Karnataka news paper

ಗುಂಡ್ಲುಪೇಟೆಯಲ್ಲಿ ಟಿಪ್ಪರ್‌ಗಳ ಆರ್ಭಟಕ್ಕೆ ಜನ ತತ್ತರ; ಅತಿಯಾದ ವೇಗದ ಸಂಚಾರಕ್ಕೆ ಅಮಾಯಕ ಜೀವಗಳು ಬಲಿ!


ಹೈಲೈಟ್ಸ್‌:

  • ಟಿಪ್ಪರ್‌ಗಳ ಅತಿ ವೇಗದ ಓಡಾಟಕ್ಕೆ ಅಮಾಯಕ ಜೀವಗಳು ಬಲಿಯಾಗುತ್ತಿವೆ
  • ಟಿಪ್ಪರ್‌ಗಳ ಸಂಚಾರಕ್ಕೆ ಕಡಿವಾಣ ಹಾಕಲು ತಾಲೂಕು ಆಡಳಿತ, ಸಂಬಂಧಿಸಿದ ಇಲಾಖೆ ಮೀನಮೇಷ ಎಣಿಸುತ್ತಿದೆ
  • ಜ.8ರಂದು ತಾಲೂಕಿನಲ್ಲಿ ನಡೆದ ಅಪಘಾತದಲ್ಲಿ ಟಿಪ್ಪರ್‌ನಿಂದ ಎರಡು ಸಾವು ಸಂಭವಿಸಿವೆ

ಗುಂಡ್ಲುಪೇಟೆ /ಬೇಗೂರು: ತಾಲೂಕಿನಲ್ಲಿ ಕ್ವಾರಿ, ಕ್ರಷರ್ಸ್ ಗಳ ಚಟುವಟಿಕೆ ಹೆಚ್ಚಾಗಿದ್ದು, ಅವುಗಳಿಗೆ ಪೂರಕವಾಗಿ ಟಿಪ್ಪರ್‌ಗಳ ಸಂಚಾರವು ಅತಿಯಾಗಿದೆ. ಆದರೆ, ಅವುಗಳ ಅತಿ ವೇಗದ ಓಡಾಟಕ್ಕೆ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಜನಜೀವನಕ್ಕೆ ಸಂಚಕಾರವಾದ ಈ ಕ್ರಷರ್ಸ್ ಹಾಗೂ ಅವುಗಳಿಂದಲೇ ಹೆಚ್ಚಾಗಿರುವ ಟಿಪ್ಪರ್‌ಗಳಿಗೆ ಕಡಿವಾಣ ಹಾಕುವವರ್ಯಾರು ಎಂಬ ಪ್ರಶ್ನೆ ಎದುರಾಗಿದೆ.

ಅತಿವೇಗ, ಅಜಾಗರೂಕ ಚಾಲನೆಯಿಂದ ಉಂಟಾಗುವ ಅಪಘಾತ ಪ್ರಕರಣಗಳ ಜತೆಗೆ ಹತ್ತು ಹಲವು ಸಮಸ್ಯೆಗಳಿಗೆ ಕಾರಣವಾಗಿರುವ ಟಿಪ್ಪರ್‌ಗಳ ಸಂಚಾರಕ್ಕೆ ಕಡಿವಾಣ ಹಾಕಲು ತಾಲೂಕು ಆಡಳಿತ, ಸಂಬಂಧಿಸಿದ ಇಲಾಖೆ ಮೀನಮೇಷ ಎಣಿಸುತ್ತಿರುವುದೇಕೆ ಎಂಬ ಪ್ರಶ್ನೆ ತಾಲೂಕಿನ ಜನತೆಯದ್ದು.

ಹಿರೀಕಾಟಿ, ಹಸಗೂಲಿ, ಬೆಟ್ಟಮಾದಹಳ್ಳಿ ಜತೆಗೆ ಶ್ರೀರಂಗಪಟ್ಟಣದ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಸ್ಥಗಿತಗೊಂಡ ನಂತರ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ಕ್ರಷರ್‌ಗಳಿಂದ ಬೋಡ್ರಸ್‌ಗೆ ಬಾರಿ ಬೇಡಿಕೆ ಉಂಟಾಗಿದೆ. ತಾಲೂಕಿನ ಮಡಹಳ್ಳಿ ಗುಮ್ಮಕಲ್ಲುಗುಡ್ಡ ಒಂದೇ ಕಡೆ ನಡೆಯುವ ಬಿಳಿಕಲ್ಲುಗಣಿಗಾರಿಕೆಯಿಂದ ಬೇಡಿಕೆ ಪೂರೈಸುತ್ತಿರುವುದು ಅಪಘಾತ ಸೇರಿ ಹಲವು ಪ್ರಕರಣಗಳಿಗೆ ಮೂಲ.

