ಯಾಂನಲ್ಲಿ 378.31 ಟಿಎಂಸಿ ನೀರು ಸಂಗ್ರಹ
  • ವ್ಯರ್ಥವಾಗಿ ಹರಿವ ನೀರನ್ನು ಕೆರೆ ಕಟ್ಟೆಗಳಲ್ಲಿ ನಿಲ್ಲಿಸಿ
  • ನೀರು ಸಂಗ್ರಹಕ್ಕೆ ರಾಜಕೀಯ ಇಚ್ಛಾಶಕ್ತಿ ಕೊರತೆ

ಜಯಪ್ಪ ರಾಥೋಡ್‌
ಹೊಸಪೇಟೆ (ವಿಜಯನಗರ):
ಪ್ರಸಕ್ತ ಸಾಲಿನಲ್ಲಿ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ಸಾಮರ್ಥ್ಯಕ್ಕಿಂತಲೂ ಮೂರು ಪಟ್ಟು ಹೆಚ್ಚಿಗೆ ನೀರು ಹರಿದು ಬಂದಿದೆ.

ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ ಸೇರಿ ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಜೀವನಾಡಿಯಾಗಿರುವ ಟಿಬಿ ಡ್ಯಾಂ ಕಳೆದ ಕೆಲ ವರ್ಷಗಳಿಂದ ಮೈತುಂಬಿಕೊಳ್ಳುತ್ತಿದ್ದರಿಂದ ರೈತರ ಬದುಕು ಹಸನಾಗಿಸಿದೆ.

ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಸುರಿಯುತ್ತಿರುವುದರಿಂದ ಜಲಾಶಯಕ್ಕೆ ನೀರು ಬರುತ್ತಿದೆ. ಅಲ್ಲದೇ ಈ ಬಾರಿ ಮಳೆಗಾಲದ ಆರಂಭದಲ್ಲಿಯೇ ಡ್ಯಾಂನಲ್ಲಿ ನೀರಿನ ಸಂಗ್ರಹ ಮಟ್ಟ ಹೆಚ್ಚಾಗಿತ್ತು. ಅದಾದ ನಂತರ ಜಲಾಶಯ ಮಟ್ಟ ಕಡಿಮೆಯಾಗಿಲ್ಲ. ನಿತ್ಯವೂ ಡ್ಯಾಂಗೆ ಹೆಚ್ಚಿನ ಮಟ್ಟದಲ್ಲಿ ನೀರು ಹರಿದು ಬರುತ್ತಿದೆ. ಕಳೆದ ತಿಂಗಳು ನಿರಂತರ ಸುರಿದ ಮಳೆಯಿಂದಾಗಿ ಡ್ಯಾಂಗೆ ಕಳೆದ ಬಾರಿಗಿಂತ 83.14 ಟಿಎಂಸಿ ನೀರು ಹೆಚ್ಚಿಗೆ ಹರಿದು ಬಂದಿದೆ. ಇದೇ ನೀರನ್ನು ಸಮರ್ಪಕವಾಗಿ ಬಳಸಿದ್ದರೆ ಇದೇ ಸಾಮರ್ಥ್ಯದ ಇನ್ನೂ ಮೂರು ಡ್ಯಾಂಗಳನ್ನು ತುಂಬಿಸಬಹುದಿತ್ತು ಎಂಬ ಮಾತುಗಳು ವ್ಯಕ್ತವಾಗಿವೆ.

