Karnataka news paper

ಮೈಸೂರಿನ ಕೃಷ್ಣರಾಜ ನಗರದಲ್ಲಿ ಬೀದಿ ನಾಯಿಗಳ ಹಾವಳಿ: ರೋಡಿಗಿಳಿಯಲು ಭಯಪಡುವ ಜನ..!


ಹೈಲೈಟ್ಸ್‌:

  • ಪಟ್ಟಣದ ಪ್ರತಿಯೊಂದು ಬಡಾವಣೆಯ ರಸ್ತೆಯಲ್ಲಿ ಎಲ್ಲೆಂದರಲ್ಲಿ ಓಡಾಡುವ ಬೀದಿ ನಾಯಿ
  • ನಾಯಿಗಳ ಕಡಿತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಳ
  • ಅಡುಗೆ ಪದಾರ್ಥ ರಸ್ತೆ ಬದಿ ಹಾಕುವುದು ಬೀದಿ ನಾಯಿಗಳ ಹೆಚ್ಚಳ

ಕೃಷ್ಣರಾಜನಗರ (ಮೈಸೂರು): ಪಟ್ಟಣದ ವ್ಯಾಪ್ತಿಯಲ್ಲಿಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ನೂರಾರು ನಾಯಿಗಳು ರಸ್ತೆ ನಡುವೆ ರಾಜಾರೋಷವಾಗಿ ಸಂಚರಿಸುತ್ತಾ ಸಾರ್ವಜನಿಕರು ಭಯದ ವಾತಾವರಣದಲ್ಲಿ ಸಂಚಾರ ಮಾಡುವಂತಾಗಿದೆ.

ಪಟ್ಟಣದ ಪ್ರತಿಯೊಂದು ಬಡಾವಣೆಯ ರಸ್ತೆಯಲ್ಲಿ ಎಲ್ಲೆಂದರಲ್ಲಿ ಓಡಾಡುವ ಬೀದಿ ನಾಯಿಗಳ ಹಾವಳಿಯಿಂದ ಅಪಘಾತಕ್ಕೊಳಗಾಗಿ ಆಸ್ಪತ್ರೆ ಸೇರುವವರು ಒಂದೆಡೆಯಾದರೆ, ನಾಯಿಗಳ ಕಡಿತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರು ಮತ್ತೊಂದೆಡೆ. ಇದರಿಂದ ನಾಯಿಗಳ ಕಡಿತ ಹಾಗೂ ದಾಳಿಗೆ ಒಳಗಾಗಿ ಆಸ್ಪತ್ರೆ ಸೇರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ಪುರಸಭೆ ಆಡಳಿತ ಜನತೆಗೆ ಹಸಿ ಕಸ, ಒಣ ಕಸ ಬೇರೆ ಮಾಡಿ ಪುರಸಭೆ ವಾಹನಕ್ಕೆ ನೀಡುವಂತೆ ಆದೇಶ ಮಾಡಿದ್ದರೂ ಹಲವಾರು ಮಂದಿ ಅಳಿದುಳಿದ ಅಡುಗೆ ಪದಾರ್ಥವನ್ನು ರಸ್ತೆ ಬದಿ ಹಾಕುವುದು ಬೀದಿ ನಾಯಿಗಳ ಹೆಚ್ಚಳಕ್ಕೆ ಕಾರಣವಾಗಿದೆ.

ಪುರಸಭೆ ಮುಂದೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಬಸ್‌ ನಿಲ್ದಾಣ, ವಿವಿ ರಸ್ತೆಯ ಕೋಳಿ ಮಾಂಸದ ಅಂಗಡಿಗಳ ಸಾಲು, ತಾಲೂಕು ಆಸ್ಪತ್ರೆ, ಬಜಾರ್‌ ರಸ್ತೆ ಹಾಗೂ ಇತರ ಪ್ರಮುಖ ಸ್ಥಳಗಳಲ್ಲೇ ನಾಯಿಗಳ ಸಂಖ್ಯೆ ನೂರಾರು ಇದ್ದು, ಇವುಗಳ ನಿಯಂತ್ರಣಕ್ಕೆ ಪುರಸಭೆ ಆಡಳಿತ ಯಾವುದೇ ಕ್ರಮ ಕೈಗೊಳ್ಳದ ಕಾರಣ ನಾಯಿಗಳ ಸಂಖ್ಯೆ ಹೆಚ್ಚಿ ಜನತೆ ಭಯದ ನಡುವೆ ಓಡಾಡುವಂತಾಗಿದೆ.

ಇವುಗಳ ಸಂತಾನ ಭಾಗ್ಯಕ್ಕೆ ಕಡಿವಾಣ ಹಾಕಲು ಯಾವುದೇ ಕ್ರಮ ಕೈಗೊಳ್ಳದ ಕಾರಣ ಬೀದಿ ನಾಯಿಗಳ ಸಂಖ್ಯೆಯಲ್ಲಿ ದ್ವಿಗುಣವಾಗುತ್ತಿದ್ದು ಪಟ್ಟಣದಲ್ಲಿ ಜನರ ಸಂಖ್ಯೆಗಿಂತ ನಾಯಿಗಳ ಸಂಖ್ಯೆಯೇ ಒಂದು ಕೈ ಮೇಲಾದಂತೆ ಭಾಸವಾಗುತ್ತಿದೆ.

