Karnataka news paper

ಚನ್ನಗಿರಿಯ ದೇವರಹಳ್ಳಿ ನವೋದಯದ 4 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು


ಹೈಲೈಟ್ಸ್‌:

  • ದಾವಣಗೆರೆ ಜಿಲ್ಲೆಯ ಎಲ್ಲಾ ವಸತಿ ಶಾಲೆಗಳಲ್ಲಿ ಕೊರೊನಾ ಪರೀಕ್ಷೆ ಆರಂಭಿಸಲಾಗಿತ್ತು
  • ಎರಡು ದಿನದಿಂದ ಯಾವುದೇ ಸೋಂಕು ಪತ್ತೆ ಆಗಿರಲಿಲ್ಲ
  • ಭಾನುವಾರ ನವೋದಯ ಶಾಲೆಯ ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ

ಚನ್ನಗಿರಿ (ದಾವಣಗೆರೆ): ತಾಲೂಕಿನ ದೇವರಹಳ್ಳಿ ಜವಾಹರ ನವೋದಯ ವಿದ್ಯಾಲಯದಲ್ಲಿ ನಾಲ್ಕು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಜನರ ಆತಂಕ ಹೆಚ್ಚಿಸಿದೆ.

ಚನ್ನಗಿರಿಯಿಂದ 10 ಕಿ. ಮೀ. ದೂರದಲ್ಲಿರುವ ದೇವರ ಹಳ್ಳಿ ಜವಾಹರ ನವೋದಯ ವಿದ್ಯಾಲಯದಲ್ಲಿ 6 ರಿಂದ 12ನೇ ತರಗತಿಯ 536 ವಿದ್ಯಾರ್ಥಿಗಳು, 37 ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದಾರೆ.

ಹರಪನಹಳ್ಳಿ ತಾಲೂಕು ಕೊಟ್ಟೂರು ಗ್ರಾಮದ ಪಿಯು ವಿದ್ಯಾರ್ಥಿಯೊಬ್ಬ ಕಳೆದ ತಿಂಗಳು ಊರಿಗೆ ಹೋಗಿ, ಇತ್ತೀಚೆಗೆ ದೇವರಹಳ್ಳಿಗೆ ವಾಪಸ್‌ ಬಂದಿದ್ದು, ಒಂದು ವಾರದಿಂದ ಶೀತ, ಜ್ವರದಿಂದ ಬಳಲುತ್ತಿದ್ದ. ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪರೀಕ್ಷಿಸಿದಾಗ ಆತನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಕೊಪ್ಪ: ನವೋದಯ ಶಾಲೆಯಲ್ಲಿ 104ಕ್ಕೆ ಏರಿದ ಕೊರೊನಾ ಪ್ರಕರಣಗಳ ಸಂಖ್ಯೆ
ಸೋಂಕು ಖಾತ್ರಿ ಪಡಿಸಿಕೊಂಡ ಆರೋಗ್ಯ ಇಲಾಖೆ ಸಿಬ್ಬಂದಿ, ಶಾಲೆ ವಿದ್ಯಾರ್ಥಿಗಳು ಸೇರಿ 514 ಜನರ ಸ್ವಾಬ್‌ ಪರೀಕ್ಷೆಗೆ ಕಳುಹಿಸಿದ್ದು, ಅದರಲ್ಲಿ ಮೂವರು ಪ್ರೌಢ ಶಾಲೆ ವಿದ್ಯಾರ್ಥಿನಿಯರು ಮತ್ತು ಒಬ್ಬ ಪಿಯು ವಿದ್ಯಾರ್ಥಿ ಸೇರಿ ನಾಲ್ವರಲ್ಲಿ ಸೋಂಕು ದೃಢಪಟ್ಟಿದೆ. ಕೂಡಲೇ ಅವರನ್ನು ಐಸೋಲೇಷನ್‌ಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.

ಉಳಿದಂತೆ ಪರೀಕ್ಷಾ ವರದಿ ಬರಬೇಕಿದ್ದು, ವಿದ್ಯಾಲಯದ ಮುಖ್ಯ ದ್ವಾರ ಬಂದ್‌ ಮಾಡಿ, ವಿದ್ಯಾರ್ಥಿಗಳನ್ನು ಪೋಷಕರು ಸಂಪರ್ಕಿಸದಂತೆ ಎಚ್ಚರ ವಹಿಸಲಾಗಿದೆ ಎಂದು ತಹಸೀಲ್ದಾರ್‌ ಡಾ. ಪುಟ್ಟರಾಜ ಗೌಡ ತಿಳಿಸಿದ್ದಾರೆ. ವಿಷಯ ತಿಳಿದು ಭಾನುವಾರ ಡಿಡಿಪಿಐ ಜಿ. ಆರ್‌. ತಿಪ್ಪೇಶಪ್ಪ, ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

10 ವಿದ್ಯಾರ್ಥಿಗಳು, ಶಿಕ್ಷಕಿಗೆ ಕೊರೊನಾ; ನರಸಿಂಹರಾಜಪುರದ ಜೀವನ್‌ಜ್ಯೋತಿ ಪ್ರೌಢ ಶಾಲೆ ಸೀಲ್‌ಡೌನ್‌
‘ರಾಜ್ಯದ ವಿವಿಧೆಡೆ ವಸತಿ ಶಾಲೆಗಳಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಎಲ್ಲಾ ವಸತಿ ಶಾಲೆಗಳಲ್ಲಿ ಕೊರೊನಾ ಪರೀಕ್ಷೆ ಆರಂಭಿಸಲಾಗಿತ್ತು. ಎರಡು ದಿನದಿಂದ ಯಾವುದೇ ಸೋಂಕು ಪತ್ತೆ ಆಗಿರಲಿಲ್ಲ. ಆದರೆ, ಭಾನುವಾರ ನವೋದಯ ಶಾಲೆಯ ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇತರೆ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ನೌಕರರ ಪರೀಕ್ಷೆ ಆರಂಭಿಸಲಾಗಿದೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್‌ ತಿಳಿಸಿದ್ದಾರೆ.

ಒಟ್ಟು 4,882 ಮಂದಿ ಪರೀಕ್ಷೆ

ದಾವಣಗೆರೆ ಜಿಲ್ಲೆಯ ಶಾಲೆ, ಕಾಲೇಜು, ನರ್ಸಿಂಗ್‌, ಅರೆ ವೈದ್ಯಕೀಯ ಕಾಲೇಜುಗಳಲ್ಲಿ ಭಾನುವಾರ 625 ಮಂದಿ ಸೇರಿ ಡಿಸೆಂಬರ್ 1 ರಿಂದ 11 ರವರೆಗೆ ಒಟ್ಟು 4,882 ವಿದ್ಯಾರ್ಥಿಗಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ 3,667 ವರದಿಗಳು ನೆಗೆಟಿವ್‌ ಬಂದಿದ್ದು, ದೇವರಹಳ್ಳಿ ನವೋದಯ ಶಾಲೆಯ 4 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. 1,215 ಪರೀಕ್ಷೆಗಳ ವರದಿ ಬರಬೇಕಿದೆ. ಈ ನಡುವೆ ವಿದೇಶಗಳಿಂದ ಇದುವರೆಗೆ 73 ಪ್ರಯಾಣಿಕರು ಜಿಲ್ಲೆಗೆ ಬಂದಿದ್ದು, ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜ್ಯಾದ್ಯಂತ ಇದುವರೆಗೆ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು!



Read more