ಗರಿಷ್ಠ ಲಾಭದ ಆಸೆ
ಬೋಡ್ರಸ್‌ಗೆ ಹೆಚ್ಚಿದ ಬೇಡಿಕೆ ಪೂರೈಸುವ ಸಲುವಾಗಿ ಕ್ವಾರಿ ಮಾಲೀಕರು, ಕ್ವಾರಿ ಸಬ್‌ಲೀಸ್‌ ಪಡೆದವರು ನೆರೆಯ ಕೇರಳ ಮತ್ತು ಮಂಡ್ಯ ಜಿಲ್ಲೆ ಇತರೆ ಕಡೆಗಳಿಂದ ಟಿಪ್ಪರ್‌ಗಳನ್ನು ಅಡಮಾನ, ಬಾಡಿಗೆ ಇತರೆ ಕರಾರುಗಳ ಲೆಕ್ಕದಲ್ಲಿ ಪಡೆದಿದ್ದಾರೆ. ಚಾಲಕರು ಮಾಲೀಕರಿಂದ ಸೈ ಎನಿಸಿಕೊಳ್ಳಬೇಕು ಮತ್ತು ಹೆಚ್ಚಿನ ಬಾಟಾ ನಿರೀಕ್ಷೆಯಲ್ಲಿ ಪೈಪೋಟಿಗೆ ಬಿದ್ದು, ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುತ್ತಿದ್ದಾರೆ.

ಇದರ ಪರಿಣಾಮವಾಗಿ ಜ.8ರಂದು ತಾಲೂಕಿನಲ್ಲಿ ನಡೆದ ಅಪಘಾತದಲ್ಲಿ ಟಿಪ್ಪರ್‌ನಿಂದ ಎರಡು ಸಾವು ಸಂಭವಿಸಿವೆ. ಈ ವೇಳೆ ರೊಚ್ಚಿಗೆದ್ದ ಸಾರ್ವಜನಿಕರು ಮತ್ತು ನಾನಾ ಸಂಘಟನೆಯವರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ಸಾಕಷ್ಟು ಅಪಘಾತಗಳು ಸಂಭವಿಸಿವೆ. ಅಲ್ಲದೇ ಪಟ್ಟಣದ ಊಟಿ ಸರ್ಕಲ್‌, ಗರಗನಹಳ್ಳಿ ಗೇಟ್‌ ಇನ್ನೂ ಹಲವು ಕಡೆ ನಿಯಂತ್ರಣ ಕಳೆದುಕೊಂಡು ಟಿಪ್ಪರ್‌ ಉರುಳಿದ ಉದಾಹರಣೆಗಳು ಸಾಕಷ್ಟಿವೆ.
ಬೆಂಗಳೂರಿನಲ್ಲಿ ಕಾರ್, ಬೈಕ್ ಮೇಲೆ ಪಲ್ಟಿಯಾದ ಜಲ್ಲಿ ತುಂಬಿದ್ದ ಲಾರಿ; 6 ಮಂದಿ ದುರ್ಮರಣ
ಹತ್ತು ಹಲವು ಸಮಸ್ಯೆಗಳು
ಯಾವುದೇ ಸರಕು ಸಾಗಣೆ ವಾಹನವಾದರೂ ಸಾರ್ವಜನಿಕ ರಸ್ತೆಯಲ್ಲಿ ಸಂಚರಿಸುವಾಗ ಭಾರ ಮಿತಿ ಉಲ್ಲಂಘಿಸುವಂತಿಲ್ಲ ಎಂಬ ನಿಯಮವಿದೆ. ಆದರೆ ಟಿಪ್ಪರ್‌ಗಳಿಗೆ ಅವೈಜ್ಞಾನಿಕವಾಗಿ ಹೆಚ್ಚುವರಿ ಬಾಡಿ ಕಟ್ಟಿಸಿಕೊಂಡಿದ್ದು, ಅದನ್ನೂ ಮೀರಿ ಬೋಡ್ರಸ್‌ ತುಂಬಲಾಗುತ್ತಿದೆ. ಹೀಗಾಗಿ ಕ್ವಾರಿಯಿಂದ ಮಡಹಳ್ಳಿ-ಮಲ್ಲಯ್ಯನಪುರ ರಸ್ತೆಯಲ್ಲಿ ಟಿಪ್ಪರ್‌ಗಳ ಓಡಾಡುವಾಗ ವ್ಯಾಪಕ ಧೂಳು ಆವರಿಸುತ್ತದೆ. ಇದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