ಒಂದೆಡೆ ಸಿಕ್ಕ ಸಿಕ್ಕಲ್ಲಿ ಗುಂಪು ಗುಂಪಾಗಿರುವ ನಾಯಿಗಳು ದಾರಿಹೋಕರ ಮೇಲೆ ದಾಳಿ ನಡೆಸಿದರೆ ಮತ್ತೊಂದೆಡೆ ಒಂದಕ್ಕೊಂದು ಹೊಡೆದಾಡಿಕೊಂಡು ರಸ್ತೆಯಲ್ಲಿ ಸಂಚಾರ ಮಾಡುವ ದ್ವಿಚಕ್ರ ಸವಾರರು ಹಾಗೂ ಇತರ ವಾಹನಗಳ ನಡುವೆ ಹೋಗುವುದರಿಂದ ಅಪಘಾತವಾಗಿ ವಾಹನ ಸವಾರರು ಆಸ್ಪತ್ರೆ ಕದ ತಟ್ಟುವಂತಾಗಿದೆ.

ಮಲೇಬೆನ್ನೂರಲ್ಲಿ ಬೆನ್ನು ಹತ್ತುವ ನಾಯಿಗಳು; 20ಕ್ಕೂ ಹೆಚ್ಚು ಜನರಿಗೆ ಕಡಿತ
ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹತ್ತು ಹಲವಾರು ಬಾರಿ ಪುರಸಭೆ ಆಡಳಿತಕ್ಕೆ ಮನವಿ ಮಾಡಿದರೂ ಏನೂ ಪ್ರಯೋಜನವಿಲ್ಲ ಎಂದು ದೂರುವ ಜನತೆ, ಇನ್ನಾದರೂ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಂಡು ಬೀದಿ ನಾಯಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿದ್ದಾರೆ.

ಆಸ್ಪತ್ರೆಗೆ ಬರುವ ರೋಗಿಗಳು, ಜನತೆ, ನಾಯಿಗಳ ಹಾವಳಿಯಿಂದ ತಪ್ಪಿಸಿಕೊಂಡು ಚಿಕಿತ್ಸೆ ಪಡೆಯುವಂತಾಗಿದ್ದು, ಈ ನಡುವೆ ನಾಯಿ ಕಡಿತಕ್ಕೆ ಒಳಗಾಗಿ ಖಾಯಿಲೆ ಚಿಕಿತ್ಸೆಗೆ ಬರುವ ರೋಗಿಗಳು ಬಂದ ಖಾಯಿಲೆ ಮರೆತು ನಾಯಿ ಕಡಿತಕ್ಕೆ ಮೊದಲು ಚಿಕಿತ್ಸೆ ಪಡೆಯುವಂತಾಗಿದೆ.

ಬೀದಿ ನಾಯಿಗಳ ಆಟಾಟೋಪಕ್ಕೆ ಜನ ಕಂಗಾಲು; ಸೊರಬದಲ್ಲಿ 11 ತಿಂಗಳಲ್ಲಿ 775ಕ್ಕೂ ಹೆಚ್ಚು ನಾಯಿ ಕಡಿತ!
ಕೆಲವರು ಶೋಕಿಗೆ ನಾಯಿಯನ್ನು ಕೆಲವು ದಿನ ಸಾಕಿ ನಂತರ ಬೀದಿಗೆ ಬಿಡುವುದು ಮಾಮೂಲಾಗಿದೆ. ಅಂತಹ ನಾಯಿಗಳನ್ನು ಅವರವರ ಮನೆಯಲ್ಲಿ ಕಟ್ಟಿ ಹಾಕಿಕೊಳ್ಳುವಂತೆ ಎಚ್ಚರಿಕೆ ನೀಡಬೇಕು. ಅಲ್ಲದೆ ನಾಯಿಗಳನ್ನು ಹಿಡಿದು ಬಿಡುವುದರಿಂದ ಅವುಗಳ ಸಂಖ್ಯೆ ಕಡಿಮೆ ಆಗುವುದಿಲ್ಲ. ಅವುಗಳನ್ನು ಸಂಹಾರ ಮಾಡುವ ಬದಲು ಸಾಧ್ಯವಾದಷ್ಟು ಕಾಡಿಗೆ ತೆಗೆದುಕೊಂಡು ಹೋಗಿ ಬಿಡುವ ಕೆಲಸ ಆದಲ್ಲಿ ಬೀದಿ ನಾಯಿಗಳ ಸಂಖ್ಯೆ ಕಡಿಮೆ ಆಗಬಹುದು. ಈ ನಿಟ್ಟಿನಲ್ಲಿಅಧಿಕಾರಿಗಳು ಕ್ರಮಕ್ಕೆ ಮುಂದಾಗಲಿ ಎಂದು ಕೃಷ್ಣ ರಾಜನಗರದ ನಾರಾಯಣ ಎಂಬುವರು ಸಲಹೆ ನೀಡಿದ್ದಾರೆ.

ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರುವುದಲ್ಲದೆ ಮುಂದಿನ ಸಭೆಯಲ್ಲಿ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಕೃಷ್ಣರಾಜನಗರ 5ನೇ ವಾರ್ಡ್‌ ಪುರಸಭಾ ಸದಸ್ಯ ಮಿಕ್ಸರ್‌ ಶಂಕರ್‌ ಭರವಸೆ ನೀಡಿದ್ದಾರೆ.

ಕಬ್ಬನ್‌ ಪಾರ್ಕ್‌ನೊಳಗೆ ನಾಯಿಗಳ ಪ್ರವೇಶಕ್ಕೆ ಹೈಕೋರ್ಟ್‌ ಆಕ್ಷೇಪ : ಕ್ರಮ ಕೈಗೊಳ್ಳಲು ಪಾಲಿಕೆಗೆ ತಾಕೀತು



Read more