ಸದ್ಬಳಕೆಗೆ ಯೋಜನೆಯಿಲ್ಲ: ಪ್ರತಿ ವರ್ಷವೂ ಜಲಾಶಯಕ್ಕೆ ಹೆಚ್ಚಿನ ಮಟ್ಟದಲ್ಲಿ ನೀರು ಹರಿದು ಬಂದರೂ ಉಳಿಸಿಕೊಳ್ಳುವ ಯಾವುದೇ ಯೋಜನೆಗಳನ್ನು ಸರಕಾರ ಮಾಡಿಲ್ಲ. ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯ ಕಳೆದ 3-4 ವರ್ಷದಿಂದ ಸತತವಾಗಿ ಭರ್ತಿಯಾಗುತ್ತಲೇ ಇದೆ. ಆದರೆ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಎರಡನೇ ಬೆಳೆಗೆ ನೀರಿಗಾಗಿ ಪರದಾಡುವುದು ತಪ್ಪಿಲ್ಲ. ಈ ಬಾರಿ ಜಲಾಶಯದಿಂದ ಒಟ್ಟು 278 ಟಿಎಂಸಿ ನೀರು ಹರಿದು ಹೋಗಿದೆ. ಇದೇ ನೀರನ್ನು ಸಂಗ್ರಹ ಮಾಡಿಟ್ಟುಕೊಂಡಲ್ಲಿ ಈ ಭಾಗದ ಜನರು ಎರಡನೇ ಬೆಳೆಗೆ ಪರದಾಡುವುದನ್ನು ತಪ್ಪಿಸಬಹುದು. ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಿಸಲು ಸಿದ್ಧಪಡಿಸಲಾಗುತ್ತಿದೆ ಎನ್ನುವ ಯೋಜನೆಯನ್ನು ಶೀಘ್ರ ಕಾರ್ಯರೂಪಕ್ಕೆ ತಂದಲ್ಲಿರೈತರಿಗೆ ನೆರವಾಗಲಿದೆ.

ತುಂಗಭದ್ರ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಯೋಜನಾ ವರದಿ ಸಿದ್ಧ..!
ಕೆರೆ-ಕಟ್ಟೆ ತುಂಬಿಸಿ: ಪ್ರತಿ ವರ್ಷ ಟಿಬಿ ಡ್ಯಾಮಿನಿಂದ ಅಪಾರ ಪ್ರಮಾಣದಲ್ಲಿ ನೀರು ನದಿಗೆ ಹರಿದು ಹೋಗುತ್ತಿದೆ. ನಿವೃತ್ತ ಎಂಜಿನಿಯರ್‌ಗಳ ಅಂದಾಜಿನಂತೆ ಡ್ಯಾಂ ಭರ್ತಿಯಾದ ಪ್ರತಿ ವರ್ಷಗಳಲ್ಲಿ ಸುಮಾರು 276 ಟಿಎಂಸಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ನೀರನ್ನು ನದಿಗೆ ಹರಿಸಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ ನೂರಾರು ಕೆರೆ-ಕಟ್ಟೆಗಳಿದ್ದು, ಹೆಚ್ಚು ಮಳೆಯಾಶ್ರಿತ ಪ್ರದೇಶ ಹೊಂದಿದೆ. ಕೆರೆಗಳಿಗೆ ನೀರು ತುಂಬಿಸಲು ಕಾಳಜಿ ತೋರದಿರುವುದು ಇಚ್ಛಾಶಕ್ತಿ ಕೊರತೆ ಕಾರಣವಾಗಿದೆ. ಸದ್ಯ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ನೀರಿನ ಸಮಸ್ಯೆಯಾಗುವ ಸಾಧ್ಯತೆಗಳು ಅಷ್ಟಾಗಿ ಇಲ್ಲ. ಎರಡನೇ ಬೆಳೆಗೆ ನೀರು ಲಭ್ಯವಾಗುವ ವಿಶ್ವಾಸ ರೈತರಲ್ಲಿದೆ.