ಮೌನಕ್ಕೆ ಶರಣಾದ ಪೊಲೀಸರು
ಭಾರ ಮಿತಿ ಉಲ್ಲಂಘಿಸುವ, ಲೈಸೆನ್ಸ್‌, ಇನ್ಸೂರೆನ್ಸ್‌, ಪರವಾನಗಿ ಇಲ್ಲದೇ ಸಂಚರಿಸುವ ವಾಹನಗಳಿಗೆ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ದಂಡ ವಿಧಿಸುವ ಮತ್ತು ವಾಹನ ಸೀಜ್‌ ಮಾಡುವ ಅವಕಾಶವಿದ್ದರೂ ಅದನ್ನು ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಇನ್ನು ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ ಮತ್ತು ನಾನಾ ಇಲಾಖೆ ಅಧಿಕಾರಿಗಳನ್ನು ಒಳಗೊಂಡು ರಚನೆಯಾಗಿರುವ ಟಾಸ್ಕ್‌ಪೋರ್ಸ್‌ ಇದ್ದೂ ಇಲ್ಲದಂತಾಗಿದೆ. ಆದ್ದರಿಂದ ಬೈಕ್‌, ಸ್ಕೂಟರ್‌, ಆಟೋ ಇತರೆ ವಾಹನಗಳಿಗೆ ದಂಡ ವಿಧಿಸುವ ಪೊಲೀಸ್‌ ಇಲಾಖೆಯವರು ಟಿಪ್ಪರ್‌ಗಳನ್ನು ಏಕೆ ಕೇಳುತ್ತಿಲ್ಲ ಎಂದು ಪ್ರಶ್ನಿಸುವುದು ಸಾಮಾನ್ಯವಾಗಿದೆ. ಹೀಗಾಗಿ ಪೊಲೀಸ್‌ ಇಲಾಖೆ ಟಿಪ್ಪರ್‌ಗಳ ಸಂಚಾರ ನಿಯಂತ್ರಿಸದ ಜತೆಗೆ ಜನ ಸಾಮಾನ್ಯರಿಗೆ ಉತ್ತರಿಸದೇ ಕೈಚೆಲ್ಲಿದ್ದಾರೆ.
ನೈಸ್ ರಸ್ತೆಯಲ್ಲಿ ಭೀಕರ ಅಪಘಾತ : ನಾಲ್ವರು ಟೆಕ್ಕಿಗಳು ಸ್ಥಳದಲ್ಲೇ ಸಾವು
ಟಿಪ್ಪರ್‌ಗಳ ಸಂಚಾರದಿಂದ ಪಟ್ಟಣದ ಸುರಭಿ ಹೋಟೆಲ್‌, ಸೂರ್ಯಬೇಕರಿ, ಅಂದಾನಪ್ಪ ಕಾಂಪ್ಲೆಕ್ಸ್‌ ಮುಂಭಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿ ನಿರ್ಮಾಣವಾಗಿವೆ. ಇನ್ನೂ ಗುಂಡ್ಲುಪೇಟೆ-ಚಾಮರಾಜನಗರ ಸಂಪರ್ಕಿಸುವ ರಾಜ್ಯ ಹೆದ್ದಾರಿ 81 ಕೂಡ ಹಾಳಾಗಿದೆ. ಇಷ್ಟೆಲ್ಲಾ ಸಮಸ್ಯೆಗಳಿರುವ ಹಿನ್ನೆಲೆಯಲ್ಲಿ ಟಿಪ್ಪರ್‌ಗಳ ಹಾವಳಿ ತಡೆಯಬೇಕು ಎಂಬ ಕೂಗೆದ್ದಿದೆ.
ಗುಜರಿ ಆಂಬ್ಯುಲೆನ್ಸ್‌ಗಳ ಬಳಕೆ, ರೋಗಿಗಳಿಗೆ ಪ್ರಾಣ ಸಂಕಟ; ನಕಲಿ ರೋಗಿಗಳ ಸೃಷ್ಟಿ, ಕೋಟ್ಯಂತರ ರೂ. ಕನ್ನ!
ಟಿಪ್ಪರ್‌ಗಳ ಓವರ್‌ಲೋಡ್‌ ಮತ್ತು ಓವರ್‌ ಸ್ಪೀಡ್‌ ಅನ್ನು ಗಂಭೀರವಾಗಿ ಪರಿಗಣಿಸಿದ್ದು, ಜ.10 ರಂದು ಕ್ಷೇತ್ರದ ಶಾಸಕರು ಆರ್‌ಟಿಒ, ಪೊಲೀಸ್‌, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅರಣ್ಯ ಮತ್ತು ಪರಿಸರ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹೀಗಾಗಿ ಟಿಪ್ಪರ್‌ಗಳ ಅತಿಯಾದ ಓಡಾಟಕ್ಕೆ ಕಡಿವಾಣ ಬೀಳಲಿದೆ.
ರವಿಶಂಕರ್‌, ತಹಸೀಲ್ದಾರ್‌, ಗುಂಡ್ಲುಪೇಟೆ



Read more

[wpas_products keywords=”deal of the day sale today offer all”]