Karnataka news paper

ಕಾಂಗ್ರೆಸ್‌ ಮೇಕೆದಾಟು ಪಾದಯಾತ್ರೆ ನಿರ್ಬಂಧ ಕೋರಿ ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಕೆ!


ಹೈಲೈಟ್ಸ್‌:

  • ಕಾಂಗ್ರೆಸ್‌ ಮೇಕೆದಾಟು ಪಾದಯಾತ್ರೆಗೆ ಹೆಚ್ಚಿದ ವಿರೋಧ
  • ನಿರ್ಬಂಧ ಕೋರಿ ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಕೆ
  • ತಿಂಡ್ಲುವಾಸಿ ಎ.ವಿ. ನಾಗೇಂದ್ರ ಪ್ರಸಾದ್‌ ರಿಂದ ಅರ್ಜಿ

ಬೆಂಗಳೂರು : ಕೋವಿಡ್‌ ಹೆಚ್ಚಳದ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಹಮ್ಮಿಕೊಂಡಿರುವ ಪಾದಯಾತ್ರೆ ನಿರ್ಬಂಧಿಸಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ಬೆಂಗಳೂರಿನ ತಿಂಡ್ಲುವಾಸಿ ಎ.ವಿ. ನಾಗೇಂದ್ರ ಪ್ರಸಾದ್‌ ಅರ್ಜಿ ಸಲ್ಲಿಸಿದ್ದು, ಅದು ಬುಧವಾರ ಅಥವಾ ಗುರುವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಅರ್ಜಿಯಲ್ಲಿ ಮುಖ್ಯ ಕಾರ್ಯದರ್ಶಿ, ಕಂದಾಯ ಮತ್ತು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ರಾಮನಗರ ಜಿಲ್ಲಾಧಿಕಾರಿ, ಬಿಬಿಎಂಪಿ ಆಯುಕ್ತರು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಪ್ರತಿವಾದಿಯನ್ನಾಗಿಸಲಾಗಿದೆ.

”ಯಾವುದೇ ರಾಜಕೀಯ ಪಕ್ಷಗಳಿಗೆ ಮೆರವಣಿಗೆ, ಧರಣಿ ಹಾಗೂ ಪ್ರತಿಭಟನೆ ನಡೆಸಲು ಅನುಮತಿ ನೀಡದಂತೆ ಹಾಗೂ ಮೇಕೆದಾಟು ಯೋಜನೆಗೆ ಆಗ್ರಹಿಸಿ ಹಮ್ಮಿಕೊಂಡಿರುವ ಪಾದಯಾತ್ರೆ ಮುಂದುವರಿಸದಂತೆ ಕೆಪಿಸಿಸಿಯನ್ನು ನಿರ್ಬಂಧಿಸುವಂತೆ ಸರಕಾರ ಹಾಗೂ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಬೇಕು” ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಮೇಕೆದಾಟು ಪಾದಯಾತ್ರೆ ಡಿಕೆಶಿ ‘ಸ್ವಯಂ ಪ್ರಚಾರದ’ ಕಾರ್ಯಕ್ರಮ! ಅಶ್ವತ್ಥ ನಾರಾಯಣ ಟೀಕೆ

ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣಕ್ಕಾಗಿ ನಿರ್ಬಂಧಗಳನ್ನು ವಿಧಿಸಲಾಗಿದೆ. ಅದರ ನಡುವೆಯೂ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕೆಪಿಸಿಸಿ 10 ದಿನಗಳ ಪಾದಯಾತ್ರೆ ಆರಂಭಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಪಾದಯಾತ್ರೆಯ ನೇತೃತ್ವ ವಹಿಸಿದ್ದು, ಸಾವಿರಾರು ಮಂದಿ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರಿಂದ, ಕೋವಿಡ್‌ ಸೋಂಕು ವೇಗವಾಗಿ ಹರಡುವ ಸಾಧ್ಯತೆ ಇದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಜೀವದ ಜತೆ ಕಾಂಗ್ರೆಸ್‌ ಚೆಲ್ಲಾಟ
ಜನಹಿತ ಕಾಪಾಡಲು ಸರಕಾರಕ್ಕೆ ಸಲಹೆ ನೀಡಬೇಕಿದ್ದ ಕಾಂಗ್ರೆಸ್‌ ಪಾದಯಾತ್ರೆ ಮೂಲಕ ಅಮಾಯಕ ಜನರ ಜೀವನದ ಜತೆಗೆ ಚೆಲ್ಲಾಟವಾಡುತ್ತಿದೆ ಎಂದು ಸಚಿವ ಎಸ್‌.ಟಿ.ಸೋಮಶೇಖರ್‌ ತರಾಟೆಗೆ ತೆಗೆದುಕೊಂಡಿದ್ದಾರೆ. ‘‘ಕೊರೊನಾ ಪ್ರಕರಣ ಸಂಖ್ಯೆ ಹೆಚ್ಚುತ್ತಿದ್ದರೂ ಕಾಂಗ್ರೆಸ್‌ನವರು ಸರಕಾರದ ನಿಯಮ ಗಾಳಿಗೆ ತೂರಿ ಪಾದಯಾತ್ರೆ ನಡೆಸುತ್ತಿದ್ದಾರೆ.ಮೇಕೆದಾಟು ಯೋಜನೆ ಬಗ್ಗೆ ಕಾಂಗ್ರೆಸ್‌ಗೆ ನಿಜವಾಗಿಯೂ ಕಾಳಜಿಯಿದ್ದಿದ್ದರೆ ತಮಿಳುನಾಡು ಸಿಎಂ ಜತೆಗೆ ಮಾತನಾಡಬಹುದಿತ್ತು,’’ಎಂದು ಹೇಳಿದರು.

ರಾಜಕೀಯ ಯಾತ್ರೆ
‘‘ಕಾಂಗ್ರೆಸ್‌ ನಾಯಕರಿಗೆ ವ್ಯಕ್ತಿತ್ವವಿಲ್ಲ. ಸ್ವಾರ್ಥ ಮತ್ತು ಅಧಿಕಾರ ದಾಹಕ್ಕಾಗಿ ರಾಜಕೀಯ ಪ್ರೇರಿತ ಪಾದಯಾತ್ರೆ ನಡೆಸುತ್ತಿದ್ದಾರೆ,’’ ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಎಂ.ಜೆ.ಮಹೇಶ್‌ ಆರೋಪಿಸಿದ್ದಾರೆ. ಪಕ್ಷದ ಕಚೇರಿಯಲ್ಲಿಸುದ್ದಿಗೋಷ್ಠಿ ನಡೆಸಿದ ಅವರು, ‘‘4 ದಶಕಗಳ ಕಾಲ ರಾಜಕಾರಣ ನಡೆಸಿದ ಡಿ.ಕೆ.ಶಿವಕುಮಾರ್‌ ಅವರ ಹೆಜ್ಜೆ ಗುರುತೇನು? ಬಂಡೆ, ಗುಡ್ಡೆ, ಗೋಮಾಳ ನುಂಗೋದೇ ಶಿವಕುಮಾರ್‌ ಸಾಧನೆ,’’ ಎಂದು ಆಪಾದಿಸಿದರು.



Read more

[wpas_products keywords=”deal of the day sale today offer all”]