ಡ್ಯಾಂಗೆ 378 ಟಿಎಂಸಿ ನೀರು

ತುಂಗಭದ್ರಾ ಡ್ಯಾಂ ಸಂಪೂರ್ಣ ಭರ್ತಿಗೆ 100.86 ಟಿಎಂಸಿ ಸಾಮರ್ಥ್ಯ ಹೊಂದಿದೆ. ಈ ಬಾರಿ ಬೇಗ ಜಲಾಶಯ ಭರ್ತಿಯಾಗಿದ್ದಲ್ಲದೇ ಡಿಸೆಂಬರ್‌ವರೆಗೆ ಒಳಹರಿವು ನಿಂತಿಲ್ಲ. ಈ ವರ್ಷದಲ್ಲಿ ಈವರೆಗೆ ಜಲಾಶಯಕ್ಕೆ ಒಟ್ಟು 378.31 ಟಿಎಂಸಿ ನೀರು ಬಂದಿದೆ. ಡ್ಯಾಂ ಸಾಮರ್ಥ್ಯಕ್ಕಿಂತಲೂ 278.31 ಟಿಎಂಸಿ ಹೆಚ್ಚಿಗೆ ನೀರು ಬಂದಿದೆ. ಕಳೆದ ವರ್ಷ (2020) 295.17 ಟಿಎಂಸಿ ನೀರು ಬಂದಿತ್ತು. ಆದರೆ, ಈ ಸಲ ಕಳೆದ ಬಾರಿಗಿಂತ 83 ಟಿಎಂಸಿ ನೀರು ಹೆಚ್ಚಿಗೆ ಬಂದಿದೆ. ಅಲ್ಲದೇ ಈ ಬಾರಿ ನಿರಂತರ ಮಳೆ ಸುರಿದಿದ್ದು, ಒಳಹರಿವು ಇನ್ನೂ ಮುಂದುವರಿದಿದೆ.

Karnataka Dams Water Level: ನ.23ರ ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ
ಜಲಾಶಯಕ್ಕೆ ಪ್ರಸ್ತುತ 8,216 ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, 7,976 ಕ್ಯುಸೆಕ್‌ ನದಿಗೆ ಹರಿಸಲಾಗುತ್ತಿದೆ. ಕಳೆದ ವರ್ಷ ಇದೇ ವೇಳೆಗೆ 80.61 ಟಿಎಂಸಿ ನೀರು ಡ್ಯಾಂನಲ್ಲಿ ಸಂಗ್ರಹವಾಗಿತ್ತು. 964 ಕ್ಯುಸೆಕ್‌ ಒಳಹರಿವು, 4,936 ಕ್ಯುಸೆಕ್‌ ಹೊರಹರಿವು ಇತ್ತು. ಒಟ್ಟು 212.26 ಟಿಎಂಸಿ ನಿರು ಹರಿದು ಬಂದಿತ್ತು. 2018ರಲ್ಲಿ260 ಟಿಎಂಸಿ, 2019ರಲ್ಲಿ180, 2020ರಲ್ಲಿ142 ಟಿಎಂಸಿ ನೀರು ನದಿಗೆ ಹರಿಸಲಾಗಿದೆ.

‘ಜಲಾಶಯ ಡಿಸೆಂಬರ್‌ವರೆಗೆ ಭರ್ತಿಯಾಗಿದ್ದು, ಈ ಬಾರಿ ಎರಡನೇ ಬೆಳೆಗೆ ನೀರು ಹರಿಸಬಹುದು. ಏಪ್ರಿಲ್‌ 15ರವರೆಗೆ ನೀರು ಬೇಕಿದ್ದು, ಇನ್ನೂ ಒಳಹರಿವು ಇರುವುದರಿಂದ ಈ ತಿಂಗಳು ಪೂರ್ತಿ ಡ್ಯಾಂ ಭರ್ತಿಯಾಗಿರಲಿದೆ. ಮುಂದಿನ ನಾಲ್ಕು ತಿಂಗಳಿಗೆ ನೀರಿನ ಕೊರತೆಯಾಗುವ ಲಕ್ಷಣಗಳಿಲ್ಲ’ ಎಂದು ಟಿಬಿ ಬೋರ್ಡ್‌ ನಿವೃತ್ತ ಅಭಿಯಂತರ ಕೆ. ಗೋವಿಂದಲು ಅಭಿಪ್ರಾಯಪಟ್ಟಿದ್ದಾರೆ.

ಟಿಬಿ ಡ್ಯಾಂ ಬಲವರ್ಧನೆಗೆ ಅಧ್ಯಯನ ಶುರು: ಆಧುನಿಕ ತಂತ್ರಜ್ಞಾನ ಅಳವಡಿಕೆಗೆ ಸಲಹೆ



Read more