Karnataka news paper

ರಾಮನಗರದಲ್ಲಿ ಬಿಗಿ ಬಂದೋಬಸ್ತ್‌, ಬೆಂಗಳೂರಿನತ್ತ ಡಿಕೆಶಿ, ನಾಲ್ಕೇ ದಿನಕ್ಕೆ ಪಾದಯಾತ್ರೆ ಅಂತ್ಯ?


ಹೈಲೈಟ್ಸ್‌:

  • ರಾಮನಗರದಲ್ಲಿ ಬಿಗಿ ಭದ್ರತೆ, ಜಿಲ್ಲೆಗೆ ಬಂದಿಳಿದ ಸಾವಿರಾರು ಪೊಲೀಸರು
  • ಗುರುವಾರ ಮುಂಜಾನೆ ಚಾಲನೆಗೊಳ್ಳಬೇಕಿರುವ ಐದನೇ ದಿನದ ಮೇಕೆದಾಟು ಪಾದಯಾತ್ರೆಗೆ ಆರಂಭವಾಗುವುದೇ ಅನುಮಾನ
  • ರಾತ್ರೋ ರಾತ್ರಿ ಬೆಂಗಳೂರಿನತ್ತ ಪ್ರಯಾಣಿಸಿದ ಡಿಕೆ ಶಿವಕುಮಾರ್
  • ಬುಧವಾರ ಮಧ್ಯಾಹ್ನವೇ ಬೆಂಗಳೂರು ತಲುಪಿರುವ ಸಿದ್ದರಾಮಯ್ಯ
  • ನಾಲ್ಕೇ ದಿನಕ್ಕೆ ಮೇಕೆದಾಟು ಪಾದಯಾತ್ರೆ ಮೊಟಕು ಸಾಧ್ಯತೆ

ರಾಮನಗರ: ರಾಮನಗರದಿಂದ ಗುರುವಾರ ಮುಂಜಾನೆ ಚಾಲನೆಗೊಳ್ಳಬೇಕಿರುವ ಐದನೇ ದಿನದ ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡುವುದೇ ಬಹುತೇಕ ಅನುಮಾನ ಎನ್ನಲಾಗುತ್ತಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬುಧವಾರ ರಾತ್ರೋ ರಾತ್ರಿ ಬೆಂಗಳೂರಿನತ್ತ ಪ್ರಯಾಣಿಸಿದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆನ್ನು ನೋವಿನ ಕಾರಣಕ್ಕೆ ಬುಧವಾರ ಮಧ್ಯಾಹ್ನವೇ ಬೆಂಗಳೂರು ಸೇರಿದ್ದಾರೆ.

ಇವೆಲ್ಲದರ ನಡುವೆ ಕಾಂಗ್ರೆಸ್‌ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಭಾಗವಹಿಸಲು ಯಾವುದೇ ವಾಹನಗಳು ಜಿಲ್ಲೆಯೊಳಗೆ ಸುಳಿಯುವಂತಿಲ್ಲ. ನಗರದ ಐಜೂರು ವೃತ್ತದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆಯಾಗಿದ್ದು, ಮೂರು ಸಾವಿರಕ್ಕೂ ಹೆಚ್ಚು ಪೊಲೀಸರು ರಾಮನಗರಕ್ಕೆ ಬಂದಿಳಿಸಿದ್ದಾರೆ‌.

ಆರ್‌ಸಿಎಸ್ ಕಲ್ಯಾಣ ಮಂಟಪದಲ್ಲಿ ಆರು ಮೀಸಲು ಪಡೆ ಪೊಲೀಸರ ವ್ಯಾನ್‌ಗಳನ್ನು ನಿಲ್ಲಿಸಲಾಗಿದೆ. ಎಡಿಜಿಪಿ, ಐಜಿ, ಎಸ್ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ರಾತ್ರಿ ನಡೆದಿದೆ.

ಏನಾಗಬಹುದು?

ಪಾದಯಾತ್ರೆಯ ಉಸ್ತುವಾರಿ ಹೊತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಬೆಂಗಳೂರು ನಿವಾಸದಲ್ಲೇ ಪೊಲೀಸರು ವಶಕ್ಕೆ ಪಡೆಯಬಹುದು. ಇಲ್ಲವೇ ,ಪಾದಯಾತ್ರೆಯನ್ನು ನಾಳೆ ಬಿಡದಿಯಲ್ಲಿ ತಡೆದು, ಬಂಧಿಸುವ ಸಾಧ್ಯತೆಗಳಿವೆ.

ರಾಮನಗರದಲ್ಲಿ ಸಂಚಾರ ನಿರ್ಬಂಧ

ಪಾದಯಾತ್ರೆ ಸಂಬಂಧ ಯಾವುದೇ ಕ್ರಮ ಕೈಗೊಳ್ಳದ ರಾಜ್ಯ ಸರಕಾರ ಮತ್ತು ಬಿಬಿಎಂಪಿಗೆ ಬುಧವಾರ ಹೈಕೋರ್ಟ್‌ ಚಾಟಿ ಬೀಸಿದ ನಂತರ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ನೇತೃತ್ವದಲ್ಲಿ ಸಂಜೆ ಬೆಂಗಳೂರಿನಲ್ಲಿ ಸಭೆ ನಡೆಯಿತು. ಬಳಿಕ ಮೇಕೆದಾಟು ಪಾದಯಾತ್ರೆಗೆ ನಿರ್ಬಂಧ ವಿಧಿಸಲಾಗಿದೆ.

ರಾಜ್ಯ ಸರಕಾರ ರಾಮನಗರವೂ ಸೇರಿದಂತೆ ಸುತ್ತಲಿನ 8 ಜಿಲ್ಲೆಗಳಲ್ಲಿ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಿದೆ. ಹೀಗಾಗಿ ಗುರುವಾರ ಮಂಡ್ಯ ಜಿಲ್ಲೆಯಿಂದ ಮೇಕೆದಾಟು ಹೋರಾಟಕ್ಕೆ ಬರಬೇಕಿದ್ದ ಕಾರ್ಯಕರ್ತರ ಮೇಲೆ ಜಿಲ್ಲಾಡಳಿತವು ಹದ್ದಿನ ಕಣ್ಣಿಟ್ಟಿದೆ. ಜತೆಗೆ ರಾಜ್ಯ ಸರಕಾರ ಆರ್‌ಟಿಓಗೆ ಸ್ಪಷ್ಟ ಸೂಚನೆ ನೀಡಿದ್ದು, ಇತರೆ ಜಿಲ್ಲೆಗಳಿಂದ ರಾಮನಗರ ಜಿಲ್ಲೆಗೆ ಅನಗತ್ಯ ಪ್ರವೇಶ ನಿರ್ಬಂಧಿಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.



Read more

[wpas_products keywords=”deal of the day sale today offer all”]