ಹೈಲೈಟ್ಸ್:
- ಬಜಗೂರಿನಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮ
- ರೈತರ ಸಾಲಮನ್ನಾ, ಆರೋಗ್ಯ, ಶಿಕ್ಷಣ, ಉದ್ಯೋಗ, ಸೂರಿನ ಯೋಜನೆ
- ರಾಜ್ಯಾದ್ಯಂತ ಕೊನೆಯ ಹೋರಾಟ ಮಾಡಲು ತೀರ್ಮಾನ
ತಾಲೂಕಿನ ಬಜಗೂರು ಗ್ರಾಮದಲ್ಲಿ ನಾಡ ಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾಡನಾಡಿದ ಅವರು, ಕೋವಿಡ್ ಅನಾಹುತದಲ್ಲಿ ಬಡ ಕುಟುಂಬಗಳಲ್ಲಿ ದುಡಿಯುವ ವ್ಯಕ್ತಿಗಳನ್ನು ಕಳೆದುಕೊಂಡವರಿಗೆ ಪರಿಹಾರ, ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಿರುವ ಕುಟುಂಬಗಳಿಗೆ ಸಹಾಯ, ರೈತರ ಸಾಲ ಮನ್ನಾ, ಬೆಳೆ ಹಾನಿ ಪರಿಹಾರ ಇವೆಲ್ಲ ಬೇಡಿಕೆಗಳನ್ನು ರಾಜ್ಯ ಸರಕಾರದ ಮುಂದಿಟ್ಟು ಪರಿಹಾರಕ್ಕಾಗಿ ಆಗ್ರಹಿಸಲಾಗುವುದು ಎಂದರು.
ರಾಜ್ಯದ ಮಟ್ಟಿಗೆ ಹೇಳುವುದಾದರೆ ನಮ್ಮ ಸಮಾಜದಲ್ಲಿ ಮೂರು ಪ್ರಮುಖ ವ್ಯಕ್ತಿಗಳನ್ನು ನಾವು ನೆನಪಿಸಿಕೊಳ್ಳಲೇಬೇಕಿದೆ. ಸಾಹಿತ್ಯಿಕ ಕ್ಷೇತ್ರದಲ್ಲಿ ಕುವೆಂಪು, ಧಾರ್ಮಿಕ ಕ್ಷೇತ್ರದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ರಾಜಕಾರಣದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ತಮ್ಮದೇ ಆದ ಕೊಡುಗೆಗಳನ್ನು ರಾಜ್ಯಕ್ಕೆ ನೀಡಿದ್ದಾರೆ. ಸುಗತ ಶ್ರೀನಿವಾಸರಾಜು ಎಂಬುವರು ದೇವೇಗೌಡರ ಬಗ್ಗೆ ಇಂಗ್ಲಿಷ್ನಲ್ಲಿ ಬರೆದ ಬೃಹತ್ ಪುಸ್ತಕ ದೆಹಲಿಯಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ಮಾಜಿ ಪ್ರಧಾನಿ ದೇವೇಗೌಡರ ಹುಟ್ಟಿನಿಂದ ಇಂದಿನವರೆಗೆ ಅನೇಕ ಮಾಹಿತಿಗಳನ್ನು ದೇಶ – ವಿದೇಶಗಳಲ್ಲಿ ಸಂಗ್ರಹಿಸಿ ಬರೆದಿದ್ದಾರೆ. ನಮ್ಮ ನಾಡಿನ ಯಾರೊಬ್ಬರೂ ಮಾಡದ ಕೆಲಸ ಒಬ್ಬ ವ್ಯಕ್ತಿ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ಶಂಭು ಲಿಂಗನಾಥ ಸ್ವಾಮೀಜಿ, ಶಿವಪುತ್ರನಾಥ ಸ್ವಾಮೀಜಿ, ಚಂದ್ರ ಶೇಖರನಾಥ ಸ್ವಾಮೀಜಿ, ಮಾಜಿ ಶಾಸಕ ಕೆ. ಷಡಕ್ಷರಿ, ಕಾಂಗ್ರೆಸ್ ಮುಖಂಡ ಕೆ. ಟಿ. ಶಾಂತಕುಮಾರ್, ಖ್ಯಾತ ವೈದ್ಯ ಜಿ. ಬಿ. ವಿವೇಚನ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಚಿದಾನಂದ್ ಇತರರು ಉಪಸ್ಥಿತರಿದ್ದರು.
1991ರಲ್ಲಿ ಕೇಂದ್ರ ಸರಕಾರ ಗೊಬ್ಬರದ ಮೇಲಿನ ಸಬ್ಸಿಡಿ ತೆಗೆಯಲು ಮುಂದಾದಾಗ ತಮ್ಮ ಸಂಸದೀಯ ಜೀವನದಲ್ಲಿಯೇ ಪ್ರಥಮವಾಗಿ ಸದನದ ಬಾವಿಗಿಳಿದು ಪ್ರತಿಭಟಿಸಿ ಸಬ್ಸಿಡಿ ಮುಂದುವರೆಸುವಂತೆ ಮಾಡಿದ್ದು ದೇವೇಗೌಡರು. ಇದು ರೈತರ, ಬಡವರ ಮೇಲಿನ ಅವರ ಪ್ರೀತಿ ತೋರಿಸುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.
‘ಬೆಂಗಳೂರು ನಿರ್ಮಾಣ ಮಾಡಿದ ಕೆಂಪೇ ಗೌಡರ ದೂರದೃಷ್ಟಿ ಮೆಚ್ಚುವಂತಹದ್ದು. ಇಂದು ಕರ್ನಾಟಕದ ರಾಜ್ಯದಲ್ಲಿ ಸರಕಾರಕ್ಕೆ ಬರುತ್ತಿರುವ ತೆರಿಗೆ ಹಣ ನೂರಕ್ಕೆ ಎಪ್ಪತ್ತು ಭಾಗ ಬೆಂಗಳೂರು ನಗರದಿಂದಲೇ ಬರುತ್ತಿದೆ ಎಂದರೆ ಕೇಂಪೇಗೌಡರು ಕಟ್ಟಿದ ಬೆಂಗಳೂರಿನಿಂದಲೇ. ಇದರಿಂದ ಇಡೀ ಕರ್ನಾಟಕ ರಾಜ್ಯದ ಅಭಿವೃದ್ಧಿ ಕೆಲಸಗಳು ನಡೆಯುವಂತಾಗಿದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.